Asianet Suvarna News Asianet Suvarna News

Karnataka budget 2022: ಬಜೆಟ್‌ನಲ್ಲಿ ಪಶುಸಂಗೋಪನೆ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ಘೋಷಿಸಿದ ಬಸವರಾಜ ಬೊಮ್ಮಾಯಿ

ವಿಧಾನಸಭೆಯಲ್ಲಿ 2022-23ನೇ ಸಾಲಿನ ಬಜೆಟ್‌ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಶುಸಂಗೋಪನಾ ಪುಣ್ಯಕೋಟಿ ದತ್ತು ಯೋಜನೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಹೀಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಇದರ ಮಾಹಿತಿ ಇಲ್ಲಿದೆ.

Karnataka budget 2022-23 Basavaraj bommai announced special project for animal husbandry sector gow
Author
Bengaluru, First Published Mar 4, 2022, 5:09 PM IST

ಬೆಂಗಳೂರು(ಮಾ.4): ಕರ್ನಾಟಕ ಬಜೆಟ್ 2022 ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ್ದು, ಪಶುಸಂಗೋಪನಾ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ, 100 ಪಶುಚಿಕಿತ್ಸಾಲಯಗಳು, ಹಾಲು ಉತ್ಪಾದಕರಿಗೆ  "ಕ್ಷೀರ  ಸಮೃದ್ಧಿ ಸಹಕಾರ ಬ್ಯಾಂಕ್" , ಹಾವೇರಿಯಲ್ಲಿ ಮೆಗಾ ಹಾಲು ಡೈರಿ, ಗೋಶಾಲೆ ನಿರ್ಮಾಣ, ಗೋವುಗಳ ದತ್ತು ಯೋಜನೆ, ಕುರಿಗಾಹಿಗಳಿಗೆ ಹಲವು ಯೋಜನೆಗಳು ಮಾತ್ರವಲ್ಲ ಕುಕ್ಕುಟ ಮತ್ತು ಹಂದಿ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಯೋಜನೆಗಳ ಸಂಪೂರ್ನ ಮಾಹಿತಿ ಇಂತಿದೆ.

ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ, ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಶು ಚಿಕಿತ್ಸಾಲಯಗಳನ್ನು ಬಲಪಡಿಸುವುದರೊಂದಿಗೆ ನೂತನ 100 ಪಶುಚಿಕಿತ್ಸಾಲಯಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಖಾಲಿಯಿರುವ 400 ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಕ್ರಮವಹಿಸಲಾಗಿದೆ.

ರಾಜ್ಯದಲ್ಲಿಯೇ   ಪ್ರಪ್ರಥಮ ಬಾರಿಗೆ ನಮ್ಮ ಸರ್ಕಾರವು  ಹಾಲು ಉತ್ಪಾದಕರಿಗೆ ಸರಳ ನಿಬಂಧನೆಗಳೊಂದಿಗೆ ಸಾಲ ಸೌಲಭ್ಯ ನೀಡಲು "ಕ್ಷೀರ  ಸಮೃದ್ಧಿ ಸಹಕಾರ ಬ್ಯಾಂಕ್" ಸ್ಥಾಪಿಸಲು ಉದ್ದೇಶಿಸಲಾಗಿದೆ. ಸದರಿ ಬ್ಯಾಂಕಿಗೆ  ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ಹಾಲು  ಮಹಾಮಂಡಳಿ  ಹಾಗೂ  ಜಿಲ್ಲಾ  ಹಾಲು  ಒಕ್ಕೂಟಗಳು ಒಟ್ಟಾರೆ 260  ಕೋಟಿ  ರೂ. ಮತ್ತು ರಾಜ್ಯ ಸರ್ಕಾರವು 100 ಕೋಟಿ ರೂ.ಗಳ ಷೇರು ಬಂಡವಾಳವನ್ನು ಒದಗಿಸಲಿದೆ.

Karnataka Budget 2022-23: ನಿರೀಕ್ಷೆಯಂತೆಯೇ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್

ಹಾವೇರಿ ಜಿಲ್ಲೆಯಲ್ಲಿ  ಒಂದು ಲಕ್ಷ ಲೀಟರ್   ಸಾಮರ್ಥ್ಯದ  ಮೆಗಾ ಡೈರಿಯನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದ್ದು, ಕರ್ನಾಟಕ ಹಾಲು ಒಕ್ಕೂಟದ ಸಹಯೋಗದೊಂದಿಗೆ ಶಿವಮೊಗ್ಗ, ದಾವಣಗೆರೆ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲಾ ಹಾಲು ಒಕ್ಕೂಟಗಳನ್ನು ರಚಿಸಲು ಉದ್ದೇಶಿಸಿದೆ.

ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಗೋ ಹತ್ಯಾ  ನಿಷೇಧ ಅಧಿನಿಯಮ, 2020ನ್ನು ಜಾರಿಗೆ  ತರಲಾಗಿದೆ.  ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಪ್ರಸ್ತುತ ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆಯನ್ನು 31 ರಿಂದ 100ಕ್ಕೆ ಹೆಚ್ಚಿಸಲಾಗುವುದು.ಈ ಉದ್ದೇಶಕ್ಕೆ 50 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಗೋಶಾಲೆಗಳಲ್ಲಿನ ಗೋವುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ವಾಕ 11,000  ರೂ.ಗಳ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ನಮ್ಮ ಸರ್ಕಾರವು ರಾಜ್ಯದಲ್ಲಿಯೇ  ಮೊದಲ  ಬಾರಿಗೆ "ಪುಣ್ಯಕೋಟಿ ದತ್ತು ಯೋಜನೆ"ಯನ್ನು ಪ್ರಾರಂಭಿಸಲಿದೆ.

ರಾಜ್ಯದ  ಸ್ಥಳೀಯ ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿಯನ್ನು ಹೆಚ್ಚಿಸಲು ಕೆ.ಎಂ.ಎಫ್. ಮೂಲಕ 2000 ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಲಾಗುವುದು.

KARNATAKA BUDGET 2022: ಮೀನುಗಾರಿಕೆ ಕ್ಷೇತ್ರಕ್ಕೆ "ಮತ್ಸ್ಯ ಸಿರಿ" ಎಂಬ ವಿ‍ಶೇಷ ಯೋಜನೆ ಘೋಷಿಸಿದ ಬೊಮ್ಮಾಯಿ

ರಾಜ್ಯದ  ಗೋಶಾಲೆಗಳಲ್ಲಿನ ತ್ಯಾಜ್ಯಗಳನ್ನು ಪರಿಸರ  ಸ್ನೇಹಿ ಉತ್ಪನ್ನಗಳಾಗಿಸಲು ಆರ್ಥಿಕ  ನೆರವನ್ನು ನೀಡಲಾಗುವುದು. ಗೋ ಉತ್ಪನ್ನಗಳ ಮಾರಾಟಕ್ಕಾಗಿ ‘ಗೋ ಮಾತಾ ಸಹಕಾರ ಸಂಘ’ವನ್ನು ಸ್ಥಾಪಿಸಲಾಗುವುದು. ಜೊತೆಗೆ ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಮಾಣೀಕರಣದ  ಅಭಿವೃದ್ಧಿಗಾಗಿ ಪಶುವಿಶ್ವವಿದ್ಯಾಲಯದಲ್ಲಿ ಒಂದು ಸಂಶೋಧನಾ ಕೋಶವನ್ನು ಸ್ಥಾಪಿಸಲಾಗುವುದು.

“ಅನುಗ್ರಹ  ಕೊಡುಗೆ  ಯೋಜನೆ”ಯಡಿ ಆಕಸ್ಮಿಕ ಮರಣ ಹೊಂದಿದ  3-6 ತಿಂಗಳ ವಯಸ್ಸಿನ ಕುರಿ/ ಮೇಕೆಗಳಿಗೆ ನೀಡುವ ಪರಿಹಾರ ಧನವನ್ನು 2,500ರೂ. ಗಳಿಂದ 3,500ರೂ.  ಗಳಿಗೆ ಹೆಚ್ಚಿಸಲಾಗುವುದು. ಕುರಿ / ಮೇಕೆ ಸಾಕಾಣಿಕೆದಾರರು / ವಲಸೆ ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ  ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕುರಿಗಾಹಿಗಳಿಗೆ ಐದು   ಲಕ್ಷ ರೂ. ವಿಮಾ ಸೌಲಭ್ಯ  ಒದಗಿಸಲಾಗುವುದು.ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ  ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು  5 ಲಕ್ಷ ರೂ. ಸಹಾಯಧನ ನೀಡಲಾಗುವುದು.

ಸರ್ಕಾರದ ಆರು ಕುಕ್ಕುಟ ಕೇಂದ್ರಗಳ ಮುಖಾಂತರ ಪ್ರಸಕ್ತ ಸಾಲಿನಲ್ಲಿ  5 ಲಕ್ಷ  ಕೋಳಿಮರಿಗಳನ್ನು ಉತ್ಪಾದಿಸಲಾಗುವುದು. ಇವುಗಳನ್ನು ರೈತ ಮಹಿಳೆಯರಿಗೆ ವಿತರಿಸಿ ಅವರ ಆದಾಯ ಹೆಚ್ಚಿಸಲಾಗುವುದು. ರಾಜ್ಯದಲ್ಲಿ ಹಂದಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು   ಕಳೆದ ವರ್ಷ ಐದು  ಹಂದಿ ತಳಿ ಉತ್ಪಾದಕ  ಸಂಸ್ಥೆಗಳನ್ನು ಸ್ಥಾಪಿಸಿದ್ದು, ಪ್ರಸಕ್ತ ವರ್ಷದಲ್ಲಿ  ಐದು ಹಂದಿ ಉತ್ಪಾದಕ  ಸಂಸ್ಥೆಗಳನ್ನು ಸ್ಥಾಪಿಸಲಾಗುವುದು ಎಂದು  ಬೊಮ್ಮಾಯಿ ಹೇಳಿದ್ದಾರೆ.

 

Follow Us:
Download App:
  • android
  • ios