ಗಾಂಧಿ- ಅಂಬೇಡ್ಕರ್ ತತ್ವದ ಬಗ್ಗೆ ಮಾತನಾಡಿದ ಜಾಹ್ನವಿ ಕಪೂರ್- ಬೆಚ್ಚಿಬಿತ್ತು ಬಾಲಿವುಡ್!
ಗಾಂಧೀಜಿ ಮತ್ತು ಅಂಬೇಡ್ಕರ್ ಕೆಲವು ವಿಷಯಗಳಲ್ಲಿ ವಿಭಿನ್ನ ನಿಲುವು ಹೊಂದಿದ್ದು, ಅದರ ಬಗ್ಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
![Janhvi Kapoor surprises internet with her views on Gandhi Ambedkar casteism suc Janhvi Kapoor surprises internet with her views on Gandhi Ambedkar casteism suc](https://static-ai.asianetnews.com/images/01hyt9qn75h4jchtaycq03w3xs/janhvi-kapoor-ambedkar-gandhi_363x203xt.jpg)
ನಟಿ ಜಾಹ್ನವಿ ಕಪೂರ್ ಸದ್ಯ ಮಿಸ್ಟರ್ ಆ್ಯಂಡ್ ಮಿಸಸ್ ಮಹಿ ಚಿತ್ರದ ಪ್ರಮೋಷನ್ನಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆಯೇ ಅವರು ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಸಿದ್ಧಾಂತ, ಅವರಿಬ್ಬರ ನಡುವಿನ ವಿಭಿನ್ನ ನಿಲುವು ಇತ್ಯಾದಿಗಳ ಕುರಿತು ಮಾತನಾಡಿದ್ದು, ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಅಸ್ಪೃಶ್ಯತೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಅವರ ವಿಭಿನ್ನ ಅನುಭವಗಳಿಂದಾಗಿ. ಗಾಂಧೀಜಿ ಜನಿಸಿದ್ದು ಸೌಹಾರ್ದಯುತ ವಾತಾವರಣದಲ್ಲಿ. ಅವರು ಅಸ್ಪೃಶ್ಯತೆಯನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುತ್ತಿದ್ದರು. ಮತ್ತೊಂದೆಡೆ ಅಂಬೇಡ್ಕರ್ ಅವರು ಜಾತಿ ಮತ್ತು ಅವಮಾನದ ಅಸಹನೀಯ ನೋವನ್ನು ಸಹಿಸಬೇಕಾಯಿತು. ಅಸ್ಪೃಶ್ಯತೆಯನ್ನು ನಂಬಿರುವ ಹಿಂದೂ ಧರ್ಮವು ಅನ್ಯಾಯವಾಗಿದೆ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು. ಗಾಂಧೀಜಿ ಕಟ್ಟಾ ಹಿಂದೂವಾಗಿದ್ದರೂ, ಜಾತಿ ವ್ಯವಸ್ಥೆಯ ಬೆಂಬಲಿಗರಾಗಿದ್ದರೂ, ಅವರು ಅಸ್ಪೃಶ್ಯತೆಯನ್ನು ಪಾಪವೆಂದು ಪರಿಗಣಿಸಿದರು ಎಂದು ಹೇಳಲಾಗುತ್ತದೆ. ಇದರ ಕುರಿತು ನಟಿ ಮಾತನಾಡಿದ್ದಾರೆ.
ನೀವು ಯಾವ ಕ್ಷೇತ್ರದ ಕುರಿತು ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತೀರಿ ಎಂದು ಸಂದರ್ಶಕರು ಕೇಳಿದಾಗ ನಟಿ, ಆ ವಿಷಯವನ್ನು ನಾನು ಹೇಳುತ್ತೇನೆ. ಇದು ಸ್ವಲ್ಪ ಟ್ರಿಕ್ಕಿ ಆಗಿರುವ ಕಾರಣ, ಅದರ ಬಗ್ಗೆ ನನಗೆ ಹೆಚ್ಚಿಗೆ ಏನೂ ಕೇಳಬೇಡಿ. ನನ್ನ ಮಾತುಗಳನ್ನು ಜನರು ಹೇಗೆ ಸ್ವೀಕರಿಸುತ್ತಾರೆಯೋ ತಿಳಿದಿಲ್ಲ. ಆದ್ದರಿಂದ ಇದರ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ ಎನ್ನುತ್ತಲೇ ಗಾಂಧೀಜಿ ಮತ್ತು ಅಂಬೇಡ್ಕರ್ ಜೀವನದ ಕುರಿತು ಎಂದು ಹೇಳಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಭಾರತೀಯ ಸಂವಿಧಾನದ ಸಂಸ್ಥಾಪಕ ಬಿಆರ್ ಅಂಬೇಡ್ಕರ್ ಅವರು ಜಾತಿವಾದದ ಬಗ್ಗೆ ತಮ್ಮ ಅಭಿಪ್ರಾಯಗಳ ಬಗ್ಗೆ ಚರ್ಚೆ ನಡೆಸುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ನಟಿ ಹೇಳಿದರು.
