ಸ್ಯಾಲರಿ ಪಡೆಯುವ ಬೆಂಗಳೂರಿಗರಿಗೆ ಬಿಗ್ ಟ್ಯಾಕ್ಸ್ ರಿಲೀಫ್, ಶೇ.50ರಷ್ಟು HRA ವಿನಾಯಿತಿ, ಹೊಸ ಆದಾಯ ತೆರಿಗೆ ಕರಡು ನಿಯಮದಲ್ಲಿ ಈ ಬಾರಿ ಬೆಂಗಳೂರು ನಗರವನ್ನು ತೆರಿಗೆ ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಇದರಿಂದ ಎಲ್ಲಾ ವೇತನದಾರರು ಭರ್ಜರಿ ತೆರಿಗೆ ವಿನಾಯಿತಿ ಪಡೆಯಲಿದ್ದಾರೆ.
ಬೆಂಗಳೂರು (ಫೆ.11) ಕೇಂದ್ರ ಬಜೆಟ್ 2026ರ ಬೆನ್ನಲ್ಲೇ ಇದೀಗ ಬೆಂಗಳೂರಿನ ಸ್ಯಾಲರಿ ಉದ್ಯೋಗಿಗಳಿಗೆ ಮತ್ತೊಂದು ಬಿಗ್ ರಿಲೀಫ್ ಸಿಗುತ್ತಿದೆ. ಅದು ವಿಶೇಷವಾಗಿ ತೆರಿಗೆ ವಿನಾಯಿತಿ. ಎಲ್ಲಾ ಸ್ಯಾಲರಿ ಉದ್ಯೋಗಿಗಳು ಶೇಕಡಾ 50ರಷ್ಟು HRA ವಿನಾಯಿತಿ ಪಡೆಯಲಿದ್ದಾರೆ. ಹೌದು, 2026ರ ಹೊಸ ಆದಾಯ ತೆರಿಗೆ ಕರಡು ನಿಯಮ ಬಿಡುಗಡೆ ಮಾಡಲಾಗಿದೆ. ಈ ಕರಡು ನಿಯಮದಲ್ಲಿ ಬೆಂಗಳೂರು ನಗರವನ್ನು ಶೇಕಡಾ 50ರಷ್ಟು ಮನೆ ಬಾಡಿಗೆ ಭತ್ಯೆ(HRA) ವಿನಾಯಿತಿ ಪಡೆಯಬಹುದಾದ ನಗರಗಳ ಪಟ್ಟಿಯಲ್ಲಿ ಸೇರಿಸಲು ಪ್ರಸ್ತಾಪಿಸಲಾಗಿದೆ. ಇದರ ಪರಿಣಾಮ ವೇತನ ಪಡೆಯುವ ಬೆಂಗಳೂರಿಗರು ಇದರ ಲಾಭ ಪಡೆಯಲಿದ್ದಾರೆ.
ಐದನೇ ನಗರಕ್ಕೆ HRA ವಿನಾಯಿತಿ ವಿಸ್ತರಣೆ
ದೆಹಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ನಗರಗಳಿಗೆ ಶೇಕಡಾ 50ರಷ್ಟು HRA ತೆರಿಗೆ ವಿನಾಯಿತಿ ನೀಡಲಾಗಿದೆ. ಸದ್ಯ ಬೆಂಗಳೂರು ಸೇರಿದಂತೆ ಇತರ ಕೆಲ ನಗರಗಳಿಗೆ ಶೇಕಡಾ 40ರಷ್ಟಿದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಬಾಡಿಗೆ ದುಬಾರಿಯಾಗಿದ್ದರೂ ತೆರಿಗೆ ವಿನಾಯಿತಿಯಲ್ಲಿ ಹೆಚ್ಚಿನ ಲಾಭ ಸಿಗುತ್ತಿರಲಿಲ್ಲ.
