ಒಂದು ಚಿತ್ರಕ್ಕಾಗಿ ಮೂರುವರೆ ವರ್ಷ ಕಾಯೋದು ಎಂದರೆ ಸುಲಭದ ಮಾತಲ್ಲ. ಹಾಗೆ ‘ಪೊಗರು’ ಚಿತ್ರದ ಮೂಲಕ ಕಾದು ಈಗ ಬಿಡುಗಡೆಯ ಸಂಭ್ರಮಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿರುವ ನಿರ್ಮಾಪಕ ಗಂಗಾಧರ್‌ ಸಂದರ್ಶನ ಇಲ್ಲಿದೆ.

ಆರ್‌ ಕೇಶವಮೂರ್ತಿ

Add Asianetnews Kannada as a Preferred SourcegooglePreferred

ಸಿನಿಮಾ ಬಿಡುಗಡೆ ತಯಾರಿಗಳು ಹೇಗಿವೆ?

ಒಂದು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹೈದಾರಬಾದ್‌, ಚೆನ್ನೈ ಏರಿಯಾಗಳಲ್ಲಿ ಈಗಾಗಲೇ ಸಿನಿಮಾ ಸೇಲ್‌ ಆಗಿದೆ. ಬಾಂಬೆ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ವರ್ಷನ್‌ನಲ್ಲೇ ಸಿನಿಮಾ ತೆರೆಗೆ ಬರುತ್ತಿದೆ.

ಪೊಗರು ಚಿತ್ರಕ್ಕೆ U/A ಸರ್ಟಿಫಿಕೆಟ್‌: ಚಿತ್ರತಂಡ ಖುಷ್ 

ಕೊರೋನ ಭಯ ಇದ್ದರೂ ಯಾವ ಧೈರ್ಯದ ಮೇಲೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೀರಿ?

ಮೊದಲ ಧೈರ್ಯ ನಿರೀಕ್ಷೆಗೂ ಮೀರಿ ಚೆನ್ನಾಗಿ ಬಂದಿರುವ ‘ಪೊಗರು’, ಎರಡನೆಯದು ಚಿತ್ರದ ನಾಯಕ ಧ್ರುವ ಸರ್ಜಾ ಹಾಗೂ ಮೂರನೆಯದು ನಿರ್ದೇಶಕ ನಂದಕಿಶೋರ್‌. ಸಿನಿಮಾ ಚೆನ್ನಾಗಿದೆ ಅನಿಸಿದರೆ ಖಂಡಿತ ಪ್ರೇಕ್ಷಕರು ಕೂಡ ಕೈ ಹಿಡಿಯುತ್ತಾರೆಂಬ ಭರವಸೆ ಮತ್ತೊಂದು ಧೈರ್ಯ.

ಒಂದು ಚಿತ್ರಕ್ಕಾಗಿ ಮೂರುವರೆ ವರ್ಷ ಕಾಯೋದು ನಿರ್ಮಾಪಕನಾದವನಿಗೆ ಎಷ್ಟುಕಷ್ಟ?

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಒಂದು ವರ್ಷದ ಹಿಂದೆಯೇ ಚಿತ್ರ ತೆರೆಗೆ ಬರಬೇಕಿತ್ತು. ಇಲ್ಲಿ ನಾನು ಒಬ್ಬನೇ ಕಾದಿಲ್ಲ. ನಮ್ಮ ಹೀರೋ, ನಿರ್ದೇಶಕ, ಪ್ರೇಕ್ಷಕರು ಕೂಡ ಇದ್ದಾರೆ. ನಮ್ಮ ಚಿತ್ರ ಮುಗಿದು, ಬಿಡುಗಡೆಯಾಗುವ ತನಕ ಮತ್ತೊಂದು ಚಿತ್ರಕ್ಕೆ ಹೋಗದೆ ನನ್ನ ಜತೆ ಹೀರೋ ನಿಂತಿದ್ದಾರೆ. ಅವರ ಮುಂದೆ ನನ್ನ ಕಾಯುವಿಕೆ ದೊಡ್ಡದಲ್ಲ.

ಪೊಗರು ಬಗ್ಗೆ ಹೇಳಿ..

‘ಪೊಗರು’ ಎಂದಾಕ್ಷಣ ತುಂಬಾ ಜನ ರೆಗ್ಯುಲರ್‌ ಕಮರ್ಷಿಯಲ್‌ ಚಿತ್ರ ಎಂದುಕೊಂಡಿದ್ದಾರೆ. ತುಂಬಾ ಭಾವುಕತೆ ಇರುವ ಕತೆ ಇಲ್ಲಿದೆ. ನನಗೆ ಗೊತ್ತಿರುವಂತೆ ಇತ್ತೀಚಿನ ವರ್ಷಗಳಲ್ಲಿ ಇಂಥ ಎಮೋಷನಲ್‌ ಸಿನಿಮಾ ಬಂದಿಲ್ಲ. ನಮ್ಮ ಹೀರೋ ಧ್ರುವ ಅವರೇ ಹೇಳಿದಂತೆ ಡಾ ರಾಜ್‌ಕುಮಾರ್‌ ಅವರಿಂದ ಏನೋ ಒಂದು ಕದ್ದು ಈ ಚಿತ್ರದಲ್ಲಿ ಮಾಡಿದ್ದಾರೆ. ಅದೇನು ಎಂಬುದು ಕೂಡ ಸರ್ಪೆ್ರೖಸ್‌. ಇಂಥ ಅಂಶಗಳಿಂದಲೇ ‘ಪೊಗರು’ ಕನ್ನಡದ ಮೈಲ್‌ಸ್ಟೋನ್‌ ಚಿತ್ರ ಆಗಲಿದೆ.

ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದ ಪೊಗರು! 

ಧ್ರುವ ಸರ್ಜಾ ಅವರೊಂದಿಗೆ ಸಿನಿಮಾ ಮಾಡಬೇಕು ಅನಿಸಿದ್ದು ಯಾವಾಗ ಮತ್ತು ಯಾಕೆ?

‘ಅದ್ದೂರಿ’ ಚಿತ್ರ ನೋಡುವಾಗಲೇ ನಾನು ಈ ಹುಡುಗನ ಜತೆ ಒಂದು ಸಿನಿಮಾ ಮಾಡಬೇಕು ಅಂತ ನಿರ್ಧರಿಸಿ, ಆಗಲೇ ಅಡ್ವಾನ್‌ ಕೊಟ್ಟು ಬಂದೆ. ಧ್ರುವ ಸರ್ಜಾ ಅವರ ವಾಯ್‌್ಸ, ಡ್ಯಾನ್ಸ್‌ ಹಾಗೂ ಫೈಟ್‌ ನೋಡಿ ನಾನು ಫಿದಾ ಆದೆ. ಮೊದಲ ಚಿತ್ರದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೇ ಅನಿಸಿ ಅಚ್ಚರಿಗೊಂಡೆ. ಧ್ರುವ ಅವರಲ್ಲಿ ಇಷ್ಟವಾದ ಈ ಕ್ವಾಲಿಟಿಗಳೇ ಅವರ ಜತೆ ಸಿನಿಮಾ ಮಾಡಲು ಕಾರಣವಾಯಿತು.

ನಿರ್ಮಾಪಕರಾಗಿ ನಿಮಗೆ ಯಾವ ರೀತಿ ಚಿತ್ರಗಳು ಇಷ್ಟ?

ನಾನು ಹೆಚ್ಚಾಗಿ ಚಿತ್ರಗಳನ್ನು ಕಮರ್ಷಿಯಲ್‌ ದೃಷ್ಟಿಯಲ್ಲೇ ನೋಡುತ್ತೇನೆ. ಯಾಕೆಂದರೆ ಸಿನಿಮಾ ಗೆದ್ದರೆ ಮಾತ್ರ ಮತ್ತೊಂದು ಸಿನಿಮಾ ಮಾಡಲು ಸಾಧ್ಯ. ಹೀಗಾಗಿ ನನಗೆ ಅಂಥ ಚಿತ್ರಗಳೇ ಹೆಚ್ಚು ಇಷ್ಟ.

ಚಿತ್ರರಂಗದಲ್ಲಿ ನಿಮಗೆ ಗುರು ಯಾರು?

ನನ್ನ ತಂದೆ ಕೃಷ್ಣಪ್ಪ. ಅವರು ವಿತರಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ನನಗೆ ಸಿನಿಮಾ ಹುಚ್ಚು ಹತ್ತಿಕೊಂಡಿದ್ದು, ಚಿತ್ರರಂಗದಲ್ಲಿ ಏನಾದರೂ ಮಾಡಬೇಕು ಅನಿಸಿದ್ದು ನನ್ನ ತಂದೆಯವರನ್ನು ನೋಡಿಯೇ. ಆದರೆ, ನಾನು ಇಂಥದ್ದೊಂದು ದೊಡ್ಡ ಸಿನಿಮಾ ಮಾಡುವ ಹೊತ್ತಿಗೆ ನಮ್ಮ ತಂದೆ ಇಲ್ಲವಾಗಿದ್ದಾರೆ. ಹಾಗೆ ಸದಾ ನನ್ನ ಒಳ್ಳೆಯದನ್ನು ಬಯಸುತ್ತಿದ್ದ ಚಿರಂಜೀವಿ ಸರ್ಜಾ ಕೂಡ ಇಲ್ಲ. ‘ಪೊಗರು’ ಯಶಸ್ಸನ್ನು ಇವರಿಬ್ಬರು ಇದ್ದು ನೋಡಬೇಕಿತ್ತು.

ಪೊಗರು' ಮೇಕಿಂಗ್ ವಿಡಿಯೋ ಲೀಕ್; ಧ್ರುವ ಹೊಸ ಅವತಾರ ಇಲ್ಲಿ ನೋಡಿ! 

ಮುಂದೆ ಯಾವ ಸ್ಟಾರ್‌ ನಟನ ಚಿತ್ರ ಮಾಡುತ್ತೀರಿ?

ಯಾವ ಪ್ಲಾನ್‌ ಮಾಡಿಕೊಂಡಿಲ್ಲ. ‘ಅಧ್ಯಕ್ಷ’ ಆದ ಮೇಲೆ ‘ಪೊಗರು’ ಮಾಡಿದೆ. ತುಂಬಾ ಖುಷಿಯಾಗಿಯೇ ಈ ಚಿತ್ರ ಮಾಡಿದ್ದೇನೆ. ಯಾವುದಕ್ಕೂ ಕೊರತೆ ಮಾಡಿಲ್ಲ. ಈ ಸಿನಿಮಾ ತೆರೆಕಂಡ ನಂತರ ಮತ್ತೊಂದು ಚಿತ್ರದ ಬಗ್ಗೆ ಯೋಚನೆ ಮಾಡುತ್ತೇನೆ. ಆದರೆ, ಈಗಾಗಲೇ ಧ್ರುವ ಸರ್ಜಾ ಅವರೇ ಮತ್ತೊಂದು ಸಿನಿಮಾ ಮಾಡಿ ಎಂದಿದ್ದಾರೆ. ಮುಂದೆ ಧ್ರುವ ಅವರಿಗೇ ಸಿನಿಮಾ ನಿರ್ಮಿಸುತ್ತೇನೆ.