Asianet Suvarna News Asianet Suvarna News

Weekend With Ramesh: ವರಮಹಾಲಕ್ಷ್ಮಿ ಹಬ್ಬದಂದೇ ಪತ್ನಿಯ ತಾಳಿ ಮಾರಿದ್ದ ಪ್ರೇಮ್​! ಕಣ್ಣೀರಾದ ನಟ

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಪ್ರೇಮ್​, ತಮ್ಮ ಲವ್​ ಸ್ಟೋರಿ ಮತ್ತು ಪತ್ನಿಯ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ.
 

Actor Prem in Weekend with Ramesh shared his love story and his wife.
Author
First Published May 7, 2023, 5:39 PM IST

ಸೆಲೆಬ್ರಿಟಿಗಳ ಯಶಸ್ಸಿನ  ಬದುಕಿನ ಹಿಂದೆ ಹಲವಾರು ನೋವಿನ ಕಥೆಗಳು ಇರುತ್ತವೆ. ಅವರು ಯಾವುದೇ ಕ್ಷೇತ್ರದಲ್ಲಿ ಸೆಲೆಬ್ರಿಟಿಗಳು ಎಂದು ಗುರುತಿಸಿಕೊಂಡ ಮೇಲೆ ಅವರು ದೊಡ್ಡ ಸ್ಟಾರ್​ (Star) ಎನಿಸಿಕೊಳ್ಳುತ್ತಾರೆ. ಅದರಲ್ಲಿಯೂ ನಟನಾ ಪ್ರಪಂಚದಲ್ಲಿ ಬಣ್ಣದ ಬದುಕಿನ ಹಿಂದೆ ಅದೆಷ್ಟೋ ಕಹಿ ಘಟನೆಗಳು ಇರುತ್ತವೆ. ಇಂದು ಲಕ್ಷ, ಕೋಟಿ ಅಭಿಮಾನಿಗಳನ್ನು ಹೊಂದಲು ಅದೆಷ್ಟೋ ನಟ-ನಟಿಯರು ಅನುಭವಿಸಿರುವ ನೋವು, ಅವರ ಕಹಿ ಅನುಭವಗಳು ಅಷ್ಟಿಷ್ಟು ಇರುವುದಿಲ್ಲ.  ಅವರು ಒಂದು ಹಂತಕ್ಕೆ ಬಂದಾಗ ಜನ ಮುತ್ತಿಕೊಳ್ಳುತ್ತಾರೆ. ಆದರೆ ಅವರು ಆ ಹಂತವನ್ನು ತಲುಪಲು ಅವರು, ಅವರ ಕುಟುಂಬಸ್ಥರು ಮಾಡುವ ತ್ಯಾಗ, ಪಟ್ಟ ನೋವು, ಅನುಭವಿಸಿದ ಕಷ್ಟ ಎಲ್ಲವೂ ಬೆಳಕಿಗೆ ಬರುವುದೇ ಅಲ್ಲ. ಅಂಥ ಒಂದು ನೋವಿನ ಕಥೆಯನ್ನು ಪ್ರೇಮ್​ ಅಲಿಯಾಸ್​ ನೆನಪಿರಲಿ ಪ್ರೇಮ್​ ತೆರೆದಿಟ್ಟಿದ್ದಾರೆ.

‘ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದ ಸೀಸನ್​ 5ರಲ್ಲಿ  ಇದಾಗಲೇ ಹಲವಾರು ಕ್ಷೇತ್ರದ ಸಾಧಕರು ಬಂದು ತಮ್ಮ ಜೀವನದ ಪಯಣದ ಕುರಿತು ಮಾತನಾಡಿದ್ದಾರೆ.  ನಟಿ ರಮ್ಯಾ, ಪ್ರಭುದೇವ, ದತ್ತಣ್ಣ, ಡಾ ಸಿ ಎನ್ ಮಂಜುನಾಥ್, ಗುರುರಾಜ ಕರ್ಜಗಿ, ಸಿಹಿ ಕಹಿ ಚಂದ್ರು, ಅವಿನಾಶ್, ಧನಂಜಯ, ಮಂಡ್ಯ ರಮೇಶ್   ಆಗಮಿಸಿ ಹಲವಾರು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.  ಇಲ್ಲಿಯವರೆಗೆ 12 ಎಪಿಸೋಡ್‌ಗಳು ಪ್ರಸಾರ ಆಗಿದ್ದು, 13ನೇ ಎಪಿಸೋಡ್​ನ  ಅಂಗವಾಗಿ  ಪ್ರೇಮ್​ ಅವರು ಆಗಮಿಸಿ ತಮ್ಮ ಜೀವನದ ಹಲವಾರು ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಒಂದು ಅವರ ಕುತೂಹಲದ ಲವ್​ ಸ್ಟೋರಿ ಜೊತೆಗೆ ಪತ್ನಿ ಮಾಡಿದ ತ್ಯಾಗದ ಕುರಿತು ಮಾತನಾಡಿದ್ದಾರೆ.
 
