ಐದು ಉಪಖಂಡಗಳನ್ನು ಜೋಡಿಸುವ 50,000 ಕಿ.ಮೀ. ಉದ್ದದ ಸಮುದ್ರದಡಿ ಮೆಟಾ ಕೇಬಲ್ ಯೋಜನೆಗೆ ಭಾರತದ ಒಪ್ಪಿಗೆ. ಈ ಯೋಜನೆಯು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ವಾಷಿಂಗ್ಟನ್‌: ಭಾರತ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಹಾಗೂ ಇತರೆ ಪ್ರಮುಖ ದೇಶಗಳನ್ನು ಸಂಪರ್ಕಿಸುವ ಸಮುದ್ರದಡಿ 50 ಸಾವಿರ ಕಿ.ಮೀ. ಉದ್ದದ ಕೇಬಲ್‌ ಅಳವಡಿಸುವ ಲಕ್ಷಾಂತರ ಕೋಟಿ ರುಪಾಯಿ ವೆಚ್ಚದ ಮೆಗಾ ಯೋಜನೆಯೊಂದನ್ನು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೈಗೆತ್ತಿಕೊಳ್ಳಲಿದೆ. ಪ್ರಾಜೆಕ್ಟ್‌ ವಾಟರ್‌ವರ್ಥ್‌ ಹೆಸರಿನ ಈ ಯೋಜನೆ ಭಾರತದ ಡಿಜಿಟಲ್‌ ಆರ್ಥಿಕತೆಗೆ ನೆರವು ನೀಡುವ ಉದ್ದೇಶ ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ವೇಳೆ ಭಾರತ ಮತ್ತು ಅಮೆರಿಕ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಈ ಯೋಜನೆ ಕುರಿತು ಪ್ರಸ್ತಾಪಿಸಲಾಗಿದೆ.
ಯೋಜನೆಯಡಿ ಹಿಂದೂ ಮಹಾಸಾಗರದಲ್ಲಿ ಅಳವಡಿಸಲಾಗುವ ಈ ಕೇಬಲ್‌ಗೆ ಹಣಕಾಸು ನೆರವು, ನಿರ್ವಹಣೆ, ರಿಪೇರಿಯ ಜವಾಬ್ದಾರಿಯನ್ನು ಭಾರತವು ವಹಿಸಿಕೊಳ್ಳಲಿದೆ. ವಿಶ್ವದ ಅತಿದೊಡ್ಡ, ಬೃಹತ್‌ ಸಾಮರ್ಥ್ಯದ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಮುದ್ರದಡಿ ಅಳವಡಿಸುವ ಈ ಕೇಬಲ್‌ ಯೋಜನೆ ಐದು ಉಪಖಂಡಗಳನ್ನು ಸಂಪರ್ಕಿಸಲಿದೆ. ಈ ದಶಕದ ಅಂತ್ಯದಲ್ಲಿ ಈ ಕೇಬಲ್‌ ಯೋಜನೆ ಪೂರ್ಣಗೊಳ್ಳಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃತಕಬುದ್ಧಿಮತ್ತೆ(ಎಐ)ಯಲ್ಲಿ ಸಾಧನೆ ಮಾಡಲು ಈ ರೀತಿ ಹೈಸ್ಪೀಡ್‌ ನೆಟ್‌ವರ್ಕ್‌ನ ಅಗತ್ಯವಿದ್ದು, ಇದರಿಂದ ಭಾರತಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.

26/11 ಮುಂಬೈ ದಾಳಿ ಉಗ್ರ ತಹಾವುರ್‌ ರಾಣಾ ಭಾರತ ಗಡೀಪಾರು ವಿಳಂಬ ಸಂಭವ : ನಿರಾಶೆಯ ಮಾಹಿತಿ

ವಾಷಿಂಗ್ಟನ್‌: 26/11 ಮುಂಬೈ ದಾಳಿ ಉಗ್ರ ತಹಾವುರ್‌ ರಾಣಾ ಭಾರತ ಗಡೀಪಾರು ವಿಳಂಬವಾಗುವ ಸಾಧ್ಯತೆ ಇದೆ ಎಂಬ ನಿರಾಶೆಯ ಮಾಹಿತಿ ಲಭ್ಯವಾಗಿದೆ. ಇದರಿಂದ ಬೇಗನೇ ಆತನನ್ನು ಭಾರತಕ್ಕೆ ಕರೆತರುವ ಭಾರತಕ್ಕೆ ಹಿನ್ನಡೆ ಆಗಿದೆ. ರಾಣಾ ತನ್ನ ಗಡೀಪಾರು ಆದೇಶ ಪ್ರಶ್ನಿಸಿ ಮಾನವೀಯ ನೆಲೆಯಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಅಮೆರಿಕದ ಮೇಲ್ಮನವಿ ವೇದಿಕೆಯಲ್ಲಿ ಆತ ಗಡೀಪಾರು ಪ್ರಶ್ನಿಸಿದ್ದು, ಮಾನವೀಯ ನೆಲೆಯಲ್ಲಿ ತನಗೆ ಅಮೆರಿಕದಲ್ಲೇ ಇರಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾನೆ. ಇದು ಆತನ ಗಡೀಪಾರು ತಡೆಯ ಕೊನೆ ಯತ್ನ ಎನ್ನಲಾಗಿದೆ. ಹೀಗಾಗಿ ಈ ಅರ್ಜಿ ಇತ್ಯರ್ಥ ಆಗಲು ಸಮಯ ಹಿಡಿಯಬಹುದು. ಸದ್ಯಕ್ಕೆ ಆತ ಭಾರತಕ್ಕೆ ಗಡೀಪಾರಾಗಲ್ಲ ಎಂದು ಮೂಲಗಳು ಹೇಳಿವೆ.

ಕಳೆದ ತಿಂಗಳು ಅಮೆರಿಕ ಸುಪ್ರೀಂಕೋರ್ಟ್‌, ಆತನ ಗಡೀಪಾರಿಗೆ ಆದೇಶಿಸಿತ್ತು. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಾಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ತಕ್ಷಣವೇ ರಾಣಾ ಗಡೀಪಾರಿಗೆ ಕ್ರಮ ಜರುಗಿಸಲಾಗುವುದು ಎಂದಿದ್ದರು. 2008ರ ನ.26ರಂದು ಮುಂಬೈ ಮೇಲೆ ನಡೆದ ಉಗ್ರಗಾಮಿ ದಾಳಿಗೆ ಡೇವಿಡ್‌ ಹೆಡ್ಲಿ ಎಂಬ ಉಗ್ರ ಸಮೀಕ್ಷೆ ನಡೆಸಿದ್ದ. ಆತನಿಗೆ ಮುಂಬೈನಲ್ಲಿನ ತನ್ನ ಕಚೇರಿಯಲ್ಲಿ ಆಶ್ರಯ ನೀಡಿದ್ದ ಆರೋಪ ರಾಣಾ ಮೇಲಿದೆ. ಅಮೆರಿಕದಲ್ಲಿ ಆತ 16 ವರ್ಷ ಹಿಂದೆ ಬಂಧಿತನಾಗಿದ್ದ.