ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತಿದೊಡ್ಡ ಸಾಹಸವೊಂದು ತೆರೆಯ ಮೇಲೆ ಬರಲು ಸಜ್ಜಾಗಿದೆ. ಅದೇ 'ರಾಮಾಯಣ'. ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಮಹಾಕಾವ್ಯದ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಹಾಲಿವುಡ್‌ಗೆ ಸೆಡ್ಡು ಹೊಡೆದ ನಮಿತ್ ಮಲ್ಲೊತ್ರಾ: ಭಾರತೀಯ ಸಂಸ್ಕೃತಿ ಹೀಯಾಳಿಸುವವರಿಗೆ 'ರಾಮಾಯಣ'ವೇ ಉತ್ತರ!

Add Asianetnews Kannada as a Preferred SourcegooglePreferred

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತಿದೊಡ್ಡ ಸಾಹಸವೊಂದು ತೆರೆಯ ಮೇಲೆ ಬರಲು ಸಜ್ಜಾಗಿದೆ. ಅದೇ 'ರಾಮಾಯಣ'. ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಮಹಾಕಾವ್ಯವು (Ramayana) ಕೇವಲ ಒಂದು ಸಿನಿಮಾ ಅಲ್ಲ, ಇದು ವಿಶ್ವ ಮಟ್ಟದಲ್ಲಿ ಭಾರತದ ಹೆಮ್ಮೆಯ ಸಂಕೇತವಾಗಿ ಹೊರಹೊಮ್ಮುತ್ತಿದೆ. ಈ ಚಿತ್ರದ ಹಿಂದೆ ನಿಂತಿರುವ ಅಸಲಿ ಶಕ್ತಿ ಎಂದರೆ ಅದು ಹಾಲಿವುಡ್‌ನಲ್ಲಿ ಈಗಾಗಲೇ ಹೆಸರು ಮಾಡಿರುವ ಭಾರತೀಯ ಮೂಲದ ನಿರ್ಮಾಪಕ ನಮಿತ್ ಮಲ್ಹೋತ್ರಾ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಮಿತ್ ಮಲ್ಹೋತ್ರಾ (Namit Malhotra ) ಅವರು ಹಾಲಿವುಡ್ ಭಾರತವನ್ನು ನೋಡುವ ದೃಷ್ಟಿಕೋನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾನು ಹಾಲಿವುಡ್‌ಗೆ ಹೋದಾಗ ಅಲ್ಲಿ ನಮ್ಮ ಇತಿಹಾಸ ಅಥವಾ ಸಂಸ್ಕೃತಿಗೆ ಯಾವುದೇ ಸರಿಯಾದ ಪ್ರಾತಿನಿಧ್ಯ ಇಲ್ಲದಿರುವುದನ್ನು ಗಮನಿಸಿದೆ. ಹಣಕಾಸು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯರು ಜಾಗತಿಕವಾಗಿ ಮುಂಚೂಣಿಯಲ್ಲಿದ್ದರೂ, ಸಿನಿಮಾ ರಂಗದಲ್ಲಿ ಮಾತ್ರ ನಮ್ಮ ಸಂಸ್ಕೃತಿಯನ್ನು ಅವರು ಸರಿಯಾಗಿ ಗೌರವಿಸುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ 'ಸ್ಲಂಡಾಗ್ ಮಿಲಿಯನೇರ್' ಅಂತಹ ಚಿತ್ರಗಳಲ್ಲಿ ಭಾರತವನ್ನು ಕೇವಲ ಬಡತನದ ಅಥವಾ ಸಂತ್ರಸ್ತರ ದೇಶ ಎಂಬಂತೆ ತೋರಿಸಿರುವುದನ್ನು ನಮಿತ್ ಟೀಕಿಸಿದ್ದಾರೆ. "ನಮ್ಮ ಶ್ರೀಮಂತ ಪರಂಪರೆಯನ್ನು ಇಡೀ ಜಗತ್ತು ಹೆಮ್ಮೆಪಡುವಂತೆ ತೋರಿಸಬೇಕು ಎಂಬ ಛಲದಿಂದಲೇ ಈ 'ರಾಮಾಯಣ' ಸಿನಿಮಾ ಹುಟ್ಟಿಕೊಂಡಿತು. ಇದು ಹಾಲಿವುಡ್‌ಗೆ ನಾವು ನೀಡುತ್ತಿರುವ ದಿಟ್ಟ ಉತ್ತರ" ಎಂದು ಅವರು ಹೇಳಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಬೃಹತ್ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಎರಡೂ ಭಾಗಗಳಿಗೆ ಸೇರಿ ಅಂದಾಜು 4,000 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದು ವಿಶ್ವದ ಅತಿ ದೊಡ್ಡ 'ಸ್ವತಂತ್ರ ಬಜೆಟ್' ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರದಲ್ಲಿ ನಟನಾ ದಿಗ್ಗಜರ ದಂಡೇ ಇದೆ. ರಣ್‌ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಕರುನಾಡಿನ 'ರಾಕಿಂಗ್ ಸ್ಟಾರ್' ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸುವುದರ ಜೊತೆಗೆ ಚಿತ್ರದ ಸಹ-ನಿರ್ಮಾಣವನ್ನೂ ಮಾಡುತ್ತಿದ್ದಾರೆ.

ಸನ್ನಿ ಡಿಯೋಲ್, ವಿಜಯ್ ಸೇತುಪತಿ ಮತ್ತು ಕಾಜಲ್ ಅಗರ್ವಾಲ್ ಅಂತಹ ಘಟಾನುಘಟಿ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನು ಸಂಗೀತದ ವಿಚಾರಕ್ಕೆ ಬಂದರೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಹಾಗೂ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹಾನ್ಸ್ ಜೈಮರ್ ಒಂದಾಗಿರುವುದು ವಿಶೇಷ. ಚಿತ್ರದ ಮೊದಲ ಭಾಗ ಈ ವರ್ಷದ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು 'ರಾಮಾಯಣ' ಸಜ್ಜಾಗಿದೆ.