ಜ.9 ರಿಂದ ಮಹಿಳಾ ಅಂಧರ ಕ್ರಿಕೆಟ್, ಹರ್ಮನ್ ಪ್ರೀತ್ ಕೌರ್ ರಾಯಭಾರಿಯಾಗಿ ನೇಮಕ!
ಜನವರಿ 9 ರಿಂದ 13ರವರೆಗೆ ಮಹಿಳಾ ರಾಷ್ಟ್ರೀಯ ಟಿ20 ಟೂರ್ನಿ ಆಯೋಜನೆ ಮಾಡಲಾಗಿದೆ. ಇತ್ತ ಟೀಂ ಇಂಡಿಯಾ ವುಮೆನ್ ನಾಯಕಿ ಹರ್ಮನ್ಪ್ರೀತ್ ಕೌರ್ ರಾಯಬಾರಿಯಾಗಿ ಆಯ್ಕೆಯಾಗಿದ್ದಾರೆ. ಟೂರ್ನಿ ವೇಳಾಪಟ್ಟಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು(ಜ.06) ಅಂಧರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಚಾಂಪಿಯನ್ ಆದ ಬೆನ್ನಲ್ಲೇ ಇದೀಗ ಮಹಿಳಾ ಅಂಧರ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೆಬಲ್ಸ್ ಮತ್ತು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಸಹಯೋಗದೊಂದಿಗೆ 2023ರ ಜನವರಿ 9 ರಿಂದ 13ರವರೆಗೆ ಮಹಿಳಾ ರಾಷ್ಟ್ರೀಯ ಟಿ20 ಟೂರ್ನಿ ಆಯೋಜನೆ ಮಾಡಲಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮಹಿಳಾ ಅಂಧರ ಕ್ರಿಕೆಟ್ ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಈ ಪಂದ್ಯಾವಳಿಯನ್ನು ಲೀಗ್ - ನಾಕೌಟ್ ಸ್ವರೂಪದಲ್ಲಿ ಆಯೋಜಿಸಲಾಗಿದೆ ಮತ್ತು 16 ರಾಜ್ಯ ತಂಡಗಳು ಭಾಗವಹಿಸುತ್ತವೆ. ಬರ್ಮಿಂಗ್ ಹ್ಯಾಮ್ ನ 2023ರ ವಿಶ್ವ ಅಂಧರ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಕ್ಕೆ ಈ ಟೂರ್ನಿಯಿಂದ ಮೊದಲ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ಸಂಭಾವ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಕ್ರಿಕೆಟ್ ಗೆ ಯಾವುದೇ ಗಡಿ ಇಲ್ಲ ಮತ್ತು ದೃಷ್ಟಿಹೀನ ಮಹಿಳೆಯರಿಗೆ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಭಾರತದಲ್ಲಿ ಅಂಧರ ಕ್ರಿಕೆಟ್ ಸಂಸ್ಥೆ) ಮತ್ತು ವಿಕಲಚೇತನರ ಸಮರ್ಥನಂ ಟ್ರಸ್ಟ್ ಜತೆ ಸಂಬಂಧ ಹೊಂದಿರುವುದು ನನಗೆ ಅತೀವ ಸಂತಸ ತಂದಿದೆ. ಕ್ರಿಕೆಟ್ ಒಂದು ಸುಂದರವಾದ ಆಟವಾಗಿದ್ದು, ಇದು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ ಮತ್ತು ಅಂಧರಿಗಾಗಿ ಕ್ರಿಕೆಟ್ ಅನ್ನು ಉತ್ತೇಜಿಸಲು ನಾವೆಲ್ಲರೂ ಹೆಜ್ಜೆ ಇಡಬೇಕು ಎಂದು ನಾನು ಭಾವಿಸುತ್ತೇನೆ. ಬೆಂಗಳೂರಿನಲ್ಲಿ ನಡೆಯಲಿರುವ ಮಹಿಳಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಎಲ್ಲಾ ಭಾಗವಹಿಸುವ ಎಲ್ಲಾ ತಂಡಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಅತ್ಯುತ್ತಮ ತಂಡ ಗೆಲ್ಲಲಿ ಎಂದು ಹಾರೈಸುತ್ತೇನೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ವಿಶ್ವ ಅಂಧರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೊದಲ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ನೋಡಲು ನಾನು ಎದುರುನೋಡುತ್ತಿದ್ದೇನೆ. ನಾವೆಲ್ಲರೂ ಅವರ ಪ್ರಯತ್ನಗಳನ್ನು ಹುರಿದುಂಬಿಸೋಣ ಮತ್ತು ಬೆಂಬಲಿಸೋಣ," ಎಂದು ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ನ ರಾಯಭಾರಿ ಹರ್ಮನ್ ಪ್ರೀತ್ ಕೌರ್ ಹೇಳಿದರು.
