ಎಲೋನ್ ಮಸ್ಕ್ ಅವರ 'ಗ್ರಾಕ್' (Grok) ಎಐ ಇತ್ತೀಚೆಗೆ ಮಾಡಿದ ಒಂದು ದೊಡ್ಡ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳಿನಿಂದ ಸುದ್ದಿಯನ್ನು ಅನುವಾದಿಸುವಾಗ ಎಐ ತಂತ್ರಜ್ಞಾನವು, ನಟ ವಿಜಯ್ ಅವರನ್ನು 'ಮುಖ್ಯಮಂತ್ರಿ' ಎಂದು ಸಂಬೋಧಿಸಿದ್ದಲ್ಲದೆ, ಅವರ ಪಾರ್ಥಿವ ಶರೀರಕ್ಕೆ ನಿರ್ದೇಶಕ ಭಾರತಿರಾಜ ಅವರು ಅಂತಿಮ ನಮನ ಸಲ್ಲಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದೆ.
ಎಐ ಎಡವಟ್ಟು: ಜೀವಂತವಾಗಿರುವ ನಟ ವಿಜಯ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ 'ಗ್ರಾಕ್' ಎಐ!
ಎಲೋನ್ ಮಸ್ಕ್ ಅವರ 'ಗ್ರಾಕ್' (Grok) ಎಐ ಇತ್ತೀಚೆಗೆ ಮಾಡಿದ ಒಂದು ದೊಡ್ಡ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳಿನಿಂದ ಸುದ್ದಿಯನ್ನು ಅನುವಾದಿಸುವಾಗ ಎಐ ತಂತ್ರಜ್ಞಾನವು, ನಟ ವಿಜಯ್ ಅವರನ್ನು 'ಮುಖ್ಯಮಂತ್ರಿ' ಎಂದು ಸಂಬೋಧಿಸಿದ್ದಲ್ಲದೆ, ಅವರ ಪಾರ್ಥಿವ ಶರೀರಕ್ಕೆ ನಿರ್ದೇಶಕ ಭಾರತಿರಾಜ ಅವರು ಅಂತಿಮ ನಮನ ಸಲ್ಲಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದೆ.
ವಾಸ್ತವದಲ್ಲಿ ತಮಿಳು ನಟ ವಿಜಯ್ ಆರೋಗ್ಯವಾಗಿದ್ದಾರೆ ಮತ್ತು ಅವರು ಇತ್ತಿಚೆಗಷ್ಟೇ ರಾಜಕೀಯಕ್ಕೆ ಕಾಲಿಟ್ಟು ತಮಿಳುನಾಡಿದ ಮುಖ್ಯಮಂತ್ರಿ ಕೂಡ ಆಗಿದ್ದಾರೆ. ತಾಂತ್ರಿಕ ದೋಷದಿಂದಾಗಿ ಎಐ ಸೃಷ್ಟಿಸಿದ ಈ ಅಶುಭ ಮತ್ತು ಸುಳ್ಳು ಸುದ್ದಿಯು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮತ್ತು ವಿಜಯ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. "ಸುಳ್ಳು ಸುದ್ದಿಗಳನ್ನು ಮತ್ತು ಗೊಂದಲವನ್ನು ಸೃಷ್ಟಿಸುವ ಇಂತಹ ಎಐ ತಂತ್ರಜ್ಞಾನ ನಮಗೆ ಬೇಕಿಲ್ಲ" ಎಂದು ಜನರು ಗ್ರಾಕ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅರೆಬರೆ ಮಾಹಿತಿಯೊಂದಿಗೆ ಸುದ್ದಿ ನೀಡುವ ಎಐ ಅಪಾಯಕಾರಿ ಎಂಬ ಚರ್ಚೆ ಈಗ ಶುರುವಾಗಿದೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಯುಗಾಂತ್ಯ: 'ನಿರ್ದೇಶಕರ ಹಿಮಾಲಯ' ಭಾರತಿರಾಜ ಇನ್ನಿಲ್ಲ!
