ಇಂದಿನ ದಿನಗಳಲ್ಲಿ ಸಿನಿಮಾ ಯಶಸ್ವಿಯಾಗಲು ಭಾಷೆ ಮುಖ್ಯವಲ್ಲ, ಪ್ರತಿಭೆ ಮಾತ್ರ ಮುಖ್ಯ. ಉತ್ತಮ ಕಥೆ ಮತ್ತು ಅದ್ಭುತ ನಟನೆ ಇದ್ದರೆ ಪ್ರೇಕ್ಷಕರು ಯಾವುದೇ ಭಾಷೆಯ ಸಿನಿಮಾವನ್ನಾದರೂ ಅಪ್ಪಿಕೊಳ್ಳುತ್ತಾರೆ. ತೆಲುಗು ಚಿತ್ರರಂಗ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಇಲ್ಲಿನ ನಟರ ಮತ್ತು ತಂತ್ರಜ್ಞರ ಶ್ರಮವೇ ಕಾರಣ' ಎಂದಿದ್ದಾರೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ.

‘ಹಾಲಿವುಡ್‌ಗೂ ಕಾಲಿಡಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್'- ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭರ್ಜರಿ ಭವಿಷ್ಯ!

ಹೈದರಾಬಾದ್: ಟಾಲಿವುಡ್‌ನ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ (Allu Arjun) ಖ್ಯಾತಿ ಈಗ ಕೇವಲ ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿಲ್ಲ. 'ಪುಷ್ಪ' ಸಿನಿಮಾದ ನಂತರ ಅವರ ಕ್ರೇಜ್ ಇಡೀ ದೇಶವನ್ನೇ ಆವರಿಸಿದೆ. ಈಗ ಇದೇ ವಿಷಯವಾಗಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಲ್ಲು ಅರ್ಜುನ್ ಕೇವಲ ಭಾರತೀಯ ಸಿನಿಮಾಗಳಿಗಷ್ಟೇ ಸೀಮಿತವಾಗಬಾರದು, ಅವರು ಹಾಲಿವುಡ್‌ಗೂ ಎಂಟ್ರಿ ಕೊಡಬೇಕು ಎಂದು ಸಿಎಂ ಆಶಯ ವ್ಯಕ್ತಪಡಿಸಿದ್ದಾರೆ.

ಅಲ್ಲು ಸಿನಿಮಾಸ್ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಮಾತು:

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ಕುಟುಂಬಕ್ಕೆ ಸೇರಿದ ಸುಸಜ್ಜಿತ ಮಲ್ಟಿಪ್ಲೆಕ್ಸ್ 'ಅಲ್ಲು ಸಿನಿಮಾಸ್' (Allu Cinemas) ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿಎಂ ರೇವಂತ್ ರೆಡ್ಡಿ, ರಿಬ್ಬನ್ ಕತ್ತರಿಸುವ ಮೂಲಕ ಚಿತ್ರಮಂದಿರವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತೆಲುಗು ಚಿತ್ರರಂಗದ ಬೆಳವಣಿಗೆ ಮತ್ತು ಅಲ್ಲು ಅರ್ಜುನ್ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಬಾಲಿವುಡ್ ಕಾಲ ಮುಗಿಯಿತು, ಈಗ ಹಾಲಿವುಡ್ ಸರದಿ!

ರೇವಂತ್ ರೆಡ್ಡಿ ಅವರು ಮಾತನಾಡುತ್ತಾ, "ಒಂದು ಕಾಲವಿತ್ತು, ನಾವು ನಮ್ಮ ತೆಲುಗು ಸಿನಿಮಾಗಳನ್ನು ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ ಸಿನಿಮಾಗಳ ಜೊತೆ ಹೋಲಿಕೆ ಮಾಡುತ್ತಿದ್ದೆವು. ಹಿಂದಿ ಸಿನಿಮಾಗಳ ದಾಖಲೆಯನ್ನು ನಮ್ಮ ಸಿನಿಮಾಗಳು ಮುರಿಯುತ್ತವೆಯೇ ಎಂದು ಕಾತರದಿಂದ ಕಾಯುತ್ತಿದ್ದೆವು. ಆದರೆ ಇಂದು ಆ ಪರಿಸ್ಥಿತಿ ಬದಲಾಗಿದೆ. ತೆಲುಗು ಚಿತ್ರರಂಗ ಈಗ ಬಾಲಿವುಡ್ ಅನ್ನು ಮೀರಿ ಬೆಳೆದಿದೆ. ಈಗ ನಮ್ಮ ಸ್ಪರ್ಧೆ ಬಾಲಿವುಡ್ ಜೊತೆಗಲ್ಲ, ಬದಲಿಗೆ ಜಾಗತಿಕ ಮಟ್ಟದ ಹಾಲಿವುಡ್ ಸಿನಿಮಾಗಳ ಜೊತೆಗೆ ಇರಬೇಕು," ಎಂದರು.

