* ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾದ ಟೀಂ ಇಂಡಿಯಾ* ಏಷ್ಯಾಕಪ್ ಪುನರಾವಲೋಕನ ಸಭೆಯಲ್ಲಿ ಮಹತ್ವದ ವಿಚಾರಗಳು ಚರ್ಚೆ* ಪುನರಾವಲೋಕನ ಸಭೆಯಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣ ಬಹಿರಂಗ

ನವದೆಹಲಿ(ಸೆ.14): ಯುಎಇನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಫೈನಲ್ ಪ್ರವೇಶಿಸಲು ವಿಫಲವಾಗುವ ಮೂಲಕ ನಿರಾಸೆ ಅನುಭವಿಸಿದೆ. ಗ್ರೂಪ್ ಹಂತದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತ ಕ್ರಿಕೆಟ್ ತಂಡವು, ಸೂಪರ್ 4 ಹಂತದಲ್ಲಿ ಸತತ ಎರಡು ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಬಿಸಿಸಿಐ ನಡೆಸಿದ ಏಷ್ಯಾಕಪ್ ಪುನರಾವಲೋಕನ ಸಭೆಯಲ್ಲಿ ಟೀಂ ಇಂಡಿಯಾ ವೈಫಲ್ಯಕ್ಕೆ ಕಾರಣಗಳೇನು ಎನ್ನುವುದನ್ನು ಪತ್ತೆಹಚ್ಚಿದೆ.

Add Asianetnews Kannada as a Preferred SourcegooglePreferred

ಮುಂಬರುವ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ರಾಷ್ಟ್ರೀಯ ಆಯ್ಕೆ ಸಮಿತಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನೊಳಗೊಂಡ ತಂಡವು ಏಷ್ಯಾಕಪ್ ಟೂರ್ನಿ ಹಾಗೂ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಕುರಿತಂತೆ ಸಮಾಲೋಚನೆ ನಡೆಸಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಮೆಲ್ಬೊರ್ನ್ ಕ್ರಿಕೆಟ್‌ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಹೀಗಾಗಿ ಭಾರತ ತಂಡದ ಸಿದ್ದತೆ ಹೇಗಿರಬೇಕು ಎನ್ನುವ ಕುರಿತಂತೆ ಚರ್ಚೆಗಳು ನಡೆದಿವೆ.

ಹೌದು, ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನವನ್ನು ಚರ್ಚಿಸಲಾಯಿತು. ಇದಕ್ಕಿಂತ ಮುಖ್ಯವಾಗಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನತ್ತ ಹೆಚ್ಚಿನ ಚರ್ಚೆಗಳನ್ನು ನಡೆಸಲಾಯಿತು ಎಂದು ಪಿಟಿಐಗೆ ಹೆಸರು ಹೇಳಲಿಚ್ಛಿಸದ ಬಿಸಿಸಿಐ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಬಿಸಿಸಿಐನಲ್ಲಿ ಸೌರವ್ ಗಂಗೂಲಿ, ಜಯ್‌ ಶಾ ಭವಿಷ್ಯ ಇಂದು ನಿರ್ಧಾರ?

ಈ ಸಭೆಯಲ್ಲಿ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು. ಈ ಪೈಕಿ ಬಲಿಷ್ಠ ತಂಡಗಳ ಎದುರು ಭಾರತದ ಮಧ್ಯ ಓವರ್‌ಗಳಲ್ಲಿ ಬ್ಯಾಟಿಂಗ್ ಚುರುಕಾಗಿ ರನ್‌ ಗಳಿಸಲು ಹಿನ್ನಡೆ ಅನುಭವಿಸುತ್ತಿದೆ. ಇದು ಏಷ್ಯಾಕಪ್ ಟೂರ್ನಿಯಲ್ಲೂ ಮರುಕಳಿಸಿತು ಎನ್ನುವ ವಿಚಾರವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿಯ ವೇಳೆ ಇನಿಂಗ್ಸ್‌ನ 7ರಿಂದ 15ನೇ ಓವರ್‌ನಲ್ಲಿ ಭಾರತದ ತಂಡದ ರನ್‌ ಗಳಿಕೆ ಅಷ್ಟೇನು ಉತ್ತಮವಾಗಿರಲಿಲ್ಲ. ಸಹಜವಾಗಿಯೇ ಈ ಬಗ್ಗೆ ತಂಡದ ಚಿಂತಕರ ಚಾವಡಿ ಗಮನ ಹರಿಸಲಿದೆ. ಭಾರತ ಕ್ರಿಕೆಟ್ ತಂಡದಲ್ಲಿ ಹಲವು ವಿಶ್ವದರ್ಜೆಯ ಆಟಗಾರರಿರುವುದರಿಂದ ಅವರೆಲ್ಲಾ ತಂಡದ ಅಗತ್ಯಕ್ಕೆ ತಕ್ಕಂತೆ ತಮ್ಮ ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ಏಷ್ಯಾಕಪ್ ಟೂರ್ನಿಯ ವೇಳೆ 7ರಿಂದ 15ನೇ ಓವರ್‌ನಲ್ಲಿ ಭಾರತ ತಂಡದ ಪ್ರದರ್ಶನವನ್ನು ಗಮನಿಸುವುದಾದರೇ, ಪಾಕಿಸ್ತಾನ ಎದರಿನ ಮೊದಲ ಪಂದ್ಯದಲ್ಲಿ ಈ 9 ಓವರ್‌ಗಳಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿತ್ತು. ಇನ್ನು ಹಾಂಕಾಂಗ್ ಎದುರು 62 ರನ್ ಹಾಗೂ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಎದುರು 1 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು.