ಉದ್ಯಮಿಗಳ ಜತೆ ಸಹಭಾಗಿತ್ವಕ್ಕೆ ಮುಕ್ತ ಅವಕಾಶ: ಅಶ್ವತ್ಥ ನಾರಾಯಣ
ರಾಜ್ಯ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ಉದ್ಯಮಿಗಳ ಜತೆ ಸಹಭಾಗಿತ್ವ ಹೊಂದಲು ಮುಕ್ತ ಮನಸ್ಸಿನಿಂದಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರು (ಸೆ. 3): ರಾಜ್ಯ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ಉದ್ಯಮಿಗಳ ಜತೆ ಸಹಭಾಗಿತ್ವ ಹೊಂದಲು ಮುಕ್ತ ಮನಸ್ಸಿನಿಂದಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಗರದಲ್ಲಿ ನೆಲೆಸಿರುವ ರೂರ್ಕಿ ಐಐಟಿ ಎಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಶನಿವಾರ ಮಾತನಾಡಿದರು. ರೂರ್ಕಿ ಐಐಟಿ ಸಂಸ್ಥೆಯಲ್ಲಿ ಓದಿದವರು ಸಂಶೋಧನೆ, ವಿನ್ಯಾಸ, ಉತ್ಪನ್ನ ಇತ್ಯಾದಿ ಕ್ಷೇತ್ರಗಳಲ್ಲಿ ಕೊಡುತ್ತ ಬಂದಿರುವ ಕೊಡುಗೆ ಅಮೂಲ್ಯವಾಗಿದೆ. ಇದನ್ನು ಸಮಾಜ ಕೂಡ ಪುರಸ್ಕರಿಸಬೇಕು ಎಂದು ಅವರು ಕರೆ ಕೊಟ್ಟರು. ದೇಶದ ಪ್ರಗತಿಗೆ ಉದ್ಯಮಿಗಳು ಅತ್ಯಗತ್ಯ. ಇದರಿಂದ ಸಂಪತ್ತು ಮತ್ತು ಉದ್ಯೋಗಸೃಷ್ಟಿ ಎರಡಕ್ಕೂ ವೇಗ ಸಿಗುತ್ತದೆ. ಈಗಿನ ವರ್ಚುಯಲ್ ಯುಗದಲ್ಲಿ ಪ್ರತಿಭಾವಂತರು ಕೂತಲ್ಲಿಂದಲೇ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ನಿರ್ಣಾಯಕ ಕೊಡುಗೆ ಕೊಡಬಹುದು ಎಂದು ಅವರು ನುಡಿದರು. ಹಿಂದೆಲ್ಲ ಪ್ರತಿಭಾವಂತರು ಉಜ್ವಲ ಭವಿಷ್ಯ ಅರಸಿಕೊಂಡು ಅಮೆರಿಕ ಮತ್ತು ಇಂಗ್ಲೆಂಡ್ ಗಳಿಗೆ ವಲಸೆ ಹೋಗುತ್ತಿದ್ದರು. ಈಗ ಅಂತಹ ವಲಸೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಅವರು ವಿವರಿಸಿದರು.
ಪೇಟಿಎಂ, ರೇಝರ್ಪೇ, ಕ್ಯಾಶ್ಫ್ರೀಗೆ ಇಡಿ ಶಾಕ್; ಬೆಂಗಳೂರು ಕಚೇರಿಗಳ ಮೇಲೆ ದಾಳಿ
ಕರ್ನಾಟಕದಲ್ಲಿ ಐಐಎಸ್ಸಿ ಮತ್ತು ಯುವಿಸಿಇ ನೂರು ವರ್ಷಗಳನ್ನು ಕಂಡಿವೆ. ಬೆಂಗಳೂರು ಮೊದಲಿನಿಂದಲೂ ವಿಜ್ಞಾನ ನಗರವಾಗಿದ್ದು, ಇಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮಿಳಿತಗೊಂಡಿವೆ ಎಂದು ಅವರು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಅಶೋಕ್ ಸೂತಾ ಮುಂತಾದವರು ಇದ್ದರು.