Asianet Suvarna News Asianet Suvarna News

ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಆರ್ ಒ ಕಂಪನಿ ಸ್ಥಾಪಿಸಿದ ಐಐಟಿ ಪದವೀಧರ, ಇಂದು 1100 ಕೋಟಿ ಒಡೆಯ

ಮಗನ ಅನಾರೋಗ್ಯವೇ ಉದ್ಯಮ ಪ್ರಾರಂಭಿಸಲು ಪ್ರೇರಣೆ ನೀಡಿತು. ಪರಿಣಾಮ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಈ ಐಐಟಿ ಪದವೀಧರ ಕೇವಲ 20 ಸಾವಿರ ಬಂಡವಾಳದೊಂದಿಗೆ ಮನೆಯಲ್ಲೇ ಪ್ರಾರಂಭಿಸಿದ ಆರ್ ಒ ಉದ್ಯಮ ಇಂದು 1100 ಕೋಟಿಗೂ ಅಧಿಕ ವಹಿವಾಟು ನಡೆಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ. 

Meet IIT graduate who quit govt job launched firm now net worth is Rs 1100 crore anu
Author
First Published Sep 21, 2023, 3:24 PM IST

Business Desk:ಕೆಲವೊಮ್ಮೆ ನಮ್ಮ ಬದುಕಿನಲ್ಲಿ ನಡೆದ ಯಾವುದೋ ಒಂದು ಘಟನೆ ಹೊಸ ಹಾದಿಯನ್ನು ತೋರುತ್ತದೆ. ಇಂಥ ಹಾದಿಯಲ್ಲಿ ಸಾಗಿ ಯಶಸ್ಸು ಸಾಧಿಸಿದ ಮಹಾನೀಯರು ಅನೇಕರಿದ್ದಾರೆ. ಅಂಥವರಲ್ಲಿ ಮಹೇಶ್ ಗುಪ್ತಾ ಕೂಡ ಒಬ್ಬರು. ಮಗನ ಅನಾರೋಗ್ಯದ ಮೂಲ ಕಲುಷಿತ ನೀರು ಎಂಬುದು ಪತ್ತೆಯಾಗುತ್ತಿದ್ದಂತೆ ಅವರಲ್ಲಿ ಹೊಸ ಯೋಚನೆಯೊಂದು ಹುಟ್ಟಿಕೊಂಡಿತು. ಕಲುಷಿತ ನೀರು ಅನೇಕ ಕಾಯಿಲೆಗಳನ್ನು ಹರಡಬಲ್ಲದು. ಹೀಗಿರುವಾಗ ನೀರನ್ನು ಶುದ್ಧೀಕರಿಸುವ ಯಂತ್ರವನ್ನು ಸಿದ್ಧಪಡಿಸುವ ಯೋಚನೆ ಗುಪ್ತ ಅವರಿಗೆ ಬರುತ್ತದೆ. ಪರಿಣಾಮ ಆರ್ ಒ ಕಂಪನಿಯೊಂದನ್ನು ಅವರು ಪ್ರಾರಂಭಿಸುತ್ತಾರೆ. ಈ ಕಂಪನಿಯ ಹೆಸರು ಕೆಂಟ್ ಆರ್ ಒ. ಇಂದು ಕೆಂಟ್ ಆರ್ ಒ ಕಂಪನಿಗಳಲ್ಲೇ ಮನೆಮಾತಾಗಿರುವ ಬ್ರ್ಯಾಂಡ್ ಆಗಿದೆ. ಇನ್ನು ಐಐಟಿ ಪದವೀಧರರಾಗಿರುವ ಮಹೇಶ್ ಗುಪ್ತಾ, ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಆರ್ ಒ ಕಂಪನಿ ಪ್ರಾರಂಭಿಸುವ ಯೋಚನೆ ಮೂಡುತ್ತಿದ್ದಂತೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಹೊಸ ಉದ್ಯಮದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.

ಐಐಟಿ ಕಾನ್ಪುರದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಮಹೇಶ್ ಗುಪ್ತಾ, ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದರು. ಈ ನಡುವೆ ಸ್ವಂತದ್ದೇನಾದರೂ ಮಾಡಬೇಕೆಂಬ ತುಡಿತ ಮಹೇಶ ಅವರಲ್ಲಿತ್ತು. ಮಗನ ಅನಾರೋಗ್ಯದ ಕಾರಣ ಹೊಸ ಉದ್ಯಮ ಪ್ರಾರಂಭಿಸುವಂತೆ ಅವರನ್ನು ಪ್ರೇರೇಪಿಸಿತು. ಪರಿಣಾಮ ಅವರು ಕೆಂಟ್ ಆರ್ ಒ ಕಂಪನಿ ಪ್ರಾರಂಭಿಸಿದರು. 

ಬೆಂಗಳೂರು ಐಐಎಂ ಹಳೇ ವಿದ್ಯಾರ್ಥಿನಿ ಈಗ 54 ಸಾವಿರ ಕೋಟಿ ಬೆಲೆಬಾಳೋ ಕಂಪನಿ ಎಂಡಿ;ಈಕೆ ವೇತನ ಎಷ್ಟು ಕೋಟಿ ಗೊತ್ತಾ?

