ಅನುಪಮ್ ಖೇರ್ ಅವರ ತಾಯಿಯ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಮುಗ್ಧತೆ, ಪ್ರೀತಿಯಿಂದ ಮಕ್ಕಳನ್ನು ವಿಚಾರಿಸಿಕೊಳ್ಳುವ ಆಕೆಗೆ ಗೊತ್ತಿಲ್ಲದಂತೆ ಅನುಪಮ್‌ ಖೆರ್ ಇವುಗಳನ್ನು ಶೂಟ್ ಮಾಡಿ ಇನ್ಸ್ಟಗ್ರಾಮ್‌ನಲ್ಲಿ ಹಾಕುತ್ತಾರೆ.

ಅನುಪಮ್ ಖೇರ್ ತಮ್ಮ ತಾಯಿಯ ಪುಟ್ಟ ಪುಟ್ಟ ವಿಡಿಯೋಗಳನ್ನು ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡುತ್ತಾರೆ. ಅದಕ್ಕೆ ಲಕ್ಷಾಂತರ ಲೈಕುಗಳು, ಸಾವಿರಾರು ಕಾಮೆಂಟ್‌ಗಳು. ಅನುಪಮ್ ಖೇರ್ ಪ್ರಖ್ಯಾತ ನಟ ಎಂಬ ಕಾರಣಕ್ಕಷ್ಟೇ ಅವರ ತಾಯಿ ಫೇಮಸ್ ಆಗಿದ್ದಾರೆ ಅಂದುಕೋಬೇಡಿ. ಅದರ ಹಿಕಮತ್ತೇ ಬೇರೆ ಇದೆ. ಮೊದಲು ಇವರ ಪ್ರೀತಿಯ, ಅನುಬಂಧದ, ಜೀವನಪ್ರೀತಿ ಉಕ್ಕಿಸುವ ಕತೆಯನ್ನು ಕೇಳಿ.

Add Asianetnews Kannada as a Preferred SourcegooglePreferred

ಸಣ್ಣವರಿದ್ದಾಗ, ಅನುಪಮ್ ಅವರನ್ನು ಅವರ ತಾಯಿಯೇ ಸ್ಕೂಲಿಗೆ ಬಿಡುತ್ತಿದ್ದರಂತೆ. ಪ್ರತಿದಿನವೂ, ಸ್ಕೂಲಿನ ಗೇಟಿನಲ್ಲಿ ನಿಂತು ಬೀಳ್ಕೊಡುವಾಗ, ಇವತ್ತೇ ನಿನ್ನ ಜೀವನದ ಬೆಸ್ಟ್ ಡೇ- ಎಂದು ಹೇಳಿ ತಾಯಿ ಬೀಳ್ಕೊಡುತ್ತಿದ್ದರಂತೆ. ಅದು ಹಾಗೇ ಆಗುತ್ತಿತ್ತು. ತಾಯಿಯ ಮಾತು, ಯಾವುದೇ ಕಷ್ಟವನ್ನು ಅನುಪಮ್ ಅವರಿಂದ ಮರೆಸಿಬಿಡುತ್ತಿತ್ತು. ಪ್ರತಿಯೊಂದು ದಿನವನ್ನೂ ಬೆಸ್ಟ್ ಡೇ ಅಂತ ಅನುಭವಿಸುವಂತೆ ಮಾಡುತ್ತಿತ್ತು. ಕನಸು ಕಾಣುವಂತೆ ಮಾಡುತ್ತಿತ್ತು. ಅವರು ಬಡತನದಲ್ಲಿದ್ದರು. ಆದರೆ ಬಡತನ ಗಮನಕ್ಕೆ ಬರದಂತೆ ಮಾಡುತ್ತಿತ್ತು. ಅನುಪಮ್ ಅವರ ತಂದೆಗೆ ಆಗ ಬರುತ್ತಿದ್ದುದು ತಿಂಗಳಿಗೆ ೯೦ ರೂಪಾಯಿ ಸಂಬಳ. ಅದರಲ್ಲೇ ಜೀವನ ನಡೆಯಬೇಕಾಗಿತ್ತು. ಅನುಪಮ್ ಒಳ್ಳೆಯ ಸ್ಕೂಲಿಗೆ ಹೋಗಿ ಕಲಿಯಬೇಕಿದ್ದರೆ, ಅವರ ತಾಯಿ ತಮ್ಮ ಒಡವೆಗಳನ್ನು ಮಾರಬೇಕಾಗಿ ಬಂತು.

