2026ರ ಐಪಿಎಲ್ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಮಹತ್ವದ ತೀರ್ಮಾನ ಮಾಡಿದ್ದು, ಐಪಿಎಲ್ನ ಸ್ಟಾರ್ ಆಟಗಾರ ಹಾಗೂ ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಕೀಪರ್ ಆಗಿರುವ ವ್ಯಕ್ತಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ.
ಚೆನ್ನೈ (ಜು.1): 2025 ರ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ (CSK) ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಈಗ ತಂಡವನ್ನು ಪುನರುಜ್ಜೀವನಗೊಳಿಸಲು ಯೋಜನೆ ಆರಂಭಿಸಿದೆ. ಕಳೆದ ವಾರದಿಂದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು CSK ತಂಡಕ್ಕೆ ಸೇರಿಸಿಕೊಳ್ಳಲು ಯೋಚಿಸುತ್ತಿದೆ ಎನ್ನುವ ವದಂತಿಗಳು ಹಬ್ಬಿವೆ.
ಕ್ರಿಕ್ಬಝ್ನ ವರದಿಯ ಪ್ರಕಾರ, ಸಿಎಸ್ಕೆ ಸ್ಯಾಮ್ಸನ್ರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ "ಆಸಕ್ತಿ" ಹೊಂದಿದೆ. ಆದರೆ, ಸಿಎಸ್ಕೆಯ ಹಿರಿಯ ಅಧಿಕಾರಿಯೊಬ್ಬರು ಈ ವಿಷಯದಲ್ಲಿ ರಾಯಲ್ಸ್ ಜೊತೆ ಯಾವುದೇ ಅಧಿಕೃತ ಸಂವಹನ ನಡೆಸಿಲ್ಲ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
"ನಾವು ಖಂಡಿತವಾಗಿಯೂ ಸಂಜು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ಅವರು ಭಾರತೀಯ ಬ್ಯಾಟ್ಸ್ಮನ್, ಅವರು ಕೀಪರ್ ಮತ್ತು ಓಪನರ್. ಆದ್ದರಿಂದ ಅವರು ಲಭ್ಯವಿದ್ದರೆ, ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಆಯ್ಕೆಯನ್ನು ನಾವು ಖಂಡಿತವಾಗಿಯೂ ಪರಿಶೀಲಿಸುತ್ತೇವೆ" ಎಂದು ಸಿಎಸ್ಕೆ ತಂಡದ ಅಧಿಕಾರಿ ತಿಳಿಸಿದ್ದಾರೆ. 'ಅವರ ಬದಲು ರಾಜಸ್ಥಾನ ತಂಡಕ್ಕೆ ಯಾರನ್ನು ನೀಡುತ್ತೇವೆ ಅನ್ನೋದನ್ನ ನಾವಿನ್ನೂ ನಿರ್ಧರಿಸಿಲ್ಲ. ಏಕೆಂದರೆ, ಈ ವಿಚಾರವಿನ್ನೂ ಅಷ್ಟು ದೂರ ಹೋಗಿಲ್ಲ. ಆದರೆ, ಸಂಜು ವಿಚಾರದಲ್ಲಿ ಆಸಕ್ತಿ ಹೊಂದಿರುವುದು ನಿಜ' ಎಂದು ಅಧಿಕಾರಿ ತಿಳಿಸಿದ್ದಾರೆ.
ಐಪಿಎಲ್ 2025 ರ ಋತುವಿಗೆ ಮೊದಲು, ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಾಯಲ್ಸ್ ತಂಡವು ಉಳಿಸಿಕೊಂಡ ಅಗ್ರ ಆಟಗಾರ ಎನಿಸಿದ್ದರು. ಇದಕ್ಕಾಗಿ 18 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಪ್ರಸ್ತುತ ಟ್ರೇಡಿಂಗ್ ಅವಧಿ ಮುಗಿದಿದ್ದು, ರಾಜಸ್ಥಾನ ಮ್ಯಾನೇಜ್ಮೆಂಟ್ಅನ್ನು ಸಿಎಸ್ಕೆ ಅಧಿಕೃತವಾಗಿ ಸಂಪರ್ಕಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಎಸ್ಕೆ ಜೊತೆಗೆ, ಇತರ ಕೆಲವು ಫ್ರಾಂಚೈಸಿಗಳು ಸ್ಯಾಮ್ಸನ್ ಅವರನ್ನು ಸಹಿ ಮಾಡಲು ರಾಯಲ್ಸ್ ಅನ್ನು ಸಂಪರ್ಕಿಸಿವೆ ಎಂದು ಕ್ರಿಕ್ಬಜ್ ವರದಿ ತಿಳಿಸಿದೆ. ಹಾಗೇನಾದರೂ ಚೆನ್ನೈಗೆ ಅಥವಾ ಬೇರೆ ತಂಡಕ್ಕೆ ಅವರು ಟ್ರೇಡಿಂಗ್ ಆದಲ್ಲಿ 18 ಕೋಟಿಯ ಒಪ್ಪಂದಕ್ಕೆ ಹೋಗಲಿದ್ದಾರೆ.
ಸಿಎಸ್ಕೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ರಾಯಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅವರಿಗಿಂತ ಒಂದು ಸ್ಥಾನ ಮೇಲಿತ್ತು. ಸ್ಯಾಮ್ಸನ್ ಕೂಡ ಇಡೀ ಟೂರ್ನಿಯಲ್ಲಿ ಹಿನ್ನಡೆ ಕಂಡಿದ್ದರು.ಆರಂಭಿಕ ಹಂತದಲ್ಲಿ ಗಾಯದಿಂದಾಗಿ ಅವರನ್ನು ಇಂಪ್ಯಾಕ್ಟ್ ಬದಲಿ ಆಟಗಾರನಾಗಿ ಬಳಸಲಾಗಿದ್ದರೂ, ಪಂದ್ಯಾವಳಿಯ ಮಧ್ಯದಲ್ಲಿ ಅವರು ಸೈಡ್ ಸ್ಟ್ರೈನ್ ಅನ್ನು ಅನುಭವಿಸಿದರು, ಇದು ಅವರನ್ನು ಐದು ಪಂದ್ಯಗಳಿಂದ ಹೊರಗಿಟ್ಟಿತು.
ಸ್ಯಾಮ್ಸನ್ ಐಪಿಎಲ್ 2025 ರ ಋತುವನ್ನು ಒಂಬತ್ತು ಪಂದ್ಯಗಳಿಂದ 285 ರನ್ ಬಾರಿಸಿದ್ದರು. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಬಾರಿಸಿದ್ದ 66 ರನ್ ಟೂರ್ನಿಯಲ್ಲಿ ಅಧಿಕ ಮೊತ್ತವಾಗಿತ್ತು. ಆ ಬಳಿಕ ರಾಯಲ್ಸ್ ತಂಡವನ್ನು ರಿಯಾನ್ ಪರಾಗ್ ಮುನ್ನಡೆಸಿದರೆ, ಸ್ಯಾಮ್ಸನ್ ತಂಡದಿಂದ ಹೊರಗುಳಿದಿದ್ದರು. ಸ್ಯಾಮ್ಸನ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬ ವದಂತಿಗಳು ಹರಡಿದ್ದವು.
ವರದಿಗಾರರೊಂದಿಗೆ ಮಾತನಾಡಿದ ದ್ರಾವಿಡ್, "ಈ ವರದಿಗಳು ಎಲ್ಲಿಂದ ಬರುತ್ತಿವೆ ಎಂದು ನನಗೆ ತಿಳಿದಿಲ್ಲ. ಸಂಜು ಮತ್ತು ನಾನು ಒಂದೇ ಯೋಚನೆಯಲ್ಲಿದ್ದೇವೆ" ಎಂದು ಹೇಳಿದ್ದರು. "ಕೆಲವೊಮ್ಮೆ, ನೀವು ಪಂದ್ಯಗಳನ್ನು ಸೋತಾಗ ಮತ್ತು ವಿಷಯಗಳು ಸರಿಯಾಗಿ ನಡೆಯದಿದ್ದಾಗ, ನೀವು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ನಾವು ಅದನ್ನು ನಮ್ಮ ಪ್ರದರ್ಶನದ ಮೇಲೆ ತೆಗೆದುಕೊಳ್ಳಬಹುದು, ಆದರೆ ಈ ಆಧಾರರಹಿತ ವಿಷಯದ ಬಗ್ಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದರು.
