Ind vs SA: ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ಬಂದು ರೋಹಿತ್ ಶರ್ಮಾ ಪಾದಮುಟ್ಟಿ ನಮಸ್ಕರಿಸಿದ ಅಭಿಮಾನಿ..!
* ದಕ್ಷಿಣ ಆಫ್ರಿಕಾ ಎದುರು ಮೊದಲ ಟಿ20 ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ
* ಮೊದಲ ಟಿ20 ಪಂದ್ಯದಲ್ಲಿ ಭದ್ರತಾ ವೈಫಲ್ಯ ಅನಾವರಣ
* ಭದ್ರತಾ ನಿಯಮವನ್ನು ಮೈದಾನಕ್ಕೆ ಪ್ರವೇಶಿಸಿದ ಅಭಿಮಾನಿ
ತಿರುವನಂತಪುರಂ(ಸೆ.29): ಭಾರತದಲ್ಲಿ ಕ್ರಿಕೆಟ್ ಅನ್ನು ಒಂದು ಧರ್ಮದಂತೆ ಆರಾಧಿಸುವ ವರ್ಗವೇ ಇದೆ. ಜಂಟಲ್ಮನ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್ನಲ್ಲಿ ಆಗಾಗ ಭದ್ರತಾ ವೈಫಲ್ಯಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ಇದೀಗ ಇಲ್ಲಿನ ಗ್ರೀನ್ಫೀಲ್ಡ್ನಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಅಭಿಮಾನಿಯೊಬ್ಬ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಮೈದಾನ ಪ್ರವೇಶಿಸಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪಾದಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಇಲ್ಲಿನ ಗ್ರೀನ್ಫೀಲ್ಡ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಫೀಲ್ಡಿಂಗ್ ಮಾಡಲು ಭಾರತ ತಂಡವು ಮೈದಾನಕ್ಕಿಳಿಯುತ್ತಿದ್ದಂತೆಯೇ, ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಮೈದಾನ ಪ್ರವೇಶಿಸಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಲಿಗೆರಗಿ ನಮಸ್ಕಾರ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹರಿಣಗಳೆದುರು ಟೀಂ ಇಂಡಿಯಾ ಶುಭಾರಂಭ:
ಬೌಲರ್ಗಳ ಮೇಲಾಟದ ನಡುವೆಯೂ ಭಾರತೀಯ ಬ್ಯಾಟರ್ಗಳ ತಾಳ್ಮೆಗೆ ಫಲ ದೊರೆಯಿತು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಇಲ್ಲಿನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾ 20 ಓವರಲ್ಲಿ 8 ವಿಕೆಟ್ಗೆ 106 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ ಭಾರತ ನಿಧಾನ ಆರಂಭ ಪಡೆದರೂ ಸೂರ್ಯಕುಮಾರ್ ಯಾದವ್ ಹಾಗೂ ಕೆ.ಎಲ್.ರಾಹುಲ್ರ ಅರ್ಧಶತಕಗಳ ನೆರವಿನಿಂದ 2 ವಿಕೆಟ್ ಕಳೆದುಕೊಂಡು ಇನ್ನೂ 20 ಎಸೆತ ಬಾಕಿ ಇರುವಂತೆ ಜಯಿಸಿತು.
ICC T20 Rankings: ಬಾಬರ್ ಅಜಂ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಸೂರ್ಯಕುಮಾರ್ ಯಾದವ್..!
ದ.ಆಫ್ರಿಕಾದ ಬಲಿಷ್ಠ ಬೌಲಿಂಗ್ ಪಡೆಯ ಎದುರು ಭಾರತ ಪರದಾಡಿತು. ರೋಹಿತ್(00) ಹಾಗೂ ಕೊಹ್ಲಿ(03) ಬೇಗನೆ ಔಟಾದರು. ಪವರ್-ಪ್ಲೇನಲ್ಲಿ ಭಾರತ ಕೇವಲ 17 ರನ್ ಗಳಿಸಿತು. 10 ಓವರಲ್ಲಿ 47 ರನ್ ಕಲೆಹಾಕಿದ ಭಾರತ ಆ ಬಳಿಕ ಲಯ ಕಂಡುಕೊಂಡಿತು. ಸೂರ್ಯಕುಮಾರ್ ವೇಗವಾಗಿ ಬ್ಯಾಟ್ ಬೀಸಿದರೆ ಎಚ್ಚರಿಕೆಯಿಂದ ಆಡುತ್ತಿದ್ದ ರಾಹುಲ್ ಸಹ ಉಪಯುಕ್ತ ಕೊಡುಗೆ ನೀಡಿದರು. ಸೂರ್ಯ 33 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್ನೊಂದಿಗೆ ಔಟಾಗದೆ 50 ರನ್ ಗಳಿಸಿದರೆ, ರಾಹುಲ್ 56 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್ನೊಂದಿಗೆ 51 ರನ್ ಗಳಿಸಿ ಔಟಾಗದೆ ಉಳಿದರು. ಇವರಿಬ್ಬರ ನಡುವೆ 3ನೇ ವಿಕೆಟ್ಗೆ 93 ರನ್ ಜೊತೆಯಾಟವಾಡಿದರು.
ಭಾರೀ ಕುಸಿತ: ದ.ಆಫ್ರಿಕಾ ಅನಿರೀಕ್ಷಿತ ಕುಸಿತ ಕಂಡಿತು. 9 ರನ್ಗೆ 5 ವಿಕೆಟ್ ಕಳೆದುಕೊಂಡಿತು. ಅಶ್ರ್ದೀಪ್ ಒಂದೇ ಓವರಲ್ಲಿ 3 ವಿಕೆಟ್ ಕಬಳಿಸಿದರು. ದೀಪಕ್ ಚಹರ್ 2 ವಿಕೆಟ್ ಕಿತ್ತರು. ಮಾರ್ಕ್ರಮ್(25), ವೇಯ್್ನ ಪಾರ್ನೆಲ್(24) ಹಾಗೂ ಕೇಶವ್ ಮಹಾರಾಜ್(41) ನೀಡಿದ ಕೊಡುಗೆಗಳಿಂದ 100 ರನ್ ದಾಟಿತು. ಹರ್ಷಲ್ ಪಟೇಲ್ ಸಹ 2 ವಿಕೆಟ್ ಕಿತ್ತರು.
ಸ್ಕೋರ್:
ದ.ಆಫ್ರಿಕಾ 20 ಓವರಲ್ಲಿ 106/8(ಕೇಶವ್ 41, ಮಾರ್ಕ್ರಮ್ 25, ಅಶ್ರ್ದೀಪ್ 3-32, ಚಹರ್ 2-24)
ಭಾರತ 16.4 ಓವರಲ್ಲಿ 110/2(ರಾಹುಲ್ 51*, ಸೂರ್ಯ 50*, ರಬಾಡ 1-16)