ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ನಟಿ ತನುಶ್ರೀ ದತ್ತಾ ಕಿರುಕುಳ ಆರೋಪ ಮಾಡಿದ್ದರು. ಚಿತ್ರೀಕರಣ ವೇಳೆ ಅಗ್ನಿಹೋತ್ರಿ ಬಟ್ಟೆ ತೆಗೆದು ಡಾನ್ಸ್ ಮಾಡಿ ಎಂದಿದ್ದರು ಅಂತ ತನುಶ್ರೀ ಹೇಳಿದ್ದರು. 

ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ಸದ್ಯ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡರೆ ಇನ್ನು ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಜೊತೆಗೆ ಒಂದಿಷ್ಟು ವಿವಾದ ಕೂಡ ಹುಟ್ಟಿಕೊಂಡಿದೆ. ಕೋಟಿ ಕೋಟಿ ಗಳಿಕೆ ಮಾಡುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾ ಬಗ್ಗೆ ಸಿನಿ ಗಣ್ಯರು ಮಾತ್ರವಲ್ಲದೆ ಅನೇಕ ರಾಜಕೀಯ ಗಣ್ಯರು ಸಹ ಸಿನಿಮಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಸಿನಿಮಾ ಬಿಡುಗಡೆಯಾಗಿ ವಾರ ಕಳೆದರು ಜನರು ಆಸಕ್ತಿಯಿಂದ ಸಿನಿಮಾ ವೀಕ್ಷಿಸುತ್ತಿದ್ದಾರೆ. ಈಗಾಗಲೇ 100 ಕೋಟಿ ಕ್ಲಬ್ ಸೇರುವ ಮೂಲಕ(The Kashmir Files box office collection) ಸಿನಿಮಾ ದಾಖಲೆ ನಿರ್ಮಿಸಿದೆ.

ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಅನೇಕರು ಹಾಡಿಹೊಗಳುತ್ತಿದ್ದಾರೆ. ಎಂತಹ ಸಿನಿಮಾ ನೀಡಿದ್ದೀರಿ ಎಂದು ಅಗ್ನಿಹೋತ್ರಿಗೆ ಗಣ್ಯಾತಿಗಣ್ಯರು ಶಹಭಾಷ್ ಗಿರಿ ನೀಡುತ್ತಿದ್ದಾರೆ. ಇದೇ ಅಗ್ನಿಹೋತ್ರಿ ವಿರುದ್ಧ ಕಳೆದ ಕೆಲವು ವರ್ಷಗಳ ಹಿಂದೆ ಕಿರುಕುಳದ ಆರೋಪ ಕೇಳಿಬಂದಿತ್ತು. ಖ್ಯಾತ ನಟಿ, ಮಾಜಿ ಮಿಸ್ ಇಂಡಿಯಾ ತನುಶ್ರೀ ದತ್ತಾ 2018ರಲ್ಲಿ ಅಗ್ನಿಹೋತ್ರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸದ್ಯ ಕಾಶ್ಮೀರ್ ಫೈಲ್ಸ್ ಸಿನಿಮಾ ಸೂಪರ್ ಹಿಟ್ ಆಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ತನುಶ್ರೀ ದತ್ತಾ ಮಾಡಿದ್ದ ಆರೋಪ ಸಹ ಮತ್ತೆ ಸದ್ದು ಮಾಡುತ್ತಿದೆ. 

The Kashmir Files: ಕಾಶ್ಮೀರ್ ಫೈಲ್ಸ್‌ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ

2005ರಲ್ಲಿ ಬಂದ ಚಾಕೊಲೇಟ್ ಡೀಪ್ ಡಾರ್ಕ್ ಸಿಕ್ರೆಟ್ ಸಿನಿಮಾ ಚಿತ್ರೀಕರಣ ವೇಳೆ ನಡೆದ ಕೆಟ್ಟ ಅನುಭವವನ್ನು ತನುಶ್ರೀ ಬಹಿರಂಗಗೊಳಿಸುವ ಮೂಲಕ ಅಗ್ನಿಹೋತ್ರಿಗೆ ಶಾಕ್ ನೀಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ತನುಶ್ರೀ, ನಟ ಇರ್ಫಾನ್ ಖಾನ್ ಅವರ ಮುಖದ ಎಕ್ಸ್ ಪ್ರೆಶನ್ ಮತ್ತು ಕ್ಲೋಸ್ ಅಪ್ ಶಾಟ್ ತೆಗೆದುಕೊಳ್ಳುವ ಸಮಯದಲ್ಲಿ ಅಗ್ನಿಹೋತ್ರಿ, ತನುಶ್ರೀ ದತ್ತಾ ಜೊತೆ ವರ್ತಿಸಿದ ರೀತಿಯನ್ನು ಬಹಿರಂಗ ಪಡಿಸಿದ್ದರು.

