Asianet Suvarna News Asianet Suvarna News

ಜಗತ್ತಿಗೆ ಈಗ ಭಾರತ ಬೇಕು, ನಾವು ಬೇಡ; ಜಿ20 ಶೃಂಗಸಭೆ ಯಶಸ್ಸಿಗೆ ಭಾರತವನ್ನು ಶ್ಲಾಘಿಸಿದ ಪಾಕಿಸ್ತಾನದ ನಾಗರಿಕರು

ಭಾರತ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ. ಈ ನಡುವೆ ನೆರೆಯ ರಾಷ್ಟ್ರ ಪಾಕಿಸ್ತಾನದ ನಾಗರಿಕರು ಕೂಡ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಭಾರತ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ. 

World Has Sidelined Us How Pakistanis Reacted On India for successfully hosting the G20 summit anu
Author
First Published Sep 14, 2023, 1:32 PM IST

ನವದೆಹಲಿ (ಸೆ.14): ಜಿ 20 ರಾಷ್ಟ್ರಗಳ ಶೃಂಗಸಭೆ ನವದೆಹಲಿಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆದಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದರು. ಜಿ20 ಶೃಂಗಸಭೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತದ ಜಿ20 ಆತಿಥ್ಯದ ಬಗ್ಗೆ ವಿಶ್ವ ನಾಯಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಈ ಶೃಂಗಸಭೆಯಲ್ಲಿ ಭಾರತಕ್ಕೆ ನೆರವಾಗುವ ಹಲವು ಒಪ್ಪಂದಗಳು ಕೂಡ ನಡೆದಿವೆ. ಈ ನಡುವೆ ಭಾರತ ಎರಡು ದಿನಗಳ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ ಬಗ್ಗೆ ನೆರೆಯ ರಾಷ್ಟ್ರ ಪಾಕಿಸ್ತಾನದ ನಾಗರಿಕರು ಕೂಡ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಜಗತ್ತು ನಮ್ಮನ್ನು ಬದಿಗೆ ಸರಿಸಿದೆ. ಈಗ ಜಗತ್ತಿಗೆ ಭಾರತವೇ ಹೆಚ್ಚು ಮುಖ್ಯವಾಗಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತ ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸುತ್ತ ಬರುತ್ತಿದೆ. ಇದಕ್ಕೆ ಕಾರಣವಾಗಿರೋದು ಭಾರತದ ಆರ್ಥಿಕ ಪ್ರಗತಿ ಹಾಗೂ ವಿದೇಶಾಂಗ ನೀತಿಗಳು ಎಂದರೆ ತಪ್ಪಿಲ್ಲ. ಆದರೆ, ನೆರೆಯ ರಾಷ್ಟ್ರ ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಕೂಡ ಪ್ರಾಮುಖ್ಯತೆ ಕಳೆದುಕೊಂಡಿದೆ. ಇದು ಪಾಕಿಸ್ತಾನದ ನಾಗರಿಕರಿಗೆ ಕೂಡ ಈಗ ಅರಿವಾಗುತ್ತಿದೆ. ಭಾರತ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಬಗ್ಗೆ ಪಾಕಿಸ್ತಾನದ ಕೆಲವು ನಾಗರಿಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ.

ಜಿ20 ಶೃಂಗಸಭೆ ಅತಿಥ್ಯ ವಹಿಸಿರೋದು ಭಾರತದ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಪಾಕಿಸ್ತಾನದ ನಾಗರಿಕರೊಬ್ಬರು ತಿಳಿಸಿದ್ದಾರೆ. 'ಇಂದು ನಾವು ನಮ್ಮ ಆರ್ಥಿಕತೆಯನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ಟಾಪ್ 20 ರಾಷ್ಟ್ರಗಳ ಸಭೆ ಆಯೋಜಿಸಿದೆ. ಭಾರತ ಉತ್ತಮ ಹೆಜ್ಜೆಯಿಟ್ಟಿದೆ. ಇದು ಭಾರತೀಯರ ಪಾಲಿಗೆ ಹೆಮ್ಮೆಯ ಕ್ಷಣ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವಿಶ್ವದ ನಾಯಕರಿರುವ ಫೋಟೋದ ಮೂಲಕ ಜಗತ್ತಿಗೆ ಭಾರತದ ಸಕಾರಾತ್ಮಕ ಚಿತ್ರವನ್ನು ತೋರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸೌದಿ ಅರೇಬಿಯಾದ ದೊರೆ ಇಲ್ಲಿಗೆ ಬರಲಿಲ್ಲ. ಆದರೆ, ಭಾರತಕ್ಕೆ ಭೇಟಿ ನೀಡಿದರು. ಇದು ಜಗತ್ತಿಗೆ ಭಾರತ ಹೇಗೆ ಮುಖ್ಯವಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಇನ್ನು ಈ ಶೃಂಗಸಭೆಗೆ ಬಾಂಗ್ಲಾದೇಶವನ್ನು ಆಮಂತ್ರಿಸಲಾಗಿದೆ. ಆದರೆ, ಪಾಕಿಸ್ತಾನವನ್ನು ಮಾತ್ರ ಆಮಂತ್ರಿಸಿಲ್ಲ. ಇದು ಅಚ್ಚರಿ ಮೂಡಿಸಿದೆ' ಎಂದು ಹೇಳಿದ್ದಾರೆ.

