ಕಾಳಹಸ್ತಿಯಲ್ಲಿ ಹಾಡಿ, ಕುಣಿದ ಗಾಯಕಿ ಮಂಗ್ಲಿ ವಿರುದ್ಧ ಭಕ್ತರ ಆಕ್ರೋಶ
ಗಾಯಕಿ ಮಂಗ್ಲಿ ಅವರ ಶಿವರಾತ್ರಿ ಹಾಡು ವಿವಾದಕ್ಕೆ ಸಿಲುಕಿದೆ. ಭಕ್ತರು ಮಂಗ್ಲಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ತೆಲುಗು ಗಾಯಕಿ ಮಂಗ್ಲಿ ಯಾರಿಗೆ ತಾನೆ ಗೊತ್ತಿಲ್ಲ. ಕನ್ನಡ ಹಾಡುಗಳಿಗೂ ಧ್ವನಿ ನೀಡಿರುವ ಮಂಗ್ಲಿ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. ಗಾಯನದ ಜೊತೆಗೆ ನಟನೆಯಲ್ಲೂ ಮಂಗ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಮಂಗ್ಲಿ ಹೆಚ್ಚಾಗಿ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಮಂಗ್ಲಿ ಶಿವರಾತ್ರಿ ಪ್ರಯುಕ್ತ ಹೊಸ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಭಂ ಭಂ ಭೋಲೆ.. ಎಂಬ ಹಾಡು ನೋಡಿದ ಅನೇಕರು ಇಷ್ಟಪಟ್ಟರೆ ಇನ್ನೂ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಂದಹಾಗೆ ಈ ಹಾಡನ್ನು ಕಾಳಹಸ್ತಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಗಾಗಿ ವಿವಾದ ಸೃಷ್ಟಿಯಾಗಿದೆ.
ಕಾಳಹಸ್ತಿ ದೇವಸ್ಥಾನದಲ್ಲಿ ಎರಡು ದಶಕಗಳಿಂದ ವಿಡಿಯೋಗ್ರಫಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಮಂಗ್ಲಿ ಪವಿತ್ರ ದೇವಸ್ಥಾನದಲ್ಲಿ ಹಾಡಿ ಕುಣಿದು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಒಂದಿಷ್ಟು ನೃತ್ಯಗಾರರ ಜೊತೆ ಮಂಗ್ಲಿ ಹಾಡನ್ನು ಚಿತ್ರೀಕರಣ ಮಾಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಇರುವ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರು ಭೇಟಿ ನೀಡುತ್ತಾರೆ. ಶಿವ ಭಕ್ತರ ಪಾಲಿಗೆ ಇದು ಪವಿತ್ರ ಕ್ಷೇತ್ರ. ಅದ್ದೂರಿಯಾಗಿ ಇಲ್ಲಿ ಶಿವರಾತ್ರಿ ಆಚರಿಸಲಾಗುತ್ತದೆ. ದೇವಸ್ಥಾನದ ಒಳಗೆ ವಿಡಿಯೋ ಚಿತ್ರೀಕರಣ ಮಾಡಲು ಅವಕಾಶ ಇಲ್ಲ. ಆದರೆ ಈ ನಿಯಮವನ್ನು ಗಾಯಕಿ ಮಂಗ್ಲಿ ಮತ್ತು ಅವರ ತಂಡದವರು ಮುರಿದು ಚಿತ್ರೀಕರಣ ಮಾಡಿರುವುದು ಭಕ್ತರ ಕೋಪಕ್ಕೆ ಕಾರಣವಾಗಿದೆ.
ಬಳ್ಳಾರಿಯಲ್ಲಿ ನನ್ನ ಮೇಲೆ ಅಟ್ಯಾಕ್ ಆಗಿಲ್ಲ, ಕನ್ನಡಿಗರು ಪ್ರೀತಿ ಕೊಟ್ಟಿದ್ದಾರೆ; ವಿವಾದಕ್ಕೆ ಗಾಯಕಿ ಮಂಗ್ಲಿ ಬ್ರೇಕ್
ಶ್ರೀಕಾಳಹಸ್ತಿ ದೇವಸ್ಥಾನವು ಭಾರತದ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಈ ದೇಗುಲದ ಪ್ರಮುಖ ಜಾಗಗಳಲ್ಲಿ ಅವರು ಹಾಡಿ, ಕುಣಿದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅವರಿಗೆ ಅನುಮತಿ ಕೊಟ್ಟವರು ಯಾರು? ಮಂಗ್ಲಿಗೆ ಒಂದು ನ್ಯಾಯ, ಭಕ್ತಾದಿಗಳಿಗೆ ಇನ್ನೊಂದು ನ್ಯಾಯವೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಪವಿತ್ರ ಶ್ರೀಕಾಳಹಸ್ತಿ ದೇವಸ್ಥಾನವನ್ನು ಅವರು ನಿರ್ವಹಿಸುವ ರೀತಿ ಇದೇನಾ? ಎಂದು ದೇವಾಲಯದ ಆಡಳಿತ ಮಂಡಳಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.
ಗಾಯಕಿ ಮಂಗ್ಲಿ ಈಗ ನಾಯಕಿ; ನಿರ್ದೇಶಕ ನಾಗಶೇಖರ್ ಜೊತೆ ನಟನೆ
ಇತ್ತೀಚೆಗೆ ಮಂಗ್ಲಿ ಸದಾ ಸುದ್ದಿಯಲ್ಲಿದ್ದಾರೆ. ಗಾಯನಕ್ಕಿಂತ ಹೆಚ್ಚಾಗಿ ಬೇರೆ ಬೇರೆ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಆಗಾಗ ಬರುತ್ತಿರುವ ಮಂಗ್ಲಿ ಚಿಕ್ಕಬಳ್ಳಾಪುರ ಈವೆಂಟ್ ನಲ್ಲಿ ವಿವಾದ ಮಾಡಿಕೊಂಡಿದ್ದರು. ಬಳಿಕ ಬಳ್ಳಾರಿ ಉತ್ಸವದಲ್ಲಿ ಕೂಡ ಭಾಗಿಯಾಗಿದ್ದರು. ಆ ವೇಳೆ ಅವರ ಕಾರಿನ ಮೇಲೆ ಕಲ್ಲು ತೂರಾಟ ಆದ ಬಗ್ಗೆ ವರದಿ ಆಗಿತ್ತು. ಆದರೆ ಅಂಥ ಘಟನೆ ನಡೆದೇ ಇಲ್ಲ ಎಂದು ಮಂಗ್ಲಿ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದರು.