ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಜೋಡಿ, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದ್ದಾರೆ. ಆದರೆ, ಸರ್ಫರಾಜ್ ಖಾನ್, ಋತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪವಿದೆ.

ಬೆಂಗಳೂರು: ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ದೊಡ್ಡ ದೊಡ್ಡ ತೀರ್ಮಾನ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿಲ್ಲ. ಇದಕ್ಕೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸಾಥ್ ನೀಡುತ್ತಿದ್ದಾರೆ. ಈ ಜೋಡಿ ಭಾರತದ ಕ್ರಿಕೆಟ್ ದಿಕ್ಕನ್ನೇ ಬದಲಿಸಲು ಹೊರಟಿದ್ದಾರೆ. ಇದರ ಜತೆಜತೆಗೆ ಗಂಭೀರ್-ಅಗರ್ಕರ್ ಜೋಡಿ ಭಾರತ ಕ್ರಿಕೆಟ್ ತಂಡದ ಕೆಲವು ಸ್ಟಾರ್ ಕ್ರಿಕೆಟಿಗರ ವೃತ್ತಿಬದುಕನ್ನೇ ನುಚ್ಚುನೂರು ಮಾಡಲು ಹೊರಟಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಗಂಭೀರ್ ಹಾಗೂ ಅಗರ್ಕರ್ ಜೋಡಿ ಈ ಮೂವರು ಕ್ರಿಕೆಟಿಗರ ಬದುಕು ಹಾಳು ಮಾಡುತ್ತಿದ್ದಾರೆ ಎನ್ನುವ ಗಂಭೀರ ಅರೋಪ ಎದುರಿಸುತ್ತಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

1. ಸರ್ಫರಾಜ್ ಖಾನ್

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್, ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಇದಾದ ಬಳಿಕ ಅವರಿಗೆ ಒಂದೇ ಒಂದು ಮ್ಯಾಚ್ ಆಡಲೂ ಅವಕಾಶ ಸಿಕ್ಕಿಲ್ಲ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಹಾಗೂ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲೂ ಸರ್ಫರಾಜ್‌ಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ಭಾರತ ತಂಡದಿಂದ ಹೊರಬಿದ್ದ ಸರ್ಫರಾಜ್ ಖಾನ್, ಭಾರತ 'ಎ' ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಿದ್ದೂ ಸರ್ಫರಾಜ್ ಖಾನ್ ಅವರನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ. ಇನ್ನು ದಕ್ಷಿಣ ಆಫ್ರಿಕಾ 'ಎ' ಎದುರಿನ ಸರಣಿಗೂ ಸರ್ಫರಾಜ್ ಖಾನ್‌ಗೆ ಭಾರತ 'ಎ' ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಸರ್ಫರಾಜ್ ಖಾನ್ ಅವರ ಕಡೆಗಣನೆಯ ಹಿಂದೆ ಅಗರ್ಕರ್ ಹಾಗೂ ಗಂಭೀರ್ ಪಾತ್ರವಿದೆ ಎನ್ನುವ ಗಂಭೀರ ಆರೋಪವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ.

2.ಋತುರಾಜ್ ಗಾಯಕ್ವಾಡ್:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಋತುರಾಜ್ ಗಾಯಕ್ವಾಡ್, ಮಹಾರಾಷ್ಟ್ರ ತಂಡದ ಜತೆಜತೆಗೆ ಭಾರತ 'ಎ' ತಂಡದ ಪರವೂ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಋತುರಾಜ್ ಗಾಯಕ್ವಾಡ್ ತಾವಾಡಿದ ಕೊನೆಯ 4 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದಾರೆ. ಇನ್ನು ಟಿ20 ಮಾದರಿಯಲ್ಲೂ ಗಾಯಕ್ವಾಡ್ ಅವರ ಟ್ರ್ಯಾಕ್‌ರೆಕಾರ್ಡ್ ಅದ್ಭುತವಾಗಿದೆ. ಇದೆಲ್ಲದರ ಹೊರತಾಗಿಯೂ ಋತುರಾಜ್ ಗಾಯಕ್ವಾಡ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಅಗರ್ಕರ್ ಹಾಗೂ ಗಂಭೀರ್ ಜೋಡಿ ಗಾಯಕ್ವಾಡ್ ಕ್ರಿಕೆಟ್ ಬದುಕು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

3. ಸಂಜು ಸ್ಯಾಮ್ಸನ್:

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಟಿ20 ಕ್ರಿಕೆಟ್ ಮಾದರಿಯಲ್ಲಿ ಕಳೆದೊಂದು ವರ್ಷದಿಂದ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದ್ದರು. ಆದರೆ ಶುಭ್‌ಮನ್ ಗಿಲ್‌ಗೆ ಭಾರತ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಂತೆಯೇ, ಸಂಜು ಸ್ಯಾಮ್ಸನ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಿಲ್ಲ. ಆರಂಭಿಕನಾಗಿ ಭಾರತ ಟಿ20 ತಂಡದಲ್ಲಿ ಅಬ್ಬರಿಸುತ್ತಿದ್ದ ಸಂಜುವನ್ನು ಗಿಲ್ ಆಗಮನದ ಬಳಿಕ ಮಧ್ಯಮ ಕ್ರಮಾಂಕಕ್ಕೆ ತಳ್ಳಲಾಯಿತು. ಇದೀಗ ಸಂಜು ಆಡುವ ಹನ್ನೊಂದರ ಬಳಗದಿಂದಲೇ ಹೊರಬಿದ್ದಿದ್ದಾರೆ. ಗಿಲ್‌ಗೆ ಅವಕಾಶ ಮಾಡಿಕೊಡಲು ಅಗರ್ಕರ್ ಹಾಗೂ ಗಂಭೀರ್ ಇಬ್ಬರು ಸೇರಿ ಸಂಜು ಕ್ರಿಕೆಟ್ ಬದುಕಿನಲ್ಲಿ ಆಟವಾಡುತ್ತಿದ್ದಾರೆ ಎಂದು ಫ್ಯಾನ್ಸ್ ಆರೋಪಿಸುತ್ತಿದ್ದಾರೆ.