 Weekend With Ramesh: ಹನುಮಂತನನ್ನು ಹಣೆ ಮೇಲೆ ನೋಡಲು ನಟ ಪ್ರೇಮ್​ ಹೀಗೆ ಮಾಡಿದ್ರಂತೆ!

 ಅಸಲಿಗೆ ಪ್ರೇಮ್​ ಅವರ ಮಧ್ಯಮ ಕುಟುಂಬದಿಂದ ಬಂದವರು. ಅವರ ಮನೆಯ ಕುಲಕಸುಬು ನೇಕಾರಿಕೆ. ನಟನೆಯ ಬಗ್ಗೆ ಅಪಾರ ಆಸಕ್ತಿ ಇದ್ದ ಪ್ರೇಮ್​ ಅವರು ಮೊದಲಿಗೆ ಕುಲಕಸಬಿನನ್ನೇ  ಮಾಡುತ್ತಿದ್ದರು. ಎಸ್‌ಎಸ್‌ಎಲ್ ಮುಗಿಯುವ ವೇಳೆ ಪ್ರೇಮ್ ಅವರು ಮಗ್ಗದಲ್ಲಿ ನೇಯುವ ಕಲೆ ಕಲಿತುಬಿಟ್ಟಿದ್ದರಂತೆ. ನಾನು ಏಳನೇ ಕ್ಲಾಸ್ ಓದುತ್ತಿದ್ದಾಗ, ನಮ್ಮ ಮನೆ ಬಳಿಯೇ ಟೊರಿನೋ ಫ್ಯಾಕ್ಟರಿ ಇತ್ತು. ಅಲ್ಲಿ ಕೆಲಸಕ್ಕೆ ಸೇರಿಕೊಂಡೆ. ಟೊರಿನೋ ಟ್ರೇಗಳನ್ನ ಬೇಕರಿ, ಹೋಟೆಲ್‌ಗಳಿಗೆ ಸಪ್ಲೈ (Hotel supply) ಮಾಡುತ್ತಿದ್ದೆ. ಆಗ ದಿನಕ್ಕೆ 7.50 ರೂಪಾಯಿ ಸಂಬಳ ತೆಗೆದುಕೊಂಡಿದ್ದೆ ಎಂದು ಹಳೇ ದಿನಗಳನ್ನು ಪ್ರೇಮ್ ನೆನಪಿಸಿಕೊಂಡಿದ್ದಾರೆ.