ಇನ್ನು ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಟೀಕಿಸಿರುವ ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಹೀಗೆ ಹೇಳಿದ್ದಾರೆ: 'ನನ್ನ ಪ್ರಕಾರ ನಾವು ನಮ್ಮ ವಿದೇಶಾಂಗ ನೀತಿಯಲ್ಲಿ ಸೋತಿದ್ದೇವೆ. ಈ ಕಾರಣದಿಂದಲೇ ನಮ್ಮ ನೆರೆಯ ರಾಷ್ಟ್ರ ಭಾರತದಲ್ಲಿ ಜಿ-20 ಸಮ್ಮೇಳನ ನಡೆದಿದೆ. ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸಿದ್ದಾರೆ. ಕಳೆದ 5-6 ವರ್ಷಗಳ ಅವಧಿಯಲ್ಲಿ ನಮ್ಮ ಆರ್ಥಿಕತೆ ಹಾಗೂ ಭದ್ರತಾ ವ್ಯವಸ್ಥೆ ಹದಗೆಟ್ಟಿದೆ. ಜಗತ್ತು ನಮ್ಮನ್ನು ಬದಿಗೆ ಹಾಕಿದೆ.'

'ಸೌದಿ ಅರೇಬಿಯಾದ ದೊರೆ ಅಲ್ಲಿಗೆ ಬಂದಿದ್ದರು. ಅವರು ಇಲ್ಲಿಗೆ ಬರುತ್ತಾರೆ ಎಂಬ ನಿರೀಕ್ಷೆ ಇಲ್ಲಿನ ಜನರಿಗಿತ್ತು. ಆದರೆ, ಅವರು ಬರಲಿಲ್ಲ. ಇಂಥ ದೊಡ್ಡ ಸಮ್ಮೇಳನ ನಡೆಯುವಾಗ ಭಾರತ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂಬುದು ಜನರಿಗೆ ತಿಳಿಯುತ್ತಿದೆ' ಎಂದು ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

220 ಸಭೆ, 60 ನಗರ, 25,000 ಅತಿಥಿಗಳು; ಜಿ20 ಶೃಂಗಸಭೆಯಲ್ಲಿ ಭಾರತದ ದಾಖಲೆ!

ಜಿ20 ಸಮ್ಮೇಳನ ಆಯೋಜಿಸಿದ್ದ ಬಗ್ಗೆ ಭಾರತವನ್ನು ಹೊಗಳಿರುವ ಪಾಕಿಸ್ತಾನದ ಪ್ರಜೆಯೊಬ್ಬರು ಹೀಗೆ ಹೇಳಿದ್ದಾರೆ: 'ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಸೌದಿದೊಎ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್  ಜಿ20 ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ್ದಾರೆ. ಟಾಪ್ 20 ರಾಷ್ಟ್ರಗಳ ಮುಖ್ಯಸ್ಥರು ಒಂದು ರಾಷ್ಟ್ರಕ್ಕೆ ಭೇಟಿ ನೀಡಿದರೆ, ಅದು ಆ ರಾಷ್ಟ್ರಕ್ಕೆ ಗೌರವದ ಸಂಗತಿ. ಇದರಿಂದ ಭಾರತದ ಆರ್ಥಿಕತೆಗೆ ಅನೇಕ ಪ್ರಯೋಜನಗಳು ಸಿಗಲಿವೆ.' 

Follow Us:
Download App:
  • android
  • ios