ಕುಟುಂಬದ ಆರ್ಥಿಕ ಭದ್ರತೆಗೆ ನಿಯಮಿತ ಆದಾಯವು ಆಧಾರವಾಗಿದೆ. ಆದರೆ, ಅನಿರೀಕ್ಷಿತವಾಗಿ ಆದಾಯ ನಿಂತಾಗ ಉಂಟಾಗುವ ಸಂಕಷ್ಟಗಳನ್ನು ತಪ್ಪಿಸಲು 'ಆದಾಯ ಬದಲಿ ಯೋಜನೆ'ಯ ಮಹತ್ವವನ್ನು ಈ ಲೇಖನ ವಿವರಿಸುತ್ತದೆ.
ಬಹುತೇಕ ಭಾರತೀಯ ಕುಟುಂಬಗಳಿಗೆ ನಿಯಮಿತ ಆದಾಯವೇ ಆರ್ಥಿಕ ಭದ್ರತೆಯ ಮೂಲ ಆಧಾರವಾಗಿದೆ. ಅದು ಮನೆ ಬಾಡಿಗೆ, EMI, ಮಕ್ಕಳ ಶಿಕ್ಷಣ, ದಿನನಿತ್ಯದ ಖರ್ಚು, ವೈದ್ಯಕೀಯ ವೆಚ್ಚಗಳು ಹಾಗೂ ಭವಿಷ್ಯದ ಉಳಿತಾಯ ಗುರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಆದರೆ ಅನಿರೀಕ್ಷಿತವಾಗಿ ಆದಾಯ ನಿಂತುಬಿಟ್ಟರೆ ಅಂದರೆ, ಸಾವಿನ ಕಾರಣದಿಂದಾಗಲಿ, ಅಂಗವೈಕಲ್ಯದಿಂದಾಗಲಿ, ಗಂಭೀರ ಅನಾರೋಗ್ಯದಿಂದಾಗಲಿ ಅಥವಾ ಉದ್ಯೋಗ ಕಳೆದುಕೊಂಡ ಸಂದರ್ಭದಲ್ಲಿ ಕುಟುಂಬವು ತಕ್ಷಣದ ಆರ್ಥಿಕ ಒತ್ತಡಕ್ಕೆ ಒಳಗಾಗಬಹುದು.
ಇದಕ್ಕಾಗಿಯೇ ಆದಾಯ ಬದಲಿ ಯೋಜನೆ (Income Replacement Planning) ಇಂದು ಕುಟುಂಬಗಳ ಆರ್ಥಿಕ ಸಿದ್ಧತೆಯ ಪ್ರಮುಖ ಭಾಗವಾಗುತ್ತಿದೆ. ಭಾರತೀಯ ಕುಟುಂಬಗಳು ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣಗಳನ್ನು ತಿಳಿಯೋಣ.
ಕುಟುಂಬದ ಆರ್ಥಿಕ ಸ್ಥಿರತೆಗೆ ನಿಯಮಿತ ಆದಾಯ ಏಕೆ ಅಡಿಪಾಯ?
ನಿಯಮಿತ ಆದಾಯವು ಕುಟುಂಬದ ದೈನಂದಿನ ಅಗತ್ಯಗಳ ಜೊತೆಗೆ ದೀರ್ಘಾವಧಿಯ ಗುರಿಗಳನ್ನು ನಿರ್ವಹಿಸಲು ನೆರವಾಗುತ್ತದೆ. ಮನೆ ಖರ್ಚು, ಶಾಲಾ ಶುಲ್ಕ, ಸಾಲದ EMI, ವಿಮಾ ಪ್ರೀಮಿಯಂ ಹಾಗೂ ಆರೋಗ್ಯ ವೆಚ್ಚಗಳನ್ನು ಪೂರೈಸಲು ಇದು ಅಗತ್ಯವಾಗಿದೆ.
