ಭಾನುವಾರ ಬೆಂಗಳೂರಿನಲ್ಲಿ ನಡೆದ ಬೃಹತ್ ಮ್ಯಾರಥಾನ್‌ನಲ್ಲಿ 35 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. 6 ವಿಭಾಗಗಳಲ್ಲಿ ನಡೆದ ಈ ಓಟದಲ್ಲಿ ವಿಶ್ವದೆಲ್ಲೆಡೆಯಿಂದ ವೃತ್ತಿಪರ ಓಟಗಾರರು ಹಾಗೂ ದೇಶದ ವಿವಿಧ ಭಾಗಗಳಿಂದ ಜನರು ಪಾಲ್ಗೊಂಡರು.

ಬೆಂಗಳೂರು: ಮಾಯಾನಗರಿ ಬೆಂಗಳೂರು ಭಾನುವಾರ ಬೃಹತ್‌ ಮ್ಯಾರಥಾನ್‌ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದೆ. ಬಹುನಿರೀಕ್ಷಿತ 10ಕೆ(ಹತ್ತು ಕಿ.ಮೀ.) ರೇಸ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬರೋಬ್ಬರಿ 35 ಸಾವಿರಕ್ಕೂ ಹೆಚ್ಚು ಮಂದಿ ನಗರದ ರಾಜಬೀದಿಗಳಲ್ಲಿ ಹೆಜ್ಜೆ ಹಾಕಿದರು.

ಒಟ್ಟು 6 ವಿಭಾಗಗಳಲ್ಲಿ ರೇಸ್‌ ನಡೆಯಿತು. ಬೆಳಗ್ಗೆ 5.30ಕ್ಕೆ ಆರಂಭಗೊಂಡ ಸ್ಪರ್ಧೆ 10 ಗಂಟೆ ವೇಳೆ ಮುಕ್ತಾಯಗೊಂಡಿತು. ವಿಶ್ವ ಮಹಿಳಾ 10ಕೆ ರೇಸ್‌, ಪುರುಷರ 10ಕೆ, ಮುಕ್ತ 10ಕೆ, ವಿಶೇಷ ಚೇತನರ 3 ಕಿ.ಮೀ. ರೇಸ್‌, ಹಿರಿಯ ನಾಗರಿಕರ 3 ಕಿ.ಮೀ. ಹಾಗೂ ಮಜಾ ರನ್‌(4.2 ಕಿ.ಮೀ) ಕೂಡಾ ನಡೆಯಿತು.

ವಿಶ್ವದೆಲ್ಲೆಡೆಯ ವೃತ್ತಿಪರ ಓಟಗಾರರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಬಂದ ವಯಸ್ಕರು, ಮಹಿಳೆಯರು, ಮಕ್ಕಳು ಕೂಡಾ ರೇಸ್‌ನಲ್ಲಿ ಪಾಲ್ಗೊಂಡರು. ಕಾಲಿಲ್ಲದೆ, ಓಡಲು ಸಾಧ್ಯವಿಲ್ಲದಿದ್ದರೂ ವ್ಹೀಲ್‌ಚೇರ್‌ನಲ್ಲಿ ಕುಳಿತು, ಊರುಗೋಲು ಬಳಸಿ, ಹೆಗಲ ಮೇಲೇರಿ, ಮತ್ತೊಬ್ಬರ ಕೈಹಿಡಿದು ಸ್ಪರ್ಧೆಯಲ್ಲಿ ಪಾಲ್ಗೊಂಡ ಉತ್ಸಾಹಿ ಜನರು ರೇಸ್‌ನ ಪ್ರಮುಖ ಆಕರ್ಷಣೆ ಎನಿಸಿಕೊಂಡರು. ಸಣ್ಣ ಮಕ್ಕಳಿಂದ ಶುರುವಾಗ 80 ವರ್ಷ ವಯಸ್ಸಿನ ವಯೋವೃದ್ಧರೂ ಕೂಡಾ ಓಟದಲ್ಲಿ ಭಾಗಿಯಾದರು.

ರಾಹುಲ್ ಎದುರೇ ಕಾಂತಾರ ಸ್ಟೈಲ್ ರಿಕ್ರಿಯೇಟ್ ಮಾಡಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್

ಮುಕ್ತ 10ಕೆ ವಿಭಾಗದಲ್ಲಿ 21,404 ಮಂದಿ ಸ್ಪರ್ಧಿಗಳು ಪಾಲ್ಗೊಂಡರೆ, ಮಜಾ ರನ್‌ನಲ್ಲಿ 10,631 ರೇಸರ್‌ಗಳಿದ್ದರು. ಹಿರಿಯರ ವಿಭಾಗದಲ್ಲಿ 1,600, ವಿಕಲ ಚೇತನರ ವಿಭಾಗದಲ್ಲಿ 700, ಕರ್ನಾಟಕ ಪೊಲೀಸ್‌ ವಿಭಾಗದಲ್ಲಿ ಸುಮಾರು 200 ಮಂದಿ ಓಡಿದರು.

ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಪರಮೇಶ್ವರ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎನ್‌.ಎ.ಹ್ಯಾರಿಸ್‌, ರಿಜ್ವಾನ್‌ ಅರ್ಶದ್‌, ಅಶ್ವತ್ಥನಾರಾಯಣ ಸೇರಿ ಪ್ರಮುಖರು ರೇಸ್‌ ವೇಳೆ ಉಪಸ್ಥಿತರಿದ್ದರು.