ಖಾಸಗಿ ಹಾಗೂ ಸರ್ಕಾರಿ ವಲಯಗಳ ಉದ್ಯೋಗಿಗಳಿಗೆ ವಿನಾಯಿತಿ
ಶೇಕಡಾ 50 ರಷ್ಟು ಮನೆ ಬಾಡಿಗೆ ಭತ್ಯೆ ವಿನಾಯಿತಿ ಪಟ್ಟಿಯಲ್ಲಿ ಬೆಂಗಳೂರು ಸೇರ್ಪಡೆಗೊಂಡರೆ ಬೆಂಗಳೂರಿನ ಲಕ್ಷಾಂತರ ಉದ್ಯೋಗಿಗಳಿಗೆ ನೆರವಾಗಲಿದೆ. ಇದು ಖಾಸಗಿ ಹಾಗೂ ಸರ್ಕಾರಿ ವಲಯದ ಎಲ್ಲಾ ಸ್ಯಾಲರಿ ಪಡೆಯುವ ಉದ್ಯೋಗಿಗಳಿಗೆ ಇದರ ನೆರವು ಸಿಗಲಿದೆ. ಆದರೆ ಈ ತೆರಿಗೆ ವಿನಾಯಿತಿ ಲಾಭ ಪಡೆಯಲು ಹಳೇ ತೆರಿಗೆ ಪದ್ಧತಿ (Old Tax Regime) ಆಯ್ಕೆ ಮಾಡಿದವರಿಗೆ ಮಾತ್ರ ಈ ಲಾಭ ಸಿಗಲಿದೆ. ಹೊಸ ರಿಜಿಮ್ ಅಡಿಯಲ್ಲಿ ತೆರಿಗೆ ಪಾವತಿ ಮಾಡುವವರಿಗೆ ಇದರ ಲಾಭ ಪಡೆಯಲು ಸಾಧ್ಯವಿಲ್ಲ.
ವಾರ್ಷಿಕವಾಗಿ ಎಷ್ಟು ಹಣ ಉಳಿತಾಯವಾಗಲಿದೆ
ಶೇಕಡಾ 50ರಷ್ಟು HRA ತೆರಿಗೆ ವಿನಾಯಿತಿ ಲಾಭ ಪಡೆಯುವ ವ್ಯಕ್ತಿ ವಾರ್ಷಿಕಾಗಿ ಎಷ್ಟು ಹಣ ಉಳಿತಾಯ ಮಾಡಬಹುದು? ಉದಾಹರಣೆಗೆ ಶೇಕಡಾ 30ರ ಟ್ಯಾಕ್ಸ್ ಸ್ಲಾಬ್ನ ಅಡಿಯಲ್ಲಿ ಬರವು ಸ್ಯಾಲರಿ ಉದ್ಯೋಗಿ ವಾರ್ಷಿಕವಾಗಿ 10 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿವರೆಗೆ ತೆರಿಗೆ ಉಳಿತಾಯ ಮಾಡಲು ಸಾಧ್ಯವಿದೆ.
ಏಪ್ರಿಲ್ 1ಕ್ಕೆ ಜಾರಿಗೆ
ಸದ್ಯ ಹೊಸ ತೆರಿಗೆ ವಿನಾಯಿತಿ ಕರಡು ಪ್ರಸ್ತಾವನೆ ರೂಪದಲ್ಲಿದೆ. ಕರಡು ಹಂತದಲ್ಲಿರುವ ಈ ನಿಯಮದ ಕುರಿತು ಸಾರ್ವಜನಿಕ ಅಭಿಪ್ರಾಯ ಕೇಳಲಾಗಿದೆ. ಸಾರ್ವಜನಿಕರು ಹಾಗೂ ತಜ್ಞರ ಅಭಿಪ್ರಾಯ ಪಡೆದ ಬಳಿಕ ತಿದ್ದುಪಡಿಗಳಿದ್ದರೆ ಅಥವಾ ಬದಲಾವಣೆಗಳಿದ್ದರೆ ಮಾಡಲಾಗುತ್ತದೆ. ಬಳಿಕ ಏಪ್ರಿಲ್ 1, 2026ರಿಂದ ಹೊಸ ತೆರಿಗೆ ವಿನಾಯಿತಿ ನಿಯಮ ಜಾರಿಗೆ ಬರಲಿದೆ.
ಬೆಂಗಳೂರನ್ನು ಈ ತೆರಿಗೆ ಪಟ್ಟಿಯಲ್ಲಿ ಸೇರಿಸಲು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ನಾಯಕರು ಒತ್ತಾಯಿಸಿದ್ದರು. ಇದೀಗ ಇವರ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ.


