ಬಹುಭಾಷಾ ನಟ ಕಮಲ್‌ ಹಾಸನ್‌ ಅವರು ಸಿನಿಮಾ, ರಾಜಕೀಯ ಕೆಲಸದ ಜೊತೆಗೆ ಒಂದಿಷ್ಟು ವಿವಾದಗಳಲ್ಲಿ ಕೂಡ ಸದ್ದು ಮಾಡುತ್ತಿರುತ್ತಾರೆ. ನಟಿಮಣಿಗೆ ಚುಂಬಿಸುವುದರಿಂದ ಹಿಡಿದು ಸನಾತನ ಧರ್ಮದವರೆಗೆ ಅವರ ವಿವಾದಗಳ ಲಿಸ್ಟ್‌ ಇಲ್ಲಿದೆ!

ನಟ ಕಮಲ್‌ ಹಾಸನ್‌ ಅವರು ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೊಂದೇ ಅಲ್ಲದೆ, ಮಾತುಗಳಿಂದ ಕೂಡ ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿರುತ್ತಾರೆ. ತಮಿಳು ಸಿನಿಮಾವೊಂದೇ ಅಲ್ಲದೆ ಮಲಯಾಳಂ , ಹಿಂದಿ , ತೆಲುಗು , ಕನ್ನಡ, ಬಂಗಾಳಿ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಕೆಲ ಬಿಗ್‌ ಬಾಸ್‌ ತಮಿಳು ಶೋವನ್ನು ಕೂಡ ನಿರೂಪಣೆ ಮಾಡಿರುವ ಅವರು ಇತ್ತೀಚೆಗೆ ಕನ್ನಡದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಆಮೇಲೆ ಅವರು ಸನಾತನ ಧರ್ಮದ ಬಗ್ಗೆಯೂ ಮಾತನಾಡಿದ್ದಾರೆ. ಒಟ್ಟಿನಲ್ಲಿ ಕಿಸ್ಸಿಂಗ್‌ ಸೀನ್‌ನಿಂದ ಹಿಡಿದು ಸನಾತನ ಧರ್ಮದವರೆಗೆ ಕಮಲ್‌ ಹಾಸನ್‌ ಅವರು ಒಂದಲ್ಲ ಒಂದು ವಿವಾದಗಳನ್ನು ಮಾಡಿಕೊಳ್ತಲೇ ಬಂದಿದ್ದಾರೆ.

235ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ!

ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಸ್ಕ್ರೀನ್‌ರೈಟರ್‌, ಕೊರಿಯೋಗ್ರಾಫರ್‌ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ. 235ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಕನ್ನಡದಲ್ಲಿ ʼಕೋಕಿಲʼ, ʼಮರಿಯಾ ಮೈ ಡಾರ್ಲಿಂಗ್‌ʼ, ʼಬೆಂಕಿಯಲ್ಲಿ ಅರಳಿದ ಹೂವುʼ, ʼರಾಮ ಶ್ಯಾಮ ಭಾಮʼ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಅವರು ʼಇಂಡಿಯನ್‌ 3’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರ ರಿಲೀಸ್‌ ಆಗಬೇಕಿದೆ.

2015 ಚೆನ್ನೈ ಪ್ರವಾಹ!

2015ರಲ್ಲಿ ಚೆನ್ನೈನಲ್ಲಿ ಪ್ರವಾಹ ಬಂದಾಗ ಕಮಲ್‌ ಹಾಸನ್‌ ಅವರು ಸರ್ಕಾರವನ್ನು ದೂಷಿಸಿದರು. ವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದರು. ಇದನ್ನು ಅಂದಿನ ಮಂತ್ರಿ, ಜಯಲಲಿತಾ ಬಂಟ ಎಂದೇ ಖ್ಯಾತಿ ಪಡೆದಿದ್ದ ಒ ಪನೀರ್‌ಸೆಲ್ವಂ ಅವರು ವಿರೋಧಿಸಿದ್ದರು. ನಟ ಎಂದು ಕಮಲ್‌ ಹಾಸನ್‌ ಮಾತನ್ನು ಗಣನೆಗೆ ತೆಗೆದುಕೊಳ್ಳಲಾಗೋದಿಲ್ಲ, ಒಂದು ಸಿನಿಮಾದಲ್ಲಿ ತೋರಿಸಿದ ದೃಶ್ಯದಂತೆ ಅಷ್ಟು ಬೇಗ ಎಲ್ಲವನ್ನು ಸರಿ ಮಾಡಲಾಗೋದಿಲ್ಲ ಎಂದು ಅವರು ಹೇಳಿದ್ದರು.