ಬಾಲಿವುಡ್ ಪ್ರತಿಯೊಬ್ಬ ತಾರೆಗೂ ಒಂದೊಂದು ರೇಟ್ ಇದೆ, ಅವ್ರು ರೇಷನ್ ಕಾರ್ಡ್ ಇದ್ದಂಗೆ: ಜಾಹ್ನವಿ ಓಪನ್ ಮಾತು
ಈ ಬಗ್ಗೆ ಇನ್ನಷ್ಟು ಹೇಳಿದ ನಟಿ, ಅಂಬೇಡ್ಕರ್ ಅವರಿಗೆ ತಮ್ಮ ನಿಲುವು ಏನು ಎಂಬುದು ಮೊದಲಿನಿಂದಲೂ ಸ್ಪಷ್ಟವಾಗಿತ್ತು. ಮತ್ತು ಅವರು ನಿಷ್ಠುರವಾಗಿದ್ದರು ಎಂದು ನಾನು ಭಾವಿಸುತ್ತೇನೆ. ಆದರೆ ಗಾಂಧಿಯವರ ಜಾತಿಭೇದ ಕುರಿತು ವಿಷಯ ಹೆಚ್ಚು ಹೆಚ್ಚು ತೆರೆದುಕೊಂಡಂತೆ ಅವರ ದೃಷ್ಟಿಕೋನವು ವಿಕಸನಗೊಳ್ಳತೊಡಗಿತು. ಹಲವು ವಿಷಯಗಳಲ್ಲಿ ಇವರಿಬ್ಬರ ನಿಲುವು ಬೇರೆ ಬೇರೆಯಾಗುತ್ತಾ ಬಂದಿತು. ಇವರಿಬ್ಬರೂ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎನ್ನುವುದು ನಿಜವಾದರೂ ಪರಸ್ಪರ ವಿಭಿನ್ನ ನಿಲುವು ಇರುವ ಬಗ್ಗೆ ಕುತೂಹಲ ನನ್ನಲ್ಲಿ ಮನೆ ಮಾಡಿದೆ. ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆ ಎಂದಿದ್ದಾರೆ. ಇದೇ ವೇಳೆ ಜಾತಿ ಪದ್ಧತಿಯ ಕುರಿತು ನಟಿಗೆ ಪ್ರಶ್ನೆ ಕೇಳಲಾಯಿತು. ನಿಮ್ಮ ಮನೆಯಲ್ಲಿ ಇದರ ಬಗ್ಗೆ ಮಾತನಾಡುತ್ತಿದ್ದರೇ ಎಂದಾಗ, ನಟಿ ಇಲ್ಲವೇ ಇಲ್ಲ. ಇವುಗಳಿಗೆ ನಮ್ಮ ಮನೆಯಲ್ಲಿ ಅವಕಾಶವೇ ಇಲ್ಲ ಮಾತ್ರವಲ್ಲದೇ ನಾನು ಕಲಿತಿರುವ ಶಾಲೆಯಲ್ಲಿಯೂ ಇವುಗಳ ಚರ್ಚೆ ಬರಲಿಲ್ಲ ಎಂದರು.
ನಟಿಯ ಈ ತಿಳಿವಳಿಕೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂತಹ ತಿಳುವಳಿಕೆ ಮತ್ತು ಅಧ್ಯಯನದ ಮಟ್ಟವನ್ನು ನೋಡುವುದು ಬಹಳ ಅಪರೂಪ. ಬಹಳ ಅಚ್ಚರಿ ಮೂಡಿಸುತ್ತದೆ. ಅದೂ ಕೂಡ ಹೊಸ ತಲೆಮಾರಿನ ಬಾಲಿವುಡ್ ನಟಿ ಈ ರೀತಿ ಮಾತನಾಡುತ್ತಿದ್ದಾರೆ. ತಾವು ಮಾತನಾಡುತ್ತಿರುವ ವಿಚಾರದ ಬಗ್ಗೆಯೂ ಆಕೆಗೆ ಚೆನ್ನಾಗಿ ಗೊತ್ತಿದ್ದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ವೋಟಿಂಗ್ ದಿನವೂ ಚಿತ್ರದ ಪ್ರಮೋಷನ್: ಜಾಹ್ನವಿ ಡ್ರೆಸ್ನಲ್ಲೇ ಸಿನಿಮಾ ಹಾಡು!