Asianet Suvarna News Asianet Suvarna News

PM Modi address:ಬ್ಯಾಂಕ್‌ ತಾವು ನೀಡುವವರು ಗ್ರಾಹಕರು ಸ್ವೀಕರಿಸುವವರು ಭಾವನೆ ಬಿಡಬೇಕು; ಪ್ರಧಾನಿ ಮೋದಿ!

  • ಬ್ಯಾಂಕ್‌ ತಾವು ನೀಡುವವರು, ಗ್ರಾಹಕರು ಸ್ವೀಕರಿಸುವವರು ಎಂಬ ಭಾವನೆ ತೊಡೆದುಹಾಕಬೇಕು
  • ಆರ್ಥಿಕತೆಗೆ ಶಕ್ತಿ, ಸ್ವಾವಲಂಬನೆಗೆ ಒತ್ತು ನೀಡಲು ಭಾರತೀಯ ಬ್ಯಾಂಕ್ ಬಲಿಷ್ಠ
  • ತಡೆರಹಿತ ಸಾಲದ ಹರಿವು, ಆರ್ಥಿಕ ಬೆಳವಣಿಗೆ ಸಮಾವೇಶದಲ್ಲಿ ಮೋದಿ ಭಾಷಣ
     
PM modi asked banks to provide customised solutions to customers and big push to make India self reliant ckm
Author
Bengaluru, First Published Nov 18, 2021, 8:25 PM IST

ನವದೆಹಲಿ(ನ.18):  ಭಾರತೀಯ ಬ್ಯಾಂಕ್(Indian bank) ದೇಶದ ಆರ್ಥಿಕತೆಗೆ ಹೊಸ ಶಕ್ತಿಯನ್ನು ತುಂಬಲು, ಭಾರತದ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಲು ಬಲಿಷ್ಠವಾಗಿವೆ. ಆದರೆ ಬ್ಯಾಂಕ್‌ಗಳು ತಾವು ನೀಡುವವರು ಮತ್ತು ಗ್ರಾಹಕರು ಸ್ವೀಕರಿಸುವವರು ಎಂಬ ಭಾವನೆಯನ್ನು ತೊಡೆದುಹಾಕಬೇಕು. ಇದರ ಬದಲು ಆರ್ಥಿಕತೆ(Economic Growth) ಹೆಚ್ಚಿಸಲು, ಸಂಪತ್ತು ಸೃಷ್ಟಿಸಲು ಹಾಗೂ ಭಾರತವನ್ನು ಸ್ವಾವಲಂಬಿಯಾಗಿ(self-reliant) ಮಾಡಲು ಪಾಲುದಾರಿ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ  ತಡೆರಹಿತ ಸಾಲದ ಹರಿವು ಮತ್ತು ಆರ್ಥಿಕ ಬೆಳವಣಿಗೆಗೆ ಸಮನ್ವಯ ರೂಪಿಸುವ ಕುರಿತ ಸಮಾರೋಪ ಸಮಾವೇಶ ಉದ್ದೇಶಿಸಿ ಮೋದಿ(Narendra Modi) ಭಾಷಣ ಮಾಡಿದರು. ಈ ವೇಳೆ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಾದ ಸುಧಾರಣ ಹಾಗೂ ಮುಂದಿನ ರೂಪುರೇಶೆ ಕುರಿತು ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು. 

Audit Diwas| 'ಹಿಂದಿನ ಸರ್ಕಾರಗಳ ಸತ್ಯ ನಾವು ಪ್ರಾಮಾಣಿಕವಾಗಿ ಇಟ್ಟುಕೊಂಡಿದ್ದೇವೆ'

