ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಅವರ ಅಜೇಯ ಶತಕ (115*) ಮತ್ತು ರಿಷಭ್ ಪಂತ್ ಅವರ ಅರ್ಧಶತಕದ (63) ನೆರವಿನಿಂದ ಭಾರತ 503 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬೃಹತ್ ಮೊತ್ತ ಬೆನ್ನತ್ತಿದ ಶ್ರೀಲಂಕಾ, ದಿನದಾಟದಂತ್ಯಕ್ಕೆ 8 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಧ್ರುವ್ ಜುರೆಲ್ ಅವರ ಅಜೇಯ ಶತಕ (115*) ಮತ್ತು ರಿಷಭ್ ಪಂತ್ ಅವರ ಅರ್ಧಶತಕದ (63) ನೆರವಿನಿಂದ ಭಾರತ 9 ವಿಕೆಟ್ ನಷ್ಟಕ್ಕೆ 503 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಬಿಗ್ ಶಾಕ್ ಎದುರಾಗಿದೆ. ತಂಡ ಒಂದಂಕಿ ಮೊತ್ತಕ್ಕೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದೆ. ಆರಂಭಿಕ ಬ್ಯಾಟರ್ ಲಹಿರು ಉದಾನ ಹಾಗೂ ನೈಟ್ ವಾಚ್‌ಮನ್ ಪ್ರಭಾತ್ ಜಯಸೂರ್ಯ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ ಭಾರತ 8 ವಿಕೆಟ್‌ಗೆ 475 ರನ್ ಗಳಿಸಿತ್ತು. ಆದರೆ, ಮಳೆ ಬಂದಿದ್ದರಿಂದ ಆಟವನ್ನು ಸ್ವಲ್ಪ ಸಮಯ ನಿಲ್ಲಿಸಬೇಕಾಯಿತು. ನಂತರ ಮೊಹಮ್ಮದ್ ಸಿರಾಜ್ ಜೊತೆಗೂಡಿ ಜುರೆಲ್ ತಮ್ಮ ಶತಕ ಪೂರೈಸಿದರು. ಪ್ರಸಿದ್ಧ್ ಕೃಷ್ಣ 4 ರನ್ ಗಳಿಸಿ ಔಟಾಗದೆ ಉಳಿದರು.

ಎರಡನೇ ದಿನ ಭಾರತಕ್ಕೆ ಸಾರಾಂಶ್ ಜೈನ್ (6), ರಿಷಭ್ ಪಂತ್ (63), ಮಾನವ್ ಸುತಾರ್ (18) ಮತ್ತು ಮೊಹಮ್ಮದ್ ಸಿರಾಜ್ (3) ವಿಕೆಟ್‌ಗಳ ನಷ್ಟವಾಯಿತು. ಏಳನೇ ವಿಕೆಟ್‌ಗೆ ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಜೋಡಿ 112 ರನ್‌ಗಳ ಜೊತೆಯಾಟ ಆಡಿದ್ದು, ಭಾರತ 500 ರನ್‌ಗಳ ಗಡಿ ದಾಟಲು ಪ್ರಮುಖ ಕಾರಣವಾಯಿತು.

ಪಂತ್-ಜುರೆಲ್ ಜುಗಲ್ಬಂದಿ:

ಎರಡನೇ ದಿನದ ಆರಂಭದಲ್ಲೇ ಸಾರಾಂಶ್ ಜೈನ್ ವಿಕೆಟ್ ಕಳೆದುಕೊಂಡಾಗ, ಭಾರತವನ್ನು ಬೇಗನೇ ಆಲೌಟ್ ಮಾಡಬಹುದು ಎಂಬ ಲಂಕಾ ಬೌಲರ್‌ಗಳ ತಂತ್ರವನ್ನು ಧ್ರುವ್ ಜುರೆಲ್ ಮತ್ತು ರಿಷಭ್ ಪಂತ್ ಜೋಡಿ ಪುಡಿಗಟ್ಟಿತು. ಮೊದಲ ದಿನ ಗಾಯಗೊಂಡು ರಿಟೈರ್ಡ್ ಹರ್ಟ್ ಆಗಿದ್ದ ಪಂತ್, ಜುರೆಲ್ ಜೊತೆ ಕ್ರೀಸ್‌ನಲ್ಲಿ ಭದ್ರವಾಗಿ ನಿಂತ ಬಳಿಕ ಲಂಕಾದ ಭರವಸೆಗಳು ಹುಸಿಯಾದವು. ಲಂಕಾ ವೇಗಿಗಳು ಶಾರ್ಟ್ ಪಿಚ್ ಎಸೆತಗಳಿಂದ ಭಾರತೀಯ ಬ್ಯಾಟರ್‌ಗಳನ್ನು ಪರೀಕ್ಷಿಸಿದರೂ, ಪ್ರಭಾತ್ ಜಯಸೂರ್ಯ ಅವರಂತಹ ಸ್ಪಿನ್ನರ್‌ಗಳು ಯಾವುದೇ ಪ್ರಭಾವ ಬೀರಲು ವಿಫಲರಾದರು. ಮೊದಲ ಸೆಷನ್‌ನಲ್ಲಿ ಭಾರತ ಕೇವಲ ಸಾರಾಂಶ್ ಜೈನ್ ವಿಕೆಟ್ ಕಳೆದುಕೊಂಡು 419 ರನ್ ಗಳಿಸಿತ್ತು.

ಆದರೆ, ಲಂಚ್ ನಂತರ ಒಂದೇ ಒಂದು ರನ್ ಸೇರಿಸದೆ ಪಂತ್ ಔಟಾದರು. ನಂತರ ಮಾನವ್ ಸುತಾರ್ ಜೊತೆಗೂಡಿದ ಜುರೆಲ್, ಭಾರತವನ್ನು 450ರ ಗಡಿ ದಾಟಿಸಿದರು. ಸುತಾರ್ ಔಟಾದ ಬಳಿಕ, ಸಿರಾಜ್ ಜೊತೆಗೂಡಿ ಜುರೆಲ್ ತಮ್ಮ ಎರಡನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಜುರೆಲ್ 171 ಎಸೆತಗಳಲ್ಲಿ ತಮ್ಮ ಸೆಂಚುರಿ ಬಾರಿಸಿದರು. ಶ್ರೀಲಂಕಾ ಪರ ಅಸಿತ ಫೆರ್ನಾಂಡೊ 4 ವಿಕೆಟ್ ಪಡೆದರೆ, ಪ್ರಭಾತ್ ಜಯಸೂರ್ಯ ಮತ್ತು ಕೇಶಾರ ನುವಾಂತ ತಲಾ 2 ವಿಕೆಟ್ ಪಡೆದರು.

ಶ್ರೀಲಂಕಾಗೆ ಎರಡನೇ ದಿನದಾಟದ ಕೊನೆಯಲ್ಲಿ ಡಬಲ್ ಶಾಕ್:

ಬೃಹತ್ ಮೊತ್ತವನ್ನು ಬೆನ್ನತ್ತಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡವು ದಿನದಾಟದ ಕೊನೆಯಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಲಂಕಾ ತಂಡವು ದಿನದಾಟದಂತ್ಯಕ್ಕೆ 8 ರನ್‌ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಬ್ಯಾಟರ್ ಲಹಿರು ಉದಾರಗೆ ಕನ್ನಡಿಗ ವೇಗಿ ಪ್ರಸಿದ್ದ್ ಕೃಷ್ಣ ಪೆವಿಲಿಯನ್ ಹಾದಿ ತೋರಿಸಿದರೆ, ನೈಟ್‌ ವಾಚ್‌ಮನ್ ಪ್ರಭಾತ್ ಜಯಸೂರ್ಯ 2 ರನ್ ಗಳಿಸಿ ಮಾನವ್ ಸುತಾರ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಸದ್ಯ ಶ್ರೀಲಂಕಾ ತಂಡವು ಇನ್ನೂ 495 ರನ್‌ಗಳ ಹಿನ್ನಡೆಯಲ್ಲಿದೆ.