ಇದರ ಜೊತೆಗೆ ತಮ್ಮ ಕುತೂಹಲದ ಲವ್​ ಸ್ಟೋರಿ ಶೇರ್​ ಮಾಡಿಕೊಂಡಿದ್ದಾರೆ.  ತಮ್ಮ ಪತ್ನಿ ಜ್ಯೋತಿ ಮತ್ತು ತಾವು ಭೇಟಿಯಾಗಿರುವ ಬಗ್ಗೆ ಅವರು ಹಂಚಿಕೊಂಡಿದ್ದಾರೆ. 'ಜ್ಯೋತಿ ನನ್ನನ್ನು ಯಾವುದೋ ಮದುವೆ ಮನೆಯಲ್ಲಿ ನೋಡಿದ್ದರು. ಆ ಮದುವೆಯಲ್ಲಿ ವಧು-ವರರ ಜೊತೆ ನಾನು ಫೋಟೋ ತೆಗೆಸಿಕೊಂಡಿದ್ದೆ. ಜ್ಯೋತಿಯ ಸ್ನೇಹಿತೆ  ನನ್ನ ಫೋಟೋ ನೋಡಿ ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದರಂತೆ. ಜ್ಯೋತಿಗೆ ಅದಾಗಲೇ ನನ್ನ ಮೇಲೆ ಕ್ರಷ್​ ಆಗಿತ್ತು. ನನ್ನರೂಪ ನೋಡಿ  ಬಹಳ ಓದಿಕೊಂಡ ಹುಡುಗ ಇರಬೇಕು ಎಂದುಕೊಂಡಿದ್ದರಂತೆ. ನಂತರ ನನ್ನ ಬಳಿ ಬಂದು  ನೀವು ಟ್ಯೂಷನ್ ಮಾಡ್ತೀರಾ ಅಂತ ಕೇಳಿದ್ದರು. ಆಗ ನಾನು ನನ್ನ ತಂಗಿ ಮಾಡುತ್ತಾಳೆ ಎಂದಿದ್ದೆ. ಇಷ್ಟೆಲ್ಲಾ ಆದ  ಮೇಲೆ ಒಂದು ದಿನ ಆಕೆಯೇ ಬಂದು ನನ್ನ ಬಳಿ  ಪ್ರೇಮ ನಿವೇದನೆ ಮಾಡಿದ್ದರು' ಎಂದು ಪ್ರೇಮ್​ ನೆನಪಿಸಿಕೊಂಡಿದ್ದಾರೆ.

ಮನೆ ಒಡೆದು ಹಾಕಿದ್ರೂ ಪರಿಹಾರದ ಹಣ ಬೇಡ್ವೇ ಬೇಡ ಎಂದ ನಟಿ Kangana Ranaut

ಆ ಸಮಯದಲ್ಲಿ ನನಗೆ ಯಾರಾದರೂ ವಿಶೇಷ ಚೇತನ ಹುಡುಗಿ ಮದುವೆ ಆಗಬೇಕು ಎಂಬ ಆಸೆ ಇತ್ತು. ಅದಕ್ಕಾಗಿಯೇ ಜ್ಯೋತಿ (Jyothi) ಪ್ರೇಮ ನಿವೇದನೆ ಮಾಡಿಕೊಂಡಾಗ  ಕಮಿಟ್ ಆಗಿದ್ದೀನಿ ಅಂತ ಸುಳ್ಳು ಹೇಳಿಬಿಟ್ಟಿದ್ದೆ. ಆದರೂ  ಇಬ್ಬರ ಭೇಟಿ ಆಗುತ್ತಲಿತ್ತು. ನಿಧಾನಕ್ಕೆ ಲವ್​ ಶುರುವಾಯಿತು ಎಂದು ಪ್ರೇಮ್​ ಪ್ರೇಮದ ಆರಂಭದ ದಿನಗಳನ್ನು ಹೇಳಿಕೊಂಡಿದ್ದಾರೆ. ಆದರೆ ತಮಗಿದ್ದ ಕಷ್ಟ, ಬಡತನದ ಬಗ್ಗೆ ತಮಗೆ ಅರಿವಿದ್ದದ್ದನ್ನು ತಿಳಿಸಿದ ಪ್ರೇಮ್​, ಈ ಕುರಿತು ಜ್ಯೋತಿ ಅವರ ಬಳಿಯೂ ಹೇಳಿಕೊಂಡಿದ್ದರಂತೆ. ಅದಕ್ಕಾಗಿ ಅವರು, ಒಟ್ಟಿಗೇ ಎರಡು ವರ್ಷ ಸ್ನೇಹಿತರಂತೆ ಇರೋಣ. ಇಬ್ಬರೂ ಅಡ್ಜಸ್ಟ್​ ಆಗುತ್ತೇವೆ ಎಂದು ಗೊತ್ತಾದರೆ ಮದುವೆಯಾಗೋಣ ಎಂದಿದ್ದೆ. ಒಬ್ಬರ ಹಣೆಬರಹ ಇನ್ನೊಬ್ಬರಿಗೆ ತಿಳಿಯತ್ತೆ ಎಂದು ಹಾಗೆ ಹೇಳಿದ್ದೆ ಎಂದ ಪ್ರೇಮ್​  ನಂತರ ಆದ  ಕುತೂಹಲದ ತಿರುವಿನ ಬಗ್ಗೆ ತಿಳಿಸಿದ್ದಾರೆ.

