ಸೆಪ್ಟೆಂಬರ್ 1ರಿಂದಲೇ ಕೆಲವು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಈ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಹೊಂದಿರೋದು ಅಗತ್ಯ.ಇಲ್ಲವಾದ್ರೆ ನಿಮ್ಮ ಜೇಬಿಗೇ ಹೊರೆ.

ಸಾಮಾನ್ಯ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರೋ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಸೆಪ್ಟೆಂಬರ್ನಿಂದ ಬದಲಾಗಿವೆ. ಬ್ಯಾಂಕಿಂಗ್, ಹಣಕಾಸು ಹಾಗೂ ಇತರ ವಲಯಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಈ ಬದಲಾವಣೆಯಾಗಿದೆ. ಇವು ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರೋ ಕಾರಣ ಈ ಬದಲಾವಣೆಗಳ ಬಗ್ಗೆ ವಿವರವಾಗಿ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರೋ ಮಹತ್ವದ ಬದಲಾವಣೆಗಳು ಯಾವುವು? ಇಲ್ಲಿದೆ ಮಾಹಿತಿ. 

Add Asianetnews Kannada as a Preferred SourcegooglePreferred

ಹಿರಿಯ ನಾಗರಿಕರು ಅಂಚೆ ಕಚೇರಿಗೆ ತೆರಳದೆಯೂ ನಡೆಸಬಹುದು ವ್ಯವಹಾರ!

ಜಿಎಸ್ಟಿ ಹೊಸ ನಿಯಮ
ಜಿಎಸ್ಟಿಆರ್-1 ಸಲ್ಲಿಕೆಗೆ ನಿರ್ಬಂಧ ವಿಧಿಸೋ ಕೇಂದ್ರ ಜಿಎಸ್ಟಿ ನಿಯಮಗಳ 59(6) ನಿಯಮ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪೋರ್ಟಲ್ನ ಸಂಪೂರ್ಣ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನಿರ್ವಹಿಸೋ ಸರಕು ಮತ್ತು ಸೇವಾ ತೆರಿಗೆ ನೆಟ್ವರ್ಕ್ (ಜಿಎಸ್ಟಿಎನ್) ಕೆಲವು ದಿನಗಳ ಹಿಂದೆಯೇ ಈ ಬಗ್ಗೆ ಮಾಹಿತಿ ಕೂಡ ನೀಡಿತ್ತು. ಕಳೆದ ಎರಡು ತಿಂಗಳಿಂದ ಜಿಎಸ್ಟಿಆರ್-3ಬಿ ರಿಟರ್ನ್ಸ್ ಫಾರ್ಮ್ ಸಲ್ಲಿಸದ ಉದ್ಯಮಗಳಿಗೆ ಜಿಎಸ್ಟಿಆರ್ -1ನಲ್ಲಿ ಹೊರಸಾಗಟದ ಮಾಹಿತಿಗಳನ್ನು ಸಲ್ಲಿಸಲು ಅವಕಾಶವಿಲ್ಲ. ಪ್ರತಿ ತಿಂಗಳು 20-24ನೇ ದಿನಾಂಕದೊಳಗೆ ಉದ್ಯಮಗಳು ಜಿಎಸ್ಟಿಆರ್-3ಬಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಜೊತೆಗೆ ಉದ್ಯಮಗಳು ಮಾಸಿಕ ತೆರಿಗೆಯನ್ನು ಕೂಡ ಪಾವತಿಸಬೇಕು. ಪ್ರತಿ ತಿಂಗಳ 11ನೇ ದಿನದಂದು ಉದ್ಯಮ ಸಂಸ್ಥೆಗಳು ಜಿಎಸ್ಟಿಆರ್-1 ಅರ್ಜಿ ಸಲ್ಲಿಕೆ ಮಾಡಬೇಕು. ಆದ್ರೆ ಇನ್ನುಮುಂದೆ ಎರಡು ತಿಂಗಳಿಂದ ಜಿಎಸ್ಟಿಆರ್-3ಬಿ ಅರ್ಜಿ ಸಲ್ಲಿಸದ ಅಂದ್ರೆ ತೆರಿಗೆ ಕೂಡ ಪಾವತಿಸದ ಉದ್ಯಮಗಳಿಗೆ ಜಿಎಸ್ಟಿಆರ್-1 ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ.

ಪಿಎಫ್ಗೆ ಆಧಾರ್ ಜೋಡಣೆ
ಪಿಎಫ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಸೆಪ್ಟೆಂಬರ್ 1 ಅಂತಿಮ ಗಡುವಾಗಿತ್ತು. ಪಿಎಫ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡದ ಉದ್ಯೋಗಿಗಳ ಪಿಎಫ್ ಖಾತೆಗೆ ಇನ್ನು ಮುಂದೆ ಉದ್ಯೋಗದಾತರು ಅಥವಾ ಕಾರ್ಯನಿರ್ವಹಿಸುತ್ತಿರೋ ಸಂಸ್ಥೆ ನೀಡೋ ಕೊಡುಗೆ ಹಣ ಜಮಾ ಆಗೋದಿಲ್ಲ. 

ಡಿಜಿಟಲ್‌ ಗೋಲ್ಡ್‌ ಅಂದ್ರೇನು? ಖರೀದಿಸೋದು ಹೇಗೆ?