ದೆಹಲಿಯಲ್ಲಿ 1954ರ ಸೆಪ್ಟೆಂಬರ್ 24ರಂದು ಜನಿಸಿದ ಮಹೇಶ್ ಗುಪ್ತಾ, ಓದಿನಲ್ಲಿ ತುಂಬಾ ಚುರುಕಾಗಿದ್ದರು. ಅವರ ತಂದೆ ಹಣಕಾಸು ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದರು. ಅವರ ಇಡೀ ಕುಟುಂಬ ಸಣ್ಣ ಮನೆಯಲ್ಲಿ ವಾಸವಿತ್ತು. ದೆಹಲಿ ಲೋಧಿ ರೋಡ್ ನಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಗುಪ್ತಾ,1977ರಲ್ಲಿ ಐಐಟಿ ಕಾನ್ಪುರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದರು. ನಂತರ ಡೆಹ್ರಾಡೂನ್ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಪೆಟ್ರೋಲಿಯಂನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು.

1977ರಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಸಿಕೊಂಡಿದ್ದರು ಮಹೇಶ್ ಗುಪ್ತಾ.  1988ರಲ್ಲಿ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಗುಪ್ತಾ ನೋಯ್ಡಾದಲ್ಲಿ ಆಯಿಲ್ ಮೀಟರ್ ಉದ್ಯಮ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರ ಮಗ ಕಾಮಾಲೆ ರೋಗಕ್ಕೆ ತುತ್ತಾದರು. ಇದಕ್ಕೆ ಕಲುಷಿತ ನೀರು ಕಾರಣ ಎಂಬುದನ್ನು ತಿಳಿದ ಗುಪ್ತಾ, ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾದರು. ಆಗ ಅವರಿಗೆ ಆರ್ ಒ ಸಂಸ್ಥೆ ಸ್ಥಾಪಿಸುವ ಯೋಚನೆ ಮೂಡಿತು. ಪರಿಣಾಮ ಕೆಂಟ್ ಆರ್ ಒ ಸಂಸ್ಥೆಯನ್ನು ಹುಟ್ಟು ಹಾಕಿದರು. ಅವರ ಅಸ್ಮೋಸಿಸ್ ಆಧಾರಿತ ನೀರು ಶುದ್ಧೀಕರಣ ಯಂತ್ರ ಯಶಸ್ಸು ಗಳಿಸಿತು. ಇಂದು ಕೆಂಟ್ ಭಾರತದ ಜನಪ್ರಿಯ ಆರ್ ಒ ಬ್ರ್ಯಾಂಡ್ ಆಗಿದೆ. 

ದೇಶದ ಶ್ರೀಮಂತ ಮಹಿಳಾ ಫ್ಯಾಷನ್ ಡಿಸೈನರ್‌, ಖಾಲಿ 2 ಟೈಲರಿಂಗ್ ಮೆಷಿನ್‌ನಿಂದ 1000 ಕೋಟಿ ರೂ ಸಾಮ್ರಾಜ್ಯಕ್ಕೆ ಒಡತಿ

ಕೆಂಟ್ ಆರ್ ಒ ಕಂಪನಿಯನ್ನು ಗುಪ್ತಾ ಕೇವಲ 20,000ರೂ. ಬಂಡವಾಳದೊಂದಿಗೆ ಪ್ರಾರಂಭಿಸಿದ್ದರು. ಇಂದು ಈ ಕಂಪನಿ 1000 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ತಮ್ಮ ಮನೆಯ ಪುಟ್ಟ ಕೋಣೆಯಲ್ಲೇ 'ಕೆಂಟ್ ಆರ್ ಒ ಸಿಸ್ಟಂ' ಪ್ರಾರಂಭಿಸಿದರು. ಪ್ರಾರಂಭದಲ್ಲಿ ಕೇವಲ ನಾಲ್ಕು ಮಂದಿ ಉದ್ಯೋಗಿಗಳನ್ನಷ್ಟೇ ಹೊಂದಿದ್ದ ಈ ಸಂಸ್ಥೆ ಇಂದು 300 ಉದ್ಯೋಗಿಗಳನ್ನು ಹೊಂದಿದೆ.  ಇನ್ನು ತಾನು ಸಿದ್ಧಪಡಿಸಿದ ವಾಟರ್ ಶುದ್ಧೀಕರಣ ಯಂತ್ರ ಉತ್ತಮ ಗುಣಮಟ್ಟ ಹೊಂದಿರೋದನ್ನು ಗುಪ್ತಾ ಖಚಿತಪಡಿಸಿಕೊಂಡಿದ್ದರು. ಕೆಲವೇ ಸಮಯದಲ್ಲಿ ಇವರ ನೀರು ಶುದ್ಧೀಕರಣ ಯಂತ್ರ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿತು. 


 

Follow Us:
Download App:
  • android
  • ios