ಇಬ್ಬರೂ ಸ್ನೇಹಿತರಾಗಿ ವರ್ಷವಾಗಿದ್ದಾಗಲೇ ಜ್ಯೋತಿ ಮನೆಯಲ್ಲಿ ವಿಷಯ ತಿಳಿದು ಗಂಡು ಹುಡುಕಲು ಶುರು ಮಾಡಿಬಿಟ್ಟಿದ್ದರು.  ಅದು  ಡಾ. ರಾಜ್​ಕುಮಾರ್ (Dr. Rajkumar) ಅಪಹರಣದ ಸಮಯವಾಗಿದ್ದರಿಂದ ಕರ್ಫ್ಯೂ ವಾತಾವರಣ ಇತ್ತು. ಇಂಥ ಸಂದರ್ಭದಲ್ಲಿಯೂ ಜ್ಯೋತಿ ತಮ್ಮನನ್ನು ಕರೆದುಕೊಂಡು ತಮ್ಮ ವಸ್ತುಗಳನ್ನು ತೆಗೆದುಕೊಂಡು ನಮ್ಮ ಮನೆಗೆ ಬಂದುಬಿಟ್ಟರು. ಗುಟ್ಟಾಗಿ ಮದುವೆಯೂ ಆಯಿತು. ನಂತರ  ಎರಡು ಕುಟುಂಬದವರನ್ನು ಕರೆಸಿ ರಾಜಿ ಸಂಧಾನವನ್ನೂ ಮಾಡಿಯಾಯ್ತು ಎಂದರು. ಅದಾಗಲೇ ನಾನು ಸುಮಾರು ಏಳು ಲಕ್ಷ ರೂಪಾಯಿ ಸಾಲ ಮಾಡಿದ್ದೆ. ಬಿಜಿನೆಸ್​ ಮಾಡಲು ಹೋಗಿ ನಷ್ಟ ಅನುಭವಿಸಿದ್ದೆ. ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸಾಲಗಾರರು ಬಂದು ಗಲಾಟೆ ಮಾಡಲು ಶುರು ಮಾಡಿದರು. ವರ ಮಹಾಲಕ್ಷ್ಮಿ ಹಬ್ಬ ಎಂದರೆ ಪತಿಯಂದಿರು ತಮ್ಮ ಪತ್ನಿಗೆ ಬಂಗಾರ ಕೊಡಿಸುವ ದಿನ. ಆದರೆ ನನ್ನ  ಜ್ಯೋತಿ  ಚಿನ್ನದ ತಾಳ ಬಿಚ್ಚಿಕೊಟ್ಟುಬಿಟ್ಟರು. ಅದನ್ನು ಅಡವಿಟ್ಟು ದುಡ್ಡು ತೆಗೆದುಕೊ ಎಂದು ಸ್ನೇಹಿತನಿಗೆ ಹೇಳಿದ್ರೆ, ಆತ ಮಾರಿಯೇ ಬಿಟ್ಟ ಎಂದ ಪ್ರೇಮ್​,  ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಭಾವುಕರಾದರು. ಅಂದು ಬದುಕಿದ್ದು ಏನು ಪ್ರಯೋಜನ ಎನ್ನಿಸಿಬಿಟ್ಟಿತು.  ಸತ್ತು ಹೋಗಬಾರದ ಎಂದು ಎನಿಸಿತು ನನಗೆ ಎಂದು ನೋವು ತೋಡಿಕೊಂಡರು. ನನ್ನ ಎರಡನೆಯ ತಾಯಿಯೇ ನನ್ನ ಪತ್ನಿ ಜ್ಯೋತಿ ಎಂದು ನೆನಪಿಸಿಕೊಂಡರು. 

Follow Us:
Download App:
  • android
  • ios