ತವರಲ್ಲಿ ಭಾರತ ತಂಡಕ್ಕೆ ಉಪನಾಯಕ ಬೇಡ..! ಕೆ ಎಲ್ ರಾಹುಲ್ ಕಾಲೆಳೆದ ರವಿಶಾಸ್ತ್ರಿ
ಭಾರತದಲ್ಲಿ ಆಡುವಾಗ ಟೀಂ ಇಂಡಿಯಾಗೆ ಉಪನಾಯಕನ ಅಗತ್ಯವಿಲ್ಲ
ಟೀಂ ಇಂಡಿಯಾ ಉಪನಾಯಕ ಪಟ್ಟ ಕಳೆದುಕೊಂಡ ಕೆ ಎಲ್ ರಾಹುಲ್
ರಾಹುಲ್ ಕೈಬಿಟ್ಟು ಶುಭ್ಮನ್ ಗಿಲ್ಗೆ ಸ್ಥಾನ ನೀಡಲು ಒಲವು
ನವದೆಹಲಿ(ಫೆ.27): ಭಾರತದಲ್ಲಿ ಸರಣಿ ಆಡುವಾಗ ತಂಡಕ್ಕೆ ಉಪನಾಯಕನ ಅವಶ್ಯಕತೆ ಇಲ್ಲ. ಉಪನಾಯಕ ಲಯದಲ್ಲಿಲ್ಲದಿದ್ದರೆ ತಂಡದ ಆಯ್ಕೆಯಲ್ಲಿ ಗೊಂದಲ ಉಂಟಾಗಲಿದೆ ಎಂದು ಕೆ.ಎಲ್.ರಾಹುಲ್ ಆಯ್ಕೆ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೊನೆ 2 ಟೆಸ್ಟ್ಗೆ ಶುಭ್ಮನ್ ಗಿಲ್ಗೆ ಅವಕಾಶ ನೀಡುವ ಬಗ್ಗೆ ಒಲವು ತೋರಿಸಿದ್ದಾರೆ.
ಈ ಬಗ್ಗೆ ಐಸಿಸಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಶಾಸ್ತ್ರಿ, ‘ರಾಹುಲ್ ಆಟ, ಮಾನಸಿಕ ಸ್ಥಿತಿ ಬಗ್ಗೆ ಬಿಸಿಸಿಐಗೆ ಗೊತ್ತಿದೆ. ಶುಭ್ಮನ್ ಗಿಲ್ರನ್ನು ಹೇಗೆ ನೋಡಬೇಕೆಂಬುದೂ ಅವರಿಗೆ ಗೊತ್ತಿದೆ. ತಂಡದಲ್ಲಿ ಉಪನಾಯಕ ಇರಲೇಬೇಕೆಂದು ನಾನು ಭಾವಿಸುವುದಿಲ್ಲ. ಶ್ರೇಷ್ಠ 11 ಆಟಗಾರರ ಆಯ್ಕೆ ಮಾತ್ರ ಮುಖ್ಯವಾಗಬೇಕು. ಉಪನಾಯಕ ಆಡದಿದ್ದರೆ ಬೇರೆಯವರಿಗೆ ಅವಕಾಶ ಸಿಗಬೇಕು. ಶುಭ್ಮನ್ ಗಿಲ್ ಸೇರಿ ಹಲವರು ಭಾರತ ತಂಡದ ಬಾಗಿಲು ತಟ್ಟುತ್ತಿದ್ದಾರೆ’ ಎಂದಿದ್ದಾರೆ.
ಆಸ್ಟ್ರೇಲಿಯಾ ಎದುರು ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್, 71 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 20 ರನ್ ಬಾರಿಸಿ ಟೋಡ್ ಮರ್ಫಿಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೆ ಎಲ್ ರಾಹುಲ್ 41 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿ ನೇಥನ್ ಲಯನ್ ಎಲ್ಬಿ ಬಲೆಗೆ ಬಿದ್ದರು. ಇನ್ನು ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಕೆ ಎಲ್ ರಾಹುಲ್, ಕೇವಲ ಒಂದು ರನ್ ಬಾರಿಸಿ ನೇಥನ್ ಲಯನ್ಗೆ ವಿಕೆಟ್ ಒಪ್ಪಿಸಿದರು.
ಸಿಕ್ಸರ್ ಚಚ್ಚುವುದರಲ್ಲಿ ಧೋನಿ, ರೋಹಿತ್, ತೆಂಡುಲ್ಕರ್ ದಾಖಲೆ ಮುರಿದ ಟಿಮ್ ಸೌಥಿ..!
ಕೆ ಎಲ್ ರಾಹುಲ್ಗೆ ಶಾಕ್ ನೀಡಿರುವ ಬಿಸಿಸಿಐ: ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೆ ಎಲ್ ರಾಹುಲ್ಗೆ ಇದೀಗ ಬಿಸಿಸಿಐ ಕೂಡಾ ಶಾಕ್ ನೀಡಿದ್ದು, ಭಾರತ ಟೆಸ್ಟ್ ತಂಡದ ಉಪನಾಯಕ ಪಟ್ಟದಿಂದಲೂ ಕೆಳಗಿಳಿಸಿದೆ. ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವಾಗ ಕೆ ಎಲ್ ರಾಹುಲ್ಗೆ ತಂಡದಲ್ಲಿ ಸ್ಥಾನ ನೀಡಿಲಾಗಿದೆಯಾದರೂ, ಉಪನಾಯಕ ಪಟ್ಟ ನೀಡಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್ಗೆ ಭಾರತದ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (wk), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜೈದೇವ್ ಉನಾದ್ಕತ್.
ಉಜ್ಜಯಿನಿ ದೇವಾಲಯಕ್ಕೆ ರಾಹುಲ್-ಆಥಿಯಾ ಭೇಟಿ
ಭೋಪಾಲ್: ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಭಾರತೀಯ ಕ್ರಿಕೆಟಿಗ ಕೆ.ಎಲ್.ರಾಹುಲ್ ತಮ್ಮ ಪತ್ನಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಜೊತೆ ಭಾನುವಾರ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ಮುಂಜಾನೆ ದೇವಾಲಯಕ್ಕೆ ಆಗಮಿಸಿದ ರಾಹುಲ್-ಆಥಿಯಾ ಪೂಜೆಯಲ್ಲಿ ಪಾಲ್ಗೊಂಡು, ದೇವರ ಆಶೀರ್ವಾದ ಪಡೆದರು.
ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಬಳಿಕ ಭಾರತೀಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ರಾಹುಲ್ ಭಾನುವಾರವೇ ತಂಡ ಕೂಡಿಕೊಂಡರು ಎಂದು ತಿಳಿದುಬಂದಿದೆ.
ಚಿನ್ನಸ್ವಾಮಿ ಸ್ಟೇಡಿಯಂಗೆ ಜರ್ಮನಿ ಚಾನ್ಸಲರ್ ಭೇಟಿ
ಬೆಂಗಳೂರು: ಜರ್ಮನಿ ಸರ್ಕಾರದ ಮುಖ್ಯಸ್ಥ ಒಲಾಫ್ ಶಾಲ್್ಜ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಪುರುಷ, ಮಹಿಳಾ ಆಟಗಾರರು, ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು. ಅವರಿಗೆ ಫ್ರಾಂಚೈಸಿ ವತಿಯಿಂದ ತಂಡದ ಜೆರ್ಸಿ, ಕ್ರಿಕೆಟಿಗರ ಹಸ್ತಾಕ್ಷರವುಳ್ಳ ಬ್ಯಾಟ್ ನೀಡಿ ಗೌರವಿಸಲಾಯಿತು.