ಆದ್ರೆ ತಾಯಿಯ ಒಡವೆಗಳಿಗೆ ಅನುಪಮ್ ನ್ಯಾಯ ಸಲ್ಲಿಸಲಿಲ್ಲ! ಯಾಕೆಂದರೆ ಅವರು ಕಲಿಯುವುದರಲ್ಲಿ ಅಂಥ ಉತ್ತಮ ಸ್ಟೂಡೆಂಟ್ ಆಗಿರಲಿಲ್ಲ. ಅನುಪಮ್ ಅವರ ತಂದೆ ಯಾವಾಗಲಾದರೂ ತನ್ನ ಮಗನನ್ನು ಹೊಗಳಿದರೆ, 'ಹೆಚ್ಚು ಹೊಗಳೋಕೆ ಹೋಗಬೇಡಿ' ಎಂದು ತಾಯಿ ಎಚ್ಚರಿಸುತ್ತಿದ್ದರು. ಅಂದರೆ ಹೊಗಳಿಕೆಗೆ ತುತ್ತಾಗಿ ಮಗ ದಾರಿ ತಪ್ಪದಿರಲಿ ಎಂಬ ಮುನ್ನೆಚ್ಚರಿಕೆ.

ಎಲ್ಲಿದ್ದೆ ಇಷ್ಟುವರ್ಷ ಅಂದಿದ್ರು ರಿಷಬ್‌, ಕಣ್ತುಂಬಿ ಬಂತು : ಗಾನವಿ ಲಕ್ಷ್ಮಣ್‌ ...

ಖೇರ್ ವರ ವ್ಯಕ್ತಿತ್ವ ರೂಪಿಸುವುದರಲ್ಲಿ ಅವರ ತಾಯಿಯ ಪಾತ್ರವೇ ಮಹತ್ವದ್ದು. ಒಮ್ಮೆ ಅವರ ಸ್ಕೂಲಿಗೆ ಒಬ್ಬ ಸಾಧು ಸನ್ಯಾಸಿ ಬಂದಿದ್ದರು. ಅವರಿಗೆ ಕೊಡೋಕೆ ಅಂತ ಅನುಪಮ್ ಅವರ ತಾಯಿ ಮಗನಿಗೆ ೫ ಪೈಸೆ ಕೊಟ್ಟಿದ್ದರು. ಮಗ ಮಹಾರಾಜ, ಆ ಸನ್ಯಾಸಿಗೆ ಅದನ್ನು ಕೊಡುವ ಬದಲು ಅದರಲ್ಲಿ ಎರಡು ಪೈಸೆ ಖರ್ಚು ಮಾಡಿ ಮಿಠಾಯಿ ತಿಂದು, ಉಳಿದ ಮೂರು ಪೈಸೆಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ತಾಯಿ ಮಗನ ಬ್ಯಾಗು ತಲಾಶು ಮಾಡಿದಾಗ ಹಣ ಪತ್ತೆಯಾಯಿತು. ವಿಷಯವೆಲ್ಲ ತಾಯಿಗೆ ತಿಳಿಯಿತು. ತಾಯಿ, ಮಗನನ್ನು ಮೂರು ಗಂಟೆ ಮನೆಯಿಂದ ಆಚೆ ನಿಲ್ಲಿಸಿದರು. ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಬಳಿಕವೇ ಅವರು ಮಗನನ್ನು ಒಳಗೆ ಬಿಟ್ಟದ್ದು. ಹೀಗೆ ಮಗನಲ್ಲಿ ನೇರವಂತಿಕೆ, ಸತ್ಯವಂತಿಕೆ ಕಲಿಸಿದವಳು ತಾಯಿ.

