Asianet Suvarna News Asianet Suvarna News

India Tour Pakistan ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಈಗಲೇ ನಿರ್ಧರಿಸಿಲ್ಲ: ಕ್ರೀಡಾ ಸಚಿವ ಅನುರಾಗ್ ಠಾಕೂರ್‌

* 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ

* ಪಾಕ್ ತೆರಳುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಎಂದ ಅನುರಾಗ್ ಠಾಕೂರ್

* ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ಪುರುಷರ ಕ್ರಿಕೆಟ್‌ ಸಮಿತಿ ಮುಖ್ಯಸ್ಥರಾಗಿ ಗಂಗೂಲಿ ನೇಮಕ

 

ICC Champions Trophy 2025 Decision On Participation In Pakistan Will Be Taken When The Time Comes Says Sports Minister Anurag Thakur kvn
Author
Bengaluru, First Published Nov 18, 2021, 1:05 PM IST

ನವದೆಹಲಿ(ನ.18): ಪಾಕಿಸ್ತಾನದಲ್ಲಿ ನಿಗದಿಯಾಗಿರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ (ICC Champions Trophy 2025) ಭಾರತ ಪಾಲ್ಗೊಳ್ಳುವ ಬಗ್ಗೆ ಸಮಯ ಬಂದಾಗ ನಿರ್ಧರಿಸುತ್ತೇವೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವಾಲಯ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಭದ್ರತಾ ಸಮಸ್ಯೆಯ ಕಾರಣಕ್ಕೆ ಹಲವು ರಾಷ್ಟ್ರಗಳು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿವೆ. ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಭಾರತ ತಂಡ ಅಲ್ಲಿಗೆ ತೆರಳುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು. ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರೆ ಟೂರ್ನಿಯು ಯುಎಇಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.

ಪಾಕಿಸ್ತಾನವು ಭಾರತ ಹಾಗೂ ಶ್ರೀಲಂಕಾ ಜತೆಗೂಡಿ 1996ರ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯವನ್ನು ವಹಿಸಿತ್ತು. ಇದಾದ ಬಳಿಕ 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ಉಗ್ರಗಾಮಿಗಳು ಲಾಹೋರ್‌ನಲ್ಲಿ ಲಂಕಾ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಾದ ಬಳಿಕ ವಿವಿಧ ರಾಷ್ಟ್ರಗಳು ಪಾಕ್ ಪ್ರವಾಸ ಮಾಡಲು ಹಿಂದೇಟು ಹಾಕುತ್ತಲೇ ಬಂದಿವೆ. ಇನ್ನು ರಾಜತಾಂತ್ರಿಕ ಕಾರಣಗಳಿಂದಾಗಿ 2012ರಿಂದೀಚೆಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.

ICC schedule:ಏಕದಿನ, ಟಿ20 ವಿಶ್ವಕಪ್ ಸೇರಿ 3 ಟೂರ್ನಿಗೆ ಭಾರತ ಆತಿಥ್ಯ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ!

ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿ (ICC T20 World Cup) ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡವು ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನಾಡಲು ಪಾಕ್ ಪ್ರವಾಸ ಮಾಡಿತ್ತು. ಆದರೆ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಭದ್ರತೆಯ ನೆಪವೊಡ್ಡಿ ಮೈದಾನಕ್ಕಿಳಿಯಲು ನಿರಾಕರಿಸಿ ತವರಿಗೆ ವಾಪಾಸ್ಸಾಗಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಪಾಕ್‌ ಪ್ರವಾಸದಿಂದ ಹಿಂದೆ ಸರಿದಿತ್ತು. 

