ಸ್ಯಾಂಡಲ್ ವುಡ್ ನ ಹಿರಿಯ ನಟಿ ಮಾಲಾಶ್ರೀ ಮತ್ತೆ ನಟನೆ ಕಡೆ ಮುಖಮಾಡಿದ್ದಾರೆ. ಪತಿ ರಾಮು ಅವರ ನಿಧನದ  ಬಳಿಕ ಮಾಲಾಶ್ರೀ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಉಪ್ಪು ಹುಳಿ ಖಾರ ಸಿನಿಮಾ ಬಳಿಕ ಮಾಲಾಶ್ರೀ ಬಣ್ಣ ಹಚ್ಚುತ್ತಿದ್ದಾರೆ. 

ಸ್ಯಾಂಡಲ್ ವುಡ್ ಕನಸಿನ ರಾಣಿ ಮಾಲಾಶ್ರೀ ಮತ್ತೆ ನಟನೆಯಲ್ಲಿ ಬ್ಯುಸಿಯಾಗುತ್ತಿದ್ದಾರೆ. ಪತಿ ರಾಮು ಅವರನ್ನು ಕಳೆದುಕೊಂಡ ಬಳಿಕ ಮಾಲಾಶ್ರೀ ಮತ್ತೆ ಅಭಿನಯದತ್ತಾ ಮುಖ ಮಾಡಿದ್ದಾರೆ. ಉಪ್ಪು ಹುಳು ಖಾರ ಸಿನಿಮಾದ ಬಳಿಕ ಮಾಲಾಶ್ರೀ ಮತ್ತೆ ಬಣ್ಣಹಚ್ಚಿರಲಿಲ್ಲ. ಇದೀಗ ಅನೇಕ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

Add Asianetnews Kannada as a Preferred SourcegooglePreferred

ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಚಿತ್ರರಂಗದಲ್ಲು ಖ್ಯಾತಿ ಗಳಿಸಿ ಕೊನೆಗೆ ಕನ್ನಡತಿಯಾಗಿ ಗುರುತಿಸಿಕೊಂಡವರು ನಟಿ ಮಾಲಾಶ್ರೀ. ಕನಸಿನ ರಾಣಿ ಎಂದೇ ಖ್ಯಾತರಾದ ಮಾಲಾಶ್ರೀ, ಅಭಿನಯಿಸಿದ ಚಿತ್ರವೆಂದರೆ ಗೆದ್ದೇ ಗೆಲ್ಲುತ್ತದೆ ಎಂಬ ಮಾತಿತ್ತು. ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಕ್ರೇಜ್ ಹುಟ್ಟಿಸಿದವರೆಂದರೆ ಮಾಲಾಶ್ರೀ. ತಮ್ಮದೇ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದ ಅವರು, ಚಿತ್ರರಂಗವನ್ನು ಆಳಿದ ಕೆಲವೇ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ಮಾಲಾಶ್ರೀ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾದರೂ ಈಗಲೂ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ.

ಈ ವಯಸ್ಸಿನಲ್ಲಿಯೂ ಅವರ ಸಿನಿಮಾ ಉತ್ಸಾಹ ಮತ್ತು ಸಾಮರ್ಥ್ಯ ಕುಂದಿಲ್ಲ. ಹಾಗು ಅಭಿಮಾನಿಗಳ ಬೇಡಿಕೆಯೂ ಕಡಿಮೆಯಾಗಿಲ್ಲ. ಮುಂದಿನ ಸಿನಿಮಾ ಯಾವಾಗ ಎಂದು ಮಾಲಾಶ್ರೀ ಅವರನ್ನು ಕೇಳುತ್ತಿರುತ್ತಾರೆ. ಇದೀಗ ವರ್ಷಗಳ ಬಳಿಕ ಮತ್ತೆ ಬಣ್ಣಹಚ್ಚಲು ಸಜ್ಜಾಗಿದ್ದಾರೆ.

ನಟಿ ಮಾಲಾಶ್ರೀಗೆ Puneeth Rajkumar ಧೈರ್ಯ ಹೇಳಿ, ಆಡಿದ ಕಡೇ ಮಾತುಗಳಿವು!

