ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ 6,526 ಕೋಟಿ ರೂ. ನಿಧಿ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ, ಉದ್ಯಮಿ ಅನಿಲ್ ಅಂಬಾನಿ ಸಲ್ಲಿಸಿದ್ದ ರಾಜಿ ಸಂಧಾನದ ಅರ್ಜಿಯನ್ನು ಸೆಬಿ ತಿರಸ್ಕರಿಸಿದೆ. ಪ್ರಕರಣದ ಗಂಭೀರತೆ ಮತ್ತು ಸಿಬಿಐ, ಇಡಿ ಯಂತಹ ಇತರ ತನಿಖಾ ಸಂಸ್ಥೆಗಳ ಒಳಗೊಳ್ಳುವಿಕೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಂಬಾನಿ ಮತ್ತು ಅವರ ಕಂಪನಿಗಳು ಕಠಿಣ ಕ್ರಮಗಳನ್ನು ಎದುರಿಸುವ ಸಾಧ್ಯತೆಯಿದೆ.

ಮುಂಬೈ: ದೇಶದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI), ಪ್ರಮುಖ ಉದ್ಯಮಿ ಅನಿಲ್ ಅಂಬಾನಿ ಮತ್ತು ಅವರ ಒಡೆತನದ 'ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್' ಕಂಪನಿಗೆ ಬಹಳ ದೊಡ್ಡ ಕಾನೂನು ಆಘಾತ ನೀಡಿದೆ. ಕಂಪನಿಯ ಬರೋಬ್ಬರಿ 6,526 ಕೋಟಿ ರೂ. (ಸುಮಾರು 691 ಮಿಲಿಯನ್ ಡಾಲರ್) ನಷ್ಟು ಬೃಹತ್ ಮೊತ್ತದ ಹಣವನ್ನು ನಿಯಮಬಾಹಿರವಾಗಿ ವರ್ಗಾವಣೆ ಮಾಡಿದ ಹಾಗೂ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪ ಎದುರಿಸುತ್ತಿರುವ ಅನಿಲ್ ಅಂಬಾನಿ, ಈ ಪ್ರಕರಣವನ್ನು ರಾಜಿ ಸಂಧಾನ ಮಾಡಿಕೊಳ್ಳಲು (Settlement) ಸಲ್ಲಿಸಿದ್ದ ಅರ್ಜಿಯನ್ನು ಸೆಬಿ ಅಧಿಕೃತವಾಗಿ ತಿರಸ್ಕರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು 6,526 ಕೋಟಿ ರೂ.ಗಳ ನಿಧಿ ದುರುಪಯೋಗದ ಹಗರಣ?

ವರದಿ ಪ್ರಕಾರ ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ತಮ್ಮ ನಿಯಂತ್ರಣದಲ್ಲಿರುವ ಹಾಗೂ ಅಂಬಾನಿ ಕುಟುಂಬಕ್ಕೆ ನೇರ ಸಂಬಂಧ ಹೊಂದಿರುವ ಇತರ ಖಾಸಗಿ ಸಂಸ್ಥೆಗಳಿಗೆ 6,526 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂಬ ಗಂಭೀರ ಆರೋಪವಿದೆ.

ಸೆಪ್ಟೆಂಬರ್ 2025ರ ಅವಧಿಯಲ್ಲಿ ಸೆಬಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಈ ವಹಿವಾಟುಗಳು ಸಾರ್ವಜನಿಕ ಷೇರುದಾರರ ಹಿತಾಸಕ್ತಿ ಕಾಯುವ ಯಾವುದೇ ಕಾರ್ಪೊರೇಟ್ ಉದ್ದೇಶವನ್ನು ಹೊಂದಿರಲಿಲ್ಲ. ಬದಲಿಗೆ ಕಂಪನಿಯ ಸಾರ್ವಜನಿಕ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸೆಬಿ ಖಚಿತಪಡಿಸಿತ್ತು.