ಕಳೆದ 6-7 ವರ್ಷಗಳಲ್ಲಿ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಕೈಗೊಂಡ ಸುಧಾರಣಾ ಕ್ರಮಗಳು ಎಲ್ಲ ರೀತಿಯಲ್ಲೂ ಬ್ಯಾಂಕಿಂಗ್ ವಲಯವನ್ನು ಬೆಂಬಲಿಸಿವೆ.  ಈ ಕಾರಣದಿಂದಾಗಿ ಬ್ಯಾಂಕಿಂಗ್ ಕ್ಷೇತ್ರವು ಇಂದು ಅತ್ಯಂತ ಸದೃಢ ಸ್ಥಿತಿಯಲ್ಲಿದೆ ಎಂದು ಮೋದಿ ಹೇಳಿದರು. ಬ್ಯಾಂಕುಗಳ ಆರೋಗ್ಯ ಸ್ಥಿತಿಯು ಮೊದಲಿಗಿಂತ ಸಾಕಷ್ಟು ಸುಧಾರಿತ ಸ್ಥಿತಿಯಲ್ಲಿದೆ ಎಂದರು. 2014ರ ಹಿಂದಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಒಂದಾದ ಮೇಲೆ ಒಂದರಂತೆ ಪರಿಹರಿಸಲು ನಾವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.  ನಾವು  ಬ್ಯಾಂಕುಗಳ ಆರ್ಥಿಕ ಆರೋಗ್ಯದ ಹರಿವು ಈಗ ಸಾಕಷ್ಟು ಸುಧಾರಿಸಿದೆ. ನಾವು ಎನ್ ಪಿಎ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ, ಬ್ಯಾಂಕುಗಳಿಗೆ ಮರುಬಂಡವಾಳ ಹೂಡಿಕೆ ಮಾಡಿ ಅವುಗಳ ಬಲವರ್ಧನೆಗೊಳಿಸಲಾಗಿದೆ. ನಾವು ಐಬಿಸಿಯಂತಹ ಸುಧಾರಣೆಗಳನ್ನು ತಂದಿದ್ದೇವೆ, ಹಲವು ಕಾನೂನುಗಳನ್ನು ಸುಧಾರಿಸಲಾಗಿದೆ ಮತ್ತು ಸಾಲ ವಸೂಲಾತಿ ಪ್ರಾಧಿಕಾರವನ್ನು ಬಲವರ್ಧನೆಗೊಳಿಸಲಾಗಿದೆ. ಕೊರೊನಾ (Coronavirus) ಸಮಯದಲ್ಲಿ ದೇಶದಲ್ಲಿ ನಿರ್ದಿಷ್ಟ ಒತ್ತಡದ ಸ್ವತ್ತು ನಿರ್ವಹಣಾ ವ್ಯವಸ್ಥೆ ರೂಪಿಸಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ದೇಶದ ಆರ್ಥಿಕತೆಗೆ ಹೊಸ ಶಕ್ತಿಯನ್ನು ತುಂಬಲು, ಭಾರತದ ಸ್ವಾವಲಂಬನೆಗೆ ಮತ್ತು ಹೆಚ್ಚಿನ ಒತ್ತು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವಷ್ಟು ಭಾರತೀಯ ಬ್ಯಾಂಕುಗಳು ಸದೃಢವಾಗಿವೆ. ನಾನು ಈ ಹಂತವನ್ನು ಭಾರತದ ಬ್ಯಾಂಕಿಂಗ್ ವಲಯದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸುತ್ತೇನೆ ಎಂದು ಮೋದಿ ಇಂದು ಹೇಳಿದರು.  ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡ ಕ್ರಮಗಳು ಬ್ಯಾಂಕುಗಳಿಗೆ ಬಲಿಷ್ಠ ಬಂಡವಾಳವನ್ನು ಸೃಷ್ಟಿಸಿವೆ. ಬ್ಯಾಂಕುಗಳಲ್ಲಿ ಸಾಕಷ್ಟು ನಗದುಹರಿವಿದೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕಳೆದ 5 ವರ್ಷಗಳಲ್ಲಿ ಎನ್ ಪಿಎ ಪ್ರಮಾಣ ಕಡಿಮೆ ಪ್ರಮಾಣದಲ್ಲಿರುವುದರಿಂದ ಎನ್‌ಪಿಎ ಗಳನ್ನು ಒದಗಿಸಲು ಯಾವುದೇ ಬ್ಯಾಕ್‌ಲಾಗ್ ಇಲ್ಲ. ಇದು ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ಭಾರತೀಯ ಬ್ಯಾಂಕುಗಳ ದೃಷ್ಟಿಕೋನವನ್ನು ಉನ್ನತೀಕರಿಸಲು ಸಹಕಾರಿಯಾಗಿದೆ ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು. ಇದು ಒಂದು ಮೈಲಿಗಲ್ಲು ಮಾತ್ರವಲ್ಲದೆ, ಹೊಸ ಹಂತದ ಆರಂಭವಾಗಿದೆ ಎಂದ ಪ್ರಧಾನಮಂತ್ರಿ ಅವರು, ಸಂಪತ್ತು ಸೃಷ್ಟಿಕರ್ತರು ಮತ್ತು ಉದ್ಯೋಗ ಸೃಷ್ಟಿಕರ್ತರನ್ನು ಬೆಂಬಲಿಸುವಂತೆ ಬ್ಯಾಂಕಿಂಗ್ ವಲಯಕ್ಕೆ ಕರೆ ನೀಡಿದರು. “ಈಗ ಭಾರತದ ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ ಗಳ ಜೊತೆಗೆ ದೇಶದ ಸಂಪತ್ತು ವೃದ್ಧಿಸಲು ಸಕ್ರಿಯವಾಗಿ ಕಾರ್ಯ್ನೋನ್ಮುಖವಾಗಲು ಇದು ಸಕಾಲ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು.

