ಖಾಸಗಿ ತೈಲ ಕಂಪನಿ 'ನಯಾರಾ ಎನರ್ಜಿ' ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರಷ್ಯಾ ಮೇಲಿನ ನಿರ್ಬಂಧಗಳು ಈ ನಿರ್ಧಾರಕ್ಕೆ ಕಾರಣವಾಗಿವೆ. ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿಲ್ಲ.

ನವದೆಹಲಿ (ಮಾ.26): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರಷ್ಯಾ ಮೇಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ, ಖಾಸಗಿ ತೈಲ ಕಂಪನಿ 'ನಯಾರಾ ಎನರ್ಜಿ' ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹5 ಹಾಗೂ ಡೀಸೆಲ್ ಬೆಲೆಯನ್ನು ₹3 ರಷ್ಟು ಹೆಚ್ಚಳ ಮಾಡಿದೆ. ಇದು ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ. ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಉದ್ಯಮದಲ್ಲಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿದೆ ಎಂದು ಕಂಪನಿ ತಿಳಿಸಿದೆ. "ನಮ್ಮ 7000ಕ್ಕೂ ಹೆಚ್ಚು ರೀಟೇಲ್ ನೆಟ್‌ವರ್ಕ್ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಗುಣಮಟ್ಟದ ಇಂಧನ ಪೂರೈಕೆಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ರಿಫೈನರಿ ನಿರ್ವಹಣಾ ಕಾರ್ಯವನ್ನು (Turnaround) ಅತ್ಯಂತ ಎಚ್ಚರಿಕೆಯಿಂದ ಯೋಜಿಸಲಾಗಿದೆ. ಈ ಅವಧಿಯಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನಾವು ಸನ್ನದ್ಧರಾಗಿದ್ದೇವೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಲೆ ಏರಿಕೆಗೆ ಕಾರಣಗಳೇನು?

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಪೂರೈಕೆಯ ಅನಿಶ್ಚಿತತೆಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ರಷ್ಯಾದ 'ರೋಸ್‌ನೆಫ್ಟ್' ಬೆಂಬಲಿತ ನಯಾರಾ ಎನರ್ಜಿ, ಯುರೋಪಿಯನ್ ಯೂನಿಯನ್ ನಿರ್ಬಂಧಗಳಿಂದಾಗಿ ಪೂರೈಕೆ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ.

ಗುಜರಾತ್‌ನ ವಾದಿನಾರ್‌ನಲ್ಲಿರುವ ದೇಶದ ಎರಡನೇ ಅತಿದೊಡ್ಡ ರಿಫೈನರಿಯನ್ನು ಏಪ್ರಿಲ್ ಆರಂಭದಿಂದ ಸುಮಾರು 35 ದಿನಗಳ ಕಾಲ ನಿರ್ವಹಣೆಗಾಗಿ ಸ್ಥಗಿತಗೊಳಿಸಲು ಕಂಪನಿ ಯೋಜಿಸಿದೆ. ಇದು ಭಾರತದ ಒಟ್ಟು ಸಂಸ್ಕರಣಾ ಸಾಮರ್ಥ್ಯದ ಶೇ. 8 ರಷ್ಟು ಭಾಗವಾಗಿದ್ದು, ದೇಶೀಯವಾಗಿ ಇಂಧನ ಲಭ್ಯತೆಯ ಮೇಲೆ ಒತ್ತಡ ಹೇರಬಹುದು.

ಸರ್ಕಾರಿ ಕಂಪನಿಗಳ (PSU OMCs) ಸ್ಥಿತಿ

ಭಾರತದ ಇಂಧನ ಮಾರುಕಟ್ಟೆಯ ಶೇ. 90 ರಷ್ಟು ಪಾಲನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ IOCL, BPCL ಮತ್ತು HPCL ಕಂಪನಿಗಳು ಸದ್ಯಕ್ಕೆ ಬೆಲೆ ಏರಿಕೆ ಮಾಡಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಇತ್ತೀಚೆಗೆ HPCL ಪ್ರೀಮಿಯಂ ಪೆಟ್ರೋಲ್ ಬೆಲೆ ಹೆಚ್ಚಿಸಿತ್ತು ಮತ್ತು IOCL ಕೈಗಾರಿಕಾ ಡೀಸೆಲ್ ಬೆಲೆಯನ್ನು ಏರಿಸಿತ್ತು. ಆದರೆ ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಖಾಸಗಿ ಕಂಪನಿಗಳ ಮಾರುಕಟ್ಟೆ ಪಾಲು ಕಡಿಮೆ ಇರುವುದರಿಂದ ತಕ್ಷಣವೇ ದೇಶಾದ್ಯಂತ ದೊಡ್ಡ ಮಟ್ಟದ ಪ್ರಭಾವ ಬೀರದಿರಬಹುದು. ಆದರೆ, ಕಚ್ಚಾ ತೈಲ ಬೆಲೆ ಇದೇ ರೀತಿ ಏರುತ್ತಾ ಸಾಗಿದರೆ, ಮುಂಬರುವ ದಿನಗಳಲ್ಲಿ ಸರ್ಕಾರಿ ಕಂಪನಿಗಳೂ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಬಹುದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.