ದಕ್ಷಿಣ ಭಾರತದ ಚಿತ್ರರಂಗದ ದೈತ್ಯ ಪ್ರತಿಭೆ, ಕೇವಲ ತಮಿಳು ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗವೇ ಹೆಮ್ಮೆಯಿಂದ ನೋಡುತ್ತಿದ್ದ "ಇಯಕ್ಕುನ್ನರ್ ಇಮಯಂ" (ನಿರ್ದೇಶಕರ ಹಿಮಾಲಯ) ಖ್ಯಾತಿಯ ಭಾರತಿರಾಜ (Bharathiraja) ಅವರು ಇಂದು ನಮ್ಮನ್ನು ಅಗಲಿದ್ದಾರೆ. 84 ವರ್ಷ ವಯಸ್ಸಿನ ಈ ಮಹಾನ್ ಚೇತನ, ಚೆನ್ನೈನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಗಳಿಂದಾಗಿ ಬುಧವಾರ ಮುಂಜಾನೆ ಕೊನೆಯುಸಿರೆಳೆದರು. ಈ ಸುದ್ದಿಯು ಚಿತ್ರರಂಗದಾದ್ಯಂತ ಕತ್ತಲೆಯ ಮೋಡ ಕವಿಯುವಂತೆ ಮಾಡಿದೆ.
ಸಿನಿಮಾ ಎಂಬ ಕಾವ್ಯದ ಮಾಂತ್ರಿಕ:
ಭಾರತಿರಾಜ ಎಂದರೆ ಕೇವಲ ಒಬ್ಬ ನಿರ್ದೇಶಕರಲ್ಲ, ಅವರು ಒಂದು ಅದ್ಭುತ ಸಿನಿಮಾ ಶಾಲೆ. 1977ರಲ್ಲಿ '16 ವಯತಿನಿಲೆ' ಚಿತ್ರದ ಮೂಲಕ ಅವರು ಕ್ಯಾಮೆರಾ ಹಿಡಿದಾಗ, ಚಿತ್ರರಂಗದ ದಿಕ್ಕೇ ಬದಲಾಯಿತು. ಸ್ಟುಡಿಯೋಗಳ ಒಳಗಿದ್ದ ಸಿನಿಮಾವನ್ನು ಹಳ್ಳಿಗಳ ಮಣ್ಣಿನ ವಾಸನೆಗೆ ತಂದು ನಿಲ್ಲಿಸಿದ ಕೀರ್ತಿ ಇವರದ್ದು. ಕಮಲ್ ಹಾಸನ್, ರಜನಿಕಾಂತ್ ಅಂತಹ ಸ್ಟಾರ್ ನಟರನ್ನು ಅತ್ಯಂತ ನೈಜವಾಗಿ ತೆರೆಯ ಮೇಲೆ ತೋರಿಸಿದ ಮಾಂತ್ರಿಕ ಇವರು. 'ಸಿಗಪ್ಪು ರೋಜಕ್ಕಲ್', 'ಅಲೈಗಲ್ ಓವತಿಲ್ಲೈ', 'ಮುದಲ್ ಮರಿಯಾತೈ' ಅಂತಹ ಸುಮಾರು 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ಅವರು ಸಿನಿಮಾ ಲೋಕದ ಧ್ರುವತಾರೆಯಾದರು.
ನಿರ್ದೇಶನದ ಜೊತೆ ನಟನೆಯಲ್ಲೂ ಅಪ್ರತಿಮ:
ನಿರ್ದೇಶಕನಾಗಿ ಗೆದ್ದ ಭಾರತಿರಾಜ ಅವರು ಮಣಿರತ್ನಂ ಅವರ 'ಆಯುತ ಎಳುತ್ತು' ಚಿತ್ರದ ಮೂಲಕ ನಟನಾಗಿಯೂ ಸೈ ಎನಿಸಿಕೊಂಡರು. ಇತ್ತೀಚಿನ ವರ್ಷಗಳಲ್ಲಿ ಅವರು 'ತಿರುಚಿತ್ರಂಬಲಂ' ಮತ್ತು ವಿಜಯ್ ಸೇತುಪತಿಯ 'ಮಹಾರಾಜ' ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಇಂದಿನ ತಲೆಮಾರಿನ ಪ್ರೇಕ್ಷಕರನ್ನೂ ಮಂತ್ರಮುಗ್ಧರನ್ನಾಗಿಸಿದ್ದರು. ಅವರು ನಟಿಸಿದ ಕೊನೆಯ ಚಿತ್ರ 'ಪುಲಾವರ್' ಇನ್ನು ಬಿಡುಗಡೆಯಾಗಬೇಕಿದೆ.
