ಕೇಂದ್ರ ಸರ್ಕಾರವು 29 ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುತ್ತಿದೆ. ಈ ಸುಧಾರಣೆಗಳು ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಮತ್ತು ಸುರಕ್ಷತೆಯನ್ನು ಬಲಪಡಿಸುವ ಗುರಿ ಹೊಂದಿದ್ದು, ಗಿಗ್ ಕೆಲಸಗಾರರನ್ನು ಮೊದಲ ಬಾರಿಗೆ ಕಾನೂನಿನ ವ್ಯಾಪ್ತಿಗೆ ತರಲಿದೆ.
ನವದೆಹಲಿ: ಭಾರತದ ಕಾರ್ಮಿಕ ಕಾನೂನು ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಷ್ಕರಿಸುವ ಮಹತ್ವದ ಹೆಜ್ಜೆಯಾಗಿ ಕೇಂದ್ರ ಸರ್ಕಾರವು ಶುಕ್ರವಾರ ನಾಲ್ಕು ಏಕೀಕೃತ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ವೇತನ ಸಂಹಿತೆ (2019), ಕೈಗಾರಿಕಾ ಸಂಬಂಧ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020), ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು (OSHWC) ಸಂಹಿತೆ (2020) ಗಳನ್ನು ನವೆಂಬರ್ 21, 2025 ರಿಂದ ದೇಶವ್ಯಾಪಿ ಜಾರಿಗೆ ತರಲಾಗುತ್ತಿದೆ.
ಈ ನೀತಿ ಪರಿವರ್ತನೆ ಮೂಲಕ ಒಟ್ಟು 29 ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಿ ಒಂದೇ ಚೌಕಟ್ಟಿನಲ್ಲಿ ಏಕೀಕರಿಸಲಾಗುತ್ತಿದೆ. ಕಾರ್ಮಿಕರಿಗೆ ಬಲವಾದ ರಕ್ಷಣೆ, ಉದ್ಯಮಗಳಿಗೆ ಅನುಸರಣೆ ಸುಗಮಗೊಳಿಸುವುದು ಮತ್ತು ಹೊಸ ಮಾದರಿಯ ಉದ್ಯೋಗ ವಾತಾವರಣಕ್ಕೆ ಕಾನೂನು ಹೊಂದಿಸುವ ಗುರಿ ಈ ಸುಧಾರಣೆಯಲ್ಲಿದೆ.
ಕಾರ್ಮಿಕರ ಹಕ್ಕುಗಳನ್ನು ಬಲಪಡಿಸುವ ಹೊಸ ಯೋಜನೆ
ಸರ್ಕಾರದ ಪ್ರಕಾರ, ಹೊಸ ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರಿಗೆ ಉತ್ತಮ ವೇತನ, ಸಾಮಾಜಿಕ ಭದ್ರತೆ, ಸುರಕ್ಷತೆ ಮತ್ತು ಕಲ್ಯಾಣ ಒದಗಿಸುವ ಮಹತ್ವದ ಸಾಧನವಾಗಲಿದೆ. ಅವೆಂದರೆ
- ಸಕಾಲಿಕ ವೇತನ ಪಾವತಿ ಕಡ್ಡಾಯ
- ಸಾರ್ವತ್ರಿಕ ಕನಿಷ್ಠ ವೇತನ ವ್ಯವಸ್ಥೆ
- ಕಡ್ಡಾಯ ನೇಮಕಾತಿ ಪತ್ರಗಳು
- 40 ವರ್ಷ ಮೇಲ್ಪಟ್ಟವರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ
- ಸ್ಥಿರ ಅವಧಿಯ ಉದ್ಯೋಗಿಗಳಿಗೆ ಶಾಶ್ವತ ಉದ್ಯೋಗಿಗಳ ಸಮಾನ ವೇತನ ಮತ್ತು ಸೌಲಭ್ಯ
- ಒಂದು ವರ್ಷದ ಬಳಿಕ ಗ್ರಾಚ್ಯುಟಿ ಹಕ್ಕು
- ಗುತ್ತಿಗೆ, ವಲಸಾ, ಡಾಕ್ ಮತ್ತು ತೋಟ ಕಾರ್ಮಿಕರಿಗೆ ಸಮಾನ ರಕ್ಷಣೆ
- ಅಪಾಯಕಾರಿ ವಲಯಗಳಲ್ಲಿ ಕಡ್ಡಾಯ ಸುರಕ್ಷತಾ ಕ್ರಮಗಳು
- ಅಧಿಕಾವಧಿ ಕೆಲಸಕ್ಕೆ 2 ಪಟ್ಟು ವೇತನ
- ಮಹಿಳೆಯರಿಗೆ ಹೆಚ್ಚು ಅವಕಾಶ
- ಹೊಸ ನೀತಿಗಳಡಿ ಮಹಿಳಾ ಕಾರ್ಮಿಕರ ಹಕ್ಕುಗಳನ್ನು ವ್ಯಾಪಕವಾಗಿ ವಿಸ್ತರಿಸಲಾಗಿದೆ:
- ಒಪ್ಪಿಗೆ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಎಲ್ಲಾ ವಲಯಗಳಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ಅವಕಾಶ
- ಸಮಾನ ವೇತನ ಕಡ್ಡಾಯ
- ಕುಟುಂಬ ವ್ಯಾಖ್ಯಾನದ ವಿಸ್ತರಣೆ
- ತಾರತಮ್ಯ ವಿರೋಧಿ ನಿಯಮಗಳು
- ಸಮಿತಿಗಳಲ್ಲಿ ಕಡ್ಡಾಯ ಮಹಿಳಾ ಪ್ರತಿನಿಧಿತ್ವ
ಗಿಗ್ ಮತ್ತು ಪ್ಲಾಟ್ಫಾರ್ಮ್ ಕೆಲಸಗಾರರಿಗೆ ಸಾಮಾಜಿಕ ಭದ್ರತೆ
ಮೊದಲ ಬಾರಿಗೆ, ಸರ್ಕಾರವು ಕ್ಯಾಬ್ ಚಾಲಕರು, ಡೆಲಿವರಿ ಪಾರ್ಟ್ನರ್ಗಳು, ಆ್ಯಪ್ ಆಧಾರಿತ ಕೆಲಸಗಾರರು, ಫ್ರೀಲಾನ್ಸರ್ಗಳು ಮತ್ತು ಗಿಗ್ ವರ್ಕರ್ಗಳು ಸೇರಿದಂತೆ ಅಸಂಘಟಿತ ವಲಯವನ್ನು ಕಾನೂನು ಚೌಕಟ್ಟಿನೊಳಕ್ಕೆ ತರಿದೆ. ಆಧಾರ್ ಆಧಾರಿತ ಪೋರ್ಟಬಿಲಿಟಿ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯುವ ಅವಕಾಶ ನೀಡಲಾಗಿದೆ.
