ಮೊದಲ ಬಾರಿ ಅಳುವಂತೆ ಮಾಡಿದಿರಿ: ಹಾಸ್ಯನಟನಿಗೆ ಚಿತ್ರರಂಗದ ಭಾವಪೂರ್ಣ ವಿದಾಯ
ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಶೋಕದಲ್ಲಿ ಮುಳುಗಿದೆ. ಹಲವು ಸಿನಿಮಾ ರಂಗದ ಗಣ್ಯರು ರಾಜು ಶ್ರೀವಸ್ತವ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಶೋಕದಲ್ಲಿ ಮುಳುಗಿದೆ. ಹಲವು ಸಿನಿಮಾ ರಂಗದ ಗಣ್ಯರು ರಾಜು ಶ್ರೀವಸ್ತವ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಹಿಂದಿ ಚಿತ್ರರಂಗ ಮಾತ್ರವಲ್ಲದೇ ಟಿವಿ ಇಂಡಸ್ಟ್ರಿಯವರು ಕೂಡ ಅಕಾಲಿಕವಾಗಿ ಅಗಲಿದ ಹಾಸ್ಯನಟನ (comedian) ಸಾವಿಗೆ ಮರುಗುತ್ತಿದ್ದಾರೆ.
ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಶೋ (Kapil Sharma show) ಖ್ಯಾತಿಯ ಕಪಿಲ್ ಶರ್ಮಾ ಕೂಡ ಅಗಲಿದ ಹಾಸ್ಯನಟನನ್ನು ನೆನೆದು ಮರುಗಿದರು. ತಮ್ಮ ಕಪಿಲ್ ಶರ್ಮಾ ಶೋ ಸೆಟ್ನಲ್ಲಿ ಇಬ್ಬರು ಜೊತೆಗೆ ತೆಗೆದ ಹಳೆಯ ಫೋಟೋವೊಂದನ್ನು ಕಪಿಲ್ ಶರ್ಮಾ ಶೇರ್ ಮಾಡಿ ಅಗಲಿದ ಹಾಸ್ಯನಟನಿಗೆ ವಿದಾಯ ಹೇಳಿದ್ದಾರೆ. ನೀವು ಇದೇ ಮೊದಲ ಬಾರಿಗೆ ನನ್ನನ್ನು ಅಳುವಂತೆ ಮಾಡಿದ್ದೀರಿ, ಕೊನೆಯ ಬಾರಿಗೆ ಒಂದೇ ಒಂದು ಸಲ ನಿಮ್ಮನ್ನು ಭೇಟಿಯಾಗಬೇಕಿತ್ತು ಎಂದು ಅನಿಸುತ್ತಿದೆ. ನಿಮ್ಮ ನೆನಪು ತುಂಬಾ ಕಾಡುತ್ತಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಪಿಲ್ ಶರ್ಮಾ ಬರೆದು ಕೊಂಡಿದ್ದಾರೆ.
ಮತ್ತೊಬ್ಬ ಹಾಸ್ಯನಟ ಸುನಿಲ್ ಗ್ರೋವರ್ (Sunil Grover) ಸಹ, ರಾಜು ಶ್ರೀವಾಸ್ತವ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಗೌರವ ಸಲ್ಲಿಸಿದ್ದಾರೆ. RIP ರಾಜು ಶ್ರೀವಾಸ್ತವ (Raju Srivastava) ಜೀ. ಅವರು ಇಡೀ ದೇಶವನ್ನೇ ನಗಿಸಿದರು. ಅವರು ತುಂಬಾ ಬೇಗನೆ ಬದುಕಿನ ಪಯಣ ಮುಗಿಸಿ ಹೋಗಿರುವುದು ದುಃಖದ ವಿಚಾರ, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
ಅರ್ಚನಾ ಪುರಾನ್ ಸಿಂಗ್ ಕೂಡ ಇಂಡಿಯನ್ ಲಾಪರ್ ಚಾಂಪಿಯನ್ ಶೋದ ಸೆಟ್ನಿಂದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಶೋದಲ್ಲಿ ಆಕೆ ಜಡ್ದ್ ಆಗಿದ್ದರೆ, ರಾಜು ಶ್ರೀವಾಸ್ತವ್ ಸ್ಪರ್ಧಿಯಾಗಿದ್ದರು. ರಾಜು, ಒಬ್ಬ ಪ್ರತಿಭೆಯ ಪವರ್ಹೌಸ್, ಓರ್ವ ಟ್ರೆಂಡ್ ಸೆಟ್ಟರ್, ಒಬ್ಬ ಬೆಚ್ಚಗಿನ ಹಾಗೂ ಕರುಣೆಯುಳ್ಳ ಸಹೋದ್ಯೋಗಿ, ನೀವು ನನ್ನನ್ನು ನಿಮ್ಮ ಮನೋಜ್ಞ ಹಾಸ್ಯದಿಂದ ನಗಿಸುವಂತೆ ಮಾಡಿದ್ದೀರಿ, ಇಂದು ನಾನೊಬ್ಬ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡೆ, ನೀವು ಸದಾ ನಮ್ಮ ನೆನಪಿನಲ್ಲಿರುತ್ತೀರಿ ಎಂದು ಅವರು ಬರೆದುಕೊಂಡಿದ್ದಾರೆ.
ಅವರು ಅನಾರೋಗ್ಯಕ್ಕೆ ಒಳಗಾಗುವ ಒಂದು ವಾರಕ್ಕೆ ಮೊದಲು, ಇಂಡಿಯನ್ ಲಾಪರ್ ಚಾಂಪಿಯನ್ (India's Laughter Champion) ಶೋದ ವೇದಿಕೆಯಲ್ಲಿ ನಾವು ನಿಂತಾಗ ಅವರು ನನಗೆ ಹೇಳಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ. ನೀವು ಎಷ್ಟು ಪ್ರೀತಿಸುತ್ತೀರೋ ಅಷ್ಟು ನೆನಪಾಗುತ್ತಿರಿ ಎಂದು ಅವರು ಹೇಳಿದ್ದರು. ಅವರು ನಮ್ಮ ಹೃದಯದಲ್ಲಿ ಕೊನೆವರೆಗೂ ನೆನಪಿನಲ್ಲುಳಿಯುತ್ತಾರೆ. ಶಾಶ್ವತವಾಗಿ ನಿಮಗೆ ಶಾಂತಿ ಸಿಗಲಿ, ನಿಮ್ಮ ಪ್ರೀತಿಪಾತ್ರರಿಗೆ ಹಾಗೂ ಕುಟುಂಬದವರಿಗೆ ನನ್ನ ಕಡೆಯಿಂದ ಸಂತಾಪಗಳು ಎಂದು ಅರ್ಚನಾ ಪುರಾಣಿಕ್ ಬರೆದುಕೊಂಡಿದ್ದಾರೆ.
ಆಗಸ್ಟ್10ರಂದು 58 ವರ್ಷದ ರಾಜು ಶ್ರೀವಾಸ್ತವ್ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ (AIIMS Delhi)ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಘಟನೆ ನಡೆದು ಸುಮಾರು 41 ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದರು.