ಕನ್ನಡದಲ್ಲೂ Brahmastra ಕೇಸರಿಯಾ ಹಾಡು... ಮನಸೋತ ಪ್ರಧಾನಿ ಮೋದಿ!
ಬ್ಲಾಕ್ಬಸ್ಟರ್ ಚಲನಚಿತ್ರ ಬ್ರಹ್ಮಾಸ್ತ್ರದ ಕೇಸರಿಯಾ ಹಾಡಿಗೆ ಗಾಯಕನೊಬ್ಬ ಐದು ಭಾಷೆಗಳಲ್ಲಿ ಹಾಡಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕಳೆದ ಸೆಪ್ಟೆಂಬರ್ 9ರಂದು ಬಿಡುಗಡೆಯಾದ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ ಚಿತ್ರದ ಕೇಸರಿಯಾ ಹಾಡು ಸಾಕಷ್ಟು ಪ್ರಸಿದ್ಧವಾಗಿದೆ. ಈ ಅದ್ಭುತ ಹಾಡಿಗೆ ಮನಸೋಲದವರೇ ಇಲ್ಲ. ಈ ಹಾಡು ಸಕತ್ ಫೇಮಸ್ ಆಗುತ್ತಲೇ ಹಲವಾರು ಗಾಯಕರು ತಮ್ಮದೇ ದನಿಯಲ್ಲಿ ಇದನ್ನು ಹಾಡಿ ಆನಂದಿಸಿದ್ದಾರೆ. ಆದರೆ ಆರು ತಿಂಗಳ ಬಳಿಕ ಈ ಹಾಡು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಅದಕ್ಕೆ ಕಾರಣ, ಈ ಗಾಯಕ! ಮುಂಬೈ ಮೂಲದ ಗಾಯಕ ಸ್ನೇಹದೀಪ್ ಸಿಂಗ್ ಕಲ್ಸಿ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ರಾತ್ರೋ ರಾತ್ರಿ ಅವರು ದೇಶದ ಗಮನ ಸೆಳೆಯುತ್ತಿದ್ದಾರೆ, ಸಂಗೀತ ಪ್ರಿಯರಿಗೆ ಆಪ್ತರಾಗಿ ಬಿಟ್ಟಿದ್ದಾರೆ. ಅವರು ಕೇಸರಿಯಾ ಹಾಡಿಗೆ ದನಿಯಾಗಿ ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಹಾಡಿಗೆ ಎಲ್ಲರೂ ತಲೆದೂಗುತ್ತಿದ್ದು, ಇದೀಗ ಖುದ್ದು ಪ್ರಧಾನಿಯವರೇ ಅಚ್ಚರಿಯ ಜೊತೆಗೆ ಶ್ಲಾಘನೆಯನ್ನೂ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಈ ಹಾಡನ್ನು ಹಾಡಿರುವುದರಲ್ಲಿ ಅದೇನು ವಿಶೇಷ ಇದೆ ಎನ್ನುವಿರಾ? ಅಲ್ಲೇ ಇರುವುದು ವಿಶೇಷ. ಇಂಪಾದ ಕಂಠಸಿರಿಯನ್ನು ಹೊಂದಿರುವ ಅನೇಕ ಮಂದಿ ಈ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರೂ, ಗಾಯಕ ಸ್ನೇಹದೀಪ್ ಸಿಂಗ್ ಕಲ್ಸಿ (Snehadeep Singh Kalsi) ಅವರ ಹಾಡು ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರ ಮಟ್ಟಿಗೆ ಹೋಯಿತು ಎಂದರೆ ಅಲ್ಲಿ ಏನೋ ವಿಶೇಷತೆ ಇರಲೇಬೇಕು ಅಲ್ಲವೆ? ಹೌದು, ಗಾಯಕ ಸ್ನೇಹದೀಪ್ ಸಿಂಗ್ ಕಲ್ಸಿ ಅವರು ಈ ಹಾಡನ್ನು ಐದು ಭಾಷೆಗಳಲ್ಲಿ ಹಾಡಿದ್ದಾರೆ. ಹಿನ್ನೆಲೆ ಸಂಗೀತದೊಂದಿಗೆ ಈ ಹಾಡನ್ನು ಪೂರ್ತಿಯಾಗಿ ಐದು ಭಾಷೆಗಳಲ್ಲಿ ಅದ್ಭುತ ಕಂಠಸಿರಿಯಿಂದ ಹಾಡಿದ್ದಾರೆ. ಸಂಗೀತ ಇಷ್ಟ ಇಲ್ಲ ಎಂದು ಅಂದುಕೊಳ್ಳುವವರೂ ಈ ಹಾಡಿಗೆ ತಲೆದೂಗುವಂತೆ ಐದು ಭಾಷೆಯಲ್ಲಿ ಹಾಡಿರೆ ಸ್ನೇಹದೀಪ್ .
RRR ಚಿತ್ರ ಇದರ ಕಾಪಿನಾ? ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್!
