ಅಂಪೈರ್ ಔಟ್ ನೀಡದ್ದಕ್ಕೆ ವಿಕೆಟ್ ಕಿತ್ತೆಸೆದ ಶಕೀಬ್ ಅಲ್ ಹಸನ್!
* ಮೈದಾನದಲ್ಲೇ ಶಕೀಬ್ ಅಲ್ ಹಸನ್ ಅಸಭ್ಯ ವರ್ತನೆ
* ಅಂಪೈರ್ ಔಟ್ ನೀಡದ್ದಕ್ಕೆ ವಿಕೆಟ್ಗೆ ಒದ್ದ ಶಕೀಬ್
* ಕ್ರೀಡಾ ಸ್ಪೂರ್ತಿ ಮರೆತ ಶಕೀಬ್ಗೆ ನೆಟ್ಟಿಗರ ತರಾಟೆ
ಢಾಕಾ(ಜೂ.12): ಮೈದಾನದಲ್ಲಿ ಸದಾ ಕೂಲ್ ಆಗಿರುವ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್, ಇದೀಗ ಅಸಭ್ಯ ವರ್ತನೆ ತೋರಿ ಸುದ್ದಿಯಾಗಿದ್ದಾರೆ. ಢಾಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಪಂದ್ಯದಲ್ಲಿ ದುವರ್ತನೆ ತೋರಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಂದ್ಯದ ವೇಳೆ ಅಂಪೈರ್ ತಮ್ಮ ಮನವಿ ಪುರಸ್ಕರಿಸದೆ ಇದ್ದಿದ್ದಕ್ಕೆ ಶಕೀಬ್ ಅಲ್ ಹಸನ್ 2 ಬಾರಿ ಕೆಟ್ಟದಾಗಿ ವರ್ತಿಸಿದ್ದಾರೆ. ಮೊದಲು ಕಾಲಿನಿಂದ ವಿಕೆಟ್ ಒದ್ದ ಶಕೀಬ್, ಮತ್ತೊಮ್ಮೆ ಔಟ್ಗೆ ಮನವಿ ಸಲ್ಲಿಸಿದಾಗ ಪುರಸ್ಕರಿಸದೆ ಇದ್ದಿದ್ದಕ್ಕೆ ವಿಕೆಟ್ಗಳನ್ನು ಕಿತ್ತು ನೆಲಕ್ಕೆಸೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಶಕೀಬ್ ಅಲ್ ಹಸನ್ ಮೊಹಮ್ಮದುನ್ ಸ್ಪೋರ್ಟಿಂಗ್ ಕ್ಲಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಬಹಾನಿ ಲಿಮಿಟೆಡ್ ವಿರುದ್ದದ ಪಂದ್ಯದಲ್ಲಿ ಶಕೀಬ್ ತಾಳ್ಮೆ ಕಳೆದುಕೊಂಡು ದುರ್ವತನೆ ತೋರಿದ್ದಾರೆ. ಮೊದಲಿಗೆ ಅಂಪೈರ್ ಎಲ್ಬಿಡಬ್ಲ್ಯೂ ಮನವಿ ಪುರಸ್ಕರಿಸದಿದ್ದಾಗ ವಿಕೆಟ್ಗೆ ಜಾಡಿಸಿ ಒದ್ದು ತಮ್ಮ ಅಸಮಾಧಾನ ಹೊರಹಾಕಿದ್ದರು. ಇದಾದ ಬಳಿಕ ಮಳೆಯಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅಂಪೈರ್ ತೀರ್ಮಾನಿಸಿದ ಬೆನ್ನಲ್ಲೇ ನಾನ್ಸ್ಟ್ರೈಕ್ನಲ್ಲಿದ್ದ ಎಲ್ಲಾ ವಿಕೆಟ್ಗಳನ್ನು ಕಿತ್ತು ನೆಲಕ್ಕೆ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಬಹುತೇಕ ಕ್ರಿಕೆಟ್ ಅಭಿಮಾನಿಗಳು ಶಕೀಬ್ ಅಲ್ ಹಸನ್ ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಬಾಂಗ್ಲಾ ನಾಯಕ ತಮೀಮ್ ಇಕ್ಬಾಲ್ಗೆ ದಂಡ ವಿಧಿಸಿ ಶಾಕ್ ನೀಡಿದ ಐಸಿಸಿ
ಮೊದಲು ಬ್ಯಾಟಿಂಗ್ ಮಾಡಿದ್ದ ಶಕೀಬ್ ಅಲ್ ಹಸನ್ ನೇತೃತ್ವದ ಮೊಹಮ್ಮದುನ್ ಸ್ಪೋರ್ಟಿಂಗ್ ಕ್ಲಬ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತ್ತು. ಇನ್ನು ಗುರಿ ಬೆನ್ನತ್ತಿದ ಅಬಹಾನಿ ತಂಡವು 5.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 31 ರನ್ ಬಾರಿಸಿತ್ತು. ಈ ವೇಳೆ ತುಂತುರು ಮಳೆ ಬಂದಿದ್ದರಿಂದ ಅಂಪೈರ್ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲು ತೀರ್ಮಾನಿಸಿದರು. ಫಲಿತಾಂಶಕ್ಕೆ ಡೆಕ್ವರ್ತ್ ಲೂಯಿಸ್ ನಿಯಮ ಅನ್ವಯವಾಗಬೇಕಿದ್ದರೆ, ಕನಿಷ್ಠ 6 ಓವರ್ ಪೂರ್ಣಗೊಳ್ಳಬೇಕು. ಆದರೆ ಆದರೆ ಅಂಪೈರ್ ಇನ್ನೊಂದು ಎಸೆತ ಪೂರೈಸಲು ಅವಕಾಶ ನೀಡದ್ದಕ್ಕೆ ಬೇಸರಗೊಂಡು ಶಕೀಬ್ ಕ್ರೀಡಾ ಸ್ಪೂರ್ತಿ ಮರೆತು ವಿಕೆಟ್ ಕಿತ್ತೆಸೆದಿದ್ದಾರೆ.
ಮಳೆ ನಿಂತ ಬಳಿಕ ಡೆಕ್ವರ್ತ್ ಲೂಯಿಸ್ ನಿಯಮದಂತೆ ಅಬಹಾನಿ ತಂಡಕ್ಕೆ ಗೆಲ್ಲಲು 9 ಓವರ್ಗಳಲ್ಲಿ 76 ರನ್ಗಳ ಗುರಿ ನೀಡಲಾಗಿತ್ತು. ಹೀಗಿದ್ದೂ ಅಬಹಾನಿ ತಂಡವು 6 ವಿಕೆಟ್ ಕಳೆದುಕೊಂಡು ಕೇವಲ 44 ರನ್ ಬಾರಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಶಕೀಬ್ ಪಡೆ 31 ರನ್ಗಳ ಗೆಲುವು ದಾಖಲಿಸಿತು.