ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಸುದ್ದಿಗೋಷ್ಠಿಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ

ಮುಂಬೈ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹತ್ವದ 5 ಪಂದ್ಯಗಳ ಟೆಸ್ಟ್ ಸರಣಿಗೆ ದಿನಗಣನೆ ಆರಂಭಗೊಂಡಿದೆ. ನ.22ರಿಂದ ಆರಂಭಗೊಳ್ಳಲಿರುವ ಸರಣಿಗಾಗಿ ಭಾರತದ ಕೆಲ ಆಟಗಾರರು ಈಗಾಗಲೇ ಆಸೀಸ್ ತಲುಪಿದ್ದಾರೆ.

ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ಪರ್ಥ್ ತಲುಪಿದ್ದು, ಒಂದೆರಡು ದಿನದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಭಾರತದ ಮತ್ತೊಂದು ತಂಡ ಶೀಘ್ರದಲ್ಲೇ ಆಸೀಸ್ ಪ್ರವಾಸ ಕೈಗೊಳ್ಳಲಿದೆ. ನಾಯಕ ರೋಹಿತ್‌ ಶರ್ಮಾ ಸದ್ಯ ಆಸೀಸ್‌ಗೆ ತೆರಳುವ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಸರಣಿ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಲ್ಲಿ ಅತಿ ಮಹತ್ವದ್ದು ಎನಿಸಿಕೊಂಡಿದೆ. ಮೊದಲ ಪಂದ್ಯ ನ.22ರಿಂದ ಪರ್ತನಲ್ಲಿ 2ನೇ ಪಂದ್ಯ ಡಿ.6ರಿಂದ ಅಡಿಲೇಡ್‌ನಲ್ಲಿ ನಿಗದಿಯಾಗಿದೆ. ಬಳಿಕ ಬ್ರಿಸ್ಟೇನ್‌ನಲ್ಲಿ ಡಿ.14ರಿಂದ 3ನೇ ಟೆಸ್ಟ್, ಮೆಲ್ಬರ್ನ್‌ನಲ್ಲಿ ಡಿ.26ರಿಂದ 4ನೇ ಟೆಸ್ಟ್ ಹಾಗೂ 2025ರ ಜ.3ರಿಂದ ಸಿಡ್ನಿಯಲ್ಲಿ ಕೊನೆ ಪಂದ್ಯ ನಡೆಯಲಿದೆ.

ಗೌತಮ್ ಗಂಭೀರ್ ಸುದ್ದಿಗೋಷ್ಠಿ ಮಾಡಬಾರದು, ಅವರ ಹೇಳಿಕೆಗಳು ಸರಿಯಿಲ್ಲ: ಸಂಜಯ್ ಮಂಜ್ರೇಕರ್

ಸೋಮವಾರ ಆಸೀಸ್ ಪ್ರವಾಸಕ್ಕೂ ಮುನ್ನ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ಎದುರಾದ 0-3 ವೈಟ್‌ವಾಶ್, ಆಸ್ಟ್ರೇಲಿಯಾದ ಪಿಚ್, ತಮ್ಮ ಕೋಚ್ ಹುದ್ದೆ ಬಗ್ಗೆ ಕೇಳಿಬರುತ್ತಿರುವ ಸುದ್ದಿ, ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖರ ಆಟ, ಮಹತ್ವದ ಸರಣಿಗೂ ಮುನ್ನ ಇರುವ ಒತ್ತಡದ ಬಗ್ಗೆ ಗಂಭೀರ್ ಮುಕ್ತವಾಗಿ ಮಾತನಾಡಿದರು.

ಯಾವುದೇ ಒತ್ತಡವಿಲ್ಲ: ನ್ಯೂಜಿಲೆಂಡ್ ವಿರುದ್ಧ 0-3 ವೈಟ್‌ ವಾಶ್ ಆದ ಬಳಿಕ ಎದುರಾಗುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿರುವ ಗಂಭೀರ್, 'ನನ್ನ ಮೇಲೆ ಯಾವ ಒತ್ತಡವೂ ಇಲ್ಲ. ಈ ಹುದ್ದೆ ಒಪ್ಪಿಕೊಳ್ಳುವಾಗಲೇ ನನಗೆ ನಿರೀಕ್ಷೆಗಳ ಬಗ್ಗೆ ಅರಿವಿತ್ತು. ಈ ಸರಣಿ ಬಳಿಕ ಹಾಗಾಗಲಿದೆ, ಹೀಗಾಗಲಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನನ್ನ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಡ್ರೆಸ್ಸಿಂಗ್‌ ಕೋಣೆಯಲ್ಲಿ ಶ್ರೇಷ್ಠ ಆಟಗಾರರೇ ಇದ್ದಾರೆ. ಅವರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವಿದೆ' ಎಂದು ತಿಳಿಸಿದರು.

ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ!

ಕೊಹ್ಲಿ, ರೋಹಿತ್ ಬೆನ್ನಿಗೆ ನಿಂತ ಕೋಚ್ ಗಂಭೀರ್

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಹೊರತಾಗಿಯೂ ಅವರಿಗೆ ಕೋಚ್ ಗೌತಮ್‌ ಗಂಭೀರ್ ಬೆಂಬಲವಾಗಿ ನಿಂತಿದ್ದಾರೆ. ಇಬ್ಬರು ದಿಗ್ಗಜರ ಬಗ್ಗೆ ಗಂಭೀರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ವಿರಾಟ್‌ ಕೊಹ್ಲಿ ರೋಹಿತ್ ಶರ್ಮಾ ಇಬ್ಬರೂ ದಿಗ್ಗಜ ಕ್ರಿಕೆಟಿಗರು. ಈಗಲೂ ಅವರಿಬ್ಬರೂ ವಿಶ್ವ ಶ್ರೇಷ್ಠ ಆಟಗಾರರು. ಅವರಿಗೆ ಅವರ ಮೇಲಿರುವ ಜವಾಬ್ದಾರಿಯ ಅರಿವಿದೆ. ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಅವರು ದೇಶಕ್ಕೆ ಮತ್ತಷ್ಟು ಕೊಡುಗೆ ನೀಡಲಿದ್ದಾರೆ. ಅವರಿಗೆ ಮತ್ತು ಭಾರತ ತಂಡಕ್ಕೆ ತರಬೇತಿ ನೀಡುವುದು ದೊಡ್ಡ ಗೌರವ' ಎಂದು ಗಂಭೀರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯ ಪ್ರಮುಖಾಂಶಗಳು 

1. ಕಿವೀಸ್ ವಿರುದ್ದ ವೈಟ್‌ವಾಶ್?: ನ್ಯೂಜಿಲೆಂಡ್ ವಿರುದ್ಧ ನಾನು ಎಲ್ಲಾ 3 ವಿಭಾಗಗಳಲ್ಲಿ ವೈಫಲ್ಯ ಕಂಡೆವು. ಟೀಕೆಗಳನ್ನು ನಾವು ಸ್ವೀಕರಿಸುತ್ತೇವೆ.

2 ಒತ್ತಡದಲ್ಲಿ ಸಿಲುಕಿದ್ದಾರಾ?: ನನ್ನ ಮೇಲೆ ಯಾವ ಒತ್ತಡವೂ ಇಲ್ಲ. ಈ ಹುದ್ದೆ ಒಪ್ಪಿಕೊಳ್ಳುವಾಗಲೇ ನನಗೆ ನಿರೀಕ್ಷೆಗಳ ಬಗ್ಗೆ ಅರಿವಿತ್ತು. ಈ ಸರಣಿ ಬಳಿಕ ಹಾಗಾಗಲಿದೆ, ಹೀಗಾಗಲಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

3. ಪಿಚ್‌ ಬಗ್ಗೆ: ಆಸ್ಟ್ರೇಲಿಯಾಕ್ಕೆ 5 ಪಂದ್ಯಗಳ ಸರಣಿಯನ್ನು ಆಡಲು ಹೋಗುತ್ತಿದ್ದೇವೆ. ಇದೊಂದು ಮಹತ್ವದ ಸರಣಿ. ಅದನ್ನು ಹೊರತುಪಡಿಸಿ ಬೇರ್ಯಾವ ಆಲೋಚನೆಯೂ ನನ್ನ ತಲೆಯಲ್ಲಿಲ್ಲ. ಪಿಚ್ ಹೇಗಿರಬೇಕು ಎಂದು ನಿರ್ಧರಿಸುವುದು ನಮ್ಮ ಕೆಲಸವಲ್ಲ. ಆಸ್ಟ್ರೇಲಿಯಾ ಎಂತದ್ದೇ ಪಿಚ್ ಸಿದ್ಧಪಡಿಸಿದರೂ ಆಡಲು ನಾವು ಸಿದ್ಧ.

4. ಕೊಹ್ಲಿ ಫಾರ್ಮ್ ಬಗ್ಗೆ ಪಾಂಟಿಂಗ್ ಟೀಕೆ ಬಗ್ಗೆ: ರಿಕಿ 4 ಪಾಂಟಿಂಗ್ ಆಸ್ಟ್ರೇಲಿಯಾ ಕ್ರಿಕೆಟ್ ಕಡೆಗೆ ಗಮನ ನೀಡಲಿ, ಭಾರತ ತಂಡದ ಕಡೆಗಲ್ಲ.