ಮೈದಾನಕ್ಕೆ ನುಗ್ಗಿ ರೋಹಿತ್ ಬಿಗಿದಪ್ಪಿದ ಪುಟ್ಟ ಅಭಿಮಾನಿ, ಕ್ರಮ ಕೈಗೊಳ್ಳದಂತೆ ನಾಯಕನ ಸೂಚನೆ!
ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ನಡುವೆ ಪುಟ್ಟ ಅಭಿಮಾನಿ ಭದ್ರತಾ ಸಿಬ್ಬಂಧಿ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಬಿಗಿದಪ್ಪಿಕೊಂಡಿದ್ದಾನೆ. ಈತನ ಹಿಡಿದ ಭದ್ರತಾ ಸಿಬ್ಬಂದಿಗೆ ಯಾವುದೇ ಕ್ರಮ ಕೈಗೊಳ್ಳದಂತೆ ರೋಹಿತ್ ಶರ್ಮಾ ಸೂಚಿಸಿದ್ದಾರೆ.
ರಾಯ್ಪುರ(ಜ.21): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಹಲವು ಘಟನೆಗಳು ನಡೆದಿದೆ. ಟಾಸ್ ವೇಳೆ ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನೇ ಮರೆತ ಘಟನೆ ನಡೆದಿತ್ತು. ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಪುಟ್ಟ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಬಿಗಿದಪ್ಪಿಕೊಂಡಿದ್ದಾನೆ. ಇತ್ತ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿಗಳು ಹಿಡಿದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಗಳಿಗೆ ರೋಹಿತ್ ಶರ್ಮಾ ಮಹತ್ವದ ಸೂಚನೆ ನೀಡಿದ್ದಾರೆ. ಪುಟ್ಟ ಅಭಿಮಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ, ಏನೂ ಮಾಡಬೇಡಿ ಎಂದು ಸೂಚನೆ ನೀಡಿದ ಘಟನೆ ನಡೆದಿದೆ.
ನ್ಯೂಜಿಲೆಂಡ್ ತಂಡವನ್ನು 108 ರನ್ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಚೇಸಿಂಗ್ ಇಳಿದಿತ್ತು. ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ದಿಟ್ಟ ಹೋರಾಟದ ಮೂಲಕ ಭಾರತಕ್ಕೆ ನೆರವಾದರು. ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ಮುನ್ನುಗ್ಗುತ್ತಿದ್ದ ರೋಹಿತ್ ಶರ್ಮಾ ಭಾರತವನ್ನು ದಡ ಸೇರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಇದೇ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪುಟ್ಟ ಬಾಲಕನೋರ್ವ ಮೈದಾನಕ್ಕೆ ನುಗ್ಗಿದ್ದ.
ಟಾಸ್ನಲ್ಲಿ ಫಜೀತಿ, ತಂಡದ ನಿರ್ಧಾರ ತಿಳಿಸಲು ಪರದಾಡಿದ ರೋಹಿತ್!
ಬಾಲಕನ ಹಿಂದೆ ಭದ್ರತಾ ಸಿಬ್ಬಂದಿಗಳು ಅದೇ ವೇಗದಲ್ಲಿ ಓಡೋಡಿ ಬಂದರು. ಆದರೆ ಬಾಲಕ ನೇರವಾಗಿ ಪಿಚ್ ಬಳಿ ಬಂದು ರೋಹಿತ್ ಶರ್ಮಾರನ್ನು ಬಿಗಿದಿಪ್ಪಿಕೊಂಡ. ಅಷ್ಟರಲ್ಲೇ ಭದ್ರತಾ ಸಿಬ್ಬಂದಿಗಳು ಬಾಲಕನ ಕೆಳಕ್ಕೆ ಬೀಳಿಸಿ ಹಿಡಿದು ಬಿಟ್ಟರು. ಗಾಬರಿಗೊಂಡ ರೋಹಿತ್ ಶರ್ಮಾ, ಪುಟ್ಟ ಅಭಿಮಾನಿಗೆ ಏನೂ ಮಾಡಬೇಡಿ. ಈ ಅಭಿಮಾನಿ ಬಾಲಕ, ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಭದ್ರತಾ ಸಿಬ್ಬಂಧಿಗಳಿಗೆ ಸೂಚನೆ ನೀಡಿದರು.
ಈ ಘಟನೆ ಬಳಿಕ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಶರ್ಮಾ 47 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಆದರೆ ರೋಹಿತ್ 51 ರನ್ ಸಿಡಿಸಿ ಔಟಾದರು. ಅಷ್ಟರಲ್ಲಾಗಲೇ ಭಾರತ ಗೆಲುವಿನ ಹಾದಿ ಸುಗಮಗೊಂಡಿತ್ತು. ನಿರಾಸೆಯೊಂದಿಗೆ ರೋಹಿತ್ ಪೆವಿಲಿಯನ್ ಸೇರಿಕೊಂಡರು. ಭಾರತ 20.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. 8 ವಿಕೆಟ್ ಭರ್ಜರಿ ಗೆಲುವಿನ ಮೂಲಕ ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.
IND VS NZ ರೋಹಿತ್ ಗಿಲ್ ಆಟಕ್ಕೆ ನೆಲಕಚ್ಚಿದ ಕಿವೀಸ್, ಭಾರತಕ್ಕೆ ODI ಸಿರೀಸ್!
ಪುಟ್ಟ ಅಭಿಮಾನಿ ಬಿಗಿದಪ್ಪಿದ ಘಟನೆಗೂ ಮುನ್ನ ರೋಹಿತ್ ಶರ್ಮಾ ಟಾಸ್ ವೇಳೆ ಪರದಾಡಿದ ಘಟನೆ ನಡೆಯಿತು. ಟಾಸ್ ಗೆದ್ದ ರೋಹಿತ್ ಶರ್ಮಾ, ತಂಡದ ನಿರ್ಧಾರ ತಿಳಿಸಲು ಮರೆತೆ ಹೋಗಿದ್ದರು. ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡರಲ್ಲಿ ಭಾರತದ ನಿರ್ಧಾರ ಯಾವುದು ಎಂದು ತೆಲೆ ಹುಳ ಬಿಟ್ಟಿಕೊಂಡರು. ಕೆಲ ಹೊತ್ತಿ ಯೋಜನೆ ಮಾಡಿದ ರೋಹಿತ್ ಶರ್ಮಾ ಅಂತಿಮ ಹಂತದಲ್ಲಿ ಬೌಲಿಂಗ್ ಆಯ್ಕೆ ಮಾಡುತ್ತೇವೆ ಎಂದು ನಿರ್ಧಾರ ತಿಳಿಸಿಬಿಟ್ಟರು. ಈ ವೇಳೆ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ಹಾಗೂ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ನಕ್ಕು ಹುಣ್ಣಾದರು.