Asianet Suvarna News Asianet Suvarna News

Fuel Price| ತೈಲ ಬೆಲೆ ಇಳಿಕೆ: ಕೇಂದ್ರ, ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ!

* ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 1 ಲಕ್ಷ ಕೋಟಿ ರು. ನಷ್ಟ

* ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 2100 ಕೋಟಿ ರು. ಹೊರೆ

 

Karnataka govt issues notification reducing tax on diesel petrol pod
Author
Bangalore, First Published Nov 5, 2021, 7:16 AM IST

ನವದೆಹಲಿ/ಬೆಂಗಳೂರು(ನ.05): ದೇಶದ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ (State Govt) ದೀಪಾವಳಿಯ (Diwali 2021) ಸಿಹಿಸುದ್ದಿ ನೀಡಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌(Petrol And Diesel) ಮೇಲಿನ ಅಬಕಾರಿ ಸುಂಕವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಕೇಂದ್ರ ಸರ್ಕಾರವು (Union Govt) ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 5 ರು. ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 10 ರು. ಇಳಿಕೆ ಮಾಡಿದೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ತಲಾ 7 ರು. ದರ ಕಡಿತ ಘೋಷಿಸಿದೆ. ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್‌ ದರ 12 ರು. ಹಾಗೂ ಡೀಸೆಲ್‌ ದರ 17 ರು. ಕಡಿತವಾಗಲಿದೆ.

ಇದರಿಂದಾಗಿ ರಾಜ್ಯದಲ್ಲಿ ಪೆಟ್ರೋಲ್‌ ದರ (Petrol Price) ಇನ್ನು 102 ರು. ಹಾಗೂ ಡೀಸೆಲ್‌ ದರ (Diesel Rate) 87 ರು.ಗೆ ಇಳಿಯುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ದರ ಕಡಿತ ಗುರುವಾರದಿಂದಲೇ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರದ ಘೋಷಣೆ ಶುಕ್ರವಾರ ಜಾರಿಗೆ ಬಂದಿದೆ. ಇಷ್ಟೊಂದು ದೊಡ್ಡ ಮೊತ್ತದ ಕಡಿತ ಇದೇ ಮೊದಲು. ಹೀಗಾಗಿ ರಾಜ್ಯದ ಜನರಿಗೆ ದೊಡ್ಡ ನಿರಾಳತೆ ಉಂಟಾಗಿದೆ.

ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬುಧವಾರ ಅಬಕಾರಿ ಸುಂಕ ಕಡಿತ ಮಾಡಿದ್ದ ಕೇಂದ್ರವು, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆಗಳನ್ನು ಕಡಿತಗೊಳಿಸುವಂತೆ ರಾಜ್ಯಗಳಿಗೂ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಡಿತ ಘೋಷಣೆ ಮಾಡಿದ್ದಾರೆ.

ದರ ಕಡಿತ ಘೋಷಣೆಗೂ ಮುನ್ನ ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 113.93 ರು. ಹಾಗೂ ಡೀಸೆಲ್‌ಗೆ 104.50 ರು. ದರ ಇತ್ತು.

ದೊಡ್ಡ ರಿಲೀಫ್‌ ಕೊಟ್ಟಿದ್ದೇವೆ- ಕೇಂದ್ರ:

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪೆಟ್ರೋಲ್‌ ಮೇಲಿನ ಸುಂಕಕ್ಕಿಂತ 2ರಷ್ಟುಹೆಚ್ಚಿಗೆ ಇಳಿಸಲಾಗಿದೆ. ಈ ಕ್ರಮದಿಂದ ಹಿಂಗಾರು ಬೆಳೆಗಳ ಬಿತ್ತನೆ ಮಾಡುತ್ತಿರುವ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕೊರೋನಾದಂಥ ಸಂಕಷ್ಟದ ಸಂದರ್ಭದಲ್ಲೂ ಕಠಿಣ ಪರಿಶ್ರಮದ ಮುಖಾಂತರ ದೇಶದ ಆರ್ಥಿಕಾಭಿವೃದ್ಧಿಯನ್ನು ರೈತರು ಸುಸ್ಥಿತಿಯಲ್ಲಿಟ್ಟಿದ್ದರು. ಅವರಿಗೆ ದರ ಇಳಿಕೆಯಿಂದ ದೊಡ್ಡ ನಿರಾಳತೆ ಲಭಿಸಲಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರಕ್ಕೆ ಇದರಿಂದ ವಾರ್ಷಿಕ 1 ಲಕ್ಷ ಕೋಟಿ ರು. ಹೊರೆಯಾಗಲಿದೆ.

ರಾಜ್ಯಕ್ಕೆ 2100 ಕೋಟಿ ರು. ಹೊರೆ:

ಕರ್ನಾಟಕ ಪಾಲಿನ ದರ ಇಳಕೆ ಘೋಷಿಸಿ ಬಗ್ಗೆ ಬುಧವಾರ ರಾತ್ರಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ನಿರ್ಧಾರ ಗುರುವಾರ ಸಂಜೆಯಿಂದ ಅನ್ವಯವಾಗಲಿದೆ. ರಾಜ್ಯ ಸರ್ಕಾರಕ್ಕೆ ಬೊಕ್ಕಸಕ್ಕೆ ಅಂದಾಜು 2,100 ಕೋಟಿ ರು. ನಷ್ಟವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೈಲ ಬೆಲೆ ಕಡಿಮೆಗೊಳಿಸಿದ್ದು ಸ್ವಾಗತಾರ್ಹ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ ಎಂದಿದ್ದಾರೆ.

39, 30 ರು. ಏರಿಕೆಯಾಗಿತ್ತು:

ಪ್ರತಿ ದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳ ಪರಿಷ್ಕರಣೆಯಿಂದಾಗಿ ಕಳೆದ 18 ತಿಂಗಳ ಅವಧಿಯಲ್ಲಿ ಪೆಟ್ರೋಲ್‌ ಬೆಲೆ ಒಟ್ಟಾರೆ 38.93 ರು.ನಷ್ಟುಹೆಚ್ಚಳವಾಗಿದ್ದರೆ, ಡೀಸೆಲ್‌ ದರ 29.24 ರು.ನಷ್ಟುಹೆಚ್ಚಳವಾಗಿತ್ತು. ಅಲ್ಲದೆ ಕಳೆದ ವರ್ಷ ಕೊರೋನಾ ಸೋಂಕು ವ್ಯಾಪಕವಾದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಕುಸಿತವಾಗಿತ್ತು. ಆಗ 19.98 ರು. ಇದ್ದ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 32.9 ರು.ಗೆ ಏರಿಕೆ ಮಾಡಲಾಗಿತ್ತು.

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಡಿಸೇಲ್ ದರ

ಪೆಟ್ರೋಲ್ ಪ್ರತಿ ಲೀಟರ್ - 100.60

ಡಿಸೇಲ್ ಪ್ರತಿ ಲೀಟರ್- 85.04

ನಿನ್ನೆ ಇದ್ದ ದರ

ಪೆಟ್ರೋಲ್ - 107.66

ಡಿಸೇಲ್ -98.05

Follow Us:
Download App:
  • android
  • ios