* ಕರ್ನಾಟಕಕ್ಕೆ ಟೊಮ್ಯಾಟೊ ಫ್ಲೂ ಆತಂಕ: ಸಚಿವ ಸುಧಾಕರ್ ಫಸ್ಟ್ ರಿಯಾಕ್ಷನ್* ಭಯ ಬೇಡ ಎಂದ ಆರೋಗ್ಯ ಸಚಿವ ಸುಧಾಕರ್* ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಕ್ರಮ


ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

Add Asianetnews Kannada as a Preferred SourcegooglePreferred

ಬೆಂಗಳೂರು, (ಮೇ.12): ಕೇರಳದಲ್ಲಿ 80 ಕ್ಕೂ ಹೆಚ್ಚು ಪುಟ್ಟ ಮಕ್ಕಳಿಗೆ ಟೊಮ್ಯಾಟೊ ಫ್ಲೂ ಕಾಣಿಸಿಕೊಂಡಿದ್ದು ರಾಜ್ಯಕ್ಕೂ ಆತಂಕ ಉಂಟುಮಾಡಿದೆ. ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದ್ದಾರೆ. ಟೊಮ್ಯಾಟೊ ಫ್ಲೂ ಈಗಾಗಲೇ ಇರುವ ಕಾಯಿಲೆ, ಆತಂಕ ಬೇಕಿಲ್ಲ ಅಂತ ಸಚಿವ ಸುಧಾಕರ್ ಹೇಳಿದ್ದಾರೆ. 

ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಆರೋಗ್ಯ ಇಲಾಖೆ ಇಂದ(ಗುರುವಾರ) ಸೂಚಿಸಿಲಾಗಿದೆ. ಕೇರಳ ರಾಜ್ಯದ ಅರ್ಯಂಕಾರು, ಅಂಚಲ್ ಹಾಗೂ ನೆಡುವತೂರ್ ನಲ್ಲಿ ಈ ಕಾಯಿಲೆ ಪತ್ತೆಯಾಗಿದೆ. ಹೀಗಾಗಿ ಕೇರಳ ಗಡಿ ಭಾಗದ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ನಿಗಾ ವಹಿಸಲು ಆದೇಶಿಸಲಾಗಿದೆ. ಈ ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಬೇಕಿದೆ. ಅಲ್ಲದೇ ರಾಜ್ಯಾದ್ಯಂತ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡುಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ‌.

Tomato Flu ಕೇರಳದಲ್ಲಿ ಮಕ್ಕಳಿಗೆ ಟೊಮೆಟೋ ಜ್ವರ, 80ಕ್ಕೂ ಹೆಚ್ಚು ಕೇಸ್ ಪತ್ತೆ!

ಸಾಮಾನ್ಯವಾಗಿ 5 ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಕಂಡುಬರುವ ಸಮಸ್ಯೆ ಇದಾಗಿದ್ದು, ಮಕ್ಕಳನ್ನ ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕಿದೆ. ಈ ಸಮಸ್ಯೆ ಶುಚಿತ್ವ ಕಾಪಾಡಿಕೊಳ್ಳಲು ಇರುವುದೇ ಪ್ರಮುಖ ಮುಂಜಾಗ್ರತಾ ಕ್ರಮವಾಗಿದೆ. 

ಟೊಮ್ಯಾಟೊ ಜ್ವರದ ಕೆಲವು ಪ್ರಮುಖ ಲಕ್ಷಣಗಳು
* ವಿಪರೀತ ಜ್ವರ, ನಿರ್ಜಲೀಕರಣ, ಚರ್ಮದ ಮೇಲೆ ದದ್ದುಗಳು 
* ಚರ್ಮದ ತುರಿಕೆ, ಕೈ ಮತ್ತು ಕಾಲುಗಳ ಚರ್ಮದ ಬಣ್ಣವೂ ಬದಲು
* ಚರ್ಮದ ಮೇಲೆ‌ ಕೆಂಪು‌ ಗುಳ್ಳೆಗಳು ಕೂಡ ಉಂಟಾಗುತ್ತದೆ 
* ಚರ್ಮ ಕೆಂಪಾಗುವುದು, ನೀರಡಿಕೆ ರೋಗ ಲಕ್ಷಣಗಳು
* ಗುಳ್ಳೆಗಳು, ಕಿಬ್ಬೊಟ್ಟೆಯ ಸೆಳೆತ, ವಾಕರಿಕೆ, ವಾಂತಿ
* ಅತಿಸಾರ, ಸ್ರವಿಸುವ ಮೂಗು, ಕೆಮ್ಮು, ಸೀನು,
* ಆಯಾಸ ಮತ್ತು ದೇಹದಲ್ಲಿ ನೋವು ಪ್ರಮುಖ ಲಕ್ಷಣಗಳಾಗಿವೆ

ಹರಡುವ ತೀವ್ರತೆ ಬಗ್ಗೆ ಸ್ಟಡಿ ಮಾಡುತ್ತಿದ್ದೇವೆ
ಟೊಮ್ಯಾಟೊ ಫ್ಲೂ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ‌ಇಲಾಖೆ ಆಯುಕ್ತ ಡಾ.‌ರಂದೀಪ್, ಈ ಕಾಯಿಲೆ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಹೀಗಾಗಿ ಹೆಚ್ಚು ನಿಗಾ ವಹಿಸುತ್ತಿದ್ದೇವೆ ಎಂದರು. ರಾಜ್ಯದಲ್ಲಿ ಇದುವರೆಗೂ ಕೇಸ್ ಕಂಡು ಬಂದಿಲ್ಲ. ಇದು ಸೆಲ್ಫ್ ಲಿಮಿಟಿಂಗ್ ಕಾಯಿಲೆ. ರೋಗ ಲಕ್ಷಣ ನೋಡಿಕೊಂಡು ಚಿಕಿತ್ಸೆ ನೀಡಲಾಗತ್ತೆ. ನಾಲ್ಕೈದು ದಿನದ ಬಳಿಕ ಲಕ್ಷಣಗಳು ಕಡಿಮೆ ಆಗತ್ತೆ. ಹೇಗೆ ಟೆಸ್ಟ್ ಮಾಡಬೇಕು ಎನ್ನುವುದರ ಬಗ್ಗೆ ಇವತ್ತು ಮಾಹಿತಿ ಸಿಗಲಿದೆ. ಇದಕ್ಕೆ ನಿಖರವಾದ ಚಿಕಿತ್ಸೆ ಇಲ್ಲ ಎಂದು ಆಯುಕ್ತ ಡಾ‌. ರಂದೀಪ್ ಹೇಳಿದ್ದಾರೆ. ಈ ಸಮಸ್ಯೆ ಇಂದ ಡೆತ್ ಆಗಿರುವ ಬಗ್ಗೆಯೂ ವರದಿಯಾಗಿಲ್ಲ. ಹರಡುವಿಕೆ ತೀವ್ರತೆ ಬಗ್ಗೆ ಸ್ಟಡಿ ಮಾಡುತ್ತಿದ್ದೇವೆ. ಹೆಚ್ಚು ಹರಡುವಿಕೆ ಕಂಡು ಬಂದರೆ ಕೋವಿಡ್ ಗೆ ತೆಗೆದುಕೊಳ್ಳುವಂತೆ ಐಸೋಲೇಷನ್ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