* ಮೊಹಮ್ಮದ್ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಮರು ಆಯ್ಕೆ* ಅಪೆಕ್ಸ್‌ ಕೌನ್ಸಿಲ್‌ ರದ್ದುಮಾಡಿದ ಓಂಬಡ್ಸ್‌ಮನ್‌* ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಓಂಬಡ್ಸ್‌ಮನ್ ಮಧ್ಯಂತರ ಆದೇಶ

ಹೈದರಾಬಾದ್‌(ಜು.05): ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌ ಅವರನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರನ್ನಾಗಿ ಪುನಾರಾಯ್ಕೆ ಮಾಡಿ ನಿವೃತ್ತ ನ್ಯಾಯಮೂರ್ತಿ, ಓಂಬಡ್ಸ್‌ಮನ್‌ ದೀಪಕ್‌ ವರ್ಮಾ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ 5 ಸದಸ್ಯರನ್ನೊಳಗೊಂಡ ಅಪೆಕ್ಸ್ ಕೌನ್ಸಿಲ್‌ ಭ್ರಷ್ಟಾಚಾರ ಆರೋಪದಡಿ ಅಜರುದ್ದೀನ್ ಅವರ ಮೇಲೆ ಹೇರಲಾಗಿದ್ದ ತಾತ್ಕಾಲಿಕ ಅಮಾನತನ್ನು ತೆರವುಗೊಳಿಸಲಾಗಿದೆ.

ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಓಂಬಡ್ಸ್‌ಮನ್ ಮಧ್ಯಂತರ ಆದೇಶ ಹೊರಡಿಸಿದ್ದು‌, ಕೆ. ಜಾನ್‌ ಮನೋಜ್, ಉಪಾಧ್ಯಕ್ಷ ಆರ್‌. ವಿಜಯಾನಂದ್, ನರೇಶ್ ಶರ್ಮಾ, ಸುರೇಂದರ್ ಅಗರ್‌ವಾಲ್, ಅನುರಾಧ ಅವರನ್ನೊಳಗೊಂಡ ಅಪೆಕ್ಸ್ ಕೌನ್ಸಿಲ್‌ಅನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. 

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಅವರ ಮೇಲೆ ದುರ್ನಡತೆಯ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅಪೆಕ್ಸ್ ಕೌನ್ಸಿಲ್‌ ಅಜರುದ್ದೀನ್ ಅವರನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಪ್ರಾಥಮಿಕ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿತ್ತು. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ನ್ಯಾಯಮೂರ್ತಿ ವರ್ಮಾ, ಅಜರುದ್ದೀನ್ ಅವರ ಮೇಲೆ ಹೊರಿಸಲಾಗಿದ್ದ ಆರೋಪದ ದೂರನ್ನು ಓಂಬಡ್ಸ್‌ಮನ್‌ಗೆ ಸಲ್ಲಿಸಿಲ್ಲ. ಹೀಗಾಗಿ ಇದಕ್ಕೆ ಕಾನೂನಿನ ಯಾವುದೇ ಮಾನ್ಯತೆಯಿಲ್ಲ ಎಂದು ತಿಳಿಸಿದ್ದಾರೆ.

ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್‌ ಸಸ್ಪೆಂಡ್..!

ಅಪೆಕ್ಸ್‌ ಕೌನ್ಸಿಲ್‌ ಹೀಗೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಕೇವಲ ಐವರು ಸದಸ್ಯರನ್ನೊಳಗೊಂಡ ಅಪೆಕ್ಸ್‌ ಕೌನ್ಸಿಲ್‌ಗೆ ಅಧ್ಯಕ್ಷರಾಗಿ ಚುನಾಯಿತರಾದ ಅಜರುದ್ದೀನ್ ಅವರನ್ನು ಸಸ್ಪೆಂಡ್ ಮಾಡುವ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಮೊಹಮ್ಮದ್ ಅಜರುದ್ದೀನ್ ಅವರಿಗೆ ಹೈದರಾಬಾದ್‌ ಅಧ್ಯಕ್ಷರಾಗಿ ಮುಂದುವರೆಯುವಂತೆ ಸೂಚಿಸಿದ್ದೇನೆ. ಅಜರುದ್ದೀನ್ ಅವರ ಮೇಲಿನ ಎಲ್ಲಾ ದೂರುಗಳ ಬಗ್ಗೆ ಒಂಬಡ್ಸ್‌ಮನ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶರ್ಮಾ ತಿಳಿಸಿದ್ದಾರೆ.