View post on Instagram

ಅನುಪಮ್ ನಟನಾಗುವ ಆಸೆಯಿಂದ ಮುಂಬಯಿಗೆ ಬಂದಾಗ ಅವರ ಕೈಯಲ್ಲಿ ಇದ್ದುದು ಖಾಲಿ ೩೭ ರೂಪಾಯಿ. ಅದೆಲ್ಲ ಖರ್ಚಾಗಿ ಹೋದ ಬಳಿಕ ಅವರು, ಅವರಿವರು ಕೊಟ್ಟದ್ದನ್ನು ತಿಂದು ಫ್ಲ್ಯಾಟ್‌ಫಾರಂನಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದರು. ಆದರೆ ಈ ವಿಚಾರವನ್ನು ತಾಯಿಗೆ ಹೇಳಲಿಲ್ಲ. ತಾಯಿ ಕೂಡ, ತಾನು ಅಸೌಖ್ಯ ಬಿದ್ದಾಗ ಮಗನಿಗೆ ಹೇಳಲಿಲ್ಲ. ಹೀಗೆ ಪ್ರತಿಯೊಬ್ಬರೂ ಇನ್ನೊಬ್ಬನಿಗೆ ಹೊರೆಯಾಗಲು ಇಷ್ಟಪಡಲಿಲ್ಲ. ಅನುಪಮ್‌ಗೆ ಫಿಲಂಗಳು ಒಂದರ ಮೇಲೆ ಒಂದರಂತೆ ಸಿಗಲು ಶುರುವಾದಾಗ ತಾಯಿ ಹೇಳಿದ್ದು ಹೀಗೆ- ಎಷ್ಟೇ ಎತ್ತರಕ್ಕೆ ಹೋದರೂ ವಿನಯವಂತನಾಗಿರು.

ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸುತ್ತಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್! ...

ತಂದೆ ತೀರಿಕೊಂಡ ಬಳಿಕ ತಾಯಿ- ಮಗ ಇನ್ನೂ ಹತ್ತಿರವಾದರು. ತಾಯಿ ತನ್ನ ಸಂಗಾತಿಯನ್ನೂ, ಮಗ ತನ್ನ ಬೆಸ್ಟ್ ಫ್ರೆಂಡನ್ನೂ ಕಳೆದುಕೊಂಡಿದ್ದರು. ತಂದೆಯ ಶ್ರಾದ್ಧದ ಕೊನೆಯ ದಿವಸ, ಬೇಜಾರಿನಲ್ಲಿ ಕಳೆಯುವ ಬದಲು, ಸಂಭ್ರಮದಿಂದ ಕಳೆಯಲು ಅವರು ನಿರ್ಧರಿಸಿದರು. ಬಣ್ಣಬಣ್ಣದ ಬಟ್ಟೆ ಧರಿಸಿದರು. ರಾಕ್ ಬ್ಯಾಂಡ್‌ ಕರೆಸಿದರು. ತಾಯಿ ತನ್ನ ನೆನಪುಗಳನ್ನು ಹಂಚಿಕೊಂಡರು- ತನ್ನ ಗಂಡ ಎಂಥ ಅದ್ಭುತ ವ್ಯಕ್ತಿಯಾಗಿದ್ದ ಎಂಬುದನ್ನು ಹಂಚಿಕೊಂಡಳು.

