ವೇದಿಕೆಯ ಮೇಲೆ ಯುವತಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ನಟ ಸೂರ್ಯ ಶಿವಕುಮಾರ್!
ಕಾಲಿವುಡ್ ಸಿಂಗಂ ಸೂರ್ಯ ಶಿವಕುಮಾರ್ ಅವರು 'ಆಗರಂ ಫೌಂಡೇಷನ್' ವತಿಯಿಂದ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯುವತಿಯೋರ್ವಳ ಜೀವನದ ಕಷ್ಟ ಕಾರ್ಪಣ್ಯ ಕೇಳಿ ಮಾತನಾಡುವಾಗ ವೇದಿಕೆ ಮೇಲೆ ಕಣ್ಣೀರಿಟ್ಟು ಆಕೆಯನ್ನು ತಬ್ಬಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾಲಿವುಡ್ ಚಿನ್ನ ತಳಪತಿ ಸೂರ್ಯ ಶಿವಕುಮಾರ್ ಒಬ್ಬ ಕಲಾವಿದನಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿಯೂ ಕಾಣಿಸಿಕೊಂಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂದು 'ಆಗರಂ ಫೌಂಡೇಷನ್' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಮೆಲೋಡಿಯಸ್ ಹಾಡುಗಳ ಮಾಂತ್ರಿಕ ಎ ಆರ್ ರೆಹಮಾನ್; ಇಂಟರೆಸ್ಟಿಂಗ್ ವಿಚಾರಗಳು!
ಇತ್ತೀಚಿಗೆ ಆಗರಂ ಫೌಂಡೇಷನ್ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. 'ಆಗರಂ ಸಂಸ್ಥೆ' ಯಿಂದ ಶಿಕ್ಷಣ ಸಹಾಯ ಪಡೆದ ಯುವತಿ ಗಾಯತ್ರಿ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ವೇದಿಕೆ ಮೇಲೆ ಹೇಳಿಕೊಂಡರು. 'ನಾನು ತಂಜಾವೂರಿನ ಕುಗ್ರಾಮದಿಂದ ಬಂದವಳು. ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟಿದ ಕಾರಣ ಶಿಕ್ಷಣವನ್ನು 10 ನೇ ತರಗತಿಗೆ ಮುಗಿಸಿದೆ. ಮುಂದುವರೆಸಲು ಸಾಧ್ಯವಾಗಿಲ್ಲ. ಆಗ ನನಗೆ 'ಆಗರಂ ಫೌಂಡೇಷನ್' ಸಹಾಯ ನೀಡಿತು. ಇಂದು ನಾನು ಶಿಕ್ಷಣ ಮುಗಿಸಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದೇನೆ. ಇದಕ್ಕೆ ಕಾರಣ ಸೂರ್ಯ ಅಣ್ಣ. ಅವರಿಗೆ ನನ್ನ ಕೃತಜ್ಞತೆಗಳು. ಈಗ ನನ್ನ ಅಮ್ಮ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಆಕೆ ದೂರದ ಊರಿನಲ್ಲಿ 200ರೂ.ಗೆ ಕೆಲಸ ಮಾಡುತ್ತಿದ್ದಾರೆ. ಇಂದು ನಾನು ಸೂರ್ಯ ಅಣ್ಣನ ಎದುರು ಮಾತನಾಡುತ್ತಿದೀನಿ ಎಂದು ಹೇಳಿದಾಗ ಹೆಮ್ಮೆ ಪಟ್ಟರು' ಎಂದು ಹೇಳಿದರು. ಆಕೆಯ ಮಾತುಗಳನ್ನು ಕೇಳಿ ವೇದಿಯ ಮೇಲೆ ಕುಳಿತಿದ್ದ ಸೂರ್ಯ ಕಣ್ಣೀರಿಟ್ಟು ಆಕೆಯನ್ನು ತಬ್ಬಿಕೊಂಡರು.
ಈ ವಿಡಿಯೋವನ್ನು ಸೂರ್ಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.