ಆಡಳಿತ ಸುಧಾರಣೆಗೆ ಮೋದಿ ಹೊಸ ಪ್ಲಾನ್‌

ಬ್ಯಾಂಕುಗಳು ಗ್ರಾಹಕರಿಗೆ ಸಕ್ರಿಯವಾಗಿ ಸೇವೆ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಬ್ಯಾಂಕುಗಳು ಗ್ರಾಹಕರು, ಕಂಪನಿಗಳು ಮತ್ತು ಎಂಎಸ್‌ಎಂಇ ಗಳಿಗೆ ಅವುಗಳ ಅಗತ್ಯತೆಗಳಿಗೆ ತಕ್ಕಂತೆ ಸಮಗ್ರ ಪರಿಹಾರಗಳನ್ನು ಒದಗಿಸಿಕೊಡಲು ಮುಂದಾಗಬೇಕು ಎಂದರು. “ಬ್ಯಾಂಕುಗಳು ತಾವು ಅನುಮೋದಿಸುವವರು ಮತ್ತು ಗ್ರಾಹಕರು ಅರ್ಜಿದಾರರು ಅಥವಾ ಅವರು ನೀಡುವವರು ಮತ್ತು ಗ್ರಾಹಕರು ಸ್ವೀಕರಿಸುವವರು ಎಂಬ ಭಾವನೆಯನ್ನು ತೊಡೆದುಹಾಕಬೇಕು” ಎಂದು ಪ್ರಧಾನಮಂತ್ರಿ ಹೇಳಿದರು. ಬ್ಯಾಂಕುಗಳು ಪಾಲುದಾರಿಕೆ ಮಾದರಿಯನ್ನು(model of partnership) ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಜನಧನ್ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಬ್ಯಾಂಕಿಂಗ್ ವಲಯ ತೋರಿದ ಉತ್ಸಾಹವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಎಲ್ಲ ಪಾಲುದಾರರ ಬೆಳವಣಿಗೆಯಲ್ಲಿ ಬ್ಯಾಂಕುಗಳು ಪಾಲನ್ನು ಹೊಂದಬೇಕು ಮತ್ತು ಪ್ರಗತಿ ಗಾಥೆಯಲ್ಲಿ ಅವರನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು. ಪಿಎಲ್‌ಐ ಉದಾಹರಣೆಯನ್ನು ನೀಡಿದ ಅವರು, ಭಾರತೀಯ ಉತ್ಪಾದಕರಿಗೆ ಪ್ರೊತ್ಸಾಹಧನ ನೀಡುವ ಮೂಲಕ ಸರ್ಕಾರ ಅದೇ ಕಾರ್ಯವನ್ನು ಮಾಡುತ್ತಿದೆ ಎಂದರು. ಪಿಎಲ್ ಐ ಯೋಜನೆಯಡಿ ಉತ್ಪಾದಕರು ತಮ್ಮ ಸಾಮರ್ಥ್ಯವನ್ನು ಬಹುಪಾಲು ಹೆಚ್ಚಿಸಲು ಮತ್ತು ತಮ್ಮನ್ನು ಜಾಗತಿಕ ಕಂಪನಿಗಳನ್ನಾಗಿ ಪರಿವರ್ತಿಸಿಕೊಳ್ಳಲು ಪ್ರೊತ್ಸಾಹಿಸಲಾಗುತ್ತಿದೆ. ಬ್ಯಾಂಕುಗಳು ತಮ್ಮ ಬೆಂಬಲ ಮತ್ತು ಪರಿಣಿತಿಯ ಮೂಲಕ ಯೋಜನೆಗಳನ್ನು ಕಾರ್ಯಸಾಧುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು.

ದೇಶದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಮತ್ತು ಜಾರಿಗೆ ತಂದಿರುವ ಯೋಜನೆಗಳಿಂದಾಗಿ ದೇಶದಲ್ಲಿ ದತ್ತಾಂಶಗಳ ಬೃಹತ್ ಸಂಗ್ರಹ ಸೃಷ್ಟಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬ್ಯಾಂಕಿಂಗ್ ವಲಯ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ, ಸ್ವಾಮಿತ್ವ ಮತ್ತು ಸ್ವನಿಧಿಯಂತಹ ಪ್ರಮುಖ ಮಹತ್ವಾಕಾಂಕ್ಷೆಯ ಯೋಜನೆಗಳು ಒದಗಿಸಿದ ಅವಕಾಶಗಳನ್ನು ಉಲ್ಲೇಖಿಸಿದ ಅವರು, ಈ ಯೋಜನೆಗಳಲ್ಲಿ ಬ್ಯಾಂಕುಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಆರ್ಥಿಕ ಸೇರ್ಪಡೆಯ ಒಟ್ಟಾರೆ ಪರಿಣಾಮದ ಕುರಿತು ಮಾತನಾಡಿದ ಶ್ರೀ ನರೇಂದ್ರ ಮೋದಿ, ದೇಶ ಹಣಕಾಸು ಸೇರ್ಪಡೆಗಾಗಿ ಕಠಿಣ ಪರಿಶ್ರಮಪಡುತ್ತಿರುವ ಈ ಸಮಯದಲ್ಲಿ ಪ್ರಜೆಗಳಲ್ಲಿನ ಉತ್ಪಾದಕ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಅತಿ ಮುಖ್ಯ ಎಂದರು. ಇತ್ತೀಚೆಗೆ ಬ್ಯಾಂಕಿಂಗ್ ವಲಯದಲ್ಲಿಯೇ ಕೈಗೊಂಡಿರುವ ಸಂಶೋಧನೆಯನ್ನು ಉದಾಹರಣೆಯನ್ನಾಗಿ ನೀಡಿದ ಅವರು, ಜನಧನ್ ಖಾತೆಗಳ ಆರಂಭದಿಂದ ರಾಜ್ಯಗಳಲ್ಲಿ ಅಪರಾಧಗಳ ಪ್ರಮಾಣ ಇಳಿಕೆಯಾಗಿದೆ ಎಂದರು. ಅದೇ ರೀತಿ ಕಾರ್ಪೋರೇಟ್ ಸಂಸ್ಥೆಗಳು ಮತ್ತು ನವೋದ್ಯಮಗಳು ಹಿಂದೆಂದೂ ಕಾಣದ ರೀತಿಯಲ್ಲಿ ಅದ್ಭುತ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮುಂದೆ ಬರುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. “ಇಂತಹ ಪರಿಸ್ಥಿತಿಯಲ್ಲಿ, ಭಾರತದ ಆಕಾಂಕ್ಷೆಗಳನ್ನು ಬಲಪಡಿಸಲು, ಧನ ಸಹಾಯ ಮಾಡಲು, ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಸಮಯವಿದೆಯೇ? ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು.

ರಾಷ್ಟ್ರೀಯ ಗುರಿಗಳು ಮತ್ತು ಭರವಸೆಗಳೊಂದಿಗೆ ತಮ್ಮನ್ನು ಜೋಡಿಸಿಕೊಳ್ಳುವ ಮೂಲಕ ಬ್ಯಾಂಕಿಂಗ್ ವಲಯವು ಮುಂದೆ ಸಾಗುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಸಚಿವಾಲಯಗಳು ಮತ್ತು ಬ್ಯಾಂಕುಗಳನ್ನು ಒಗ್ಗೂಡಿಸಲು ಉದ್ದೇಶಿತ ವೆಬ್ ಆಧಾರಿತ ಫಂಡಿಂಗ್ ಟ್ರ್ಯಾಕರ್ ಉಪಕ್ರಮವನ್ನು ಪ್ರಧಾನಿ ಶ್ಲಾಘಿಸಿದರು. ಇದನ್ನು ಗತಿಶಕ್ತಿ ಪೋರ್ಟಲ್ ಗೆ ಇಂಟರ್‌ಫೇಸ್ ಆಗಿ ಸೇರಿಸಿದರೆ ಉತ್ತಮ ಎಂದು ಸಲಹೆ ನೀಡಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲದಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ದೊಡ್ಡ ಚಿಂತನೆ ಮತ್ತು ನವೀನ ವಿಧಾನಗಳಿಂದ ಮುನ್ನಡೆಯಲಿ ಎಂದು ಆಶಿಸಿದರು.

Follow Us:
Download App:
  • android
  • ios