ಕನ್ನಡದ ನಂಟು ಮತ್ತು ಪುಟ್ಟಣ್ಣ ಕಣಗಾಲ್:
ಭಾರತಿರಾಜ ಅವರಿಗೂ ಮತ್ತು ಕರ್ನಾಟಕಕ್ಕೂ ಒಂದು ಅವಿನಾಭಾವ ಸಂಬಂಧವಿತ್ತು. ಅವರು ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಕನ್ನಡದ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಪುಟ್ಟಣ್ಣ ಅವರ ಚಿತ್ರಗಳಲ್ಲಿದ್ದ ಆ ನೈಜತೆ ಮತ್ತು ಕಾವ್ಯಾತ್ಮಕ ಗುಣಗಳು ಭಾರತಿರಾಜ ಅವರ ಚಿತ್ರಗಳಲ್ಲೂ ಮಿನುಗುತ್ತಿದ್ದವು. ದುರಾದೃಷ್ಟವಶಾತ್ ಅವರು ನೇರವಾಗಿ ಕನ್ನಡದಲ್ಲಿ ಯಾವುದೇ ಸಿನಿಮಾ ನಿರ್ದೇಶಿಸದಿದ್ದರೂ, ಸ್ಯಾಂಡಲ್ವುಡ್ನ ಅನೇಕ ತಂತ್ರಜ್ಞರಿಗೆ ಅವರು ಸ್ಪೂರ್ತಿಯಾಗಿದ್ದರು.
ಕುಗ್ಗಿಸಿದ ವೈಯಕ್ತಿಕ ದುಃಖ:
ತನಿಖಾ ಮೂಲಗಳ ಪ್ರಕಾರ, ಕಳೆದ ಮಾರ್ಚ್ನಲ್ಲಿ ಅವರ ಪುತ್ರ ಮನೋಜ್ ಅವರ ಅಕಾಲಿಕ ನಿಧನವು ಭಾರತಿರಾಜ ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳಷ್ಟು ಕುಗ್ಗಿಸಿತ್ತು. ಪುತ್ರನ ಅಗಲಿಕೆಯ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿ, ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
ತಾರೆಯರ ಕಂಬನಿ:
ಭಾರತಿರಾಜ ಅವರ ನಿಧನಕ್ಕೆ ನಟಿ ಖುಷ್ಬೂ ಸುಂದರ್ ಅತ್ಯಂತ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. "ನನ್ನ ಪ್ರೀತಿಯ ನಿರ್ದೇಶಕರು ಇನ್ನು ಮುಂದೆ ಇಲ್ಲ ಎಂದು ಕೇಳಲು ನೋವಾಗುತ್ತಿದೆ. ಅವರು ಯಾವಾಗಲೂ ನನ್ನನ್ನು 'ಎರಡು ಜುಟ್ಟು ಹಾಕಿಕೊಂಡು ಬಾ, ನಿನ್ನನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಬೇಕು' ಎನ್ನುತ್ತಿದ್ದರು. ಅವರ ಆ ಮಾತು ಈಗ ನನಸಾಗದ ಕನಸಾಗಿಯೇ ಉಳಿಯಿತು" ಎಂದು ಎಕ್ಸ್ (ಟ್ವಿಟ್ಟರ್) ನಲ್ಲಿ ಬರೆದುಕೊಂಡಿದ್ದಾರೆ.
ತಮಿಳು ಚಿತ್ರ ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಭಾರತಿರಾಜ ಅವರ ನಿಧನದಿಂದ ಭಾರತೀಯ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಿದೆ. ಅವರ ಸಿನಿಮಾಗಳು ಮತ್ತು ಅವರ ಸೃಜನಶೀಲತೆ ಎಂದೆಂದಿಗೂ ಅಮರ.


