ವೇವ್ಸ್ ೨೦೨೫ ಶೃಂಗಸಭೆಯಲ್ಲಿ, ಯೂಟ್ಯೂಬ್ ಸಿಇಒ ನೀಲ್ ಮೋಹನ್ ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳಿಗೆ ₹೨೧,೦೦೦ ಕೋಟಿ ಪಾವತಿಸಿರುವುದಾಗಿ ತಿಳಿಸಿದರು. ಮುಂದಿನ ಎರಡು ವರ್ಷಗಳಲ್ಲಿ ₹೮೫೦ ಕೋಟಿ ಹೂಡಿಕೆ ಮಾಡುವುದಾಗಿಯೂ ಘೋಷಿಸಿದರು. ಈ ಹೂಡಿಕೆಯು ತರಬೇತಿ, ಸೃಜನಶೀಲತೆ ಮತ್ತು ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಭಾರತೀಯ ಯೂಟ್ಯೂಬ್ ಚಾನೆಲ್‌ಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.

ನವದೆಹಲಿ (ಮೇ.1): ವೇವ್ಸ್‌ 2025 ಶೃಂಗಸಭೆಯಲ್ಲಿ, ಯೂಟ್ಯೂಬ್ ಸಿಇಒ ನೀಲ್ ಮೋಹನ್ ಭಾರತದ ಕಂಟೆಂಟ್‌ ಕ್ರಿಯೇಟರ್‌ ಆರ್ಥಿಕತೆಯ ತ್ವರಿತ ಏರಿಕೆಯನ್ನು ಎತ್ತಿ ತೋರಿಸಿದರು, ದೇಶದ ಡಿಜಿಟಲ್ ಪ್ರತಿಭೆಯನ್ನು ಬೆಂಬಲಿಸುವ ವೇದಿಕೆಯ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಯೂಟ್ಯೂಬ್ ಇಲ್ಲಿಯವರೆಗೆ ಭಾರತದ ಕಂಟೆಂಟ್‌ ಕ್ರಿಯೇಟರ್‌ ಮತ್ತು ಆರ್ಟಿಸ್ಟ್‌ಗಳಿಗೆ ₹21,000 ಕೋಟಿ ಪಾವತಿಸಿದೆ ಎಂದು ನೀಲ್‌ ಮೋಹನ್‌ ಮಾಹಿತಿ ನೀಡಿದ್ದಾರೆ., ಇದು ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸುವ ವೇದಿಕೆಯ ಬಲವಾದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಭಾರತೀಯ ಕಂಟೆಂಟ್‌ ಕ್ರಿಯೇಟರ್‌ ಬೆಳವಣಿಗೆ ಮತ್ತು ಜಾಗತಿಕ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಲು ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ ₹850 ಕೋಟಿ ಹೂಡಿಕೆ ಮಾಡುವುದಾಗಿ ಅವರು ಘೋಷಿಸಿದರು.

"ಭಾರತದಲ್ಲಿ ಮುಂದಿನ ಪೀಳಿಗೆಯ ಕ್ರಿಯೇಟರ್‌ಗಳನ್ನು ಬೆಂಬಲಿಸಲು YouTube ಇಲ್ಲಿದೆ" ಎಂದು ಮೋಹನ್ ಹೇಳಿದರು. ಹೊಸ ಹೂಡಿಕೆಯು ಪ್ರತಿಭೆಗಳಿಗೆ ತರಬೇತಿ ನೀಡುವುದು, ಸೃಜನಶೀಲತೆಯನ್ನು ಬೆಂಬಲಿಸುವುದು ಮತ್ತು ಭಾರತೀಯ ಕ್ರಿಯೇಟರ್‌ಗಳು ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅವರು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕವಾಗಿ ಯೂಟ್ಯೂಬ್‌ನಲ್ಲಿ 25 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಸರ್ಕಾರಿ ನಾಯಕರಾಗಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಭಾರತದ ಕ್ರಿಯೇಟರ್‌ ಸಮುದಾಯವು ವೇಗವಾಗಿ ಬೆಳೆಯುತ್ತಿದೆ - ಕಳೆದ ವರ್ಷದಲ್ಲಿ, 100 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ YouTube ಚಾನೆಲ್‌ಗಳು ಕಂಟೆಂಟ್‌ಗಳನ್ನು ಪ್ರಕಟಿಸಿವೆ ಮತ್ತು 1 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಚಾನೆಲ್‌ಗಳು 11,000 ರಿಂದ 15,000 ಕ್ಕೆ ಏರಿವೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ವೇವ್ಸ್‌ 2025 ಶೃಂಗಸಭೆ: ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವ ಉದ್ದೇಶದಿಂದ 'ವೇವ್ಸ್ 2025' ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ನಾಲ್ಕು ದಿನಗಳ ಕಾರ್ಯಕ್ರಮವನ್ನು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಲಾಗುತ್ತಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಶಾರುಖ್ ಖಾನ್, ಅನುಪಮ್ ಖೇರ್, ಅಮೀರ್ ಖಾನ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಅನೇಕ ದೊಡ್ಡ ಬಾಲಿವುಡ್ ತಾರೆಯರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರು ಇದನ್ನು ಭಾರತೀಯ ಮನರಂಜನಾ ಉದ್ಯಮಕ್ಕೆ ಐತಿಹಾಸಿಕ ಕ್ಷಣ ಎಂದು ಕರೆದಿದ್ದಾರೆ.

ಮುಂಬೈನಲ್ಲಿ ಆಯೋಜಿಸಲಾದ 'ವೇವ್ಸ್ 2025 - ವರ್ಲ್ಡ್ ಆಡಿಯೋ-ವಿಶುವಲ್ ಮತ್ತು ಮನರಂಜನಾ ಶೃಂಗಸಭೆ'ಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಇಂದು ಮೇ 1. 112 ವರ್ಷಗಳ ಹಿಂದೆ ಮೇ 3, 1913 ರಂದು, ಮೊದಲ ಚಲನಚಿತ್ರ ರಾಜಾ ಹರಿಶ್ಚಂದ್ರ ಭಾರತದಲ್ಲಿ ಬಿಡುಗಡೆಯಾಯಿತು. ಇದರ ನಿರ್ಮಾಪಕ ದಾದಾಸಾಹೇಬ್ ಫಾಲ್ಕೆ ಮತ್ತು ನಿನ್ನೆ ಅವರ ಜನ್ಮ ವಾರ್ಷಿಕೋತ್ಸವ. ಕಳೆದ ಶತಮಾನದಲ್ಲಿ, ಭಾರತೀಯ ಸಿನಿಮಾ ಭಾರತವನ್ನು ವಿಶ್ವದ ಮೂಲೆ ಮೂಲೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಕಥೆಯೂ ಭಾರತೀಯ ಸಂಸ್ಕೃತಿಯ ಧ್ವನಿಯಾಗಿದೆ ಮತ್ತು ಪ್ರಪಂಚದ ಕೋಟ್ಯಂತರ ಜನರ ಹೃದಯಗಳನ್ನು ತಲುಪಿದೆ' ಎಂದು ಹೇಳಿದ್ದಾರೆ.