*  ‘ಕರ್ನಾಟಕ ಕೋಸ್ಟ್‌ಲೈನ್‌ ಬಿಜಿನೆಸ್‌ ಮತ್ತು ಮೆರಿಟೈಮ್‌ ಸಮಾವೇಶ’ ಉದ್ಘಾಟನೆ*  ಪ್ರವಾಸಿ ಬಂದರು ನಿರ್ಮಾಣಕ್ಕೆ ಸಿಎಂ ಭರವಸೆ*  ರಾಜ್ಯ ಹಾಗೂ ಕರಾವಳಿಯ ಕೈಗಾರಿಕಾ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬದ್ಧ 

ಮಂಗಳೂರು(ಮೇ.13):  ಮಂಗಳೂರಿನಲ್ಲಿ ಸುಮಾರು 7,500 ಕೋಟಿ ರು. ಹೂಡಿಕೆಯಲ್ಲಿ ರಸಗೊಬ್ಬರ ಕಾರ್ಖಾನೆ(Fertilizer Factory) ಆರಂಭಿಸುವ ಸಿದ್ಧತೆ ನಡೆಯುತ್ತಿದ್ದು, ಇದರಿಂದ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ(Job) ದೊರಕಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನಕ್ಕಿಂತ ಮೊದಲೇ ಇದರ ಕಾರ್ಯಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್‌ ನಿರಾಣಿ(Murugesh Nirani) ಹೇಳಿದರು.

ನಗರದ ಹೋಟೆಲ್‌ ಓಷಿಯನ್‌ ಪರ್ಲ್‌ನಲ್ಲಿ ಗುರುವಾರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಸಹಭಾಗಿತ್ವದಲ್ಲಿ ಆಯೋಜಿಸಲಾದ ‘ಕರ್ನಾಟಕ ಕೋಸ್ಟ್‌ಲೈನ್‌ ಬಿಜಿನೆಸ್‌ ಮತ್ತು ಮೆರಿಟೈಮ್‌ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

Sri Lanka Crisis ಲಂಕನ್ನರು ನುಸುಳುವ ಭೀತಿ, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ!

ರಾಜ್ಯದ(Karnataka) ಕೈಗಾರಿಕೆಗಳ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಗ್ರಾ.ಪಂ.ನಿಂದ ಪಾಲಿಕೆ ವರೆಗೆ ವಿವಿಧ ಸ್ಥಳಿಯ ಸಂಸ್ಥೆಗಳು ಕಿರುಕುಳ ನೀಡುತ್ತಿರುವ ಕುರಿತಂತೆ ದೂರುಗಳು ಬಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪಾವತಿ ವ್ಯವಸ್ಥೆ ಸರಳೀಕರಣ ಮಾಡಲಾಗುವುದು ಎಂದು ಅವರು ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಮಾತನಾಡಿ, ರಾಜ್ಯ ಹಾಗೂ ಕರಾವಳಿಯ ಕೈಗಾರಿಕಾ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬದ್ಧವಾಗಿದೆ. ಮೂಲಸೌಲಭ್ಯ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಹೂಡಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿಯಾಗಲಿದೆ ಎಂದರು.

ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು ಮುಖ್ಯ ಭಾಷಣ ಮಾಡಿ, ಅಂತಾರಾಷ್ಟ್ರೀಯ ವಿಹಾರ ನೌಕೆಗಳು ಲಂಗರು ಹಾಕುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಬಂದರು ನಿರ್ಮಾಣದ ಅವಶ್ಯಕತೆಯಿದ್ದು, ಇದು ಪ್ರವಾಸೋದ್ಯಮ ಮಾತ್ರವಲ್ಲದೆ ಆರ್ಥಿಕ ಬೆಳವಣಿಗೆಗೂ ನೆರವಾಗಲಿದೆ ಎಂದರು.

ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಸಿಇಒ ಕಪಿಲ್‌ ಮೋಹನ್‌ ಮಾತನಾಡಿ, ಕರಾವಳಿಯಲ್ಲಿ ಕೊಚ್ಚಿಯ ಇಂಡಿಯನ್‌ ಮೆರಿಟೈಮ್‌ ವಿವಿ ಸಹಯೊಗದಲ್ಲಿ ತರಬೇತಿ ಸಂಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ. ಮಂಗಳೂರು(Mangaluru)- ಲಕ್ಷದ್ವೀಪದ ನಡುವಿನ ಹಿಂದಿನ ಐತಿಹಾಸಿಕ ಸಂಬಂಧವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬತ್‌ರ್‍ ನಿರ್ಮಾಣ ಮಾಡಲಾಗುವುದು ಎಂದರು. ಉದ್ಯಮಿಗಳಾದ ಸುಜಾತಾ ಕಾಮತ್‌, ಉಷಾ ಶೆಣೈ, ಪ್ರಮೋದ್‌ ಹೆಗ್ಡೆ, ಕೃಷ್ಣಾನಂದ ಕಾಮತ್‌, ಮುಕುಂದ್‌ ಕಾಮತ್‌ ಮತ್ತಿತರರಿಗೆ ಸಾಧಕ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕಕ್ಕೆ ಟೊಮ್ಯಾಟೊ ಫ್ಲೂ ಆತಂಕ: ಸಚಿವ ಸುಧಾಕರ್ ಹೇಳಿದ್ದೇನು?

ರಾಜ್ಯ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಗೌರವ್‌ ಗುಪ್ತ, ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್‌, ಕೆಸಿಸಿಐ ಅಧ್ಯಕ್ಷ ಶಶಿಧರ ಪೈ ಮಾರೂರು ಇದ್ದರು.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ ಕರ್ನಾಟಕ ಅಧ್ಯಕ್ಷ ಉಲ್ಲಾಸ್‌ ಕಾಮತ್‌ ಸ್ವಾಗತಿಸಿದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಪ್ರವಾಸಿ ಬಂದರು ನಿರ್ಮಾಣಕ್ಕೆ ಸಿಎಂ ಭರವಸೆ

ಮೆರಿಟೈಮ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ವೀಡಿಯೊ ಸಂದೇಶ ನೀಡಿ, 360 ಕಿ.ಮೀ. ವ್ಯಾಪ್ತಿಯ ಕರಾವಳಿ ಪ್ರದೇಶ ಅಭಿವೃದ್ಧಿಗೆ ಎಂಟು ಸಾವಿರ ಕೋಟಿ ರು. ಮೊತ್ತದ ಸಾಗರಮಾಲಾ ಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದು, ಅದರಲ್ಲಿ ಪ್ರವಾಸಿ ಬಂದರು ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದರು.

ಗುಜರಾತ್‌, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳ ಪ್ರವಾಸಿಗರನ್ನು ಬಂದರು ಮೂಲಕ ಆಕರ್ಷಿಸುವ ಪ್ರಯತ್ನ ಮಾಡಲಾಗುವುದು. ಇದನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನ ಮಾಡಲಾಗುವುದು. ಬಂದರಿನಲ್ಲಿ ರೋಬೋ ತಂತ್ರಜ್ಞಾನ ಮೂಲಕ ನಿರ್ವಹಣಾ ಸಾಮರ್ಥ್ಯ ಹೆಚ್ಚಿಸಲು ಉದ್ದೇಶಿಸಲಾಗಿದೆ. ಮೆರಿಟೈಮ್‌ ಬೋರ್ಡ್‌ ಮೂಲಕ ಸಮುದ್ರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುವುದು ಎಂದರು.