Blind Cricket ಬಾಂಗ್ಲಾದೇಶ ಮಣಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾ!
ಬೆಂಗಳೂರು, ಆಲ್ಟಿಯೋರ್ ಸ್ಪೋರ್ಟ್ಸ್ ಗ್ರೀನ್ ಪಾರ್ಕ್, ಸಚಿನ್ ತೆಂಡೂಲ್ಕರ್ ಟರ್ಫ್ ಗ್ರೌಂಡ್, ರಾಮಸಾಗರ, ಕ್ರಿಕ್ ಬಜ್ ಕ್ರಿಕೆಟ್ ಅಕಾಡೆಮಿ, ಚಂದಾಪುರ ಮತ್ತು ಬನ್ನೇರುಘಟ್ಟ ರಸ್ತೆಯ ಕ್ರಿಕ್ ಬಜ್ ಕ್ರಿಕೆಟ್ ಅಕಾಡೆಮಿಯಲ್ಲಿ 24 ಲೀಗ್ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಕ್ರಮವಾಗಿ ಜನವರಿ 12 ಮತ್ತು 13ರಂದು ಅಲ್ಟಿಯೊರ್ ಸ್ಪೋರ್ಟ್ಸ್ ಗ್ರೀನ್ ಪಾರ್ಕ್ ನಲ್ಲಿ ನಡೆಯಲಿವೆ. ಫೈನಲ್ ನಂತರ ಭವ್ಯ ಸಮಾರೋಪ ಸಮಾರಂಭ ನಡೆಯಲಿದೆ.
ಇದು ನಮಗೆ ಬಹಳ ಮುಖ್ಯವಾದ ಪಂದ್ಯಾವಳಿಯಾಗಿದೆ, ಏಕೆಂದರೆ ಹತ್ತು ಅಂಧರ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಈ ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮಹಿಳೆಯರ ಆಟಕ್ಕೆ ಅಗತ್ಯವಾದ ಉತ್ತೇಜನ ನೀಡಲು ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ, ಇದರಿಂದ ಅವರು ಜಾಗತಿಕವಾಗಿ ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸಬಹುದು ಎಂದು ಸಿಎಬಿಐನ ಅಧ್ಯಕ್ಷ ಮಹಂತೇಶ್ ಜಿ.ಕೆ ಹೇಳಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಐ.ಎ.ಎಸ್., ಕರ್ನಾಟಕ ಸರ್ಕಾರದ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಆಪ್ತ ಕಾರ್ಯದರ್ಶಿ ಎಚ್.ಜಿ.ಪ್ರಭಾಕರ್ ಕೆ.ಜಿ.ಎಸ್., ಮತ್ತು ವಿಕಲಚೇತನರ ಸಮರ್ಥನಂ ಟ್ರಸ್ಟ್ ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿಹಾಗೂ ಭಾರತದಲ್ಲಿ ಅಂಧರ ಕ್ರಿಕೆಟ್ ಸಂಸ್ಥೆ ಮತ್ತು ಡಿಸಿಸಿಐ ಅಧ್ಯಕ್ಷ ಡಾ.ಮಹಂತೇಶ್ ಜಿ.ಕೆ. ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ತಂಡವು ಈ ಮಾದರಿಯಲ್ಲಿ ಹಾಲಿ ಚಾಂಪಿಯನ್ ಆಗಿದ್ದರೆ, ಒಡಿಶಾ ರನ್ನರ್ಸ್ ಅಪ್ ಆಗಿದೆ.
Cricket: ಟಿ20 ಅಂಧರ ವಿಶ್ವಕಪ್ ನಲ್ಲಿ ಕೊಪ್ಪಳ ಯುವಕನಿಗೆ ಸ್ಥಾನ