2026ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳು ಸೇರಿದಂತೆ ದೇಶಾದ್ಯಂತ ಒಟ್ಟು ಏಳು ಯೋಜನೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. 

ನವದೆಹಲಿ (ಫೆ.1): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ 2026-27ರ ಸಾಲಿನ ಕೇಂದ್ರ ಬಜೆಟ್‌ ಮಂಡಿಸಿದ್ದು, ಬೆಂಗಳೂರು -ಹೈದರಾಬಾದ್‌ ಹಾಗೂ ಬೆಂಗಳೂರು-ಚೆನ್ನೈ ನಡುವೆ ಬಹುಮಹತ್ವದ ಹೈಸ್ಪೀಡ್‌ ರೈಲು ಕಾರಿಡಾರ್‌ಅನ್ನು ಘೋಷಣೆ ಮಾಡಿದ್ದಾರೆ. ದೇಶದ ಮೊಟ್ಟಮೊದಲ ಬುಲೆಟ್‌ ಟ್ರೇನ್‌ ಮುಂಬೈ ಹಾಗೂ ಅಹಮದಾಬಾದ್‌ ನಡುವೆ ಮುಂದಿನ ವರ್ಷದ ಆಗಸ್ಟ್‌ನಲ್ಲಿ ಉದ್ಘಾಟನೆಯಾಗಲಿದೆ. ಅದರ ನಡುವೆಯೇ ಕೇಂದ್ರ ಸರ್ಕಾರ ಮುಂದಿನ ಏಳು ಮಹತ್ವದ ಹೈಸ್ಪೀಡ್‌ ರೈಲು ಕಾರಿಡಾರ್‌ಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ ಬೆಂಗಳೂರನ್ನು ಸಂಪರ್ಕಿಸುವ ಎರಡು ಯೋಜನೆ ಘೋಷಣೆಯಾಗಿದೆ.

ಬೆಂಗಳೂರು ಮಾತ್ರವಲ್ಲದೆ, ಮುಂಬೈನಿಂದ ಪುಣೆ, ಪುಣೆಯಿಂದ ಹೈದರಾಬಾದ್‌, ಹೈದರಾಬಾದ್‌ನಿಂದ ಚೆನ್ನೈ, ದೆಹಲಿಯಿಂದ ವಾರಣಾಸಿ ಹಾಗೂ ವಾರಣಾಸಿಯಿಂದ ಸಿಲಿಗುರಿಗೆ ಹೈಸ್ಪೀಡ್‌ ರೈಲು ಕಾರಿಡಾರ್‌ ಘೋಷಣೆ ಮಾಡಿದ್ದಾರೆ.

ಭಾರತವು ಪ್ರಮುಖ ನಗರಗಳ ನಡುವೆ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಘೋಷಿಸಿದ್ದಾರೆ. 2026-27ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಾ, ಈ ಕಾರಿಡಾರ್‌ಗಳು ಪರಿಸರ ಸ್ನೇಹಿ ಪ್ರಯಾಣಿಕ ವ್ಯವಸ್ಥೆಗಳನ್ನು ಉತ್ತೇಜಿಸಲು 'ಬೆಳವಣಿಗೆಯ ಕನೆಕ್ಟರ್‌'ಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸೀತಾರಾಮನ್ ಹೇಳಿದರು.