ನಟಿ ಮಾಲಾಶ್ರೀ ನಿರ್ದೇಶಕ ರವೀಂದ್ರ ವಂಶಿ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮಾಲಾಶ್ರೀ ಸೇನಾ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಮೂಲಕ ಮಾಲಾಶ್ರೀ ತನ್ನ ವೃತ್ತಿ ಜೀವನದಲ್ಲಿ ಎರಡನೇ ಬಾರಿ ವೈದ್ಯಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಸಸ್ಪೆನ್ಸ್ ಮತ್ತು ಮಾಸ್ ಚಿತ್ರವಾಗಿದೆ. ಆಸ್ಪತ್ರೆಯ ಸುತ್ತನೇ ಸುತ್ತುವ ಈ ಸಿನಿಮಾದಲ್ಲಿ ಮಾಲಾಶ್ರೀ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಈ ಚಿತ್ರದಲ್ಲಿ ಮಾಲಾಶ್ರೀ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಚಿತ್ರದಲ್ಲಿ ಮಾಲಾಶ್ರೀ ಜೊತೆ ಕಾಮಿಡಿ ಕಿಂಗ್ ಸಾಧು ಕೋಕಿಲ, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಮಂಜು ಪಾವಗಡ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ನಿರ್ಮಾಪಕ ರಾಮು ನಿಧನದ ಬಳಿಕ ಅವರು ಅರ್ಧದಲ್ಲೇ ನಿಲ್ಲಿಸಿದ್ದ ಸಿನಿಮಾಗಳ ಬಿಡುಗಡೆ ಜವಾಬ್ದಾರಿಯನ್ನು ಮಾಲಾಶ್ರೀ ವಹಿಸಿಕೊಂಡಿದ್ದರು. ರಾಮು ಅರ್ಜುನ್ ಗೌಡ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ಸಿನಿಮಾ ಬಿಡುಗಡೆಯ ಮೊದಲೇ ಕೊನೆಯುಸಿರೆಳೆದರು. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಬಿಡುಗಡೆ ಬ್ಯುಸಿಯಲ್ಲಿದ್ದ ಮಾಲಾಶ್ರೀ ಇದೀಗ ಮತ್ತೆ ನಟನೆ ಕಡೆ ಮುಖಮಾಡಿದ್ದಾರೆ. 

Interview With Malashree: ಪತಿಯ ಚಿತ್ರ ನಿರ್ಮಾಣ ಉತ್ಸಾಹವನ್ನು ನೆನಪಿಸಿಕೊಂಡ ಕನಸಿನ ರಾಣಿ

ಅಪ್ಪು ಕೊನೆಯ ಭೇಟಿ ಮಾಲಾಶ್ರೀ ಮಾತು

ಇತ್ತೀಚಿಗಷ್ಟೆ ಮಾಲಾಶ್ರೀ ನಟ ಪುನೀತ್ ರಾಜ್ ಕುಮಾರ್ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದರು. 'ಅಪ್ಪು ನಿಧನವಾಗುವ ಮೂರು ದಿನ ಮೊದಲು ಒಂದು ಮದುವೆಯಲ್ಲಿ ಅವರನ್ನು ಭೇಟಿಯಾಗಿದ್ದೆ. ರಾಮು ನಿಧನದ ಬಳಿಕ ನಾನು ಹೋಗಿದ್ದ ಮೊದಲ ಕಾರ್ಯಕ್ರಮದು. ಅಲ್ಲಿ ಅಪ್ಪು ಸಿಕ್ಕಿದ್ದರು. ಅಪ್ಪು ಕೂಡಲೇ ನನ್ನ ತಬ್ಬಿಕೊಂಡು ನೀವು ಹೀಗಿರಬಾರದು. ನೀವು ದುಃಖದಿಂದ ಹೊರಗೆ ಬರಬೇಕು. ನಾನು ನಿಮ್ಮನ್ನು ದುರ್ಗಿ. ಚಾಮುಂಡಿಯಂತೆ ನೋಡಬೇಕು. ರಾಮು ಅವರು ಇಲ್ಲ ಎಂದುಕೊಳ್ಳಬೇಡಿ, ಅವರು ಯಾವಾಗಲೂ ನಮ್ಮ ಜೊತೆ ಇದ್ದಾರೆ, ನಮ್ಮ ಸುತ್ತಮುತ್ತಲೇ ಇದ್ದಾರೆ ಎಂದುಕೊಳ್ಳಿ, ಈ ದುಃಖದಿಂದ ಹೊರಗೆ ಬನ್ನಿ ಎಂದಿದ್ದರು ಅಂತ ಮಾಲಾಶ್ರೀ ಹೇಳಿದ್ದರು.

'ಈ ಘಟನೆ ನಡೆದ ಮೂರು ದಿನಕ್ಕೆ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಕತ್ತಲು ಕವಿದಂತೆ ಆಗಿದೆ . ಮೂರು ದಿನದ ಮುಂದೆ ನನಗೆ ಧೈರ್ಯ, ಸ್ಫೂರ್ತಿ ತುಂಬಿದ್ದ ವ್ಯಕ್ತಿ ಇಂದು ಇಲ್ಲವೆಂಬುದನ್ನು ನನಗೆ ಜೀರ್ಣಿಸಿಕೊಳ್ಳಲು ಆಗಿಲ್ಲ. ಎಂಥ ಕೆಟ್ಟ ವರ್ಷ ಇದು ಎನಿಸಿಬಿಟ್ಟಿತು' ಎಂದು ಮಾಲಾಶ್ರೀ, ಅಪ್ಪು ಕೊನೆಯ ಭೇಟಿಯ ಬಗ್ಗೆ ಮಾತನಾಡಿದ್ದರು.