ಈ ವಿಷಯದ ಗಾಂಭೀರ್ಯತೆಯನ್ನು ಅರಿತಿರುವ ಸೆಬಿ, ಈ ಹಗರಣದ ತನಿಖೆಯು ಕೇವಲ ತನ್ನ ವ್ಯಾಪ್ತಿಗಷ್ಟೇ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ದೇಶದ ಪ್ರಮುಖ ಆರ್ಥಿಕ ಅಪರಾಧ ತನಿಖಾ ಸಂಸ್ಥೆಗಳು ಮತ್ತು ವಂಚನೆ ತಡೆ ಕಚೇರಿಗಳು (CBI ಮತ್ತು ED) ಸಹ ಇದರ ಬೆನ್ನಟ್ಟಿವೆ. ಈ ಬಹುಮುಖಿ ತನಿಖೆಗಳ ಕಾರಣದಿಂದಾಗಿಯೇ ಸೆಬಿ ಈ ಪ್ರಕರಣದ ಇತ್ಯರ್ಥಕ್ಕೆ (Consent Settlement) ಒಪ್ಪಿಗೆ ನೀಡಲು ಖಡಾಖಂಡಿತಾಗಿ ನಿರಾಕರಿಸಿದೆ.

ಸೆಬಿಯ ಇತ್ಯರ್ಥ ಪ್ರಕ್ರಿಯೆ ನಿಯಮ ಏನು ಹೇಳುತ್ತದೆ?

ಷೇರು ಮಾರುಕಟ್ಟೆ ನಿಯಮಗಳ ಪ್ರಕಾರ, ಯಾವುದೇ ಕಂಪನಿಯು ತನ್ನ ಮೇಲಿನ ತಪ್ಪುಗಳನ್ನು ಔಪಚಾರಿಕವಾಗಿ ಒಪ್ಪಿಕೊಳ್ಳದೆ, ನಿಯಂತ್ರಕ ಸಂಸ್ಥೆಗೆ ನಿರ್ದಿಷ್ಟ ಮೊತ್ತದ ದಂಡವನ್ನು ಪಾವತಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು (Settlement Option) ಅವಕಾಶವಿರುತ್ತದೆ.

ಆದರೆ, ಈಗ ಸೆಬಿ ಈ ಇತ್ಯರ್ಥದ ಅರ್ಜಿಯನ್ನು ತಿರಸ್ಕರಿಸಿರುವುದರಿಂದ, ಮುಂದಿನ ದಿನಗಳಲ್ಲಿ ಈ ಉಲ್ಲಂಘನೆಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಸುದೀರ್ಘ ಸಾರ್ವಜನಿಕ ಆದೇಶವನ್ನು ಸೆಬಿ ಹೊರಡಿಸಲಿದೆ. ಇದರ ಅಡಿಯಲ್ಲಿ ಅನಿಲ್ ಅಂಬಾನಿ ಮತ್ತು ಅವರ ಸಂಸ್ಥೆಗಳಿಗೆ ಭಾರೀ ಮೊತ್ತದ ದಂಡ ವಿಧಿಸುವುದರ ಜೊತೆಗೆ, ಬಂಡವಾಳ ಮಾರುಕಟ್ಟೆ ಪ್ರವೇಶಿಸದಂತೆ (ಷೇರು ಮಾರುಕಟ್ಟೆಯಿಂದ ಬ್ಯಾನ್) ಕಠಿಣ ನಿರ್ಬಂಧ ಹೇರುವ ಸಾಧ್ಯತೆಯಿದೆ. ಆದಾಗ್ಯೂ, ಈ ಆದೇಶದ ವಿರುದ್ಧ ಕಂಪನಿಗಳು ಸೆಕ್ಯುರಿಟೀಸ್ ಅಪ್ಲಿಕೇಟ್ ಟ್ರಿಬ್ಯೂನಲ್ (SAT) ಅಥವಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ.