ಎಲ್ಪಿಜಿ ದರದಲ್ಲಿ ಹೆಚ್ಚಳ
ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಸೆಪ್ಟೆಂಬರ್ 1ರಿಂದ ಪ್ರತಿ ಸಿಲಿಂಡರ್ ಬೆಲೆಯಲ್ಲಿ 25 ರೂ. ಏರಿಕೆಯಾಗಿದೆ. ಕಳೆದ 15 ದಿನಗಳಲ್ಲಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು 50 ರೂ. ಹೆಚ್ಚಳವಾಗಿದೆ. 

ಪಾಸಿಟಿವ್ ಪೇ ವ್ಯವಸ್ಥೆ
ಭಾರತೀಯ ರಿಸರ್ವ್ ಬ್ಯಾಂಕ್ ಪಾಸಿಟಿವ್ ಪೇ ವ್ಯವಸ್ಥೆಯನ್ನು 2021ರ ಜನವರಿ 1ರಂದೇ ಜಾರಿಗೆ ತಂದಿತ್ತು. ದೇಶದ ಅನೇಕ ಪ್ರಮುಖ ಬ್ಯಾಂಕ್ಗಳು ಈಗಾಗಲೇ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ನಾಗರಿಕರು ಹಾಗೂ ಬ್ಯಾಂಕ್ಗಳನ್ನು ಚೆಕ್ ವಂಚನೆ ಪ್ರಕರಣಗಳಿಂದ ರಕ್ಷಿಸೋದು ಈ ನಿಯಮದ ಮುಖ್ಯ ಉದ್ದೇಶ. ದೇಶದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾಗಿರೋ ಆಕ್ಸಿಸ್ ಬ್ಯಾಂಕ್ ಸೆಪ್ಟೆಂಬರ್ 1ರಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಿದೆ. 50 ಸಾವಿರ ರೂ.ಗಿಂತ ಹೆಚ್ಚಿನ ಮೌಲ್ಯದ ಚೆಕ್ಗೆ ಕಡ್ಡಾಯವಾಗಿ ಪಾಸಿಟಿವ್ ಪೇ ವ್ಯವಸ್ಥೆಯನ್ನು ಅನುಸರಿಸಬೇಕು. ಅಂದ್ರೆ ಚೆಕ್ ಯಾರಿಗೆ ಪಾವತಿ ಮಾಡಿದ್ದೀರಾ, ಮೊತ್ತ, ದಿನಾಂಕ ಮೊದಲಾದ ವಿವರಗಳನ್ನು ಮುಂಚಿತವಾಗಿ ಬ್ಯಾಂಕ್ಗೆ ನೀಡಬೇಕು. ಈ ವಿವರಗಳನ್ನು ನೀಡದಿದ್ರೆ ನಿಮ್ಮ ಖಾತೆಯಲ್ಲಿ ಹಣವಿದ್ದರೂ ಕೂಡ ಚೆಕ್ ವಿಲೇವಾರಿ ಮಾಡೋದಿಲ್ಲ.

ಉಳಿತಾಯ ಖಾತೆಗೆ ಹೊಸ ನಿಯಮ
ಸೆಪ್ಟೆಂಬರ್ 1ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಹೊಸ ಬಡ್ಡಿದರ ವಾರ್ಷಿಕ ಶೇ.2.9 ಆಗಿದ್ದು,ಪ್ರಸ್ತುತ ಇರೋ ಹಾಗೂ ಹೊಸ ಉಳಿತಾಯ ಖಾತೆಗಳಿಗೆ ಅನ್ವಯವಾಗಲಿವೆ.

ಭಾರತ್ ಸೀರೀಸ್ ನೋಂದಣಿ ಸಂಖ್ಯೆ
ಕೇಂದ್ರ ಸಾರಿಗೆ ಸಚಿವಾಲಯವು ಹೊಸ ವಾಹನಗಳಿಗೆ ʼಭಾರತ್ ಸೀರೀಸ್ʼ ಎಂಬ ಹೊಸ ನೋಂದಣಿ ಚಿಹ್ನೆಯನ್ನು ಪರಿಚಯಿಸಿದೆ. ಈ ನೊಂದಣಿ ಚಿಹ್ನೆ ಹೊಂದಿರೋ ಯಾವುದೇ ವಾಹನವು ದೇಶದೊಳಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾವಣೆಯಾದ್ರೂ ಮತ್ತೆ ಹೊಸದಾಗಿ ನೋಂದಣಿ ಮಾಡಿಸಬೇಕಾದ ಅಗತ್ಯವಿಲ್ಲ. 

ಸೆ. 30ರೊಳಗೆ ತಪ್ಪದೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ!

ಪಾನ್ಗೆ ಆಧಾರ್ ಕಾರ್ಡ್ ಜೋಡಣೆ
ಪಾನ್ಗೆ ಆಧಾರ್ ಕಾರ್ಡ್ ಜೋಡಣೆಗೆ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. 

ದುಬಾರಿ ಒಒಟಿ 
ಡಿಸ್ನಿ,ಹಾಟ್ ಸ್ಟಾರ್ ಚಂದಾದಾರರು ಇನ್ನು ಮುಂದೆ ಒಒಟಿ ಚಂದಾದಾರರಾಗಲು ಹೆಚ್ಚಿನ ಮೊತ್ತ ಪಾವತಿಸಬೇಕು.