ಆದಾಯ ನಿರಂತರವಾಗಿದ್ದಾಗ ಕುಟುಂಬಗಳು ಆತ್ಮವಿಶ್ವಾಸದಿಂದ ಉಳಿತಾಯ ಮಾಡಬಹುದು ಮತ್ತು ಭವಿಷ್ಯಕ್ಕಾಗಿ ಯೋಜಿಸಬಹುದು. ಆದರೆ ಆದಾಯ ಹಠಾತ್ ನಿಂತರೆ, ಉತ್ತಮವಾಗಿ ಹಣಕಾಸು ನಿರ್ವಹಿಸುತ್ತಿದ್ದ ಕುಟುಂಬಗಳಿಗೂ ಸಂಕಷ್ಟ ಎದುರಾಗಬಹುದು. ಆದ್ದರಿಂದ ಆದಾಯದ ನಿರಂತರತೆಯು ಕುಟುಂಬದ ಆರ್ಥಿಕ ಭದ್ರತೆಯ ಮುಖ್ಯ ಅಂಶವಾಗಿದೆ.
ಆದಾಯ ಬದಲಿ ಯೋಜನೆ ಎಂದರೇನು?
ಆದಾಯ ಬದಲಿ ಯೋಜನೆ ಎಂದರೆ ಕುಟುಂಬದ ಮುಖ್ಯ ಆದಾಯ ಗಳಿಸುವ ಸದಸ್ಯರು ಯಾವುದಾದರೂ ಕಾರಣದಿಂದ ಆದಾಯ ಗಳಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ವ್ಯವಸ್ಥೆಯನ್ನು ರೂಪಿಸುವುದು.
ಇದು ಕೇವಲ ಉಳಿತಾಯಕ್ಕೆ ಸೀಮಿತವಲ್ಲ. ತುರ್ತು ನಿಧಿ (Emergency Fund), ವಿಮಾ ರಕ್ಷಣೆ, ಸಾಲ ನಿರ್ವಹಣೆ ಹಾಗೂ ಭವಿಷ್ಯದ ವೆಚ್ಚಗಳ ಅಂದಾಜುಗಳು ಇದರಲ್ಲಿ ಸೇರಿವೆ. ಸರಳವಾಗಿ ಹೇಳುವುದಾದರೆ, ಅನಿರೀಕ್ಷಿತ ಘಟನೆಗಳು ಸಂಭವಿಸಿದರೂ ಕುಟುಂಬದ ಆರ್ಥಿಕ ಸ್ಥಿರತೆ ಕಾಪಾಡಲು ಸಹಾಯ ಮಾಡುವ ಯೋಜನೆಯೇ ಆದಾಯ ಬದಲಿ ಯೋಜನೆ.
ಭಾರತೀಯ ಕುಟುಂಬಗಳು ಆದಾಯ ರಕ್ಷಣೆಗೆ ಹೆಚ್ಚು ಗಮನ ಕೊಡುತ್ತಿರುವುದೇಕೆ?
ಇತ್ತೀಚಿನ ವರ್ಷಗಳಲ್ಲಿ ಕುಟುಂಬಗಳ ಆರ್ಥಿಕ ಜವಾಬ್ದಾರಿಗಳು ಹೆಚ್ಚಾಗಿವೆ. ಮನೆ ಸಾಲ, ಮಕ್ಕಳ ಶಿಕ್ಷಣ ವೆಚ್ಚ, ಆರೋಗ್ಯ ಸೇವೆಗಳ ಹೆಚ್ಚುತ್ತಿರುವ ಖರ್ಚು, ಜೀವನಶೈಲಿಯ ಬೇಡಿಕೆಗಳು ಹಾಗೂ ವಯೋವೃದ್ಧ ಪೋಷಕರ ನಿರ್ವಹಣೆ ಮುಂತಾದವುಗಳು ಕುಟುಂಬದ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ತಂದಿವೆ.
ಬಹುತೇಕ ಮನೆಗಳಲ್ಲಿ ಒಬ್ಬರೇ ಪ್ರಮುಖ ಆದಾಯ ಮೂಲವಾಗಿರುವುದರಿಂದ, ಆದಾಯ ರಕ್ಷಣೆ (Income Protection) ಕುರಿತು ಯೋಚಿಸುವುದು ಆಧುನಿಕ ಕುಟುಂಬ ಯೋಜನೆಯ ಒಂದು ಅಗತ್ಯ ಭಾಗವಾಗಿದೆ.
ಕುಟುಂಬವು ತನ್ನ ಪ್ರಮುಖ ಆದಾಯ ಮೂಲವನ್ನು ಕಳೆದುಕೊಂಡರೆ ಏನಾಗಬಹುದು?
ಕುಟುಂಬದ ಮುಖ್ಯ ಆದಾಯ ಮೂಲ ನಿಂತರೂ ಖರ್ಚುಗಳು ನಿಲ್ಲುವುದಿಲ್ಲ. ಮನೆ ಬಾಡಿಗೆ, EMI, ಶಾಲಾ ಶುಲ್ಕ, ವಿದ್ಯುತ್ ಮತ್ತು ಇತರ ಸೇವೆಗಳ ಬಿಲ್, ಆಹಾರ ಸಾಮಗ್ರಿಗಳು ಹಾಗೂ ವೈದ್ಯಕೀಯ ವೆಚ್ಚಗಳು ಮುಂದುವರಿಯುತ್ತವೆ.
ಈ ಸಂದರ್ಭದಲ್ಲಿ ಕುಟುಂಬವು ಉಳಿತಾಯದ ಮೇಲೆ ಅವಲಂಬಿಸಬೇಕಾಗಬಹುದು, ಸಾಲ ಪಡೆಯಬೇಕಾಗಬಹುದು ಅಥವಾ ಪ್ರಮುಖ ಜೀವನ ಗುರಿಗಳನ್ನು ಮುಂದೂಡಬೇಕಾಗಬಹುದು. ವಿಶೇಷವಾಗಿ ಅಂಗವೈಕಲ್ಯದಿಂದ ಆದಾಯ ನಿಲ್ಲುವ ಪರಿಸ್ಥಿತಿ ಎದುರಾದರೆ, ದೀರ್ಘಕಾಲದ ಆರ್ಥಿಕ ಪರಿಣಾಮಗಳನ್ನು ಕುಟುಂಬ ಎದುರಿಸಬೇಕಾಗಬಹುದು.
ಅಪಘಾತಗಳು ಹಾಗೂ ಅನಾರೋಗ್ಯದ ಕಾರಣದಿಂದ ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ತಾತ್ಕಾಲಿಕ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ, ಆದಾಯ ರಕ್ಷಣೆಯ ಕುರಿತ ಯೋಜನೆಗೆ ಮಹತ್ವ ಹೆಚ್ಚುತ್ತಿದೆ.
ಯುವ ಕುಟುಂಬಗಳು ಹೆಚ್ಚು ಆರ್ಥಿಕ ಅಪಾಯಕ್ಕೆ ಒಳಗಾಗುವುದೇಕೆ?
ಯುವ ಕುಟುಂಬಗಳಲ್ಲಿ ಸಾಮಾನ್ಯವಾಗಿ ಜವಾಬ್ದಾರಿಗಳು ಹೆಚ್ಚಾಗಿದ್ದರೂ ಉಳಿತಾಯದ ಪ್ರಮಾಣ ಇನ್ನೂ ಕಡಿಮೆ ಇರುತ್ತದೆ. ಮನೆ ಸಾಲ ತೀರಿಸುವುದು, ಮಕ್ಕಳ ಪೋಷಣೆ, ಪೋಷಕರ ಜವಾಬ್ದಾರಿ ಹಾಗೂ ವೃತ್ತಿಜೀವನ ಕಟ್ಟಿಕೊಳ್ಳುವ ಹಂತದಲ್ಲಿರುವುದರಿಂದ ಅನಿರೀಕ್ಷಿತ ಆದಾಯ ನಷ್ಟವು ಹಲವು ಗುರಿಗಳ ಮೇಲೆ ಒಂದೇ ಸಮಯದಲ್ಲಿ ಪರಿಣಾಮ ಬೀರುತ್ತದೆ.
ಆದಾಯ ಗಳಿಕೆಯ ಆರಂಭಿಕ ವರ್ಷಗಳಲ್ಲಿಯೇ ಕುಟುಂಬದ ಹೊಣೆಗಾರಿಕೆ ವೇಗವಾಗಿ ಹೆಚ್ಚಾಗುವುದರಿಂದ ದೀರ್ಘಾವಧಿಯ ಆರ್ಥಿಕ ರಕ್ಷಣೆಯ ಅಗತ್ಯವೂ ಹೆಚ್ಚಾಗುತ್ತದೆ.
