'ಧುರಂಧರ್' ಸಿನಿಮಾದ ಮೂಲಕ ಅಬ್ಬರಿಸುತ್ತಿರುವ ನಿರ್ದೇಶಕ ಆದಿತ್ಯ ಧರ್, ರಾಮ್ ಚರಣ್ ಅವರಿಗೆ ಒಂದು ಬೃಹತ್ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಇದು ಒಂದು ಹೈ-ವೋಲ್ಟೇಜ್ ಮಲ್ಟಿ-ಸ್ಟಾರರ್ ಸಿನಿಮಾವಾಗಿದ್ದು, ಬಾಲಿವುಡ್‌ನ ಬೇರೆ ಸ್ಟಾರ್‌ ನಟರು ಕೂಡ ಇದರಲ್ಲಿ ಇರಲಿದ್ದಾರಂತೆ. ಏನೆಲ್ಲಾ ಸುದ್ದಿ ಇದೆ ನೋಡಿ.. 

ರಾಮ್ ಚರಣ್ ಮುಂದಿನ ಪ್ಲಾನ್ ಏನು? 

'ಆರ್‌.ಆರ್‌.ಆರ್' ಸಿನಿಮಾದ ಜಾಗತಿಕ ಯಶಸ್ಸಿನ ನಂತರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅವರ ಕ್ರೇಜ್ ಆಕಾಶಕ್ಕೆ ಏರಿದೆ. ಸದ್ಯಕ್ಕೆ ಚರಣ್ ಅಭಿಮಾನಿಗಳು ಕಣ್ಣು ನೆಟ್ಟಿರುವುದು ಬುಚ್ಚಿಬಾಬು ಸನಾ ನಿರ್ದೇಶನದ 'ಪೆದ್ದಿ' ಸಿನಿಮಾದ ಮೇಲೆ. ಈ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬರಲಿದೆ ಎಂದು ಈಗಾಗಲೇ ಘೋಷಣೆಯಾಗಿದೆ. ಆದರೆ, ಈಗ ಸಿನಿ ಪ್ರಿಯರಲ್ಲಿ ಕಾಡುತ್ತಿರುವ ದೊಡ್ಡ ಕುತೂಹಲವೆಂದರೆ, 'ಪೆದ್ದಿ' ನಂತರ ಚರಣ್ ಯಾರ ಜೊತೆ ಕೈಜೋಡಿಸಲಿದ್ದಾರೆ ಎಂಬುದು!

ಸುಕುಮಾರ್ ಪ್ರಾಜೆಕ್ಟ್ ನಡುವೆ ಬಾಲಿವುಡ್ ಬಜಾರ್!

ಈ ಮೊದಲು ರಾಮ್ ಚರಣ್ ಮತ್ತು 'ಪುಷ್ಪ' ಖ್ಯಾತಿಯ ಸುಕುಮಾರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. 'ಪೆದ್ದಿ' ಮುಗಿದ ತಕ್ಷಣ ಚರಣ್, ಸುಕುಮಾರ್ ಸೆಟ್‌ಗೆ ಹೋಗಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಹೌದು, ಭಾರತದ ಘಟಾನುಘಟಿ ಬಾಲಿವುಡ್ ನಿರ್ದೇಶಕರು ಈಗ ರಾಮ್ ಚರಣ್ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದಾರೆ!

ಆದಿತ್ಯ ಧರ್ ಜೊತೆ ಬಿಗ್ ಮಲ್ಟಿ-ಸ್ಟಾರರ್?

'ಯೂರಿ: ದ ಸರ್ಜಿಕಲ್ ಸ್ಟ್ರೈಕ್' ಸಿನಿಮಾದ ಮೂಲಕ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದ ಹಾಗೂ ಈಗ 'ಧುರಂಧರ್' ಸಿನಿಮಾದ ಮೂಲಕ ಅಬ್ಬರಿಸುತ್ತಿರುವ ನಿರ್ದೇಶಕ ಆದಿತ್ಯ ಧರ್, ರಾಮ್ ಚರಣ್ ಅವರಿಗೆ ಒಂದು ಬೃಹತ್ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಇದು ಒಂದು ಹೈ-ವೋಲ್ಟೇಜ್ ಮಲ್ಟಿ-ಸ್ಟಾರರ್ ಸಿನಿಮಾವಾಗಿದ್ದು, ಬಾಲಿವುಡ್‌ನ ಬೇರೆ ಸ್ಟಾರ್‌ ನಟರು ಕೂಡ ಇದರಲ್ಲಿ ಇರಲಿದ್ದಾರಂತೆ. ಆದಿತ್ಯ ಧರ್ ಅಂತಹ ಸೆನ್ಸೇಷನಲ್ ಡೈರೆಕ್ಟರ್ ಜೊತೆ ಚರಣ್ ಒಂದಾದರೆ ಅದು ಕೇವಲ ಸಿನಿಮಾವಲ್ಲ, ಅದೊಂದು ಇಂಡಿಯನ್ ಸಿನೆಮಾ ಇತಿಹಾಸದ ಬಿಗ್ ಈವೆಂಟ್ ಆಗುವುದರಲ್ಲಿ ಸಂಶಯವಿಲ್ಲ.