ನಂತರ ಅನುಪಮ್ ಹೇಳುವುದು ಹೀಗೆ- ಆಮೇಲೆ ನನಗೆ ನನ್ನಮ್ಮ ಬೆಸ್ಟ್ ಫ್ರೆಂಡೇ ಆಗಿಬಿಟ್ಟಳು. ನನ್ನೊಡನೆ ಅವಾರ್ಡ್ ಫಂಕ್ಷನ್‌ಗೆಲ್ಲಾ ಬಂದಳು. ನನ್ನ ಫ್ರೆಂಡ್‌ಗಳ ಜೊತೆ ಮಾತನಾಡುತ್ತಿದ್ದಳು. ಒಮ್ಮೆ ಹೀಗೆ ಮಾತಾಡುತ್ತಿದ್ದಾಗ ಆಕೆಗೆ ಅರಿವಿಲ್ಲದಂತೆ ಕ್ಯಾಮೆರಾದಲ್ಲಿ ಶೂಟ್‌ ಮಾಡಿದೆ. ನಂತರ ಅದನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡಿದೆ. ಅದು ವೈರಲ್ ಆಗಿಬಿಟ್ಟಿತು!

ನಂತರ ಒಂದೊಂದಾಗಿ ಆಕೆಯ ಮಾತು, ವರ್ತನೆಗಳನ್ನು ಆಕೆಗೇ ಗೊತ್ತಿಲ್ಲದ ಹಾಗೆ ಶೂಟ್ ಮಾಡಿ ಆನ್‌ಲೈನ್‌ನಲ್ಲಿ ಹಾಕಲು ಆರಂಭಿಸಿದೆ. ಅದು ಎಷ್ಟು ಪಾಪ್ಯುಲರ್ ಆಗಿಬಿಟ್ಟಿತು ಎಂದರೆ, ನನ್ನ ಪರಿಚಯದವರು ನನ್ನನ್ನು ಮಾತಾಡಿಸುವ ಮುನ್ನವೇ ನನ್ನ ತಾಯಿಯ ವಿಡಿಯೋ ನೋಡಿದ್ದನ್ನು ಹೇಳಿ ಆಕೆಯ ಆರೋಗ್ಯ ಇತ್ಯಾದಿ ವಿಚಾರಿಸಿಕೊಳ್ಳುತ್ತಿದ್ದರು! ಇದು ತಾಯಿಗೆ ಗೊತ್ತೇ ಇರಲಿಲ್ಲ. ಇತ್ತಚೆಗೆ ಅಪರಿಚಿತರು ಕೂಡ ಬೀದಿಯಲ್ಲಿ ಆಕೆಯನ್ನು ಕಂಡಾಗ ಆಕೆಯನ್ನು ವಿಚಾರಿಸಿಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಆಕೆಗೆ ನನ್ನ ತುಂಟತನ ಚೇಷ್ಟೆಗಳೆಲ್ಲ ಗೊತ್ತಾಗಿವೆ. ಅಪರಿಚಿತರೆಲ್ಲ ಆಕೆಯ ಜೊತೆ ಸೆಲ್ಫಿ ಕೇಳುತ್ತಿದ್ದಾರೆ! ಹೀಗಾಗಿ ಆಕೆ ನಾನು ಕ್ಯಾಮೆರಾ ತೆಗೆದ ಕೂಡಲೆ ಏನು ಮಾಡ್ತಿದೀಯಾ ಅಂತ ಹುಸಿಮುನಿಸಿನಿಂದ ವಿಚಾರಿಸಿಕೊಳ್ತಾಳೆ.

ಹೀಗಾಗಿ ಇತ್ತೀಚೆಗೆ ಆಕೆಯನ್ನು ಶೂಟ್ ಮಾಡುವುದು ಕಷ್ಟವಾಗಿದೆ. ನಾನು ಭೇಟಿಯಾದ ಕೂಡಲೇ ಆಕೆ, 'ಈಗ ಕ್ಯಾಮೆರಾ ಎಲ್ಲಿ ಅಡಗಿಸಿ ಇಟ್ಟಿದೀಯಾ?' ಅಂತ ಕೇಳ್ತಾಳೆ!

ದರ್ಶನ್‌ ಕ್ಯಾಮೆರಾ ತೆಗೆದ್ರೆ ಬಂಡಿಪುರದಲ್ಲಿ ಈ ಹುಲಿ ಕಾಣಿಸಿಕೊಳ್ಳಬೇಕು! ...