ಕುಟುಂಬಗಳು ಹಲವು ವೇಳೆ ಕಡೆಗಣಿಸುವ ಆರ್ಥಿಕ ಜವಾಬ್ದಾರಿಗಳು
ಬಹುತೇಕ ಕುಟುಂಬಗಳು ಪ್ರಸ್ತುತ ಖರ್ಚುಗಳ ಬಗ್ಗೆ ಯೋಜನೆ ರೂಪಿಸುತ್ತವೆ. ಆದರೆ ದೀರ್ಘಾವಧಿಯ ವೆಚ್ಚಗಳು ಮತ್ತು ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಪರಿಗಣಿಸುವುದಿಲ್ಲ.
ಮಕ್ಕಳ ಉನ್ನತ ಶಿಕ್ಷಣ, ವಯೋವೃದ್ಧ ಪೋಷಕರ ನಿವೃತ್ತಿ ಬೆಂಬಲ, ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಸಾಲಗಳ ಪೂರ್ಣ ಪಾವತಿ ಹಾಗೂ ಮನೆಯ ನಿರ್ವಹಣಾ ವೆಚ್ಚಗಳಂತಹ ಅಂಶಗಳು ಮುಂದಿನ ದಿನಗಳಲ್ಲಿ ದೊಡ್ಡ ಆರ್ಥಿಕ ಹೊರೆ ಆಗಬಹುದು.
ಇದರ ಜೊತೆಗೆ, ಬೆಲೆಏರಿಕೆ (Inflation) ಪರಿಣಾಮವನ್ನೂ ಹಲವಾರು ಕುಟುಂಬಗಳು ಕಡಿಮೆ ಅಂದಾಜು ಮಾಡುತ್ತವೆ. ಆದ್ದರಿಂದ ಆದಾಯ ಬದಲಿ ಯೋಜನೆ ಮಾಡುವಾಗ ಇಂದಿನ ಅಗತ್ಯಗಳಷ್ಟೇ ಅಲ್ಲ, ಭವಿಷ್ಯದ ಗುರಿಗಳನ್ನೂ ಪರಿಗಣಿಸಬೇಕು.
ಕೇವಲ ಉಳಿತಾಯವೇ ಕುಟುಂಬವನ್ನು ಸಂಪೂರ್ಣವಾಗಿ ರಕ್ಷಿಸಬಹುದೇ?
ಉಳಿತಾಯವು ಅತ್ಯಂತ ಮುಖ್ಯವಾದರೂ, ಅದು ಮಾತ್ರ ದೀರ್ಘಾವಧಿಯ ಆದಾಯ ನಷ್ಟವನ್ನು ಎದುರಿಸಲು ಸಾಕಾಗುವುದಿಲ್ಲ. ಕೆಲವು ತಿಂಗಳ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಉಳಿತಾಯ ನೆರವಾಗಬಹುದು. ಆದರೆ ಶಾಶ್ವತ ಅಥವಾ ದೀರ್ಘಾವಧಿಯ ಆದಾಯ ನಷ್ಟದ ಎದುರು ಹೆಚ್ಚಿನ ಆರ್ಥಿಕ ಬೆಂಬಲ ಅಗತ್ಯವಾಗಬಹುದು.
ಬೆಲೆಏರಿಕೆ, ವೈದ್ಯಕೀಯ ವೆಚ್ಚಗಳು ಹಾಗೂ ಸಾಲದ ಹೊಣೆಗಾರಿಕೆಗಳು ಉಳಿತಾಯವನ್ನು ಶೀಘ್ರ ಕಡಿಮೆ ಮಾಡಬಹುದು. ಆದ್ದರಿಂದ ಉಳಿತಾಯದ ಜೊತೆಗೆ ಸೂಕ್ತ ರಕ್ಷಣೆ ಮತ್ತು ಸ್ಪಷ್ಟ ಯೋಜನೆಯೂ ಅಗತ್ಯವಾಗಿದೆ.
ಪರಿಣಾಮಕಾರಿ ಆದಾಯ ಬದಲಿ ಯೋಜನೆಯನ್ನು ಹೇಗೆ ರೂಪಿಸಬಹುದು?
ಉತ್ತಮ ಆದಾಯ ಬದಲಿ ಯೋಜನೆ ಕುಟುಂಬದ ಮಾಸಿಕ ಖರ್ಚುಗಳು, ಬಾಕಿ ಸಾಲಗಳು, ಮಕ್ಕಳ ಶಿಕ್ಷಣ ವೆಚ್ಚಗಳು ಹಾಗೂ ಭವಿಷ್ಯದ ಗುರಿಗಳ ಲೆಕ್ಕಾಚಾರದಿಂದ ಪ್ರಾರಂಭವಾಗುತ್ತದೆ.