ಮುಂದುವರಿದು ಮಾತನಾಡಿದ ಅವರು, "ಅಲ್ಲು ಅರ್ಜುನ್ ಅವರಂತಹ ಪ್ರತಿಭಾವಂತ ನಟರು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಮಾತ್ರ ಉಳಿಯಬಾರದು. ಅವರು ಹಾಲಿವುಡ್ ಚಿತ್ರಗಳಲ್ಲೂ ನಟಿಸಬೇಕು. ನಮ್ಮ ತೆಲುಗು ನಟರ ಪ್ರತಿಭೆ ಮತ್ತು ಶಬ್ದ ಜಗತ್ತಿನ ಮೂಲೆ ಮೂಲೆಗೂ ತಲುಪಬೇಕು. ತೆಲುಗು ಸಿನಿಮಾ ರಂಗಕ್ಕೆ ಆ ಶಕ್ತಿ ಇದೆ," ಎಂದು ಆತ್ಮವಿಶ್ವಾಸದಿಂದ ನುಡಿದರು.

ಭಾಷೆಯ ಗಡಿಗಳು ಈಗ ಇಲ್ಲ:

ಸಿನಿಮಾ ರಂಗದಲ್ಲಿ ಈಗ ಭಾಷೆಯ ಅಡೆತಡೆಗಳು ಸಂಪೂರ್ಣವಾಗಿ ದೂರವಾಗಿವೆ ಎಂದು ಸಿಎಂ ಅಭಿಪ್ರಾಯಪಟ್ಟರು. "ಇಂದಿನ ದಿನಗಳಲ್ಲಿ ಸಿನಿಮಾ ಯಶಸ್ವಿಯಾಗಲು ಭಾಷೆ ಮುಖ್ಯವಲ್ಲ, ಪ್ರತಿಭೆ ಮಾತ್ರ ಮುಖ್ಯ. ಉತ್ತಮ ಕಥೆ ಮತ್ತು ಅದ್ಭುತ ನಟನೆ ಇದ್ದರೆ ಪ್ರೇಕ್ಷಕರು ಯಾವುದೇ ಭಾಷೆಯ ಸಿನಿಮಾವನ್ನಾದರೂ ಅಪ್ಪಿಕೊಳ್ಳುತ್ತಾರೆ. ತೆಲುಗು ಚಿತ್ರರಂಗ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಇಲ್ಲಿನ ನಟರ ಮತ್ತು ತಂತ್ರಜ್ಞರ ಶ್ರಮವೇ ಕಾರಣ," ಎಂದು ಅವರು ಹೇಳಿದರು.

ಚಿತ್ರರಂಗಕ್ಕೆ ಸರ್ಕಾರದ ಬೆಂಬಲ:

ತೆಲಂಗಾಣದ ಅಭಿವೃದ್ಧಿಯಲ್ಲಿ ಚಿತ್ರರಂಗದ ಪಾತ್ರ ದೊಡ್ಡದಿದೆ ಎಂದ ರೇವಂತ್ ರೆಡ್ಡಿ, ಚಿತ್ರೋದ್ಯಮಕ್ಕೆ ತಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಅಲ್ಲು ಅರವಿಂದ್ ಮತ್ತು ಅಲ್ಲು ಅರ್ಜುನ್ ಕುಟುಂಬವು ಚಿತ್ರಮಂದಿರಗಳ ನಿರ್ಮಾಣದ ಮೂಲಕ ಸಿನಿಮಾ ಪ್ರದರ್ಶನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಒಟ್ಟಿನಲ್ಲಿ, ಸದ್ಯಕ್ಕೆ ಅಟ್ಲಿ ನಿರ್ದೇಶನದ ಇನ್ನೂ ಹೆಸರಿಡದ (AA22xA6 ) ಚಿತ್ರದ ಶೂಟಿಂಗ್‌ನಲ್ಲಿ ನಟ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿ. ಈ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವ ನಟ ಅಲ್ಲು ಅರ್ಜುನ್ ಅವರಿಗೆ ಸಿಎಂ ರೇವಂತ್ ರೆಡ್ಡಿ ಅವರ ಈ ಮಾತುಗಳು ಆನೆ ಬಲ ತಂದಿವೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ಹಾಲಿವುಡ್ ಮೆಟ್ಟಿಲೇರುವುದನ್ನು ನೋಡಲು ಕಾತರರಾಗಿದ್ದಾರೆ.