ಸಿನಿಮಾ ಕ್ರೆಡಿಟ್‌ ತಗೊಂಡ್ರು!

‘ದೇವರ್‌ ಮಗನ್‌ʼ ಸಿನಿಮಾ ವೇಳೆ ಕಮಲ್‌ ಹಾಸನ್‌ ಅವರು ಅನಗತ್ಯವಾಗಿ ಮಧ್ಯಪ್ರವೇಶ ಮಾಡಿದ್ದಕ್ಕೆ, ತನ್ನಿಂದಲೇ ಸಿನಿಮಾ ಎನ್ನೋ ರೀತಿ ಕ್ರೆಡಿಟ್‌ ತಗೊಂಡಿದ್ದಕ್ಕೆ ನಿರ್ದೇಶಕ, ನಿರ್ಮಾಪಕರು ಸಿಟ್ಟಾಗಿದ್ದರು.

ಸಿನಿಮಾ ನಿಂತುಹೋಯ್ತು!

ʼಗುಣಾʼ ಎನ್ನುವ ಸಿನಿಮಾವನ್ನು ಸಿಬಿ ಗುಳಿಯಾಲ್‌ ಅವರು ನಿರ್ದೇಶನ ಮಾಡಬೇಕಿತ್ತು. ಸಿನಿಮಾ ಮೇಕಿಂಗ್‌ನಲ್ಲಿ ಕಮಲ್‌ ಹಾಸನ್‌ ಮಧ್ಯ ಪ್ರವೇಶ ಮಾಡ್ತಾರೆ ಎಂದು ಅವರು ಈ ಪ್ರಾಜೆಕ್ಟ್‌ನಿಂದ ದೂರವಾದರು.

ರೇಖಾಗೆ ಚುಂಬಿಸಿದ್ರು!

ʼಪುನ್ನಗಮನ್ನೈನ್‌ʼ ಸಿನಿಮಾ ವೇಳೆ ಒಪ್ಪಿಗೆಯಿಲ್ಲದೆ ನಟಿ ರೇಖಾ ಹ್ಯಾರೀಸ್‌ರನ್ನು ಚುಂಬಿಸಿದ್ದಾರೆ ಎಂಬ ಆರೋಪವಿದೆ. ಇನ್ನು ಅವರ ಸಿನಿಮಾಗಳಲ್ಲಿ ಧಾರ್ಮಿಕ ವಿರೋಧಿ ವಿಷಯಗಳು, ಅತಿಯಾದ ರೊಮ್ಯಾನ್ಸ್‌ ಕೂಡ ಇದೆ ಎಂಬ ಆರೋಪವೂ ಇದೆ.

ಹಿಂದೂ ಧರ್ಮದ ಬಗ್ಗೆ ಅಪಸ್ವರ!

2017ರ ನವೆಂಬರ್‌ನಲ್ಲಿ ತಮ್ಮ ಕೋಮುವಾದವನ್ನು ಪ್ರಚಾರ ಮಾಡಲು ಬಲಪಂಥೀಯ ಹಿಂದುಗಳು ಉಗ್ರವಾದವನ್ನು ಬಳಸಿಕೊಂಡಿದ್ದಾರೆ. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂದು ಹೇಳಿದ್ದರು.

ಕನ್ನಡದ ಬಗ್ಗೆಯೂ ಮಾತು!

2025 ಮೇ ತಿಂಗಳಿನಲ್ಲಿ ಕಮಲ್‌ ಹಾಸನ್‌ ಅವರು ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ್ದರು. ಈ ಮಾತಿಗೆ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶ ಕೇಳಿಬಂದಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಈ ಬಗ್ಗೆ ಚರ್ಚೆ ಮಾಡಿ ಕರ್ನಾಟದಲ್ಲಿ ಕಮಲ್‌ ಹಾಸನ್‌ ನಟನೆಯ ʼಥಗ್‌ ಲೈಫ್‌ʼ ಸಿನಿಮಾ ರಿಲೀಸ್‌ ಮಾಡದಂತೆ ನಿಷೇಧ ಹೇರಿತು.

ಸನಾತನ ಧರ್ಮ

ಸರ್ವಾಧಿಕಾರ, ಸನಾತನ ಸರಪಳಿಯನ್ನು ಮುರಿಯಲು ಶಿಕ್ಷಣವೇ ಅಸ್ತ್ರ, ಶಿಕ್ಷಣದಿಂದಲೇ ಸಾಧ್ಯ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ. ಬಿಜೆಪಿ ಕೂಡ ಕಮಲ್‌ ಹಾಸನ್‌ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದೆ.