Asianet Suvarna News Asianet Suvarna News

ಮೇಡ್‌ ಇನ್‌ ಕರ್ನಾಟಕ: ಸ್ಟಾರ್ಟ್‌ಅಪ್‌ಗೆ ಸರ್ಕಾರವೇ ಮೊದಲ ಗ್ರಾಹಕ, ಸಚಿವ ಪ್ರಿಯಾಂಕ್ ಖರ್ಗೆ

ಉತ್ಪನ್ನಗಳನ್ನು ಹುರಿದುಂಬಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕೆ ಪ್ರಾಶಸ್ತ್ಯದ ಸಾರ್ವಜನಿಕ ಸಂಗ್ರಹಣೆ ನೀತಿ ರೂಪಿಸಲು ಚಿಂತನೆ, ಮೈಸೂರಿನಲ್ಲಿ ಆಯೋಜಿಸಿದ್ದ ಬಿಗ್‌ಟೆಕ್‌ಶೋ ಯಶಸ್ವಿ. 
 

Government is the First Customer for Startup Says Minister Priyank Kharge grg
Author
First Published Nov 4, 2023, 11:15 PM IST

ಮೈಸೂರು(ನ.04):  ಮೇಡ್‌ ಇನ್‌ ಕರ್ನಾಟಕದ ಉತ್ಪನ್ನಗಳ ಜತೆಗೆ ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಶಸ್ತ್ಯದ ಸಾರ್ವಜನಿಕ ಸಂಗ್ರಹಣೆ ನೀತಿ ರೂಪಿಸಲು ಉದ್ದೇಶಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮೈಸೂರಿನ ಇನ್ಫೋಸಿಸ್‌ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಗ್‌ಟೆಕ್‌ಶೋನ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಯಾಂಡ್‌ಬೆಂಗಳೂರು ಯೋಜನೆಯಡಿ ಹೂಡಿಕೆ ಮಾಡಿ, ಸ್ಟಾರ್ಟ್‌ ಅಪ್‌ಸೆಲ್‌ ನಲ್ಲಿ ನೋಂದಣಿಯಾದ ನವೋದ್ಯಮಗಳ ಉತ್ಪನ್ನವನ್ನು ಮೊದಲು ಸರ್ಕಾರವೇ ಖರೀದಿಸುವ ಉದ್ದೇಶದಿಂದ ಈ ನೀತಿ ರೂಪಿಸಲಾಗುವುದು ಎಂದರು.

ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಈ 5 ಪ್ರಯೋಜನಗಳನ್ನು ಮಿಸ್ ಮಾಡ್ಬೇಡಿ!

ಈ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾದ ಡಿಜಿಟಲ್‌ ಸ್ಮಾರ್ಟ್ ಕ್ಲಾಸ್ ವಿದ್ವಾನ್‌ ತಂತ್ರಜ್ಞಾನವನ್ನೇ ಉದಾಹರಣೆಯಾಗಿ ಹೇಳುವುದಾದರೆ, ಕರ್ನಾಟಕ ಸರ್ಕಾರ ಈ ತಂತ್ರಜ್ಞಾನವನ್ನು ಸರ್ಕಾರಿ ಶಾಲೆಗಳಲ್ಲಿ ಬಳಸಿಕೊಳ್ಳಬಹುದು. ಇದೇ ರೀತಿ ಮೇಡ್‌ಇನ್‌ಕರ್ನಾಟಕದ ಉತ್ಪನ್ನಗಳನ್ನು ಖರೀದಿಸಿ, ಸ್ಟಾರ್ಟ್‌ ಅಪ್‌ ಗಳನ್ನು ಪೋಷಿಸಲು ನಾವು ಬದ್ಧ ಎಂದು ಅವರು ಹೇಳಿದರು.

ಮೇಕ್‌ ಇನ್‌ ಇಂಡಿಯಾ, ವೋಕಲ್‌ ಫಾರ್‌ ವೋಕಲ್‌ಎಂಬ ಘೋಷಣೆಯನ್ನು ಮೈಸೂರಿಗರು ಬಹಳ ಹಿಂದೆಯೇ ಸಾಕಾರಗೊಳಿಸಿದ್ದರು. ಮೈಸೂರು ಬಲ್ಬ್‌, ಮೈಸೂರು ಸಿಲ್ಕ್, ಮೈಸೂರು ಕಾಗದ, ಮೈಸೂರು ಶಾಹಿ, ಸಕ್ಕರೆ, ಮೈಸೂರು ತಿಂಡಿ- ಕಾಫಿ ಎಲ್ಲಕ್ಕೂ ಬ್ರ್ಯಾಂಡ್‌ಮೌಲ್ಯ ತಂದುಕೊಟ್ಟಿದ್ದಾರೆ. ಕರ್ನಾಟಕ ನಮ್ಮ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಪ್ರತಿಭೆ, ತಂತ್ರಜ್ಞಾನವನ್ನು ಕೊಡುಗೆಯಾಗಿ ನೀಡುತ್ತದೆ. ಕರ್ನಾಟಕ ಸಮೃದ್ಧವಾದಾಗ ಮಾತ್ರ ಭಾರತ ಸಮೃದ್ಧ ಎನ್ನಬಹುದು ಎಂದು ಅವರು ತಿಳಿಸಿದರು.