ರಿಲಯನ್ಸ್ ಗ್ರೂಪ್‌ನ ಸ್ಪಷ್ಟನೆ ಮತ್ತು ಎರಡನೇ ಬಾರಿಯ ಹಿನ್ನಡೆ

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‌ನ ಅಧಿಕೃತ ವಕ್ತಾರರು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ಇಡೀ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದು (Sub-judice), ಕಾನೂನು ತಜ್ಞರ ಸಲಹೆಯ ಮೇರೆಗೆ ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಲು ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ವಿಶೇಷವೆಂದರೆ, ಅನಿಲ್ ಅಂಬಾನಿ ಅವರ ಇತ್ಯರ್ಥ ಅರ್ಜಿಯನ್ನು ಸೆಬಿ ತಿರಸ್ಕರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಭಾರತದ ಪ್ರಮುಖ ಬ್ಯಾಂಕ್ ಆಗಿದ್ದ 'ಯೆಸ್ ಬ್ಯಾಂಕ್' (Yes Bank) ಹೂಡಿಕೆ ಹಾಗೂ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಇತ್ಯರ್ಥಗೊಳಿಸಲು ಅವರು ಸಲ್ಲಿಸಿದ್ದ ಅರ್ಜಿಯನ್ನೂ ಸಹ ಸೆಬಿ ಇದೇ ರೀತಿ ತಿರಸ್ಕರಿಸಿತ್ತು.

ಅನಿಲ್ ಅಂಬಾನಿ ಸುತ್ತ ಬಿಗಿಯಾಗುತ್ತಿರುವ ತನಿಖಾ ಸಂಸ್ಥೆಗಳ ಉರುಳು

ಕಳೆದ 18 ತಿಂಗಳುಗಳಿಂದ ಉದ್ಯಮಿ ಅನಿಲ್ ಅಂಬಾನಿ ಮೇಲಿನ ನಿಯಂತ್ರಣ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳ ನಿಗಾ ಗಣನೀಯವಾಗಿ ತೀವ್ರಗೊಂಡಿದೆ. ಈಗಾಗಲೇ ಅನಿಲ್ ಅಂಬಾನಿ ಸೇರಿದಂತೆ ರಿಲಯನ್ಸ್ ಸಮೂಹದ ಹಲವು ಹಿರಿಯ ಅಧಿಕಾರಿಗಳನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ED) ಸುದೀರ್ಘ ವಿಚಾರಣೆಗೆ ಒಳಪಡಿಸಿದೆ. ಬ್ಯಾಂಕ್ ವಂಚನೆ ಆರೋಪದಡಿಯಲ್ಲಿ ಕೆಲವು ಪ್ರಮುಖ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ ಅವರಿಗೆ ಸೇರಿದ ಸಾವಿರಾರು ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು, ಶೇರುಗಳನ್ನು ಈಗಾಗಲೇ ತಾತ್ಕಾಲಿಕವಾಗಿ ಮುಟ್ಟುಗೋಲು (Freeze) ಹಾಕಿಕೊಂಡಿದೆ.

ಷೇರು ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತ

ಸೆಬಿಯ ಈ ಕಠಿಣ ಕ್ರಮದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲೂ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ಭಾರಿ ಹೊಡೆತ ಬಿದ್ದಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನಲ್ಲಿ ರಿಲಯನ್ಸ್ ಇನ್ಫ್ರಾ (Reliance Infra) ಷೇರುಗಳ ಮುಕ್ತ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಹಿವಾಟು ನಿಲ್ಲುವ ಮುನ್ನ ಈ ಷೇರಿನ ಬೆಲೆ ಕೇವಲ ₹77 ಆಗಿತ್ತು. ಪ್ರಸ್ತುತ ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಈ ಷೇರಿನ ಮುಂದೆ "ವ್ಯಾಪಾರ ನಿರ್ಬಂಧಿತ" (Trading Restricted) ಎಂಬ ಮುನ್ನೆಚ್ಚರಿಕಾ ಸಂದೇಶವನ್ನು ಪ್ರದರ್ಶಿಸಲಾಗುತ್ತಿದೆ. ಇದು ಹೂಡಿಕೆದಾರರಲ್ಲೂ ಆತಂಕ ಮೂಡಿಸಿದೆ.