* ರಿಷಭ್‌ ಪಂತ್ ಭವಿಷ್ಯದ ಯಶಸ್ವಿ ನಾಯಕರಾಗಲಿದ್ದಾರೆ ಎಂದು ಸುನಿಲ್ ಗವಾಸ್ಕರ್* ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಿದ್ದ ರಿಷಭ್ ಪಂತ್* ಪಂತ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು.

ನವದೆಹಲಿ(ಮೇ.13): ಯುವ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಯಶಸ್ವಿ ನಾಯಕನಾಗುವ ಸಾಮರ್ಥ್ಯವಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗಷ್ಟೇ ನಡೆದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪಂತ್ ಯಶಸ್ವಿಯಾಗಿ ಮುನ್ನಡೆಸಿದ್ದರು. 

ರಿಷಭ್ ಪಂತ್‌ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅತ್ಯದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಪಂತ್‌ ಬಳಿ ನಾಯಕತ್ವದ ಕಿಚ್ಚು ಇದೆ. ಅದನ್ನು ಬೆಳೆಯಲು ಬಿಟ್ಟರೆ ಮುಂದೆ ಸಹಜವಾಗಿಯೇ ಪ್ರಜ್ವಲಿಸಲಿದೆ. ಹೌದು, ಪಂತ್ ಕೂಡಾ ತಪ್ಪು ಮಾಡಬಹುದು. ಹಾಗಂತ ಯಾವ ನಾಯಕ ತಪ್ಪು ಮಾಡೊಲ್ಲ ಹೇಳಿ? ಎಂದು ಸ್ಪೋರ್ಟ್ಸ್‌ ಸ್ಟಾರ್‌ಗೆ ಬರೆದ ಲೇಖನದಲ್ಲಿ ಸುನಿಲ್ ಗವಾಸ್ಕರ್ ರಿಷಭ್ ಪಂತ್‌ ನಾಯಕತ್ವದ ಗುಣಗಾನ ಮಾಡಿದ್ದಾರೆ.

ರಿಷಭ್ ಪಂತ್ ಭವಿಷ್ಯದಲ್ಲಿ ಉತ್ತಮ ನಾಯಕರಾಗುವ ಬಗ್ಗೆ ಯಾವುದೇ ಅನುಮಾನವಿಲ್ಲ. ಈಗಾಗಲೇ ಚುಟುಕು ಕ್ರಿಕೆಟ್‌ನ ಕೆಲವೇ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪಂತ್ ಅನಾವರಣ ಮಾಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್‌ ಉಳಿದೆಲ್ಲಾ ವೇಗಿಗಳಿಗಿಂತ ಮುಂದಿದ್ದಾರೆ: ಎಂ ಎಸ್‌ ಕೆ ಪ್ರಸಾದ್

14ನೇ ಅವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 8 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 2 ಸೋಲಿನೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದಕೊಂಡಿತ್ತು. ಇನ್ನು ಬ್ಯಾಟಿಂಗ್‌ನಲ್ಲೂ ಪಂತ್ 35.50 ಬ್ಯಾಟಿಂಗ್ ಸರಾಸರಿಯಲ್ಲಿ 213 ರನ್‌ ಚಚ್ಚಿದ್ದಾರೆ.

ಬಯೋ ಬಬಲ್‌ನೊಳಗೆ ಕೋವಿಡ್ 19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಮೇ.04ರಂದು ಬಿಸಿಸಿಐ ದಿಢೀರ್ ಎನ್ನುವಂತೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