ಐಸಿಸಿ ಕ್ರಿಕೆಟ್‌ ಸಮಿತಿಗೆ ಗಂಗೂಲಿ ಹೊಸ ಮುಖ್ಯಸ್ಥ

ದುಬೈ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly), ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ (ICC) ಪುರುಷರ ಕ್ರಿಕೆಟ್‌ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಭಾರತದ ಮಾಜಿ ನಾಯಕ ಅನಿಲ್‌ ಕುಂಬ್ಳೆ (Anil Kumble) ಮೂರು ಬಾರಿ ತಲಾ 3 ವರ್ಷಗಳ ಕಾಲ ಅಂದರೆ ಒಟ್ಟು 9 ವರ್ಷ ಕಾರ್ಯಾವಧಿಯನ್ನು ಪೂರೈಸಿದ ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಸ್ಥಾನವನ್ನು ಗಂಗೂಲಿ ತುಂಬಲಿದ್ದಾರೆ. ಕ್ರಿಕೆಟ್‌ ಅಭಿವೃದ್ದಿಗೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಈ ಸಮಿತಿಗೆ ಕುಂಬ್ಳೆ ಅವರು 2012ರಿಂದ ಮುಖ್ಯಸ್ಥರಾಗಿದ್ದರು.

Ind vs NZ T20 Series: ಮೊದಲ ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಮತ್ತೊಂದು ಬಿಗ್ ಶಾಕ್..!

‘ಐಸಿಸಿ ಪುರುಷರ ಕ್ರಿಕೆಟ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ’ ಎಂದು ಐಸಿಸಿ ಮುಖ್ಯಸ್ಥ ಗ್ರೆಗ್‌ ಬಾರ್ಕ್ಲೆ ತಿಳಿಸಿದ್ದಾರೆ. ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ, ನಂತರ ಆಡಳಿತಗಾರರಾಗಿ ಅವರು ಹೊಂದಿರುವ ಅನುಭವ ಕ್ರಿಕೆಟ್‌ಗೆ ಸಂಬಂಧಿಸಿದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲಿದೆ. ಕಳೆದ 9 ವರ್ಷಗಳಿಂದ ಅತ್ಯುತ್ತಮ ರೀತಿಯಲ್ಲಿ ಸಮಿತಿಯನ್ನು ಮುನ್ನಡೆಸಿದ ಕುಂಬ್ಳೆ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಬಾರ್ಕ್ಲೆ ಹೇಳಿದ್ದಾರೆ.

ಲಕ್ಷ್ಮಣ್‌ 3 ವರ್ಷ ಎನ್‌ಸಿಎ ಮುಖ್ಯಸ್ಥರಾಗಿರ್ತಾರೆ: ದಾದಾ

ನವದೆಹಲಿ: ವಿವಿಎಸ್‌ ಲಕ್ಷ್ಮಣ್‌ (VVS Laxman) 3 ವರ್ಷಗಳ ಕಾಲ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥರಾಗಿ ಕಾರ‍್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಾಹಿತಿ ನೀಡಿದ್ದಾರೆ. 

ಬುಧವಾರ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು,‘ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಲು ಲಕ್ಷ್ಮಣ್‌ ಇನ್ನು 3 ವರ್ಷ ಹೈದರಾಬಾದ್‌ ತೊರೆದು ಬೆಂಗಳೂರಿನಲ್ಲಿ ನೆಲೆಸಲಿದ್ದಾರೆ. ಐಪಿಎಲ್‌ ಮೆಂಟರ್‌ ಹುದ್ದೆ, ವೀಕ್ಷಕ ವಿವರಣೆ ಒಪ್ಪಂದದಿಂದ ಅವರು ಹೆಚ್ಚು ಸಂಪಾದಿಸುತ್ತಿದ್ದರು. ಈಗ ಅವರ ಆದಾಯ ಕಡಿಮೆಯಾಗಲಿದೆಯಾದರೂ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಲು ಅವರು ಒಪ್ಪಿಕೊಂಡಿದ್ದಾರೆ. ಪತ್ನಿ, ಮಕ್ಕಳ ಜೊತೆ ಅವರು ಇನ್ನು ಬೆಂಗಳೂರಿನಲ್ಲಿ ನೆಲೆಸಲಿದ್ದಾರೆ’ ಎಂದಿದ್ದಾರೆ.

Follow Us:
Download App:
  • android
  • ios