ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಭೇಟಿಗಾಗಿ ತೆರಳಿದ್ದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ದೃಢಪಡಿಸಿದ್ದು, ಅವರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.

ಬೆಂಗಳೂರು / ನವದೆಹಲಿ (ಆ.29): ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ಇನ್ಫೋಸಿಸ್ ಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾದ 'ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್'ನ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ (Lax Gopisetty) ಅವರು ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಭೇಟಿಗಾಗಿ ನೇಪಾಳಕ್ಕೆ ತೆರಳಿದ್ದ ಲಕ್ಷ್ ಗೋಪಿಸೆಟ್ಟಿ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದೆ.

ಘಟನೆ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಇನ್ಫೋಸಿಸ್ ಸಂಸ್ಥೆಯು, ನಮ್ಮ ಸಹೋದ್ಯೋಗಿ ಲಕ್ಷ್ ಗೋಪಿಸೆಟ್ಟಿ ಅವರು ವೈಯಕ್ತಿಕ ಕೆಲಸದ ನಿಮಿತ್ತ ಆ ಪ್ರದೇಶಕ್ಕೆ ತೆರಳಿದ್ದರು. ಸದ್ಯ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ವಿವಿಧ ತನಿಖಾ ಹಾಗೂ ರಕ್ಷಣಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಪತ್ತೆಗೆ ಮತ್ತು ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ನೆರವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದೆ. ಅಲ್ಲದೆ, ನೇಪಾಳ ಪ್ರವಾಹದಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಯಾರೀ ಲಕ್ಷ್ ಗೋಪಿಸೆಟ್ಟಿ?:

ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿರುವ ಲಕ್ಷ್ ಗೋಪಿಸೆಟ್ಟಿ ಅವರು ಅಮೆರಿಕ ಮತ್ತು ಕೆನಡಾದ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ತಂತ್ರಜ್ಞಾನ, ಕಾರ್ಯತಂತ್ರ ಹಾಗೂ ಡಿಜಿಟಲ್ ವೇರಿಯಂಟ್‌ ಕುರಿತು ಸಲಹೆ ನೀಡುವ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.

ಇದಕ್ಕೂ ಮೊದಲು ಇನ್ಫೋಸಿಸ್‌ನ ಗ್ಲೋಬಲ್ ವೈಸ್ ಪ್ರೆಸಿಡೆಂಟ್ ಆಗಿ ಅಮೆರಿಕ, ಯುರೋಪ್ ಮತ್ತು ಏಷ್ಯಾ ವ್ಯಾಪ್ತಿಯಲ್ಲಿ ಸಂಸ್ಥೆಯ ಉದ್ಯಮವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ಫೋಸಿಸ್ ಸೇರುವ ಮುನ್ನ 'ಅಕ್ಸೆಂಚರ್' (Accenture) ಸಂಸ್ಥೆಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಇವರು, ಬೇರಿಂಗ್‌ಪಾಯಿಂಟ್, ಐಬಿಎಂ (IBM), ಪಿಸಿಡಬ್ಲ್ಯೂ (PwC) ಮತ್ತು ಎಚ್‌ಸಿಎಲ್ (HCL) ನಂತಹ ಜಾಗತಿಕ ಸಂಸ್ಥೆಗಳಲ್ಲೂ ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

320 ಭಾರತೀಯರು ನಾಪತ್ತೆ, 400 ಮಂದಿ ಚೀನಾದಲ್ಲಿ ಭದ್ರ

ಮತ್ತೊಂದೆಡೆ, ನೇಪಾಳ-ಟಿಬೆಟ್ ಗಡಿಯಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಇದುವರೆಗೆ ಕನಿಷ್ಠ 320 ಭಾರತೀಯರು ನಾಪತ್ತೆಯಾಗಿದ್ದಾರೆ ಹಾಗೂ 400ಕ್ಕೂ ಹೆಚ್ಚು ಭಾರತೀಯರು ಚೀನಾದ ಗಡಿ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಚೀನಾ ಬದಿಯಲ್ಲಿ ಸಿಲುಕಿದ್ದ 153 ಭಾರತೀಯ ನಾಗರಿಕರು ಸುರಕ್ಷಿತವಾಗಿ ಗಡಿ ದಾಟಿ ನೇಪಾಳ ಪ್ರವೇಶಿಸಿದ್ದಾರೆ. ನೇಪಾಳದ ಪ್ರವಾಹ ಪೀಡಿತ ಪ್ರದೇಶದಿಂದ ಕಾಠ್ಮಂಡು ಮಾರ್ಗವಾಗಿ 21 ಭಾರತೀಯರು ಶುಕ್ರವಾರ ಮಧ್ಯಾಹ್ನ ನವದೆಹಲಿಗೆ ತಲುಪಿದ್ದಾರೆ. ಚೀನಾ ಭಾಗದಲ್ಲಿ ಸಿಲುಕಿರುವ 400 ಭಾರತೀಯರು ಸುರಕ್ಷಿತವಾಗಿದ್ದು, ಅವರನ್ನು ಸ್ಥಳೀಯ ಅಧಿಕಾರಿಗಳ ನೆರವಿನಿಂದ ವಾಪಸ್ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ.

ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕಾಠ್ಮಂಡುಗೆ ಸಾಧ್ಯವಿರುವ ಎಲ್ಲಾ ಸಹಕಾರ ಹಾಗೂ ನೆರವನ್ನು ನೀಡಲು ಭಾರತ ಸರ್ಕಾರ ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.