ಬೆಂಗಳೂರು ತಂತ್ರಜ್ಞಾನದ ತವರೂರು, 4ನೇ ಅತಿ ದೊಡ್ಡ ತಾಂತ್ರಿಕ ಕೇಂದ್ರ. ಈ ಸಾಧನೆಗೆ 3 ದಶಕಗಳು ಬೇಕಾದವು. ಕಾಲ್‌ಸೆಂಟರ್‌ ನಿಂದ ಆರಂಭಿಸಿ, ಜಾಗತಿಕ ಟೆಕ್‌ಹಬ್‌ಆಗಿ ರೂಪುಗೊಂಡಿದ್ದೇವೆ. ರಾಜ್ಯದಲ್ಲಿಂದು 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿದ್ದು, ಜ್ಞಾನ ಕೇಂದ್ರವಾಗಿ ಗುರುತಿಸಿಕೊಂಡಿದ್ದೇವೆ. ಮೂರನೇ ಒಂದು ಭಾಗದಷ್ಟು ಟೆಕ್‌ ಪ್ರತಿಭಾನ್ವಿತರು, 25 ಸಾವಿರ ಸ್ಟಾರ್ಟ್‌ಅಪ್‌, 140 ಟೆಕ್‌ಇನ್‌ ಕ್ಯೂಬೇಟರ್‌, 43 ಯೂನಿಕಾರ್ನ್‌ ಗಳು ಹಾಗೂ 47 ಸೂನಿಕಾನ್‌(ಶೀಘ್ರದಲ್ಲೇ ಯೂನಿಕಾರ್ನ್‌ಪಟ್ಟಿಗೆ ಸೇರುವ ಉದ್ಯಮ) ರಾಜ್ಯದಲ್ಲಿವೆ ಎಂದರು.

ಸುಲಲಿತ ವ್ಯವಹಾರಕ್ಕೆ ಒತ್ತು ನೀಡುವ ನಮ್ಮ ರಾಜ್ಯ ವಿದೇಶಿ ನೇರ ಹೂಡಿಕೆ, ನಾವಿನ್ಯತೆ ಸೂಚ್ಯಂಕ, ರಫ್ತು ಸನ್ನದ್ಧತೆ ಸೂಚ್ಯಂಕದಲ್ಲಿ ಅಗ್ರ ಸ್ಥಾನದಲ್ಲಿದ್ದೇವೆ. ಶೇ.40 ರಷ್ಟು ಎಲೆಕ್ಟ್ರಾನಿಕ್‌ ಉತ್ಪನ್ನಗಳ ಉತ್ಪಾದನೆ, ಶೇ.52 ರಷ್ಟು ಮಷೀನ್‌ ಟೂಲ್ಸ್‌ ಉತ್ಪಾದನೆ, ಶೇ.65 ರಷ್ಟು ಏರೋಸ್ಪೇಸ್‌ಮತ್ತು ರಕ್ಷಣಾ ಉತ್ಪಾದನೆ ನಮ್ಮಲ್ಲಿ ಆಗುತ್ತದೆಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಅವರು ಹೇಳಿದರು.

ಆದ್ಯತೆಯ 3 ಗುರಿಗಳು

ಸದ್ಯ ನಮ್ಮ ಸರ್ಕಾರದ ಮುಂದೆ 3 ಗುರಿಗಳಿದ್ದು, ಈ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಕೌಶಲ್ಯಾಭಿವೃದ್ಧಿಗೆ ಮೊದಲ ಆದ್ಯತೆ. ಉದ್ಯಮಗಳ ಬೇಡಿಕೆಗೆ ಪೂರಕವಾಗಿ ನುರಿತ ಕೆಲಸಗಾರರನ್ನು ಪೂರೈಸುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ. ಉಳಿದೆಲ್ಲ ರಾಜ್ಯಗಳಿಗಿಂತ ನಾವು ಮುಂದಿದ್ದೇವೆ ಎಂದರು.