ಅವರು ಕನ್ನಡದಲ್ಲಿ ಕೂಡ ಹಾಡಿರುವುದು ವಿಶೇಷ. ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದಾರೆ. ಸಂಪೂರ್ಣ ಹಾಡನ್ನು ಎಲ್ಲಾ ಭಾಷೆಗಳಲ್ಲಿ ಹಾಡಲಿಲ್ಲ. ಬದಲಿಗೆ ಹಾಡನ್ನು ಹಾಡುವಾಗ ಬೇರೆ ಬೇರೆ ಭಾಷೆಗಳನ್ನು ಬಳಸಿ ಮೂಲ ಗಾಯನಕ್ಕೆ ಎಲ್ಲಿಯೂ ಚ್ಯುತಿಯಾಗದಂತೆ ಹಾಡಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯವಾಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಪ್ರಧಾನಿ ಮೋದಿಯವರೂ ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಅವರು ಅದನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
'ಪ್ರತಿಭಾವಂತ @SnehdeepSK ಹಾಡಿರುವ ಈ ಅದ್ಭುತ ಹಾಡನ್ನು ಕೇಳಿ. ಇದು ಮಧುರ, ಭವ್ಯವಾದ ಏಕ್ ಭಾರತ್ ಶ್ರೇಷ್ಠ ಭಾರತದ ಆತ್ಮದ ಉತ್ತಮ ಅಭಿವ್ಯಕ್ತಿಯಾಗಿದೆ' ಎಂದಿದ್ದಾರೆ. ಸಾಂಸ್ಕೃತಿಕ ವೈವಿಧ್ಯತೆ ಮತ್ತು ರಾಷ್ಟ್ರೀಯ ಏಕತೆಗೆ ಗೌರವವನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವು ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಅಭಿಯಾನ ಮತ್ತು ಘೋಷಣೆಯನ್ನು ಸಹ ರಚಿಸಿದೆ. ಅದನ್ನೇ ಉಲ್ಲೇಖಿಸಿರುವ ಪ್ರಧಾನಿಯವರು ಹಾಡಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸ್ನೇಹದೀಪ್ ಸಿಂಗ್ ಕೂಡ ಪ್ರಧಾನಿಯವರ ಶ್ಲಾಘನೆಗೆ ಮರು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. 'ಮೆಚ್ಚುಗೆಗೆ ತುಂಬಾ ಧನ್ಯವಾದಗಳು, ಸರ್. ಇದು ಬಹಳ ಮುಖ್ಯ. ಅದು ನಿಮ್ಮನ್ನು ತಲುಪಿದೆ ಮತ್ತು ನೀವು ಅದನ್ನು ಆನಂದಿಸಿದ್ದೀರಿ ಎಂದು ಖುಷಿಯಾಗಿದೆ' ಎಂದಿದ್ದಾರೆ. ಒಂದು ನಿಮಿಷ ಎಂಟು ಸೆಕೆಂಡುಗಳ ಈ ಕ್ಲಿಪ್ನಲ್ಲಿ ಸ್ನೇಹದೀಪ್ ಸಿಂಗ್ ಅವರು 5 ಭಾಷೆಗಳಲ್ಲಿ ಅಂದರೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಒಂದೇ ಸಮಯದಲ್ಲಿ ಕೇಸರಿಯಾ ಹಾಡನ್ನು ಹಾಡಿದ್ದಾರೆ.
Jaggesh Birthday: 'ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ'
ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆಯಾದ ಬ್ರಹ್ಮಾಸ್ತ್ರ (Brahmastra) ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಎಂದು ಸಾಬೀತಾಗಿದೆ. ಬಾಲಿವುಡ್ ದಿಗ್ಗಜರ ಬಾಕ್ಸ್ ಆಫೀಸ್ ಚಿತ್ರಗಳು ನೆಲಕಚ್ಚುತ್ತಿದ್ದ ಸಮಯದಲ್ಲಿ ರಣಬೀರ್ ಕಪೂರ್ ಆಲಿಯಾ ಭಟ್ ಚಿತ್ರ ಅದ್ಭುತ ಸೃಷ್ಟಿಸಿದೆ. ಅಯಾನ್ ಮುಖರ್ಜಿ ಸುಮಾರು 410 ಕೋಟಿ ಬಜೆಟ್ನಲ್ಲಿ ಬ್ರಹ್ಮಾಸ್ತ್ರ ಚಿತ್ರವನ್ನು ಸಿದ್ಧಪಡಿಸಿದ್ದರು ಮತ್ತು ಅದು 431 ಕೋಟಿ ಕಲೆಕ್ಷನ್ ಮಾಡಿದೆ. ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರದಲ್ಲಿ ರಣಬೀರ್- ಆಲಿಯಾ ಅಲ್ಲದೆ ಅಮಿತಾಭ್ ಬಚ್ಚನ್, ನಾಗ ಅರ್ಜುನ್, ಮೌನಿ ರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿದ್ದಾರೆ.