ಬನ್ಸಾಲಿ ಎಂಬ ಬೃಹತ್ ಕನಸು!

ಇನ್ನು ಸಂಜಯ್ ಲೀಲಾ ಬನ್ಸಾಲಿ ಅವರ ಹೆಸರು ಕೇಳಿದರೆ ಸಾಕು, ಅಲ್ಲಿ ಭವ್ಯತೆ ಮತ್ತು ಅದ್ದೂರಿತನ ಎದ್ದು ಕಾಣುತ್ತದೆ. ಬನ್ಸಾಲಿ ಅವರು ಬಹಳ ದಿನಗಳಿಂದ 'ದಿ ಲೆಜೆಂಡ್ ಆಫ್ ಸುಹೇಲ್ ದೇವ್' ಎಂಬ ಐತಿಹಾಸಿಕ ಪ್ರಾಜೆಕ್ಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಾಡಿನ ಹಿನ್ನೆಲೆಯ ಈ ಐತಿಹಾಸಿಕ ಆಕ್ಷನ್ ಸಿನಿಮಾಗೆ ಚರಣ್ ಅವರೇ ಸೂಕ್ತ ಎಂಬುದು ಬನ್ಸಾಲಿ ಅವರ ಲೆಕ್ಕಾಚಾರ. ಬಹಳ ವರ್ಷಗಳ ಹಿಂದೆಯೇ ಈ ಬಗ್ಗೆ ಮಾತುಕತೆ ನಡೆದಿತ್ತಾದರೂ, ಈಗ ಅದು ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.

ಸುಕುಮಾರ್ ಸಿನಿಮಾ ಏನಾಗಬಹುದು?

ಇವೆಲ್ಲಾ ಸುದ್ದಿಗಳ ನಡುವೆ ರಾಮ್ ಚರಣ್ ಅಭಿಮಾನಿಗಳಿಗೆ ಒಂದು ಸಣ್ಣ ಆತಂಕವೂ ಇದೆ. ಬಾಲಿವುಡ್ ಪ್ರಾಜೆಕ್ಟ್‌ಗಳಿಗೆ ಚರಣ್ ಗ್ರೀನ್ ಸಿಗ್ನಲ್ ಕೊಟ್ಟರೆ, ಸುಕುಮಾರ್ ಸಿನಿಮಾ ತಡವಾಗಬಹುದೇ? ಅಥವಾ ಟಾಲಿವುಡ್‌ನಿಂದ ಚರಣ್ ಸ್ವಲ್ಪ ಕಾಲ ಬ್ರೇಕ್ ತಗೊಂಡು ಬಾಲಿವುಡ್‌ನಲ್ಲೇ ನೆಲೆ ನಿಲ್ಲುತ್ತಾರಾ? ಎನ್ನುವ ಚರ್ಚೆ ಜೋರಾಗಿದೆ.

ಆದರೆ, ಅಧಿಕೃತ ಘೋಷಣೆ ಬರುವವರೆಗೂ ಈ ಎಲ್ಲಾ ಸುದ್ದಿಗಳು ಗಾಂಧಿನಗರ ಮತ್ತು ಮುಂಬೈ ಸಿನಿ ಗಲ್ಲಿಯ ಗುಸುಗುಸು ಅಷ್ಟೇ. ಏನೇ ಆದರೂ, ಸದ್ಯಕ್ಕೆ ರಾಮ್ ಚರಣ್ ಅವರ ಸ್ಟಾರ್‌ಡಮ್ ಮಾತ್ರ ದಕ್ಷಿಣದಿಂದ ಉತ್ತರಕ್ಕೆ ಸಖತ್ ವೇಗವಾಗಿ ಹಬ್ಬುತ್ತಿದೆ. ಗ್ಲೋಬಲ್ ಸ್ಟಾರ್ ಕೈಯಲ್ಲಿರುವ ಈ ಸಾಲು ಸಾಲು ಆಫರ್‌ಗಳು ಅವರ ಅಭಿಮಾನಿಗಳಿಗಂತೂ ಹಬ್ಬದೂಟವನ್ನೇ ಬಡಿಸಿದೆ!