ಸೆಂಟರ್‌ಆಫ್‌ಎಕ್ಸಲೆನ್ಸ್- ಫಿನ್‌ ಟೆಕ್, ಗೇಮಿಂಗ್ ಆಕ್ಸಿಲರೇಟರ್, ಹೆಲ್ತ್‌ಸೈನ್ಸ್‌, ಬಯೋಟೆಕ್‌ಆಕ್ಸಿಲರೇಟರ್‌ ಗಳನ್ನು ಸ್ಥಾಪಿಸುವ ಗುರಿ ಇದ್ದು, ಈ ಕ್ಷೇತ್ರಗಳಲ್ಲಿ ಪ್ರಾವಿಣ್ಯತೆ ಇರುವವರಿಗೆ ಇವುಗಳನ್ನು ನಡೆಸುವ ಹೊಣೆ ವಹಿಸಲಾಗುತ್ತದೆ. ಈ ಶ್ರೇಷ್ಠತಾ ಕೇಂದ್ರಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡಲು ನಮ್ಮ ಸರ್ಕಾರ ಸಿದ್ಧ ಎಂದರು.

ಸ್ಟಾರ್ಟ್‌ ಅಪ್‌ ಗಳಿಗೆ ಪ್ರತ್ಯೇಕ ಕಾರಿಡಾರ್ ಸ್ಥಾಪಿಸಲು ಸರ್ಕಾರ ಬದ್ಧ. ಪ್ರತಿ ದೇಶದೊಂದಿಗೆ ನಿರ್ದಿಷ್ಟ ಕಾರಿಡಾರ್ ಸ್ಥಾಪಿಸಲು ಅವಕಾಶ ಇದ್ದು, ಅದರ ಸದುಪಯೋಗ ಮಾಡಿಕೊಳ್ಳಲಾಗುವುದು. ಅದಕ್ಕಾಗಿ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಬದ್ಧವಾಗಿ, ಬಿಯಾಂಡ್‌ಬೆಂಗಳೂರು ಯೋಜನೆಗೆ ಮತ್ತಷ್ಟು ಬಲ ತುಂಬಲಾಗುವುದು. ಇಂಥ ನಗರಗಳಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾದರೆ, ಸ್ಥಳೀಯವಾಗಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದು ಅವರು ತಿಳಿಸಿದರು.

ಯುಟ್ಯೂಬ್‌ನಿಂದ ಸೀಮಾ ಹೈದರ್‌ಗೆ ಸಿಕ್ಕಿತು ಮೊದಲ ಸಂಬಳ

ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ ಕೌರ್, ಐಟಿ ಮತ್ತು ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆ ನಿರ್ದೇಶಕರು, ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ. ದರ್ಶನ್, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು, ಸಿಇಓ ಸಂಜೀವ್ ಗುಪ್ತಾ, ಎಕ್ಸೆಲ್ಸಾಫ್ಟ್ ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ಸಿಇಒ ಸುಧನ್ವ ಧನಂಜಯ, ಗ್ಲೋಬಲ್‌ಫ್ಯಾಬ್‌ಎಂಜಿನಿಯರಿಂಗ್‌ಜಿತೇಂದ್ರ ಛಡ್ಡ ಇದ್ದರು.

ಕಳೆದೆರೆಡು ವರ್ಷಗಳಲ್ಲಿ ಮೈಸೂರು ಟೆಕ್‌ಕ್ಲಸ್ಟರ್‌ ನಲ್ಲಿ ಸಾಕಷ್ಟು ಪ್ರಗತಿ ಆಗಿದೆ. ಒಂದೇ ವರ್ಷದಲ್ಲಿ ಐಬಿಎಂ, ಹಿಂದೂಜಾ ಮುಂತಾದ 12 ಕಂಪನಿಗಳು ಮೈಸೂರಿಗೆ ಬಂದಿವೆ. ಮೈಸೂರು ಎಲೆಕ್ಟ್ರಾನಿಕ್‌ಕ್ಲಸ್ಟರ್‌ ನಲ್ಲಿ ಉದ್ಯಮ ಸ್ಥಾಪಿಸಲು ಹಲವು ಕಂಪನಿಗಳು ಮುಂದೆ ಬಂದಿವೆ. ಸರ್ಕಾರ ಹಾಗೂ ಕಂಪನಿಗಳು ಕೈ ಜೋಡಿಸಿದರೆ ಜಾಗತಿಕ ನಕ್ಷೆಯಲ್ಲಿ ಮೈಸೂರು ದೊಡ್ಡ ಸ್ಥಾನ ಪಡೆಯುವುದರಲ್ಲಿ ಸಂದೇಹವಿಲ್ಲ ಎಂದು ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ತಿಳಿಸಿದ್ದಾರೆ.  

Follow Us:
Download App:
  • android
  • ios