ಬ್ಯಾಂಡೇಜ್‌ ಸುತ್ತಿದ್ದ ಕಾಶ್ಮೀರ, ರಕ್ತಸಿಕ್ತ ಭಾರತ: ರೇಸ್‌ನಲ್ಲಿ ತರಹೇವಾರಿ ವೇಷ ಹೈಲೈಟ್‌

ತರಹೇವಾರಿ ವೇಷ ಧರಿಸಿದ್ದ ಜನರು ರೇಸ್‌ನ ಪ್ರಮುಖ ಆಕರ್ಷಣೆ ಎನಿಸಿಕೊಂಡರು. ಬಂದೂಕು, ರಕ್ತಸಿಕ್ತ ಫೋಟೋಗಳನ್ನು ಜೋಡಿಸಿ ಭಾರತದ ಭೂಪಟ ಹಾಗೂ ಬ್ಯಾಂಡೇಜ್‌ ಸುತ್ತಿದ್ದ ಕಾಶ್ಮೀರದ ಮ್ಯಾಪ್‌ ಪ್ರದರ್ಶಿಸಿದ ವ್ಯಕ್ತಿಗಳಿಬ್ಬರು, ಉಗ್ರ ದಾಳಿಗೆ ವಿಶಿಷ್ಟ ಶೈಲಿಯಲ್ಲಿ ಖಂಡನೆ ವ್ಯಕ್ತಪಡಿಸಿದರು. ಪರಿಸರ, ನೀರು, ಆತ್ಮಹತ್ಯೆ, ಕ್ಯಾನ್ಸರ್‌, ಸಮುದ್ರ, ಶಾಂತಿ, ಪ್ರೀತಿ, ಆರೋಗ್ಯದ ಬಗ್ಗೆ ಸಂದೇಶ, ಜಾಗೃತಿ ಮೂಡಿಸುವ ವೇಷಗಳೂ ಕಂಡುಬಂದವು. ಯಕ್ಷಗಾನ, ಭರತನಾಟ್ಯದ ವೇಷಗಳೂ ರೇಸ್‌ನ ಗಮನ ಸೆಳೆಯಿತು.

RCB ಪ್ಲೇಆಫ್ ತಲುಪದಿದ್ದರೆ, ಬೆಂಗಳೂರಿಗೆ ಯಾವ ಎರಡು ತಂಡಗಳು ಸವಾಲು? ಇಲ್ಲಿದೆ ನೋಡಿ ಲೆಕ್ಕಾಚಾರ!

ಚೆಪ್ಟೆಗಿ, ಸಾರಾ, ಅಭಿಷೇಕ್‌, ಸಂಜೀವನಿ ಚಾಂಪಿಯನ್‌

ವಿಶ್ವ ಎಲೈಟ್‌ ಅಥ್ಲೀಟ್‌ಗಳಲ್ಲಿ ಉಗಾಂಡದ ಜೋಶುವಾ ಚೆಪ್ಟೆಗಿ ಹಾಗೂ ಸಾರಾ ಚೆಲಂಗಟ್‌ ಕ್ರಮವಾಗಿ ಪುರುಷ, ಮಹಿಳಾ ವಿಭಾಗಗಳಲ್ಲಿ ಚಾಂಪಿಯನ್ ಆದರು. ಚೆಪ್ಟೆಗಿ 27:53 ನಿಮಿಷಗಳಲ್ಲಿ ಕ್ರಮಿಸಿದರೆ, ಸಾರಾ 31:07 ನಿಮಿಷಗಳಲ್ಲಿ ಗುರಿ ಮುಟ್ಟಿದರು. ಚಿನ್ನ ವಿಜೇತರಿಗೆ ತಲಾ 22.19 ಲಕ್ಷ ರು. ನಗದು ಲಭಿಸಿತು.ಭಾರತೀಯ ಪುರುಷರ ವಿಭಾಗದಲ್ಲಿ ಅಭಿಷೇಕ್‌ ಪಾಲ್‌(29:12 ನಿಮಿಷ) ಚಿನ್ನ, ಸಾವನ್‌ ಬರ್ವಾಲ್‌(29:45) ಬೆಳ್ಳಿ, ಕಿರಣ್‌ ಮಾಟ್ರೆ(30:01) ಕಂಚು ಗೆದ್ದರು. ಮಹಿಳಾ ವಿಭಾಗದಲ್ಲಿ ಸಂಜೀವನಿ ಜಾಧವ್‌(34:16 ನಿಮಿಷ) ಚಿನ್ನ, ಭಾರ್ತಿ ನೈನ್‌(35:36) ಬೆಳ್ಳಿ, ಪೂನಮ್‌(35:37) ಕಂಚು ತಮ್ಮದಾಗಿಸಿಕೊಂಡರು. ಚಿನ್ನ ವಿಜೇತರಿಗೆ ತಲಾ ₹3 ಲಕ್ಷ, ಬೆಳ್ಳಿ ಗೆದ್ದವರಿಗೆ ₹2.25 ಲಕ್ಷ, ಕಂಚು ಗೆದ್ದವರಿಗೆ ತಲಾ ₹1.50 ಲಕ್ಷ ಲಭಿಸಿತು.