ಉದ್ಯಮ ಸ್ನೇಹಿ ಸುಧಾರಣೆಗಳು
- ಈ ಸಂಹಿತೆಗಳಡಿ ಉದ್ಯಮಗಳಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗಿದೆ:
- ಒಂದೇ ನೋಂದಣಿ ಮತ್ತು ಒಂದೇ ಪರವಾನಗಿ ವ್ಯವಸ್ಥೆ
- ಬಹು ದಾಖಲೆಗಳ ಅವಶ್ಯಕತೆಯಿಂದ ಮುಕ್ತಿ
- ಇನ್ಸ್ಪೆಕ್ಟರ್-ಕಮ್-ಫೆಸಿಲಿಟೇಟರ್ ವ್ಯವಸ್ಥೆ – ಸಲಹಾ ಆಧಾರಿತ ಪರಿಶೀಲನೆ
- ಕೈಗಾರಿಕಾ ವಿವಾದಗಳ ವೇಗವಾದ ಪರಿಹಾರಕ್ಕೆ ಇಬ್ಬರು ಸದಸ್ಯರ ಕೈಗಾರಿಕಾ ನ್ಯಾಯಮಂಡಳಿ
- 500+ ಕಾರ್ಮಿಕರಿರುವ ಘಟಕಗಳಲ್ಲಿ ಕಡ್ಡಾಯ ಸುರಕ್ಷತಾ ಸಮಿತಿ
- ರಾಷ್ಟ್ರೀಯ ಸುರಕ್ಷತಾ ಮಾನದಂಡಗಳ ಜಾರಿ
ಸಾಮಾಜಿಕ ಭದ್ರತಾ ವ್ಯಾಪ್ತಿ ದೊಡ್ಡ ಮಟ್ಟದಲ್ಲಿ ವಿಸ್ತರಣೆ
ಸರ್ಕಾರದ ಪ್ರಕಾರ, 2015 ರಲ್ಲಿ ಕೇವಲ 19% ಇದ್ದ ಕೆಲಸಗಾರರ ಸಾಮಾಜಿಕ ಭದ್ರತಾ ವ್ಯಾಪ್ತಿ 2025 ರ ವೇಳೆಗೆ 64% ಕ್ಕಿಂತ ಹೆಚ್ಚಾಗಿದೆ. ಹೊಸ ಸಂಹಿತೆಗಳು ರಾಜ್ಯ ಮತ್ತು ವಲಯಗಳಾದ್ಯಂತ ಪೋರ್ಟಬಿಲಿಟಿ ಮತ್ತು ಸುಲಭ ಪ್ರವೇಶ ಒದಗಿಸುತ್ತವೆ. ಪರಿವರ್ತನಾ ಅವಧಿಯಲ್ಲಿ ಎಲ್ಲ ಅಧೀನ ನಿಯಮಗಳು ಪ್ರಕಟವಾಗುವವರೆಗೆ ಅಸ್ತಿತ್ವದಲ್ಲಿರುವ ಕಾನೂನುಗಳು ಜಾರಿಯಲ್ಲೇ ಇರುತ್ತವೆ.
ಉದ್ಯೋಗ ಮತ್ತು ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ
ಮಹಿಳೆಯರು, ಯುವಕರು, ಅಸಂಘಟಿತ ವಲಯ ಮತ್ತು ಗಿಗ್ ವರ್ಕರ್ಗಳಿಗೆ ಬಲವಾದ ರಕ್ಷಣೆಗಳನ್ನು ನೀಡುವ ಮೂಲಕ ಹಾಗೂ ಸಂಸ್ಥೆಗಳ ಅನುಸರಣೆ ಹೊರೆಯನ್ನು ಕಡಿಮೆ ಮಾಡುವ ಮೂಲಕ ಈ ಸುಧಾರಣೆಗಳು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು, ಕೌಶಲ್ಯ ವಿಕಾಸ ಮತ್ತು ಕೈಗಾರಿಕಾ ಉತ್ಪಾದಕತೆಯ ಸುಧಾರಣೆ ಗುರಿಯನ್ನು ಹೊಂದಿವೆ. ಸರ್ಕಾರದ ಹೇಳಿಕೆಯಂತೆ, ಹೊಸ ಕಾರ್ಮಿಕ ಸಂಹಿತೆಗಳು ಆತ್ಮನಿರ್ಭರ ಭಾರತ ಗುರಿಯನ್ನು ಬೆಂಬಲಿಸುವ ದಿಟ್ಟ ನಿರ್ಧಾರವಾಗಿದೆ.