'ನಾನು ಆಗ ನನ್ನ ಕಾಸ್ಟ್ಯೂಮ್ ಮೇಲೆ ಟವೆಲ್ ಧರಿಸಿ ಕ್ಯಾಮರಾ ಹಿಂದೆ ನಿಂತಿದ್ದೆ. ಈ ವ್ಯಕ್ತಿ (ಅಗ್ನಿಹೋತ್ರಿ) ನಾನು ಇರ್ಫಾನ್ ಖಾನ್ ಗೆ ಸೂಚನೆ ನೀಡಬೇಕೆಂದು ಹೇಳಿದರು. ಅದು ಇರ್ಫಾನ್ ಖಾನ್ ಅವರ ಕ್ಲೋಸ್ ಅಪ್ ಆಗಿತ್ತು. ಆ ದೃಶ್ಯದಲ್ಲಿ ನಾನು ಇರಲಿಲ್ಲ. ಏನಾದರೂ ನೋಡಿ ಎಕ್ಸ್ ಪ್ರೆಶನ್ ನೀಡಬೇಕಾಗಿತ್ತು. ಆದರೆ ಈ ನಿರ್ದೇಶಕ ನನಗೆ ಹೋಗಿ ಬಟ್ಟೆ ಬಿಚ್ಚಿ ಡಾನ್ಸ್ ಮಾಡು ಎಂದು ಹೇಳಿದರು' ಅಂತ ತನುಶ್ರೀ 2018ರಲ್ಲಿ ಬಹಿರಂಗ ಪಡಿಸಿದ್ದರು.

The Kashmir Files ಯಾವ ಕಾರಣಕ್ಕೆ ನೀವು ಕಾಶ್ಮೀರಿ ಪಂಡಿತರ ವಲಸೆ ಕುರಿತ ಸಿನಿಮಾ ನೋಡಬೇಕು?

ಆದರೆ ಇರ್ಫಾನ್ ಏನು ಬೇಡ ಎಂದು ನಿರ್ದೇಶಕರಿಗೆ ಹೇಳಿದರು. ನಾನು ಎಕ್ಸ್ ಪ್ರೆಶನ್ ನೀಡಲು ಅವರು ಬಟ್ಟೆ ತೆಗೆದು ಡಾನ್ಸ್ ಮಾಡಬೇಕಾಗಿಲ್ಲ ಎಂದರು. ಅದು ಇರ್ಫಾನ್ ಖಾನ್. ಆ ರೀತಿ ಮಾತನಾಡಿದ್ದಕ್ಕೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದರು.

ಮತ್ತಷ್ಟು ಮಾತನಾಡಿದ್ದ ತನುಶ್ರೀ, ನಾನು ಆ ಫ್ರೇಮ್ ನಲ್ಲೇ ಇರಲಿಲ್ಲ. ಆದರೂ ಅವರ ಎಕ್ಸ್ ಪ್ರೆಶನ್ ಗಾಗಿ ನಾನು ಬಟ್ಟೆ ತೆಗೆದು ಅವರ ಮುಂದೆ ಡಾನ್ಸ್ ಮಾಡಬೇಕಂತೆ. ಇದು ನನಗೆ ತುಂಬಾ ಆಘಾತವಾಯಿತು. ನಟ ಸುನಿಲ್ ಶೆಟ್ಟಿ ಕೂಡ ಅಲ್ಲೇ ಇದ್ದರು. ಅವರು ಕೂಡ ಅಸಮಾಧಾನ ಹೊರಹಾಕಿದ್ದರು ಎಂದು ಹೇಳಿದ್ದರು.

ನಟಿ ತನುಶ್ರೀ ದತ್ತಾ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಸಿನಿಮಾದ ಚಿತ್ರೀಕರಣ ವೇಳೆ ನಾನಾಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ ಆರೋಪ ಮಾಡಿದ್ದರು. ತನುಶ್ರೀ ದತ್ತಾ ಅವರ ಆರೋಪ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.