ಕೊರೋನಾ ವೈರಸ್‌ನಿಂದಾಗಿ ಮುಂಬರುವ ಕ್ರಿಕೆಟ್ ಟೂರ್ನಿಗಳಲ್ಲಿ ಬೌಲರ್‌ಗಳಿಗೆ ಹೊಸತೊಂದು ಸವಾಲು ಎದುರಾಗಿದೆ. ಏನದು ಸವಾಲು.? ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹೇಳಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.

ನವದೆಹಲಿ(ಏ.21): ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಕ್ರಿಕೆಟ್‌ ಚಟುವಟಿಕೆಗಳು ಪುನಾರಂಭಗೊಳ್ಳಲಿದ್ದು, ಬೌಲರ್‌ಗಳಿಗೆ ಚೆಂಡಿನ ಹೊಳಪು ಉಳಿಸಲು ಎಂಜಲು ಬಳಸಬೇಕೋ ಬೇಡವೋ ಎನ್ನುವ ಗೊಂದಲ ಶುರುವಾಗಲಿದೆ. 

Add Asianetnews Kannada as a Preferred SourcegooglePreferred

ಸ್ವಿಂಗ್‌ ಮಾಡಲು ಚೆಂಡಿನ ಒಂದು ಭಾಗಕ್ಕೆ ಎಂಜಲು ಹಾಕಿ ಉಜ್ಜುವ ಮೂಲಕ ಹೊಳಪು ಉಳಿಸುವುದು ಒಂದು ಸಂಪ್ರದಾಯವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಕೊರೋನಾ ಭೀತಿಯಿಂದಾಗಿ ಇನ್ಮುಂದೆ ಎಂಜಲು ಬಳಕೆ ಕಡಿಮೆಯಾಗಬಹುದು. ಇದರಿಂದ ಬೌಲರ್‌ಗಳಿಗೆ ಸಮಸ್ಯೆಯಾಗಲಿದೆ. ಹೊಳಪು ಉಳಿಸಲು ಬೆವರು ಹನಿಗಳನ್ನಷ್ಟೇ ಬಳಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್‌ ಪ್ರಸಾದ್‌, ಪ್ರವೀಣ್‌ ಕುಮಾರ್‌ ಸೇರಿದಂತೆ ಹಲವರು ಅಭಿಪ್ರಾಯಿಸಿದ್ದಾರೆ.

ಬಡ ಮಕ್ಕಳಿಗೆ ನೆರವಾಗಲು ಬ್ಯಾಟ್‌ ಹರಾಜಿಗೆ ಮುಂದಾದ ಕೆ ಎಲ್ ರಾಹುಲ್‌

2018ರಲ್ಲಿ ನಡೆದ ಬಾಲ್ ಟ್ಯಾಂಪರಿಂಗ್ ಘಟನೆಯ ಬಳಿಕ ಐಸಿಸಿ ಚೆಂಡಿನ ಹೊಳಪು ಕಾಪಾಡುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸದ್ಯಕ್ಕೆ ಬೆವರು ಹಾಗೂ ಎಂಜಲನ್ನು ಚೆಂಡಿಗೆ ಹಚ್ಚುವುದಕ್ಕೆ ಮಾತ್ರ ಅವಕಾಶ ನೀಡಿದೆ. ಆದರೆ ಕೊರೋನಾ ಭೀತಿಯಿಂದಾಗಿ ಈಗ ಎಂಜಲು ಹಚ್ಚುವುದಕ್ಕೂ ಬ್ರೇಕ್ ಬೀಳುವ ಸಾಧ್ಯತೆಯಿದೆ.

ಕ್ರಿಕೆಟ್ ಆರಂಭವಾದ ಬಳಿಕ ಬೌಲರ್‌ಗಳೆಲ್ಲ ಕೇವಲ ಬೆವರನ್ನಷ್ಟೇ ಚೆಂಡಿಗೆ ಹಚ್ಚಬೇಕಾಗಬಹುದು. ಇದು ಬೌಲರ್‌ಗಳಿಗೆ ಇನ್ನಷ್ಟು ಕಷ್ಟವಾಗಲಿದೆ. ಆರಂಭಿಕ ಹಂತದಲ್ಲಿ ಮೊದಲಿಗೆ ಕನಿಷ್ಠ ಒಂದು ಗಂಟೆಯಾದರೂ ಎಂಜಲು ಹಂಚಲು ಅವಕಾಶ ಸಿಗಬೇಕು ಎಂದು ವೆಂಕಟೇಶ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.