ಎಆರ್ ರೆಹಮಾನ್ ಹಾಡುತ್ತಿದ್ದ ಲೈವ್ ಸಂಗೀತ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿದ ಪೊಲೀಸ್!
ಪುಣೆಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಪುಣೆ ಪೊಲೀಸರು ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆದಿದೆ. ಖುದ್ದು ಎಆರ್ ರಹೆಮಾನ್ ವೇದಿಕೆಯಲ್ಲಿ ಹಾಡುತ್ತಿದ್ದಂತೆ ಎಂಟ್ರಿಕೊಟ್ಟ ಪೊಲೀಸರು ಹಾಡು ನಿಲ್ಲಿಸಿ ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಪುಣೆ(ಮೇ.01): ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಸ್ವತಃ ಎಆರ್ ರೆಹಮಾನ್ ವೇದಿಕೆಯಲ್ಲಿ ಹಾಡುತ್ತಿದ್ದ ವೇಳೆ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಪುಣೆ ಪೊಲೀಸರು, ಆಯೋಜಕರಲ್ಲಿ ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇನ್ನು ಹಾಡುತ್ತಿದ್ದ ರೆಹಮಾನ್ಗೂ ಪೊಲೀಸರು ಹಾಡು ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರ ಸೂಚನೆಯಂತೆ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಪುಣೆಯಲ್ಲಿ ರಾತ್ರಿ ಸಂಗೀತ ರಸ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಆರ್ ರೆಹಮಾನ್ ತಂಡ ಈ ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನ ನೀಡಿತ್ತು. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ರಾತ್ರಿ 10 ಗಂಟೆಯೊಳಗೆ ಪುಣೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಬೇಕು. ಆದರೆ ಎಆರ್ ರಹೆಮಾನ್ ಸಂಗೀತ ಕಾರ್ಯಕ್ರಮ 10 ಗಂಟೆಯಾದರೂ ಮುಗಿಯಲಿಲ್ಲ. ಖುದ್ದು ಎಆರ್ ರೆಹಮಾನ್ ಹಾಡುತ್ತಿದ್ದಂತೆ ಪುಣೆ ಪೊಲೀಸರು ವೇದಿಯತ್ತ ಆಗಮಿಸಿ ಕಾರ್ಯಕ್ರಮ ನಿಲ್ಲಿಸಿದ್ದಾರೆ.
ಹಿಂದಿ ಬೇಡ, ತಮಿಳಿನಲ್ಲಿ ಮಾತನಾಡು ಎಂದು ಪತ್ನಿಗೆ ವೇದಿಕೆಯಲ್ಲೇ ಒತ್ತಾಯಿಸಿದ AR Rahman!
ರೆಹಮಾನ್ ವೇದಿಕೆಯಲ್ಲಿ ಚಂಯ್ಯ ಚಂಯ್ಯ ಹಾಡು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಗೀತ ರಸಿಕರನ್ನು ಮನರಂಜಿಸಿತ್ತು. ಆದರೆ ಸಂಪೂರ್ಣ ಆನಂದಿಸುವ ಮೊದಲೇ ರಹೆಮಾನ್ ಕಾರ್ಯಕ್ರಮ ರದ್ದಾಗಿದೆ. ಪೊಲೀಸರು ಎಂಟ್ರಿಕೊಟ್ಟು ನಿಲ್ಲಿಸುವಂತೆ ಸೂಚಿಸುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳು ವ್ಯಕ್ತವಾಗಿದೆ.
ನಿಯಮದ ಪ್ರಕಾರ ರಾತ್ರಿ ಗಂಟೆ ಬಳಿಕ ಕಾರ್ಯಕ್ರಮ ಮಾಡುವಂತಿಲ್ಲ. ಹೀಗಾಗಿ ನಿಯಮದ ಪ್ರಕಾರ ಕ್ರಮ ಕೈಗೊಂಡಿದ್ದೇವೆ ಅನ್ನೋದು ಪೊಲೀಸರ ವಾದ. ಆದರೆ ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ನುಗ್ಗಿ ಅರ್ಧಕ್ಕೆ ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿರುವುದು ತಪ್ಪ ಅನ್ನೋದು ಮತ್ತೊಂದು ವಾದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ.
ಇತ್ತ ಎಆರ್ ರಹೆಮಾನ್ ತಮ್ಮ ಟ್ವಿಟರ್ ಮೂಲಕ ಪುಣೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಮತ್ತೆ ಪುಣೆಗೆ ಬಂದು ಎಲ್ಲರನ್ನು ರಂಜಿಸುವುದಾಗಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಗ್ಯಾಂಗ್ನಿಂದ ಸೈಡ್ ಲೈನ್ , ನೋವು ವ್ಯಕ್ತಪಡಿಸಿದ ಎಆರ್ ರೆಹಮಾನ್!
ಇತ್ತೀಚೆಗೆ ಎಆರ್ ರಹಮಾನ್ ಸುದ್ದಿಯಾಗಿದ್ದರು. ಪತ್ನಿಗೆ ತಮಿಳಿನಲ್ಲಿ ಮಾತನಾಡಲು ಸೂಚಿಸಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ತಮ್ಮ ಪತ್ನಿಗೆ ‘ಹಿಂದಿ ಬೇಡ, ತಮಿಳಿನಲ್ಲಿ ಮಾತಾಡು’ ಎಂದ ಪ್ರಸಂಗ ಜರುಗಿದ್ದು, ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಮಾ.30ರಂದು ಚೆನ್ನೈನಲ್ಲಿ ನಡೆದ ವಿಕಟನ್ ಸಿನೆಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರೆಹಮಾನ್ ಅವರಿಗೆ 2022ರ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿತ್ತು. ಇದನ್ನು ಸ್ವೀಕರಿಸಲು ರೆಹಮಾನ್ ತಮ್ಮ ಪತ್ನಿ ಸಾಯಿರಾ ಬಾನು ಅವರನ್ನು ವೇದಿಕೆಗೆ ಆಹ್ವಾನಿಸಿದ್ದಲ್ಲದೇ, ಒಂದೆರಡು ಮಾತುಗಳನ್ನಾಡಲು ಸೂಚಿಸಿದರು. ಆಗ ಸಾಯಿರಾ ಹಿಂದಿಯಲ್ಲಿ ಪ್ರಾರಂಭಿಸಿದಾಗ ದಯವಿಟ್ಟು ತಮಿಳಿನಲ್ಲಿ ಮಾತನಾಡು ಎಂದು ರೆಹಮಾನ್ ಹೇಳಿದರು. ಇದರಿಂದ ವಿಚಲಿತರಾದ ಸಾಯಿರಾ, ‘ನನಗೆ ಅಷ್ಟಾಗಿ ಚೆನ್ನಾಗಿ ತಮಿಳು ಬರಲ್ಲ. ಕ್ಷಮಿಸಿ’ ಎನ್ನುತ್ತಲೇ ತಮಿಳು ಮಾತಾಡಿದರು.