ತುರ್ತು ನಿಧಿಯನ್ನು ನಿರ್ಮಿಸುವುದು, ಕುಟುಂಬದ ರಕ್ಷಣಾ ಅಗತ್ಯಗಳನ್ನು ಮರುಪರಿಶೀಲಿಸುವುದು ಮತ್ತು ಅಗತ್ಯ ದಾಖಲೆಗಳನ್ನು ನವೀಕರಿಸಿ ಇಡುವುದು ಸಹ ಮುಖ್ಯವಾಗಿದೆ.
ಈ ಯೋಜನೆಯಲ್ಲಿಟರ್ಮ್ ಇನ್ಷೂರೆನ್ಸ್ (Term Insurance)ಕೂಡ ಒಂದು ಪ್ರಮುಖ ಪಾತ್ರ ವಹಿಸಬಹುದು. ಇದು ನಿರ್ದಿಷ್ಟ ಅವಧಿಗೆ ಆರ್ಥಿಕ ರಕ್ಷಣೆ ನೀಡುವ ಮೂಲಕ ಕುಟುಂಬವು ಜವಾಬ್ದಾರಿಯುತ ವರ್ಷಗಳಲ್ಲಿ ಹೆಚ್ಚು ಭದ್ರತೆಯನ್ನು ಹೊಂದಲು ಸಹಾಯ ಮಾಡುತ್ತದೆ.
ಆಧುನಿಕ ಹಣಕಾಸು ಯೋಜನೆಯಲ್ಲಿ ಆದಾಯ ಬದಲಿ ಯಾಕೆ ಪ್ರಮುಖ ಅಂಶವಾಗಿದೆ?
ಇಂದಿನ ಹಣಕಾಸು ಯೋಜನೆ ಕೇವಲ ಹೂಡಿಕೆ ಲಾಭಗಳ ಬಗ್ಗೆ ಮಾತ್ರವಲ್ಲ. ಕುಟುಂಬಗಳು ಅಪಾಯ ನಿರ್ವಹಣೆ, ಆದಾಯದ ನಿರಂತರತೆ ಹಾಗೂ ಆರ್ಥಿಕ ರಕ್ಷಣೆಯ ಕುರಿತಾಗಿಯೂ ಯೋಚಿಸಬೇಕಾಗಿದೆ.
"ಮುಖ್ಯ ಆದಾಯ ಗಳಿಸುವ ಸದಸ್ಯರು ಆದಾಯ ಗಳಿಸಲು ಸಾಧ್ಯವಾಗದ ಪರಿಸ್ಥಿತಿ ಬಂದರೆ ಕುಟುಂಬವು ಹೇಗೆ ನಿರ್ವಹಿಸುತ್ತದೆ?" ಎಂಬ ಪ್ರಶ್ನೆಗೆ ಉತ್ತರ ನೀಡುವುದೇ ಆದಾಯ ಬದಲಿ ಯೋಜನೆ.
ವಿಶೇಷವಾಗಿ ಸಾಲಗಳಿರುವ, ಅವಲಂಬಿತರಿರುವ ಅಥವಾ ಸೀಮಿತ ಉಳಿತಾಯ ಹೊಂದಿರುವ ಕುಟುಂಬಗಳಿಗೆ ಇದು ಹೆಚ್ಚು ಪ್ರಸ್ತುತವಾಗಿದೆ.
ಆದಾಯ ಬದಲಿ ಯೋಜನೆಯಲ್ಲಿ ಜೀವ ವಿಮೆಯ ಪಾತ್ರ
ಲೈಫ್ ಇನ್ಶೂರೆನ್ಸ್ (Life Insurance) ಆದಾಯ ಬದಲಿ ಯೋಜನೆಯ ಒಂದು ಪ್ರಮುಖ ಭಾಗವಾಗಬಹುದು. ಪಾಲಿಸಿಯ ಅವಧಿಯಲ್ಲಿ ವಿಮೆ ಹೊಂದಿರುವ ವ್ಯಕ್ತಿ ನಿಧನರಾದರೆ, ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ಇದು ಸಹಾಯ ಮಾಡುತ್ತದೆ.
ಸೂಕ್ತ ವಿಮಾ ರಕ್ಷಣೆಯು ದೈನಂದಿನ ಖರ್ಚುಗಳು, ಮಕ್ಕಳ ಶಿಕ್ಷಣ, ಸಾಲ ಪಾವತಿ ಹಾಗೂ ಭವಿಷ್ಯದ ಗುರಿಗಳನ್ನು ನಿರ್ವಹಿಸಲು ಕುಟುಂಬಕ್ಕೆ ಬೆಂಬಲ ನೀಡಬಹುದು.
ಆರ್ಥಿಕ ಭದ್ರತೆ ಎಂದರೆ ಅನಿಶ್ಚಿತತೆಗಳಿಗೆ ಸಿದ್ಧರಾಗಿರುವುದು
ಆರ್ಥಿಕ ಭದ್ರತೆ ಎಂದರೆ ಪ್ರತಿಯೊಂದು ಅಪಾಯವನ್ನು ಮುಂಚಿತವಾಗಿ ಊಹಿಸುವುದು ಅಲ್ಲ. ಬದಲಿಗೆ, ಕುಟುಂಬದ ಆರ್ಥಿಕ ಅಡಿಪಾಯಕ್ಕೆ ಹೊಡೆತ ನೀಡಬಹುದಾದ ಸಂದರ್ಭಗಳಿಗೆ ಮುಂಚಿತವಾಗಿ ಸಿದ್ಧರಾಗಿರುವುದಾಗಿದೆ.
ಸಾವು, ಅಂಗವೈಕಲ್ಯ, ಗಂಭೀರ ಅನಾರೋಗ್ಯ ಅಥವಾ ಆದಾಯದ ವ್ಯತ್ಯಯಗಳು ಕುಟುಂಬದ ಸ್ಥಿರತೆಯನ್ನು ಕ್ಷಣಾರ್ಧದಲ್ಲಿ ಬದಲಾಯಿಸಬಹುದು. ಉತ್ತಮ ಯೋಜನೆ ಕುಟುಂಬಕ್ಕೆ ಸಮಯ, ಆರ್ಥಿಕ ಬೆಂಬಲ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಒದಗಿಸುತ್ತದೆ.
ಮುಕ್ತಾಯದ ಮಾತು
ಇಂದಿನ ಭಾರತೀಯ ಕುಟುಂಬಗಳು ಹಿಂದೆಂದಿಗಿಂತ ಹೆಚ್ಚಿನ ಆರ್ಥಿಕ ಜವಾಬ್ದಾರಿಗಳನ್ನು ಹೊರುತ್ತಿವೆ. ಅದಕ್ಕಾಗಿಯೇ ಆದಾಯ ಬದಲಿ ಯೋಜನೆ ಈಗ ಐಚ್ಛಿಕ ವಿಷಯವಾಗಿರದೆ, ಹಣಕಾಸು ಸಿದ್ಧತೆಯ ಪ್ರಮುಖ ಭಾಗವಾಗಿದೆ.
ಉಳಿತಾಯ, ಜೀವ ವಿಮೆ, ತುರ್ತು ನಿಧಿ ಹಾಗೂ ಸರಿಯಾದ ದಾಖಲೆ ನಿರ್ವಹಣೆ ಇವೆಲ್ಲವೂ ಕುಟುಂಬದ ಆರ್ಥಿಕ ಭದ್ರತೆಯನ್ನು ಬಲಪಡಿಸುತ್ತವೆ. ಸಂಕಷ್ಟ ಎದುರಾದ ನಂತರ ಅದರ ಮಹತ್ವ ಅರಿಯುವುದಕ್ಕಿಂತ ಮುಂಚಿತವಾಗಿಯೇ ಸಿದ್ಧರಾಗುವುದು ಉತ್ತಮ.
ಸೂಕ್ತ ಯೋಜನೆ ಹೊಂದಿರುವ ಕುಟುಂಬವು ತನ್ನ ಗುರಿಗಳು, ಜೀವನಮಟ್ಟ ಹಾಗೂ ಭವಿಷ್ಯವನ್ನು ಹೆಚ್ಚು ಆತ್ಮವಿಶ್ವಾಸದಿಂದ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
